ಮಾಧ್ಯಮಗಳಿಗೂ ನೋಟು ನಿಷೇಧದ ಬಿಸಿ, ಹಿಂಜರಿತವೋ ಆರ್ಥಿಕ ಹೊಡೆತವೋ!
ಮುಂಬೈ, ಜನವರಿ 16: ಈ ಪರಿಸ್ಥಿತಿಯ ವಿಶ್ಲೇಷಣೆ ಹೇಗೆ ಮಾಡುವುದು ಅನ್ನೋದೇ ಸ್ವಲ್ಪ ಮಟ್ಟಿಗೆ ಗೊಂದಲಮಯವಾಗಿದೆ. ಅಪನಗದೀಕರಣದಿಂದ ಈ ವಲಯಕ್ಕೆ ಹೊಡೆತ ಬಿತ್ತು, ಆ ವಲಯಕ್ಕೆ ಹೊಡೆತ ಬಿತ್ತು ಅಂತ ಸುದ್ದಿ ಪ್ರಕಟಿಸುವ ಮಾಧ್ಯಮಗಳಿಗೇ ದೊಡ್ಡ ಹೊಡೆತ ಬಿದ್ದಿರುವ ವಿಚಾರ ಇದು.
ನೋಟು ನಿಷೇಧದಿಂದ ಪ್ರತಿಷ್ಠಿತ ಪತ್ರಿಕೆ 'ಹಿಂದೂಸ್ತಾನ್ ಟೈಮ್ಸ್'ಗೆ ಬಿಸಿ ತಾಗಿದೆ. ಅಲ್ಲಿನ ಕೆಲವು ಹಿರಿಯ ಉದ್ಯೋಗಿಗಳಿಗೆ ಕೆಲಸ ಬಿಡುವಂತೆ ಸೂಚಿಸಲಾಗಿದೆ ಎಂಬ ಮಾಹಿತಿ ಬರುತ್ತಿದೆ. ಒಟ್ಟಿನಲ್ಲಿ ಸದ್ಯದ ಸನ್ನಿವೇಶ ಆತಂಕಕಾರಿಯಾಗಿದೆ. ಇತ್ತೀಚೆಗೆ ಎಚ್ ಟಿ ಮೀಡಿಯಾ ಗ್ರೂಪ್ ನಿಂದ ಅದರ ಬ್ಯುಸಿನೆಸ್ ಬ್ಯೂರೋ ಮುಚ್ಚಲಾಗಿದೆ.[ಮೈಸೂರು: ಜಗತ್ತಿನ ಏಕೈಕ ಸಂಸ್ಕೃತ ದಿನಪತ್ರಿಕೆ 'ಸುಧರ್ಮಾ' ಉಳಿಯಲಿ...]
ಮೂಲಗಳ ಪ್ರಕಾರ ಹಿಂದೂಸ್ತಾನ್ ಟೈಮ್ಸ್ ನ ವಾಣಿಜ್ಯ ಪುಟಗಳನ್ನು 'ಮಿಂಟ್'ನಿಂದಲೇ ಮಾಡಲಾಗುತ್ತದೆ. ಬಿಜಿನೆಸ್ ಡೆಸ್ಕ್ ನ ಮುಖ್ಯಸ್ಥ ಸುವೀನ್ ಸಿನ್ಹಾ ಅವರಿಗೆ ಕಂಪನಿ ಬಿಡುವಂತೆ ತಿಳಿಸಿ ಆಗಿತ್ತು. ಹಿರಿಯ ಸಹಾಯಕ ಸಂಪಾದಕ ಸನ್ನಿ ಸೇನ್, ಸುಚೇತನಾ ರಾಯ್ ಅವರನ್ನು ಎಚ್ ಟಿ ಆನ್ ಲೈನ್ ಗೆ ವರ್ಗಾವಣೆ ಮಾಡಲಾಗಿದೆ. ಮಹುವಾ ಸಹಾಯಕ ಸಂಪಾದಕ ವೆಂಕಟೇಶ್ ಅವರನ್ನು ಪೊಲಿಟಿಕಲ್ ಬ್ಯುರೋಗೆ ವರ್ಗಾವಣೆ ಮಾಡಲಾಗಿದೆ.
ಇನ್ನು ಕನ್ನಡದ ಮಾಧ್ಯಮಗಳಲ್ಲಿ ಕೂಡ ಖರ್ಚಿಗೆ ಕಡಿವಾಣ ಹಾಕುವಂತೆ ಸೂಚಿಸಲಾಗಿದೆ. ಹೊಸದಾಗಿ ನೇಮಕಾತಿ ಬೇಡ, ಅನಗತ್ಯವಾಗಿ ಹೆಚ್ಚುವರಿ ಪುಟಗಳು ಬೇಡ, ಜಾಹೀರಾತು ಪ್ರಮಾಣದಲ್ಲಿ ಕಡಿಮೆಯಾಗಿ, ಆದಾಯವೂ ತಾರುಮಾರಾಗಿದೆ ಎಂಬ ಮಾತುಗಳೆಲ್ಲ ಸಾಮಾನ್ಯವಾಗಿದೆ.