ವರ್ಷದೊಳಗೆ ಸೈಟ್ ಕೊಡಿ, ಇಲ್ಲವೇ ಬಡ್ಡಿ ಕೊಡಿ
ಬೆಂಗಳೂರು, ಫೆ. 16: ಗೃಹ ನಿರ್ಮಾಣ ಸಹಕಾರಿ ಸಂಘವು ಸದಸ್ಯರಿಂದ ಹಣ ಕಟ್ಟಿಸಿಕೊಂಡರೂ ನಿವೇಶನ ವಿತರಿಸದ ಕುರಿತು ಹಲವು ದೂರುಗಳು ಕೇಳಿಬಂದಿವೆ. ಹಲವು ಸಂಘಗಳು ಪೂರ್ಣಪ್ರಮಾಣದ ಹಣ ಕಟ್ಟಿಸಿಕೊಂಡು ಐದರಿಂದ ಹತ್ತು ವರ್ಷ ಕಳೆದರೂ ಸೈಟ್ ವಿತರಿಸಿಲ್ಲ. ಸಂಘಗಳು ಕಟ್ಟಿಸಿಕೊಂಡ ಹಣಕ್ಕೆ ಬಡ್ಡಿಯನ್ನೂ ನೀಡುವುದಿಲ್ಲ ಎಂಬ ಅಸಮಾಧಾನ ವ್ಯಾಪಕವಾಗಿ ವ್ಯಕ್ತವಾಗಿತ್ತು.
ಗೃಹ ನಿರ್ಮಾಣ ಸಹಕಾರಿ ಸಂಘದ ಸದಸ್ಯರ ಹಿತರಕ್ಷಣೆಗೆ ಮುಂದಾಗಿರುವ ರಾಜ್ಯ ಸರ್ಕಾರ ಸಹಕಾರಿ ಕಾಯ್ದೆಗೆ ತಿದ್ದುಪಡಿ ತರಲು ಸಿದ್ಧತೆ ನಡೆಸಿದೆ. ಸದಸ್ಯರಿಂದ ಕಟ್ಟಿಸಿಕೊಂಡ ಹಣಕ್ಕೆ ಬಡ್ಡಿ ಕಟ್ಟಬೇಕು ಎಂಬ ನಿಯಮ ಜಾರಿಗೊಳಿಸುವ ಸೂಚನೆ ನೀಡಿದೆ.
ಈ ಕುರಿತು ಸಹಕಾರಿ ಸಚಿವ ಎಚ್.ಎಸ್. ಮಹಾದೇವ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ್ದಾರೆ. "ಸಹಕಾರಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು. ಭೂಮಿ ಖರೀದಿ ಹಾಗೂ ನಿವೇಶನ ವಿತರಣೆ, ಅಭಿವೃದ್ಧಿ ವಿಷಯಗಳಲ್ಲಿ ಅನುಮತಿ ಪಡೆಯಲು ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸಲಾಗುವುದು" ಎಂದು ಹೇಳಿದ್ದಾರೆ.
''ಈವರೆಗೆ ಪ್ರತಿ ಹೌಸಿಂಗ್ ಸೊಸೈಟಿಯು 25ರಿಂದ 50 ಎಕರೆ ಭೂಮಿಯಷ್ಟೇ ಖರೀದಿಸಬಹುದು. ಆದ್ದರಿಂದ ಖರೀದಿ ಮಿತಿ ಹೆಚ್ಚಿಸಿ ಹೆಚ್ಚು ಜನರಿಗೆ ನಿವೇಶನ ಒದಗಿಸಲು ಅವಕಾಶ ಒದಗಿಸಲಾಗುವುದು. ಸೊಸೈಟಿಯೇ ಭೂಮಿ ಖರೀದಿಸಿ, ನಿವೇಶನ ಅಭಿವೃದ್ಧಿಪಡಿಸಿ ವಿತರಣೆ ಮಾಡಬೇಕು. ಸದಸ್ಯರಿಂದ ಹಣ ಕಟ್ಟಿಸಿಕೊಂಡ ವರ್ಷದೊಳಗೆ ನಿವೇಶನ ವಿತರಿಸದಿದ್ದರೆ ಪಡೆದ ಹಣಕ್ಕೆ ಬಡ್ಡಿ ಕಟ್ಟುವ ನಿಯಮ ಜಾರಿಗೊಳಿಸಲಾಗುವುದು. ಬಡ್ಡಿಯ ಪ್ರಮಾಣ ನಿಗದಿಪಡಿಸಿ ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ವಿಧೇಯಕ ಮಂಡಿಸಲಾಗುವುದು'' ಎಂದು ತಿಳಿಸಿದರು.