'ಮಲ್ಯ ಆಸ್ತಿಗೆ ಎಸ್ ಬಿಐ ಕೈ ಹಾಕುವಂತಿಲ್ಲ'
ಬೆಂಗಳೂರು, ನ.19: ಕಿಂಗ್ ಫಿಷರ್ ಏರ್ ಲೈನ್ಸ್ ಹಾಗೂ ಯುಬಿ ಸಮೂಹದ ಒಡೆಯ ಉದ್ಯಮಿ ವಿಜಯ್ ಮಲ್ಯಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆಗೆ ಸೇರಿದ ಮುಂಬೈ ನಗರದಲ್ಲಿನ ಆಸ್ತಿಯನ್ನು ಮುಟ್ಟುಗೋಲು ಹಾಕಲು ಮುಂದಾಗಿದ್ದ ಎಸ್ ಬಿಐಗೆ ಸೋಮವಾರ ಹೈಕೋರ್ಟ್ ಬ್ರೇಕ್ ಹಾಕಿದೆ.
ಸಾಲದ ಲೆಕ್ಕಕ್ಕೆ ಚುಕ್ತಾ ಮಾಡಿಕೊಳ್ಳಲು ಎಸ್ ಬಿಐ ಹಾಗೂ ಇನ್ನಿತರ ಸಂಸ್ಥೆಗಳು ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆಗೆ ಸೇರಿದ ಆಸ್ತಿ ಪಾಸ್ತಿ ಮುಟ್ಟುಗೋಲಿಗೆ ಮುಂದಾಗಿರುವುದನ್ನು ಪ್ರಶ್ನಿಸಿ ಮಲ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಆನಂದ್ ಬೈರಾರೆಡ್ಡಿ ಅವರಿದ್ದ ಹೈಕೋರ್ಟ್ ಏಕಸದಸ್ಯಪೀಠ ಮೇಲ್ಕಂಡ ತೀರ್ಪು ನೀಡಿದೆ.
ಡಿಸೆಂಬರ್ 6 ರವರೆಗೆ ಎಸ್ ಬಿಐ ಮತ್ತು ಇತರ ಯಾವುದೇ ಕಂಪನಿಗಳು ಮುಂಬೈನ ಆಯಕಟ್ಟಿನ ಜಾಗದಲ್ಲಿರುವ ಕಿಂಗ್ ಫಿಷರ್ ಹೌಸ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಬಾರದು ಅಥವ ತನ್ನ ವಶಕ್ಕೆ ತೆಗೆದುಕೊಳ್ಳಬಾರದು ಎಂದು ಆದೇಶಿಸಿದೆ.
ಕೆಎಫ್ ಎಲ್ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿ ಇನ್ನೂ ಕರ್ನಾಟಕ ಹೈಕೋರ್ಟ್ ಮುಂದೆ ವಿಚಾರಣೆಗೆ ಬಾಕಿ ಇದೆ. ಅದೇ ಎಸ್ ಬಿಐ ಕಂಪನಿ ನ್ಯಾಯಾಲಯದಲ್ಲಿ ದಾವೆ ಹೂಡಿದೆ. ಅದು ಆಸ್ತಿಗೆ ಸಂಬಂಧಿಸಿದಂತೆ ಏನೇ ದಾವೆ ಹೂಡುವುದಿದ್ದರೂ ಅದು ಕರ್ನಾಟಕ ಹೈಕೋರ್ಟ್ ನಲ್ಲಿ ಸಲ್ಲಿಸಬೇಕಿತ್ತು.
ಆದರೆ ಎಸ್ ಬಿಐ ಮುಂಬೈ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿ ಅಲ್ಲಿನ ಕಚೇರಿಯನ್ನು ವಶಕ್ಕೆ ತೆಗೆದುಕೊಳ್ಳುವ ಆದೇಶ ಪಡೆದುಕೊಂಡಿದೆ. ಇದು ಸರಿಯಲ್ಲ ಎಂದು ಕಂಪನಿ ನ್ಯಾಯಾಲಯದ ಮೊರೆ ಹೋಗಿತ್ತು. ಮಲ್ಯ ಅವರಿಗೆ ಬಂದಿರುವ ಸದ್ಯದ ಸಂಕಷ್ಟಗಳ ರೀ ಕ್ಯಾಪ್ ಮುಂದೆ ಓದಿ
ಎಸ್ ಬಿಐಗೆ ಕೊಂಚ ಹಿನ್ನಡೆ
ಎಸ್ ಬಿಐ ಕ್ಯಾಪ್ ಟ್ರಸ್ಟಿ ಕಂಪನಿ ಲಿಮಿಟೆಡ್ ಹಣಕಾಸು ಆಸ್ತಿಗಳ ಭದ್ರತಾ ಮತ್ತು ಪುನರ್ವಸತಿ ಹಾಗೂ ಭದ್ರತಾ ಹಿತಾಸಕ್ತಿ ಜಾರಿ ಕಾಯಿದೆ(SARFAESI) 2002ರ ಸೆಕ್ಷನ್ 14ರ ಪ್ರಕಾರ ಅರ್ಜಿ ಸಲ್ಲಿಸಿ, ಮುಂಬೈನಲ್ಲಿರುವ ಕೆಎಫ್ ಎಲ್ ಗೆ ಸೇರಿದ ಪ್ರಮುಖ ಕಚೇರಿಯನ್ನು ವಶಪಡಿಸಿಕೊಳ್ಳಲು ಮುಂಬೈ ಸಿಎಎಂ ನ್ಯಾಯಾಲಯದಿಂದ ಆದೇಶ ಪಡೆದಿತ್ತು. ಆದರೆ, ಸ್ಥಳೀಯ ಹೈಕೋರ್ಟ್ ನಲ್ಲಿ ಪ್ರಶ್ನಿಸಲು ಮರೆತ್ತಿದ್ದು ಕೊಂಚ ಹಿನ್ನಡೆ ಉಂಟು ಮಾಡಿದೆ.
ಮಲ್ಯ ಸಂಕಷ್ಟಗಳು
ಯುಬಿ ಸಮೂಹಕ್ಕೆ ಸಾಲ ಕೊಟ್ಟಿರುವ ಆರು ಸಂಸ್ಥೆಗಳು ಕೋರ್ಟಿನಲ್ಲಿ ದಾವೆ ಹೂಡಿದ್ದು ಪ್ರಕರಣದ ವಿಚಾರಣೆ ನಡೆದು. ಯುಬಿ ಸಮೂಹ ಸಂಸ್ಥೆ ಮಾಲೀಕ ವಿಜಯ್ ಮಲ್ಯ ಅವರು ಪಾಸ್ ಪೋರ್ಟ್ ಸಮೇತ ಕೋರ್ಟಿಗೆ ಹಾಜರಾಗಬೇಕು ಎಂದು ಕೋರ್ಟ್ ಆದೇಶಿಸಿತ್ತು.
ಡಿಯಾಜಿಯೋ ಸಂಸ್ಥೆ ಜತೆ ಆಗಿರುವ ಒಪ್ಪಂದ, ಷೇರು ಮಾರಾಟ ವರದಿಯನ್ನು ಯುಬಿ ಹೋಲ್ಡಿಂಗ್ಸ್ ಸಂಸ್ಥೆ ಕೋರ್ಟಿಗೆ ಸಲ್ಲಿಸುವಲ್ಲಿ ವಿಫಲವಾಗಿತ್ತು. ಯುನೈಟೆಡ್ ಸ್ಪಿರಿಟ್ಸ್ ನ ಷೇರುಗಳನ್ನು ಡಿಯಾಜಿಯೋಗೆ ಮಾರಾಟ ಮಾಡಲಾಗಿದೆ.
ಸಾಲದ ಹೊರೆ, ಸಿಬ್ಬಂದಿ ಭೀತಿ
ವಾರ್ಷಿಕ ವರದಿಯಲ್ಲಿ ಹೇಳಿರುವಂತೆ ನಿರಂತರವಾಗಿ ಕೆಲಸ ನಿಂತಿದ್ದು ಸಂಸ್ಥೆಯ ನಿರ್ವಹಣೆ ವೆಚ್ಚ ಏರಲು ಕಾರಣವಾಯಿತು. ಅನಗತ್ಯವಾಗಿ ಸಿಬ್ಬಂದಿಗಳು ಮುಷ್ಕರ ಹೂಡಿದ್ದು ಕಾರಣ ಎಂದಿದ್ದರು.
ಸುಮಾರು 17ಕ್ಕೂ ಅಧಿಕ ಬ್ಯಾಂಕುಗಳಿಂದ 8,000 ಕೋಟಿ ರು ಗೂ ಅಧಿಕ ಸಾಲದ ಹೊರೆಯನ್ನು ಮಲ್ಯ ಹೊತ್ತಿದ್ದು ಈ ಪೈಕಿ 1000 ಕೋಟಿ ರು ಮಾತ್ರ ಚುಕ್ತಾ ಮಾಡಿದ್ದರು. ಆದರೆ, ತಿಂಗಳುಗಳಿಂದ ಸಂಬಳ ಸಿಗದೆ ಒದ್ದಾಡುತ್ತಿದ್ದ ಸಿಬ್ಬಂದಿಗೆ ಬರಿ ಗೈ ತೋರಿಸಿದ್ದರು. ಸಂಬಳ ಸಿಗದೆ ಸಿಬ್ಬಂದಿಗಳು ನಿರಶನ ಮುಂದುವರೆಸಿದ್ದರು.ಈಗಲೂ ನಿರಶನ ಕಾಡಲಿದೆ.
ಇಂಜಿನ್ ಪ್ರಾಬ್ಲಂ
ಬ್ರೂವರೀಸ್ (ಹೋಲ್ಡಿಂಗ್ಸ್) ಲಿ. ಸಂಸ್ಥೆ ಈಗ ವಿಮಾನಗಳಿಗೆ ದೋಷ ಪೂರಿತ ಇಂಜಿನ್ ಒದಗಿಸಿದ ಇಂಟರ್ ನ್ಯಾಷನಲ್ ಏರೋ ಇಂಜಿನ್ಸ್ ಎಜಿ ವಿರುದ್ಧ ಹೈಕೋರ್ಟಿನಲ್ಲಿ ದೂರು ಸಲ್ಲಿಸಲಾಗಿತ್ತು. ಒಟ್ಟಾರೆ 1477 ಕೋಟಿ ರು ಪರಿಹಾರ ಧನ ಕೋರಲಾಗಿದೆ.
ವಿಮಾನ ಹಾರಾಟದ ಸ್ಥಗಿತಕ್ಕೆ ಸಂಬಂಧಿಸಿದಂತೆ ಮಲ್ಯ ಮಾಧ್ಯಮದವರ ವಿರುದ್ಧ ಹರಿಹಾಯ್ದಿದ್ದರು. ವಿಮಾನ ಯಾನ ಪುನರ್ ಆರಂಭಕ್ಕೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿರುವುದಾಗಿ ಅವರು ಇತ್ತೀಚೆಗೆ ಷೇರುದಾರರಿಗೆ ತಿಳಿಸಿದ್ದರು. ಮುಂಬೈ ಉದ್ಯೋಗಿಗಳ ತಂಡವು ವ್ಯವಸ್ಥಾಪಕರ ಜೊತೆ ಕೆಲವು ಸಭೆಗಳನ್ನು ನಡೆಸಿದ್ದಾರಾದರೂ ಕಂಪೆನಿ ನೀಡಿರುವ ಆಶ್ವಾಸನೆಯನ್ನು ಈಡೇರಿಸಿರಲಿಲ್ಲ.