'ಸರಕಾರದಿಂದ ಬಾಕಿ ಪಾವತಿ ಸರಿಯಾಗಿ ಆಗಲಿ; ಅರ್ಧ ಸಮಸ್ಯೆ ಬಗೆಹರಿಯುತ್ತದೆ'
ನವದೆಹಲಿ, ಆಗಸ್ಟ್ 23: ಸರಕಾರದಿಂದ ಬಾಕಿ ಉಳಿಸಿಕೊಂಡಿರುವುದನ್ನು ಸರಿಯಾದ ಸಮಯಕ್ಕೆ ಚುಕ್ತಾ ಮಾಡುತ್ತಾ ಬಂದರೆ ದೇಶೀಯ ಆರ್ಥಿಕತೆ ಎದುರಿಸುತ್ತಿರುವ ಸಮಸ್ಯೆಯ ಅರ್ಧದಷ್ಟು ನಿವಾರಣೆ ಆಗುತ್ತದೆ ಎಂದು ಮಾರುಕಟ್ಟೆಯ ಹಿರಿಯ ಅನುಭವಿ ರಾಮ್ ದೇವ್ ಅಗರವಾಲ್ ಅಭಿಪ್ರಾಯ ಪಟ್ಟಿದ್ದಾರೆ.
"ಕನಿಷ್ಠ ಪಕ್ಷ ಸರಕಾರದಿಂದ ಮೂವತ್ತು ದಿನದ ಬಿಲ್ ಅನ್ನು ಮೂವತ್ತು ದಿನದೊಳಗೆ ಪಾವತಿಸಿದರೂ ಮೂರನೇ ಒಂದು ಭಾಗದಷ್ಟು ಸಮಸ್ಯೆ ಬಗೆಹರಿಯುತ್ತದೆ ಎಂದು ಅವರು ಹೇಳಿದ್ದಾರೆ. ಹೀರೋ ಮೈಂಡ್ ಮೈನ್ ಸಮಾವೇಶದಲ್ಲಿ ಮಾತನಾಡಿದ ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ನ ಸಹ ಸಂಸ್ಥಾಪಕ ಅಗರವಾಲ್, ನೀತಿ ನಿರೂಪಕರು ಭಾರತದ ಪ್ರಗತಿ ಮಾದರಿಯನ್ನು ಅಭಿವೃದ್ಧಿ ಪಡಿಸಬೇಕು ಎಂದು ಸಲಹೆ ಮಾಡಿದ್ದಾರೆ.
ಮೋದಿನಾಮಿಕ್ಸ್: 'ಮುಂದಿನ ಒಂದು ವರ್ಷ ಜಾಗ್ರತೆಯಾಗಿರೋಣ'
ಮೊದಲಿಗೆ ಚೀನಾ ಅಭಿವೃದ್ಧಿ ಮಾದರಿ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು. ನೀತಿ ನಿರೂಪಣೆ ಹಂತದಲ್ಲಿ ಆರ್ಥಿಕತೆ ಬಗ್ಗೆ ಏನಂದು ಕೊಳ್ಳುತ್ತಿದ್ದಾರೋ ಅದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿ ದೇಶದ ಆರ್ಥಿಕ ಸ್ಥಿತಿ ಇದೆ. "ಕಳೆದ ನಲವತ್ತು ವರ್ಷದ ಮಾರುಕಟ್ಟೆ ಅನುಭವದಲ್ಲಿ ಈಗಿನ ರೀತಿ ಸಂಪತ್ತು ಕರಗುವುದನ್ನು ನಾವು ನೋಡಿಯೇ ಇಲ್ಲ" ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ 'ಅತಿಥಿ ದೇವೋ ಭವ' ಎಂಬ ಸಂಸ್ಕೃತಿ ಇದೆ. ಆದರೆ ವಿದೇಶಿ ಹೂಡಿಕೆದಾರರ ವಿಚಾರಕ್ಕೆ ಬಂದರೆ ಈ ಸಿದ್ಧಾಂತ ಅನ್ವಯ ಆಗುತ್ತಿಲ್ಲ. ವಿದೇಶಿ ಹೂಡಿಕೆದಾರರಿಗೆ ಅನುಕೂಲಕರವಾದ ಸನ್ನಿವೇಶ ಸೃಷ್ಟಿಸಬೇಕು. ಭಾರತದ ಮಾರುಕಟ್ಟೆ ಅವರ ಪಾಲಿಗೆ ಆಕರ್ಷಕವಾಗಿದೆ. ಮತ್ತು ಅವರು ಬರುತ್ತಾರೆ. ಆದರೆ ಅವರು ಸರಿಯಾದ ವಾತಾವರಣ ಎದುರು ನೋಡುತ್ತಿದ್ದಾರೆ ಎಂದಿದ್ದಾರೆ.
ಸಾಲ ದೊರೆಯದಿರುವುದು ಅತಿ ದೊಡ್ಡ ಸಮಸ್ಯೆಯಾಗಿದೆ. ಹಲವು ಸಮಸ್ಯೆಗಳನ್ನು ಸರಕಾರವೇ ಪರಿಹರಿಸಬಹುದು. ಆರ್ಥ ವ್ಯವಸ್ಥೆಯಲ್ಲಿ ನಗದು ಬಿಕ್ಕಟ್ಟು ಇದ್ದು, ಈಗಂತೂ ಸಮಸ್ಯೆ ಮತ್ತೂ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.