ತೆರಿಗೆ ವಂಚನೆ: ಐಐಪಿಎಂ ನಿರ್ದೇಶಕ ಅರಿಂದಂ ಚೌಧರಿ ಬಂಧನ
ನವದೆಹಲಿ, ಆ. 24: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪ್ಲಾನಿಂಗ್ ಅಂಡ್ ಮ್ಯಾನೇಜ್ಮೆಂಟ್(ಐಐಪಿಎಂ) ನಿರ್ದೇಶಕ ಅರಿಂದಂ ಚೌಧರಿ ಬಂಧನವಾಗಿದೆ. ಸುಮಾರು 23 ಕೋಟಿ ರು ಗೂ ಅಧಿಕ ಸೇವಾ ತೆರಿಗೆ ವಂಚಿಸಿದ ಆರೋಪವನ್ನು ಅರಿಂದಂ ಹೊತ್ತುಕೊಂಡಿದ್ದಾರೆ.
ದಕ್ಷಿಣ ದೆಹಲಿಯ ಸಿಜಿಎಸ್ಟಿ ತಂಡದವರು ಸೇವಾ ತೆರಿಗೆ ಅಡಿಯಲ್ಲಿ ಬರುವ CENVAT ವಂಚಿಸಿದ ಆರೋಪದ ಮೇಲೆ ಅರಿಂದಂ ಅವರನ್ನು ಬಂಧಿಸಿರುವುದಾಗಿ ಹೇಳಿದ್ದಾರೆ.
ಕೊರೊನಾ ವಾರಿಯರ್ಸ್ ಸೋಗಿನಲ್ಲಿ ಬಂದ ತೆರಿಗೆ ವಾರಿಯರ್ಸ್!: ಕೋಟಿಗಟ್ಟಲೆ ಮೌಲ್ಯದ ಸಂಪತ್ತು ವಶ
ಅರಿಂದಂ ಅವರನ್ನು ದೆಹಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಜಿಎಸ್ಟಿ ಸಂಪೂರ್ಣವಾಗಿ ಜಾರಿಗೆ ಬರುವುದಕ್ಕೂ ಮುಂಚಿನ ಅವಧಿಯಲ್ಲಿ ಕೇಂದ್ರ ವ್ಯಾಟ್(CENVAT) ಕ್ಲೇಮ್ ಮಾಡುವ ಮೂಲಕ 23 ಕೋಟಿ ರು ವಂಚಿಸಿರುವುದು ಪತ್ತೆಯಾಗಿತ್ತು.
ವಿತ್ತೀಯ ಕಾಯ್ದೆ ಸೆಕ್ಷನ್ 89ರ ಅಡಿಯಲ್ಲಿ ಆರೋಪ ಹೊರೆಸಲಾಗಿದ್ದು, ಅರಿಂದಂ ಅವರ ಸಹೋದ್ಯೋಗಿ ಮಲೀಕ್ ಠಾಕೂರ್ ಅವರನ್ನು ಬಂಧಿಸಲಾಗಿದೆ. ದೆಹಲಿ ಸೇರಿದಂತೆ ದೇಶದ ವಿವಿಧೆಡೆ ಐಐಪಿಎಂ ಬಿ ಸ್ಕೂಲ್ ಹೊಂದಿದೆ.
ಮಾರ್ಚ್ 14, 2020ರಲ್ಲಿ ನಕಲಿ ಮೆಡಿಕಲ್ ಪ್ರಮಾಣ ಪತ್ರ ನೀಡಿದ ಆರೋಪ ಹೊತ್ತುಕೊಂಡಿದ್ದರು. ನಂತರ ಜಾಮೀನು ಪಡೆದುಕೊಂಡರು. 2015ರಲ್ಲಿ ಯುಜಿಸಿ ಮಾನ್ಯತೆ ಪಡೆಯದೆ ವಿದ್ಯಾರ್ಥಿಗಳನ್ನು ವಂಚಿಸಿದ ಆರೋಪದ ಮೇಲೆ ಸಂಸ್ಥೆ ಮೇಲೆ ಎಫ್ಐಆರ್ ದಾಖಲಿಸಲಾಗಿತ್ತು.