ರೈತರು ಖುಷ್, ವರ್ಷದ ದ್ವಿತೀಯಾರ್ಧದಲ್ಲಿ ಚಿನ್ನಕ್ಕೆ ಭರ್ಜರಿ ಬೇಡಿಕೆ
ನವದೆಹಲಿ, ಸೆಪ್ಟೆಂಬರ್ 24: ಈ ವರ್ಷದ ದ್ವಿತೀಯಾರ್ಧದಲ್ಲಿ (ಜುಲೈನಿಂದ ಡಿಸೆಂಬರ್ ಮಧ್ಯೆ) ಭಾರತದಲ್ಲಿ ಚಿನ್ನದ ಬೇಡಿಕೆ ಶೇಕಡಾ 25ರಷ್ಟು ಹೆಚ್ಚಲಿದೆ ಎಂದು ವರದಿಯೊಂದು ತಿಳಿಸಿದೆ. ಕೇಂದ್ರ ಸರಕಾರವು ಬೆಲೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿರುವುದರಿಂದ ಕೃಷಿಕರ ಖರೀದಿ ಸಾಮರ್ಥ್ಯ ಹೆಚ್ಚಿದೆ. ಆ ಕಾರಣಕ್ಕೆ ಚಿನ್ನದ ಬೇಡಿಕೆ ಹೆಚ್ಚಲಿದೆ ಎಂದು ಕಾರಣ ಕೂಡ ನೀಡಲಾಗಿದೆ.
ಇಡೀ ವಿಶ್ವದಲ್ಲೇ ಅತಿ ಹೆಚ್ಚು ಚಿನ್ನ ಖರೀದಿಸುವ ಎರಡನೇ ದೇಶ ಭಾರತ. ಇಲ್ಲಿ ವಾರ್ಷಿಕ 800ರಿಂದ 900 ಟನ್ ಚಿನ್ನ ಖರೀದಿ ಮಾಡಲಾಗುತ್ತದೆ. ಅದರಲ್ಲಿ ಮೂರನೇ ಎರಡರಷ್ಟು ಚಿನ್ನದ ಬೇಡಿಕೆಯು ಗ್ರಾಮೀಣ ಭಾಗದಿಂದಲೇ ಬರುತ್ತದೆ. ವರ್ಷದ ಮೊದಲಾರ್ಧದಲ್ಲಿ ಚಿನ್ನಕ್ಕೆ ಆ ಪ್ರಮಾಣದ ಬೇಡಿಕೆ ಇರಲಿಲ್ಲ. ಆದರೆ ರೈತರ ಪರಿಸ್ಥಿತಿ ಸುಧಾರಿಸಿರುವುದರಿಂದ ದ್ವಿತೀಯಾರ್ಧದಲ್ಲಿ ಬೇಡಿಕೆ ಹೆಚ್ಚುತ್ತದೆ ಎಂದು ಅಸೋಚಾಂ ವರ್ಲ್ಡ್ ಗೋಲ್ಡ್ ಕೌನ್ಸಿಲ್ ಹೇಳಿದೆ.
150 ಕೋಟಿ ಆಸ್ತಿವಂತ 'ಗೋಲ್ಡನ್ ಬಾಬಾ' ಮೈಮೇಲೆ 20 ಕೇಜಿ ಚಿನ್ನ
ತಜ್ಞರ ಪ್ರಕಾರ, ವರ್ಷದ ಹಿಂದಕ್ಕೆ ಹೋಲಿಸಿದರೆ ಈ ವರ್ಷದ ದ್ವಿತೀಯಾರ್ಧದಲ್ಲಿ ಚಿನ್ನದ ಬೇಡಿಕೆ ಶೇಕಡಾ 25ರಷ್ಟು ಹೆಚ್ಚಲಿದೆ. ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯಿಂದಾಗಿ ಚಿನ್ನದ ವ್ಯಾಪಾರ ಹೆಚ್ಚಾಗುತ್ತದೆ. ಹೆಚ್ಚಿನ ಹಣವು ರೈತರ ಕೈ ಸೇರುವುದರಿಂದ ಚಿನ್ನದ ಬೇಡಿಕೆಯನ್ನು ವೃದ್ಧಿ ಮಾಡಲಿದೆ.
ಭಾರತದ 87% ಕುಟುಂಬದಲ್ಲಿ ಸ್ವಲ್ಪವಾದರೂ ಚಿನ್ನವಿದೆ
ICE 360ಯಿಂದ ಕಳೆದ ವರ್ಷ ನಡೆಸಿದ ಸಮೀಕ್ಷೆಯನ್ನು ಉದಾಹರಣೆಗಾಗಿ ನೀಡಿದ್ದು, ಆ ವರದಿ ಪ್ರಕಾರ, ಪ್ರತಿ ಎರಡರಲ್ಲಿ ಒಂದು ಮನೆಯಲ್ಲಿ ಕಳೆದ ಐದು ವರ್ಷದಲ್ಲಿ ಚಿನ್ನ ಖರೀದಿ ಮಾಡಿದ್ದಾರೆ. ಒಟ್ಟಾರೆಯಾಗಿ ದೇಶದ 87% ಕುಟುಂಬದಲ್ಲಿ ಸ್ವಲ್ಪವಾದರೂ ಚಿನ್ನವಿದೆ. ಆದಾಯ ವಿಪರೀತ ಕಡಿಮೆ ಇರುವ ಕುಟುಂಬದಲ್ಲೂ ಅಲ್ಪ-ಸ್ವಲ್ಪ ಚಿನ್ನವಿದೆಯಂತೆ.
ಶ್ರೀಮಂತರು ಚಿನ್ನಕ್ಕಾಗಿ ಹೆಚ್ಚು ಖರ್ಚು ಮಾಡುತ್ತಾರೆ
ತೀರಾ ತಳಮಟ್ಟದಲ್ಲಿರುವ ಶೇಕಡಾ 10ರಷ್ಟು ಕುಟುಂಬದಲ್ಲಿ 75% ಕುಟುಂಬಗಳು ಚಿನ್ನ ಖರೀದಿಸಿವೆ. ಬಡವರಿಗೆ ಹೋಲಿಸಿದರೆ ಭಾರತದ ಶ್ರೀಮಂತರು ಚಿನ್ನಕ್ಕಾಗಿ ಹೆಚ್ಚು ಖರ್ಚು ಮಾಡುತ್ತಾರೆ. ಕಳೆದ ವರ್ಷ ಲೆಕ್ಕ ಹಾಕಿರುವಂತೆ, ಮೇಲ್ಮಟ್ಟದ ಹತ್ತು ಪರ್ಸೆಂಟ್ ಕುಟುಂಬ ವಾರ್ಷಿಕವಾಗಿ ಖರೀದಿ ಮಾಡುವ ಸರಾಸರಿ ಚಿನ್ನದ ಪ್ರಮಾಣ ರು. 30,298. ಇದು ತಳಮಟ್ಟದ ಹತ್ತು ಪರ್ಸೆಂಟ್ ಕುಟುಂಬ ಚಿನ್ನಕ್ಕಾಗಿ ವ್ಯಯಿಸುವ ಸರಾಸರಿ ಪ್ರಮಾಣದ ಎಂಟು ಪಟ್ಟು ಹೆಚ್ಚು.
ಮದುವೆ ಸಂದರ್ಭದಲ್ಲಿ ಹೆಚ್ಚಿನ ಚಿನ್ನ ಖರೀದಿ
ಯಾರಿಗಾದರೂ ಉಡುಗೊರೆ ನೀಡುವುದಕ್ಕೆ, ವೈಯಕ್ತಿಕ ಬಳಕೆಗೆ, ಸಾಮಾಜಿಕ ಸ್ಥಾನ ಮಾನ ಹೆಚ್ಚಿಸಿಕೊಳ್ಳುವುದಕ್ಕೆ, ದೀಪಾವಳಿ-ಲಕ್ಷ್ಮೀಪೂಜೆಯಂಥ ಸಂದರ್ಭದಲ್ಲಿ ಚಿನ್ನ ಖರೀದಿಸುವುದಕ್ಕಿಂತ ಹೆಚ್ಚಾಗಿ ಭಾರತದಲ್ಲಿ ಮದುವೆ ಸಂದರ್ಭದಲ್ಲಿ ಹೆಚ್ಚಿನ ಚಿನ್ನವನ್ನು ಖರೀದಿಸುತ್ತಾರೆ ಎಂಬುದು ತಿಳಿದುಬಂದಿದೆ.
ಬಡವರ ಪಾಲಿಗೆ ವಿಮೆ ಇದ್ದಂತೆ ಚಿನ್ನ
ಬಡವರು ಹಾಗೂ ಕಡಿಮೆ ಆದಾಯ ಇರುವ ಮಧ್ಯಮ ವರ್ಗದ ಜನರಿಗೆ ಚಿನ್ನವು ಆರ್ಥಿಕ ಭದ್ರತೆಯಾಗಿಯೂ ಪರಿಗಣನೆ ಆಗುತ್ತದೆ. ಆದಾಯ ಕಡಿಮೆ ಇರುವ ವರ್ಗದವರು ವೈದ್ಯಕೀಯ ತುರ್ತು ಪರಿಸ್ಥಿತಿಗಳಲ್ಲಿ ಅಥವಾ ಆರ್ಥಿಕ ಬಿಕ್ಕಟ್ಟು ಏರ್ಪಟ್ಟ ಸಂದರ್ಭಗಳಲ್ಲಿ ಚಿನ್ನದ ಮೇಲೆ ಸಾಲ ಪಡೆಯುತ್ತಾರೆ. ಇದರರ್ಥ ಏನೆಂದರೆ, ಅಗತ್ಯ ಪ್ರಮಾಣದ ವಿಮೆ ಅಥವಾ ಹಣದ ಉಳಿತಾಯ ಇಲ್ಲದಿದ್ದಾಗ ಚಿನ್ನವು ಬಡವರ ಪಾಲಿನ ವಿಮೆಯಂತೆ ಎಂಬುದನ್ನು ವರದಿಯಲ್ಲಿ ತಿಳಿಸಲಾಗಿದೆ.