ಹರ್ ಘರ್ ತಿರಂಗಾ: ಭಾರತದಲ್ಲಿ 500 ಕೋಟಿ ರೂ. ಧ್ವಜಗಳ ಮಾರಾಟ
ನವದೆಹಲಿ, ಆಗಸ್ಟ್ 16: ಭಾರತದ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಹರ್ ಘರ್ ತಿರಂಗಾ ಅಭಿಯಾನದಿಂದ ದಾಖಲೆ ಮಟ್ಟದಲ್ಲಿ ತ್ರಿವರ್ಣ ಧ್ವಜಗಳು ಮಾರಾಟವಾಗಿವೆ.
ಈ ವರ್ಷ 30 ಕೋಟಿಗೂ ಹೆಚ್ಚು ಧ್ವಜಗಳು ಮಾರಾಟವಾಗುವುದರ ಮೂಲಕ 500 ಕೋಟಿ ರೂಪಾಯಿಗಳ ವ್ಯಾಪಾರವಾಗಿದೆ ಎಂದು ವ್ಯಾಪಾರಿಗಳ ಸಂಸ್ಥೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ತಿಳಿಸಿದೆ. ಆಗಸ್ಟ್ 13 ಮತ್ತು ಆಗಸ್ಟ್ 15ರ ನಡುವೆ ಮೂರು ದಿನಗಳ ಕಾಲ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಅಥವಾ ಪ್ರದರ್ಶಿಸಲು ಜನರನ್ನು ಉತ್ತೇಜಿಸಲಾಗಿತ್ತು. ಕಳೆದ ಜುಲೈ 22ರಂದೇ ಈ ಅಭಿಯಾನವನ್ನು ಪ್ರಾರಂಭಿಸಿಸಲಾಗಿತ್ತು.
ರಾಷ್ಟ್ರ ಧ್ವಜವನ್ನು ಖಾಸಗಿ ಕಾರು ಮತ್ತು ಬೈಕ್ನಲ್ಲಿ ಹಾರಿಸಬಹುದೇ.. ನಿಯಮಗಳೇನು?
ಈ ಅಭಿಯಾನವು ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸ್ಮರಣಾರ್ಥ ಮಾರ್ಚ್ 2021ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಾರಂಭಿಸಿದ ಸರ್ಕಾರದ 'ಆಜಾದಿ ಕಾ ಅಮೃತ್ ಮಹೋತ್ಸವ' ಉಪಕ್ರಮದ ಭಾಗವಾಗಿತ್ತು. ಅದೇ ಅಭಿಯಾನದಿಂದ ದಾಖಲೆ ಮಟ್ಟದಲ್ಲಿ ರಾಷ್ಟ್ರಧ್ವಜ ಮಾರಾಟವಾಗಿರುವುದು ಬೆಳಕಿಗೆ ಬಂದಿದೆ.
30 ಕೋಟಿ ಧ್ವಜ ಉತ್ಪಾದನೆಗೆ 20 ದಿನ
"ಹರ್ ಘರ್ ತಿರಂಗಾ ಚಳುವಳಿಯು ಸುಮಾರು 20 ದಿನಗಳ ದಾಖಲೆಯ ಸಮಯದಲ್ಲಿ 30 ಕೋಟಿಗೂ ಹೆಚ್ಚು ಧ್ವಜಗಳನ್ನು ತಯಾರಿಸಿದ ಭಾರತೀಯ ಉದ್ಯಮಿಗಳ ಸಾಮರ್ಥ್ಯವನ್ನು ತೋರಿಸುತ್ತದೆ. ದೇಶದ ಜನರಲ್ಲಿ ತಿರಂಗದ ಬಗ್ಗೆ ಇರುವ ಅಭೂತಪೂರ್ವ ಬೇಡಿಕೆಯನ್ನು ಪೂರೈಸುತ್ತದೆ," ಎಂದು ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ.ಭರ್ತಿಯಾ ಮತ್ತು ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಳೆದ 15 ದಿನಗಳಲ್ಲಿ, CAIT ಮತ್ತು ದೇಶಾದ್ಯಂತ ವಿವಿಧ ಟ್ರೇಡ್ ಅಸೋಸಿಯೇಷನ್ಗಳು 3,000 ತಿರಂಗಾ ಕಾರ್ಯಕ್ರಮಗಳನ್ನು ಆಯೋಜಿಸಿವೆ ಎಂದು CAIT ತಿಳಿಸಿದೆ.
ಧ್ವಜ ಸಂಹಿತೆ ತಿದ್ದುಪಡಿ ಕುರಿತು ಉಲ್ಲೇಖ
ಕಳೆದ ತಿಂಗಳು, ಗೃಹ ವ್ಯವಹಾರಗಳ ಸಚಿವಾಲಯವು ಭಾರತದ ಧ್ವಜ ಸಂಹಿತೆ, 2002ರ ತಿದ್ದುಪಡಿಯನ್ನು ಗಮನಿಸಲಾಯಿತು. ಅದರಲ್ಲಿ ಪಾಲಿಯೆಸ್ಟರ್ ಅಥವಾ ಯಂತ್ರ-ನಿರ್ಮಿತ ಧ್ವಜಗಳ ತಯಾರಿಕೆಗೆ ಅವಕಾಶ ಮಾಡಿಕೊಟ್ಟಿತು. ಕೈಯಿಂದ ನೂಲುವ ಮತ್ತು ಕೈಯಿಂದ ನೇಯ್ದ ಅಥವಾ ಯಂತ್ರದಿಂದ ತಯಾರಿಸಿದ ಹತ್ತಿ, ಉಣ್ಣೆ, ರೇಷ್ಮೆ ಖಾದಿ ಬಂಟಿಂಗ್ ಅನ್ನು ಸೇರಿಸಲಾಗಿತ್ತು. ಈ ತಿದ್ದುಪಡಿಯು ಧ್ವಜಗಳ ಸುಲಭ ಲಭ್ಯತೆಗೆ ಸಹಾಯ ಮಾಡಿತು. ಮನೆಗಳಲ್ಲಿ ಅಥವಾ ಇತರ ಸ್ಥಳಗಳಲ್ಲಿ ತ್ರಿವರ್ಣ ಧ್ವಜವನ್ನು ತಯಾರಿಸಿದ 10 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ನೀಡಿತು ಎಂದು ಸಿಎಐಟಿ ಹೇಳಿದೆ.
ಹಿಂದೆಲ್ಲ ಖರ್ಚಾಗುತ್ತಿದ್ದ ಧ್ವಜಗಳ ಪ್ರಮಾಣ ಎಷ್ಟು?
ಈ ಹಿಂದಿನ ವರ್ಷಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ತ್ರಿವರ್ಣ ಧ್ವಜದ ವಾರ್ಷಿಕ ಮಾರಾಟವು ಸುಮಾರು 150-200 ಕೋಟಿ ರೂ.ಗಳಿಗೆ ಸೀಮಿತವಾಗಿತ್ತು. ಆದಾಗ್ಯೂ, ಹರ್ ಘರ್ ತಿರಂಗಾ ಆಂದೋಲನವು ಮಾರಾಟವನ್ನು ಬಹುಪಟ್ಟು ಹೆಚ್ಚಿಸಿದೆ,"ಎಂದು ಖಂಡೇಲ್ವಾಲ್ ಮತ್ತು ಭಾರ್ತಿಯಾ ಹೇಳಿದರು.
ಮೊದಲೇ ಸ್ಟಾಕ್ ಉಳಿದಿದ್ದ ಧ್ವಜಗಳೂ ಮಾರಾಟ
CAIT ಪ್ರಕಾರ, ಬೇಡಿಕೆಯ ಹೆಚ್ಚಳವು ತ್ರಿವರ್ಣ ಪ್ರಚಾರವನ್ನು ವ್ಯವಹಾರಗಳ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ (CSR) ಭಾಗವಾಗಿ ಮಾಡುವ ಸರ್ಕಾರದ ನಿರ್ಧಾರಕ್ಕೂ ಸಂಬಂಧಿಸಿದೆ. ತ್ರಿವರ್ಣ ಧ್ವಜಗಳಿಗೆ ಸಾಮಾನ್ಯವಾಗಿ ಗಣರಾಜ್ಯೋತ್ಸವ (ಜನವರಿ 26), ಸ್ವಾತಂತ್ರ್ಯ ದಿನ (ಆಗಸ್ಟ್ 15) ಮತ್ತು ಗಾಂಧಿ ಜಯಂತಿ (ಅಕ್ಟೋಬರ್ 2) ಆಸುಪಾಸಿನಲ್ಲಿ ಬೇಡಿಕೆ ಇರುತ್ತದೆ. ಆದರೆ ಕಳೆದ ಎರಡು ವರ್ಷಗಳಲ್ಲಿ ಕೋವಿಡ್ನಿಂದಾಗಿ ರಾಷ್ಟ್ರೀಯ ಹಬ್ಬಗಳು ನಡೆಯಲಿಲ್ಲ. ಆದ್ದರಿಂದ ಈ ವರ್ಷ ಬಳಕೆಯಾಗದ ಸ್ಟಾಕ್ ದೊಡ್ಡ ಪ್ರಮಾಣದಲ್ಲಿ ಲಭ್ಯವಾಯಿತು ಎಂದು ಸಂಘ ತಿಳಿಸಿದೆ.
Recommended Video