ಗಲ್ಫ್ನಲ್ಲಿ ತೈಲ ಬೆಲೆ ಇಳಿಕೆ, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತಲ್ಲಣ
ಬೆಂಗಳೂರು, ಸೆಪ್ಟೆಂಬರ್ 20 : ಗಲ್ಫ್ ದೇಶಗಳಲ್ಲಿ ತೈಲ ಬೆಲೆಗಳು ಇಳಿಕೆಯಾದರೆ ಭಾರತದಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತಲ್ಲಣ ಉಂಟಾಗುತ್ತದೆ. ಭಾರತೀಯ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅನಿವಾಸಿ ಭಾರತೀಯ ಗ್ರಾಹಕರು ಹೆಮ್ಮರವಿದ್ದಂತೆ. ಇತ್ತೀಚೆಗೆ ತೈಲ ಬೆಲೆ ಇಳಿಕೆಯಿಂದಾಗಿ ಅನಿವಾಸಿ ಭಾರತೀಯರಿಂದ ಬಂಡವಾಳ ಹೂಡಿಕೆ ಪ್ರಮಾಣ ಇಳಿಕೆಯಾದ ಪರಿಣಾಮ ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರ ಆತಂಕಕ್ಕೆ ಒಳಗಾಗಿತ್ತು.
ರಿಯಲ್ ಎಸ್ಟೇಟ್ ಉದ್ಯಮದ ತಜ್ಞರ ಪ್ರಕಾರ, ಕಳೆದ ಹಲವು ವರ್ಷಗಳಿಂದ ಗಲ್ಫ್ ಕೋಆಪರೇಷನ್ ಕೌನ್ಸಿಲ್ (ಜಿಸಿಸಿ) ರಾಷ್ಟ್ರಗಳಲ್ಲಿರುವ ಅನಿವಾಸಿ ಭಾರತೀಯರು ಭಾರತದ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಶೇ. 80ರಿಂದ 90ರಷ್ಟು ಬಂಡವಾಳ ತೊಡಗಿಸುತ್ತಿದ್ದರು. ಆದರೆ, ಗಲ್ಫ್ ರಾಷ್ಟ್ರಗಳಲ್ಲಿ ತೈಲ ಬೆಲೆ ಇಳಿಕೆ ಬಿಕ್ಕಟ್ಟು ಉಂಟಾದ ಪರಿಣಾಮ ಈ ಬಂಡವಾಳ ಹೂಡಿಕೆ ಪ್ರಮಾಣ ಸುಮಾರು ಶೇ.50ಕ್ಕೆ ಕುಸಿದಿದೆ.
ಮತ್ತೊಂದು ನಮ್ಮ ಕಣ್ಣಿಗೆ ಗೋಚರಿಸುವ ಅಂಶವೆಂದರೆ, ಬಹುತೇಕ ಎನ್ಆರ್ಐಗಳು ಭಾರತಕ್ಕೆ ವಾಪಸಾಗಿ ಇಲ್ಲಿಯೇ ವಾಸ್ತವ್ಯ ಮಾಡುವ ಬಗ್ಗೆ ಆಲೋಚಿಸುತ್ತಿದ್ದಾರೆ. ಅದರಂತೆ ಅವರು ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಮನೆ ಖರೀದಿ ಬಯಸುತ್ತಿದ್ದಾರೆ. ಈ ಪರಿಸ್ಥಿತಿ ದೇಶದ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಒಂದು ರೀತಿಯ ಬೆಳ್ಳಿಗೆರೆಯಂತಾಗಿದೆ. [ನಿಮ್ಮ ಕನಸಿನ ಮನೆ ಹುಡುಕ್ತಿದ್ದೀರಾ, ಅದೀಗ ಇನ್ನೂ ಸುಲಭ!]
ಈ ವಿಚಾರದ ಬಗ್ಗೆ ಬೆಳಕು ಚೆಲ್ಲಿರುವ ಕ್ರೆಡಾಯ್-ಬೆಂಗಳೂರಿನ ಕಾರ್ಯದರ್ಶಿ ಸುರೇಶ್ ಹರಿ ಅವರು, "ಬಹುತೇಕ ಜಿಸಿಸಿ ರಾಷ್ಟ್ರಗಳಲ್ಲಿ ತೈಲೋತ್ಪನ್ನಗಳ ಬೆಲೆ ಕುಸಿತದಿಂದಾಗಿ ಅಲ್ಲಿನ ಉದ್ಯೋಗಿಗಳ ವೇತನ ಮತ್ತು ಉದ್ಯೋಗ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ. ಆದರೆ, ಹೆಚ್ಚು ವ್ಯತಿರಿಕ್ತ ಪರಿಣಾಮ ಬೀರದ ಏಕೈಕ ದೇಶವೆಂದರೆ ದುಬೈ. ಪ್ರಸ್ತುತ ತೈಲ ಆರ್ಥಿಕತೆಯ ಪರಿಸ್ಥಿತಿಯನ್ನು ಗಮನಿಸಿರುವ ಬಹಳಷ್ಟು ಜನರು ಅಲ್ಲಿನ ಉದ್ಯೋಗ ತೊರೆದು ಭಾರತಕ್ಕೆ ವಾಪಸ್ ಬರುವ ಬಗ್ಗೆ ಚಿಂತಿಸುತ್ತಿದ್ದಾರೆ" ಎಂದರು.
"ಎನ್ಆರ್ಐ ಹೂಡಿಕೆಯಲ್ಲಿ ಕುಸಿತ ಕಂಡಿರುವುದು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಎಚ್ಚರಿಕೆಯೇನಲ್ಲ. ಈ ಹಿನ್ನೆಲೆಯಲ್ಲಿ ಡೆವಲಪರ್ಗಳು ಸರ್ಕಾರೀ ಸಂಸ್ಥೆಗಳ ಜತೆಗೂಡಿ ಮಧ್ಯಮ ವರ್ಗದ ಗ್ರಾಹಕರಿಗೆ ಕೈಗೆಟುಕುವ ದರದ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕಿದೆ. ಸರ್ಕಾರದ ಹೆಚ್ಚುವರಿ ಬೆಂಬಲ ಪಡೆದು ಡೆವಲಪರ್ಗಳು ಅಪಾರ್ಟ್ಮೆಂಟ್ಗಳ ಗಾತ್ರ ಮತ್ತು ದರಕ್ಕೆ ಹೊಂದಿಕೆಯಾಗುವ ರೀತಿಯಲ್ಲಿ ಮಧ್ಯಮ ವರ್ಗದವರಿಗೆ ವಸತಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕು. ಈ ನಿಟ್ಟಿನಲ್ಲಿ ಡೆವಲಪರ್ಗಳು ಚಿಂತಿಸಬೇಕಿದೆ" ಎಂದು ಸುರೇಶ್ ಹರಿ ಅವರು ಸಲಹೆ ನೀಡಿದರು.
ವೈಷ್ಣವಿ ಗ್ರೂಪ್ನ ದರ್ಶನ್ ಗೋವಿಂದರಾಜು ಅವರು ಮಾತನಾಡಿ, "ಮಧ್ಯಮ ವರ್ಗದ ಗ್ರಾಹಕರು ತಮ್ಮ ಭವಿಷ್ಯಕ್ಕಾಗಿ ನಿವೇಶನ ಅಥವಾ ಮನೆಯನ್ನು ಖರೀದಿಸುತ್ತಾರೆ. ಅದೇರೀತಿ ಭಾರತಕ್ಕೆ ವಾಪಸಾಗುವ ಅನಿವಾಸಿ ಭಾರತೀಯರು ತಮ್ಮ ನಿವೃತ್ತಿ ಜೀವನಕ್ಕಾಗಿ ಆಸ್ತಿ ಖರೀದಿಗೆ ಮುಂದಾಗುತ್ತಾರೆ" ಎಂದು ಹೇಳಿದರು. [ನಿಮ್ಮ ಕನಸಿನ ಮನೆ ಸಾಕಾರಕ್ಕೆ ಕ್ರೆಡಾಯ್ ಸಹಕಾರ]
ಅನುಜ್ ಅವರು ಹೇಳುವಂತೆ, "ಒಬ್ಬ ಉತ್ತಮ ಹೂಡಿಕೆದಾರ ಉತ್ತಮವಾದ ಕಾರ್ಯಕ್ಕೇ ಹೂಡಿಕೆ ಮಾಡಲು ಬಯಸುತ್ತಾನೆ. ಇದು ರಿಯಲ್ ಎಸ್ಟೇಟ್ ಉದ್ಯಮದ ಆರೋಗ್ಯಕಾರಿ ಮತ್ತು ಅದರ ಉನ್ನತಿಯ ಮುನ್ಸೂಚನೆಯಾಗುತ್ತದೆ. ಆದರೆ, ಕೆಲವು ಊಹಾಪೋಹಗಳಿಂದಾಗಿ ವ್ಯತಿರಿಕ್ತ ಪರಿಣಾಮ ಮತ್ತು ಪ್ರಭಾವ ಈ ಹೂಡಿಕೆದಾರರ ಮೇಲೆ ಬೀಳುತ್ತದೆ. ಅಲ್ಲದೇ ಈ ಊಹಾಪೋಹಗಳಿಂದಾಗಿ ಬೆಲೆಗಳು ಹೆಚ್ಚಳವಾಗಿ ಅವರು ಪ್ರಾಪರ್ಟಿ ಖರೀದಿಸಲು ಹಿಂಜರಿಯಬೇಕಾಗುತ್ತದೆ. ಡೆವಲಪರ್ಗಳಾಗಲೀ ಅಥವಾ ಹೂಡಿಕೆದಾರನಾಗಲೀ ತಮ್ಮ ಪ್ರಾಪರ್ಟಿ ದರವನ್ನು ಹೆಚ್ಚಳ ಮಾಡುವ ಪರಿಪಾಠ ಮುಂದುವರೆಸಿದ್ದೇ ಆದಲ್ಲಿ ಆ ಪ್ರಾಪರ್ಟಿ ಕೈಗೆಟುಕದಂತಾಗುತ್ತದೆ" ಎಂದು ಎಚ್ಚರಿಕೆ ನೀಡಿದರು.
ಬ್ರಿಗೇಡ್ ಎಂಟರ್ಪ್ರೈಸಸ್ನ ಸಿಇಒ(ರೆಸಿಡೆನ್ಷಿಯಲ್) ಓಂ ಅಹುಜಾ ಅವರ ಪ್ರಕಾರ, "ಜಿಸಿಸಿ ಗ್ರಾಹಕರ ಬೇಡಿಕೆ ಕೊಚ್ಚಿನ್ ಮತ್ತು ಕೊಯಮತ್ತೂರಿನ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಪರಿಣಾಮ ಬೀರುತ್ತಿದೆ." [ಪೆಟ್ರೋಲ್ ದರದಲ್ಲಿ ಮತ್ತೆ ಅಲ್ಪಪ್ರಮಾಣದ ಏರಿಕೆ!]
ವಿಶಾಲ್ ಪ್ರಮೋಟರ್ಸ್ನ ಪಾಲುದಾರರೂ ಆಗಿರುವ ಕ್ರೆಡಾಯ್ ಬೆಂಗಳೂರಿನ ಕಾರ್ಯದರ್ಶಿ ಸುರೇಶ್ ಹರಿ ಅವರು ಹೇಳುವಂತೆ, "ಗಲ್ಫ್ ರಾಷ್ಟ್ರಗಳಲ್ಲಿ ಆಗುತ್ತಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹೊಸ ಹೊಸ ಯೋಜನೆಗಳನ್ನು ಘೋಷಿಸುವ ಮೂಲಕ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೊಸ ಚೇತನ ತರಬಹುದು." [ಕೆಂಪಾಪುರ ಹೆಬ್ಬಾಳ: ಉತ್ತರ ಬೆಂಗಳೂರಿನ ಹಾಟ್ ಸ್ಪಾಟ್!]