ಸರ್ಕಾರದ 'ಸರ್ಜಿಕಲ್ ಸ್ಟ್ರೈಕ್'ಗೆ ಕಂಗಾಲಾದ ಸಾರ್ವಜನಿಕ ಬ್ಯಾಂಕಿಂಗ್ ವಲಯ
ನವದೆಹಲಿ, ಮಾರ್ಚ್ 16: ಸಾರ್ವಜನಿಕ ವಲಯದ ಮತ್ತಷ್ಟು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ಒಂಬತ್ತು ಬ್ಯಾಂಕ್ ಒಕ್ಕೂಟಗಳು ನಡೆಸುತ್ತಿರುವ ರಾಷ್ಟ್ರವ್ಯಾಪಿ ಮುಷ್ಕರ ಎರಡನೆಯ ದಿನಕ್ಕೆ ಕಾಲಿಟ್ಟಿದೆ. ಇದರಿಂದ ನಗದು ವಿತ್ಡ್ರಾವಲ್, ಠೇವಣಿ ಇರಿಸುವಿಕೆ, ಚೆಕ್ ಕ್ಲಿಯರೆನ್ಸ್ ಮುಂತಾದ ದೈನಂದಿನ ಬ್ಯಾಂಕ್ ಚಟುವಟಿಕೆಗಳಿಗೆ ಸತತ ಎರಡನೆಯ ದಿನ ತೊಂದರೆ ಉಂಟಾಗಿದೆ.
ಮುಷ್ಕರದ ಮೊದಲ ದಿನವಾದ ಸೋಮವಾರ ಸುಮಾರು 10 ಲಕ್ಷ ಬ್ಯಾಂಕ್ ಉದ್ಯೋಗಿಗಳು ಭಾಗಿಯಾಗಿದ್ದರು. ಇದರಿಂದ ರಾಜ್ಯಗಳಲ್ಲಿ ಪ್ರಮುಖ ವಹಿವಾಟು ಸೇವೆಗಳಿಗೆ ತೊಡಕುಂಟಾಯಿತು. ಹೀಗಾಗಿ ಜನಸಾಮಾನ್ಯರು ಪರದಾಡುವಂತಾಯಿತು. ಆದರೆ ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್ ಶಾಖೆಗಳು ಎಂದಿನಂತೆ ಕಾರ್ಯಾಚರಣೆ ನಡೆಸುತ್ತಿವೆ.
ಬ್ಯಾಂಕ್ ಮುಷ್ಕರ; ದಾವಣಗೆರೆಯಲ್ಲಿ ನೌಕರರ ಬೃಹತ್ ಪ್ರತಿಭಟನೆ
ಸೋಮವಾರ ದೇಶಾದ್ಯಂತ ಸುಮಾರು 16,500 ಕೋಟಿ ಮೊತ್ತದ ಎರಡು ಕೋಟಿ ಚೆಕ್ಗಳು ವಿಲೇವಾರಿಯಾಗದೆ ಉಳಿದಿವೆ. ನಗದು ಸಿಗುವುದಿಲ್ಲ ಎಂದು ಜನರು ಎಟಿಎಂಗಳಿಗೆ ಮುಗಿಬಿದ್ದಿದ್ದು, ಅನೇಕ ಎಟಿಎಂಗಳು ಮೊದಲ ದಿನವೇ ಖಾಲಿಯಾಗಿವೆ.
ಡಿಜಿಟಲ್ ಬ್ಯಾಂಕಿಂಗ್ಗೆ ಸಲಹೆ
ಠೇವಣಿ, ಕ್ಯಾಶ್ ವಿತ್ಡ್ರಾವಲ್ ಮುಂತಾದ ಸೇವೆಗಳು ಸ್ಥಗಿತಗೊಂಡ ಕಾರಣ ಇಂಟರ್ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ನಂತಹ ಡಿಜಿಟಲ್ ಮಾದರಿಗಳನ್ನು ತುರ್ತು ವ್ಯವಹಾರಗಳಿಗೆ ಬಳಸಿಕೊಳ್ಳುವಂತೆ ಬ್ಯಾಂಕ್ಗಳು ತಮ್ಮ ಗ್ರಾಹಕರಿಗೆ ಸೂಚಿಸಿವೆ.
ಆರ್ಥಿಕತೆಗೆ ದೊಡ್ಡ ಏಟು
ಭಾರತದ ಅಭಿವೃದ್ಧಿಶೀಲ ಆರ್ಥಿಕತೆಗೆ ಖಾಸಗೀಕರಣವು ದೊಡ್ಡ ನಕಾರಾತ್ಮಕ ಹೆಜ್ಜೆಯಾಗಿದೆ ಎಂದು ಬ್ಯಾಂಕ್ ಒಕ್ಕೂಟಗಳು ಕಳವಳ ವ್ಯಕ್ತಪಡಿಸಿವೆ. ಕಳೆದ ತಿಂಗಳು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸರ್ಕಾರದ ಹೂಡಿಕೆ ಹಿಂತೆಗೆತದ ಯೋಜನೆಯಡಿ ಸಾರ್ವಜನಿಕ ವಲಯದ ಎರಡು ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸುವುದನ್ನು ಪ್ರಕಟಿಸಿದ್ದರು.
ಬ್ಯಾಂಕ್ ಮುಷ್ಕರ: ATM ಸೇವೆ, ಹಣ ಡಿಪಾಸಿಟ್, ವಿತ್ ಡ್ರಾ ಎಲ್ಲವೂ ಬಂದ್!
ಬ್ಯಾಂಕ್ ಒಕ್ಕೂಟಗಳು
ಒಂಬತ್ತು ಒಕ್ಕೂಟಗಳು ಸೇರಿಕೊಂಡಿರುವ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್ಬಿಯು) ಮಾರ್ಚ್ 15 ಮತ್ತು 16ರಂದು ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿತ್ತು. ಎಐಬಿಇಎ, ಎಐಬಿಒಸಿ, ಎನ್ಸಿಬಿಇ, ಎಐಬಿಒಎ, ಬಿಇಎಫ್ಐ, ಐಎನ್ಬಿಇಎಫ್, ಐಎನ್ಬಿಒಸಿ, ಎನ್ಒಬಿಡಬ್ಲ್ಯೂ ಮತ್ತು ಎನ್ಒಬಿಒ ಒಕ್ಕೂಟಗಳು ಯುಎಫ್ಬಿಯುದ ಸದಸ್ಯರಾಗಿವೆ.
#BankStrike against #Privatisation#BankSurgicalStrike #SpeakUpOnStrike
— Imperfectionist Jass (@JassiChetan19) March 16, 2021
Jantar mantar, New Delhi pic.twitter.com/9swDMw7bsz
ಸರ್ಜಿಕಲ್ ಸ್ಟ್ರೈಕ್
ಸಾಮಾಜಿಕ ಜಾಲತಾಣದಲ್ಲಿಯೂ ಬ್ಯಾಂಕ್ ಮುಷ್ಕರ ಹಾಗೂ ಖಾಸಗೀಕರಣದ ಕುರಿತು ತೀವ್ರ ಚರ್ಚೆ ನಡೆಯುತ್ತಿವೆ. ಸಾಮಾಜಿಕ ಜಾಲತಾಣ ಬಳಕೆದಾರರು ಇದು ಕೇಂದ್ರ ಸರ್ಕಾರವು ಬ್ಯಾಂಕ್ಗಳ ಮೇಲೆ ನಡೆಸಿರುವ ಸರ್ಜಿಕಲ್ ಸ್ಟ್ರೈಕ್ ಎಂದು ಟೀಕಿಸಿದ್ದಾರೆ. ದೇಶದ ಅನೇಕ ರಾಜ್ಯಗಳಲ್ಲಿ ಬ್ಯಾಂಕ್ ಉದ್ಯೋಗಿಗಳು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.