ಟೆಕ್ ಮಹೀಂದ್ರಾಗೆ ಶುಭ ಸುದ್ದಿ, 'ಇಡಿ' ಜಪ್ತಿಗೆ ಬ್ರೇಕ್ ಹಾಕಿದ ಹೈಕೋರ್ಟ್
ಹೈದರಾಬಾದ್, ಜನವರಿ 01 : ಪ್ರಮುಖ ಐಟಿ ಕಂಪನಿ ಟೆಕ್ ಮಹೀಂದ್ರಾಗೆ ಹೈದರಾಬಾದ್ ಹೈಕೋರ್ಟಿನಿಂದ ಶುಭ ಸುದ್ದಿ ಸಿಕ್ಕಿದೆ. ಸತ್ಯಂ ಕಂಪ್ಯೂಟರ್ ಖರೀದಿಸಿದ್ದ ಟೆಕ್ ಮಹೀಂದ್ರಾಗೆ ಲಭಿಸಿದ್ದ ನಿಶ್ಚಿತ ಠೇವಣಿ(ಸುಮಾರು 822 ಕೋಟಿ ರು) ಯನ್ನು ಜಪ್ತಿ ಮಾಡಲು ಜಾರಿ ನಿರ್ದೇಶನಾಲಯವು ಮುಂದಾಗಿತ್ತು. ಆದರೆ, ಈ ಕ್ರಮಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದ್ದು, ಟೆಕ್ ಮಹೀಂದ್ರಾಕ್ಕೆ ರಿಲೀಫ್ ಸಿಕ್ಕಿದೆ.
ಮನಿಲಾಂಡ್ರಿಂಗ್ ಪ್ರಕರಣದಲ್ಲಿ ಸಿಲುಕಿರುವ ಸತ್ಯಂ ಕಂಪ್ಯೂಟರ್ಸ್(ಈಗ ಟೆಕ್ ಮಹೀಂದ್ರಾದಲ್ಲಿ ವಿಲೀನ)ಗೆ ಸೇರಿದ ಬ್ಯಾಂಕ್ ಠೇವಣಿಯನ್ನು ವಶಕ್ಕೆ ಪಡೆಯಲು 2012 ರಲ್ಲಿ ಜಾರಿ ನಿರ್ದೇಶನಾಲಯವು ಆದೇಶ ನೀಡಿತ್ತು.
ಸಾಮೂಹಿಕ ವಜಾ, ಟೆಕ್ ಮಹೀಂದ್ರಕ್ಕೆ ಹೈದರಾಬಾದ್ ಹೈ ಕೋರ್ಟ್ ನೋಟಿಸ್
ಸತ್ಯಂ ಕಂಪ್ಯೂಟರ್ಸ್ ನಿಂದ ಅಕ್ರಮವಾಗಿ ಗಳಿಸಿದ ಮೊತ್ತವು ಈಗ ಟೆಕ್ ಮಹೀಂದ್ರಾ ಸೇರಿದೆ. ಈ ಮೊತ್ತವು ತನಿಖಾ ಸಂಸ್ಥೆಗೆ ಸೇರಬೇಕಿದೆ ಎಂದು ಜಾರಿ ನಿರ್ದೇಶನಾಲಯವು ವಾದಿಸಿತ್ತು.
ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿದ ಟೆಕ್ ಮಹೀಂದ್ರಾ ಪರ ವಕೀಲ್ ವಿವೇಕ್ ರೆಡ್ಡಿ, 2009 ರಲ್ಲಿ ಸತ್ಯಂ ಕಂಪ್ಯೂಟರ್ ಸರ್ವೀಸ್ ಲಿಮಿಟೆಡ್ (ಎಸ್ ಸಿಸಿಎಲ್) ಖರೀದಿಸಿದಾಗ, ಆ ಸಂಸ್ಥೆ ದಿವಾಳಿಯಾಗಿತ್ತು, ಯಾವುದೇ ಬ್ಯಾಂಕ್ ಠೇವಣಿ ಟೆಕ್ ಮಹೀಂದ್ರಾ ಪಾಲಾಗಿರಲಿಲ್ಲ. 2012 ರಲ್ಲಿ ತನಿಖಾ ಸಂಸ್ಥೆ ಜಪ್ತಿ ಆದೇಶ ನೀಡುವ ಸಂದರ್ಭದಲ್ಲಿ ಕಂಡು ಮೊತ್ತ ಠೇವಣಿ ಮೊತ್ತ ಎಲ್ಲವೂ ಟೆಕ್ ಎಂಗೆ ಸೇರಿದ್ದಾಗಿದೆ ಎಂದು ಹೇಳಿದರು.
ಆದರೆ, ಸುಮಾರು 2,171.45 ಕೋಟಿ ರು ಸಾಲದ ಮೊತ್ತವನ್ನು ಸಂಸ್ಥೆಯ ಉದ್ಯೋಗಿಗಳ ಸಂಬಳ ಇನ್ನಿತರ ವಿಷಯಕ್ಕೆ ಬಳಸಲಾಗಿದೆ. ಇದೆಲ್ಲವೂ ರಾಮಲಿಂಗರಾಜು ಅವರಿಗೆ ಸೇರಿದ ಮೊತ್ತವಾಗಿದೆ ಎಂದು ಜಾರಿ ನಿರ್ದೇಶನಾಲಯದ ವಕೀಲ ಪಿವಿ ಸುರೇಶ್ ಕುಮಾರ್ ವಾದಿಸಿದ್ದಾರೆ.
ಹೈದರಾಬಾದ್ ಹೈಕೋರ್ಟಿನ ಆದೇಶವನ್ನು ಪ್ರಶ್ನಿಸಿ, ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.