ಐಸಿಐಸಿಐ ಚೇರ್ಮನ್ ಯಾಗಿ ಗಿರೀಶ್ ಚತುರ್ವೇದಿ ನೇಮಕ
ಮುಂಬೈ, ಜೂನ್ 29: ಐಸಿಐಸಿಐ ಬ್ಯಾಂಕಿಗೆ ನೂತನ ಛೇರ್ಮನ್ ಆಗಿ ಗಿರೀಶ್ ಚತುರ್ವೇದಿ ನೇಮಕ ಮಾಡಲಾಗಿದೆ. ಜೂನ್ 30ರಂದು ಹಾಲಿ ಚೇರ್ಮನ್ ಎಂ.ಕೆ. ಶರ್ಮಾ ಅವರ ಅಧಿಕಾರಾವಧಿ ಅಂತ್ಯವಾಗಲಿದೆ.
ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಐಸಿಐಸಿಐ ಇತ್ತೀಚೆಗೆ ವಿವಾದದ ಸುಳಿಗೆ ಸಿಲುಕಿದೆ. ಬ್ಯಾಂಕಿನ ಸಿಇಒ ಚಂದಾ ಕೋಚ್ಚರ್ ವಿರುದ್ಧ ಹಣಕಾಸು ಅವ್ಯವಹಾರದ, ಆಡಳಿತ ಮಂಡಳಿಯಲ್ಲಿನ ಹಗರಣದಲ್ಲಿ ಭಾಗಿ ಆರೋಪ ಕೇಳಿ ಬಂದಿತ್ತು. ಇದಾದ ಬಳಿಕ, ಅನಿರ್ಧಿಷ್ಟ ಅವಧಿಗೆ ರಜೆ ಮೇಲೆ ಕಳಿಸಲಾಗಿದೆ.
ಉತ್ತರ ಪ್ರದೇಶ ಮೂಲದ ಗಿರೀಶ್ ಚತುರ್ವೇದಿ ಅವರು ಭೌತಶಾಸ್ತ್ರದಲ್ಲಿ ಎಂಎಸ್ಸಿ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಸೋಷಿಯಲ್ ಪಾಲಿಸಿ ಪದವಿ, ಆಕ್ಸ್ಫರ್ಡ್ ವಿವಿಯಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. 1977ರ ಬ್ಯಾಚ್ನ ಉತ್ತರ ಪ್ರದೇಶ ಕೆಡರ್ನ ಐಎಎಸ್ ಅಧಿಕಾರಿ ಆದ ಗಿರೀಶ್ ಚತುರ್ವೇದಿ ಹಲವಾರು ಸರಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.
ಐಡಿಬಿಐ, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕುಗಳ ಆಡಳಿತ ಮಂಡಳಿ,ಪೆಟ್ರೋಲಿಯಂ ಇಲಾಖೆಯಲ್ಲಿ ಕಾರ್ಯದರ್ಶಿ, ಹಣಕಾಸು ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಚಂದಾ ಕೋಚ್ಚರ್ ಸ್ಥಾನದಲ್ಲಿ ಸಂದೀಪ್ ಭಕ್ಷಿ ಸದ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ.