ನರಸಾಪುರದ ತೈವಾನ್ ಕಂಪನಿಗೆ ಸೂಕ್ತ ಭದ್ರತೆ: ಜಗದೀಶ್ ಶೆಟ್ಟರ್
ಬೆಂಗಳೂರು ಡಿ 13: ಕೋಲಾರ ಜಿಲ್ಲೆಯ ವಿಸ್ಟ್ರನ್ ಕಂಪನಿಯಲ್ಲಿ ಆಗಿರುವ ಅಹಿತಕರ ಘಟನೆಯು ಮರುಕಳಿಸದಂತೆ ರಾಜ್ಯ ಸರ್ಕಾರ ನೋಡಿಕೊಳ್ಳಲಿದೆ. ಕಂಪನಿಗೆ ಅಗತ್ಯವಿರುವ ರಕ್ಷಣೆ ನೀಡಲು ರಾಜ್ಯ ಸರಕಾರ ಸಿದ್ದವಿದೆ ಎಂದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಶ್ರೀ ಜಗದೀಶ್ ಶೆಟ್ಟರ್ ಹೇಳಿದರು.
ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಂದು ಶೆಟ್ಟರ್ ತಿಳಿಸಿದರು.
ಐಫೋನ್ ಕಾರ್ಖಾನೆಯಲ್ಲಿ 21 ಸಾವಿರ ಐಫೋನ್ ಧ್ವಂಸ
ಕರ್ನಾಟಕ ರಾಜ್ಯ ಶಾಂತಿಪ್ರಿಯ ರಾಜ್ಯ, ಈ ಹಿನ್ನಲೆಯಿಂದಲೇ ವಿದೇಶಿ ಕಂಪನಿಗಳು ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿದ್ದು ಸ್ನೇಹಕರ ವಾತಾವರಣದಲ್ಲಿ ವ್ಯವಹಾರ ಮಾಡುತ್ತಿದ್ದಾರೆ.
ಫಾರ್ಚೂನ್ 500 ಕಂಪನಿಗಳಲ್ಲಿ 400 ಕಂಪನಿಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಕಂಪನಿಗಳು ಹಲವಾರು ವರ್ಷಗಳಿಂದ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಆರ್ಥಿಕ ಹಾಗೂ ಕೈಗಾರಿಕಾ ಅಭಿವೃದ್ದಿಗೆ ಸಾಕಷ್ಟು ಕೊಡುಗೆಯನ್ನು ನೀಡಿವೆ. ಇದು ನಮ್ಮ ರಾಜ್ಯ ಸರಕಾರದ ಕೈಗಾರಿಕೆಗಳು, ಕಾರ್ಮಿಕರು ಹಾಗೂ ಜನಸ್ನೇಹಿ ಅಂಶಗಳ ಪ್ರತಿಬಿಂಬವಾಗಿದೆ.
ಈ ರೀತಿಯ ಅಹಿತಕರ ಘಟನೆ ಆಗಿರುವುದು ವಿಷಾದನೀಯ. ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡಾ ಕಾನೂನಿನ ವಿರುದ್ದವಾಗಿ ಹೋಗುವುದು ಸರಿಯಲ್ಲ. ರಾಜ್ಯ ಸರಕಾರ ಕೈಗಾರಿಕೆಗಳ ಅಭಿವೃದ್ದಿಗೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದೇ ವೇಳೆ ಕಾರ್ಮಿಕರ ಹಕ್ಕುಗಳ ರಕ್ಷಣೆಗೂ ಬದ್ದವಾಗಿದೆ. ತಮಗೆ ಆಗಿರುವ ತೊಂದರೆಯನ್ನು ಕಾನೂನಿನ ಅಡಿಯಲ್ಲಿ ಸಮರ್ಪಕವಾಗಿ ತಿಳಿಸಿದ್ದಲ್ಲಿ ಪರಿಹಾರ ಕಂಡುಕೊಳ್ಳಬಹುದಾಗಿತ್ತು.
ರಾಜ್ಯ ಸರಕಾರ ರಾಜ್ಯದಲ್ಲಿ ಹೂಡಿಕೆ ಮಾಡಿರುವ ಕಂಪನಿಗಳಿಗೆ ಸೂಕ್ತ ರಕ್ಷಣೆ ಕೊಡಲು ಸಿದ್ದವಿದೆ. ಇಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ನಾವು ಬಿಗಿಯಾದ ಕ್ರಮಗಳನ್ನು ಕೈಗೊಳ್ಳುತ್ತೇವೆ. ಈಗಾಗಲೇ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿ ಅಗತ್ಯ ರಕ್ಷಣೆ ನೀಡಲು ಸೂಚನೆ ನೀಡಿದ್ದೇವೆ. ಅಲ್ಲದೆ, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಘಟನೆಗೆ ಕಾರಣರಾದವರ ಯಾರೇ ಆಗಿದ್ದರೂ ಕೂಡಾ ನಿರ್ದಾಕ್ಷೀಣ್ಯವಾಗಿ ಅವರ ಮೇಲೆ ಸರಕಾರ ಕ್ರಮ ಕೈಗೊಳ್ಳಿದೆ ಎಂದು ಹೇಳಿದರು.