ಭಾರತದ ಕಾನೂನಿಗೆ ಗೂಗಲ್ ಬದ್ಧ - ಹೊಸ ಐಟಿ ನಿಯಮದ ಬಗ್ಗೆ ಸ್ಪಷ್ಟನೆ ನೀಡಿದ ಸುಂದರ್ ಪಿಚೈ
ನವದೆಹಲಿ, ಮೇ 27: ಭಾರತದ ಹೊಸ ಐಟಿ ನಿಯಮದ ಬಗ್ಗೆ ಈಗ ಭಾರೀ ಸುದ್ದಿಯಾಗುತ್ತಿದೆ. ಕೇಂದ್ರದ ಹೊಸ ಐಟಿ ನಿಯಮಗಳನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ಗೆ ಫೇಸ್ಬುಕ್ ಒಡೆತನದ ವಾಟ್ಸಾಪ್ ಸರ್ಕಾರದ ''ಹೊಸ ಐಟಿ ನಿಯಮಗಳು ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಅಸಂವಿಧಾನಿಕ'' ಎಂದು ಆರೋಪಿಸಿದೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಭಾರತದ ಹೊಸ ಐಟಿ ನಿಯಮದ ಬಗ್ಗೆ ಸ್ಪಷ್ಟನೆ ನೀಡಿರುವ ಗೂಗಲ್ ಸಿಇಓ ಸುಂದರ್ ಪಿಚೈ, ''ಭಾರತದ ಕಾನೂನಿಗೆ ಗೂಗಲ್ ಬದ್ಧ'' ಎಂದು ಹೇಳಿದ್ದಾರೆ.
ವರ್ಚುವಲ್ ಕಾನ್ಫೆರೆನ್ಸ್ನಲ್ಲಿ ಮಾತನಾಡಿದ ಸುಂದರ್ ಪಿಚೈ, ''ಗೂಗಲ್ ಆಯಾ ದೇಶದ ಕಾನೂನು, ನೀತಿ ನಿಯಮಗಳನ್ನು ಗೌರವಿಸುತ್ತದೆ. ಹಾಗೆಯೇ ಭಾರತದ ಕಾನೂನನ್ನು ಗೌರವಿಸುತ್ತದೆ. ಸ್ಥಳೀಯ ಕಾನೂನಿಗೆ ಗೂಗಲ್ ಬದ್ಧವಾಗಿದೆ. ಸರ್ಕಾರದ ನಿಯಮ ಹಾಗೂ ನೀತಿಗಳಿಗೆ ಅನುಸಾರವಾಗಿ ಗೂಗಲ್ ಕಾರ್ಯನಿರ್ವಹಿಸುತ್ತದೆ'' ಎಂದು ಸ್ಪಷ್ಟನೆ ನೀಡಿದ್ದಾರೆ.
ಭಾರತಕ್ಕೆ 135 ಕೋಟಿ ನೆರವು ಘೋಷಿಸಿದ ಗೂಗಲ್ ಸಿಇಒ ಸುಂದರ್ ಪಿಚೈ
''ಎಲ್ಲಾ ದೇಶಗಳ ಕಾನೂನಿಗೆ ಗೌರವ ನೀಡುವ ಗೂಗಲ್, ಭಾರತದ ಕಾನೂನನ್ನು ಪಾಲಿಸಲಿದೆ. ಆ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಸರ್ಕಾರಗ ಸೂಚನೆಗಳನ್ನು ಗೂಗಲ್ ಪರಿಗಣನೆಗೆ ತೆಗೆದುಕೊಳ್ಳಲಿದೆ. ಅಂತರ್ಜಾಲದ ಚೌಕಟ್ಟಿನಲ್ಲೇ ಗೂಗಲ್ ಕಾರ್ಯನಿರ್ವಹಿಸುತ್ತದೆ'' ಎಂದು ತಿಳಿಸಿದ್ದಾರೆ.
''ಇನ್ನು ಬದಲಾಗುತ್ತಿರುವ ಈ ತಂತ್ರಜ್ಞಾನದ ಯುಗದಲ್ಲಿ, ಬದಲಾವಣೆಗಳು, ನೀತಿಗಳ ತಿದ್ದುಪಡಿ ಸಾಮಾನ್ಯ ಹಾಗೂ ಅವಶ್ಯಕ. ಈ ಹಿನ್ನೆಲೆ ಗೂಗಲ್ ಭಾರತ ಸರ್ಕಾರ ನೀತಿಗೆ ಬದ್ದವಾಗಿದೆ'' ಎಂದು ಹೇಳಿದ್ದಾರೆ.
ಹೊಸ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು, 2021 ರ ಫೆಬ್ರವರಿ 25 ರಂದು ಸರ್ಕಾರ ಘೋಷಿಸಿದೆ. ಮೇ 25 ರೊಳಗೆ ಮಾನದಂಡಗಳನ್ನು ಅನುಸರಿಸಲು ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ನಂತಹ ದೊಡ್ಡ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸೂಚಿಸಿದೆ. ಆದರೆ ಈ ನಿಯಮ ಜನ ಸಾಮಾನ್ಯರ ಗೌಪ್ಯತೆಗೆ ಅಪಾಯ ಎಂದು ವಾಟ್ಸಾಪ್, ಫೇಸ್ಬುಕ್ ದೆಹಲಿ ಹೈಕೋರ್ಟ್ ಕದ ತಟ್ಟಿದೆ.
'ಸಾಮಾನ್ಯ ವಾಟ್ಸಾಪ್ ಬಳಕೆದಾರರು ಹೊಸ ಐಟಿ ನಿಯಮಗಳ ಬಗ್ಗೆ ಭಯಪಡಬೇಕಾಗಿಲ್ಲ' : ರವಿಶಂಕರ್
ಇನ್ನು ಈ ವಿಚಾರದಲ್ಲಿ ಗುರುವಾರ ಸ್ಪಷ್ಟನೆ ನೀಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ''ಗೌಪ್ಯತೆಯ ಹಕ್ಕನ್ನು ಸರ್ಕಾರ ಸಂಪೂರ್ಣವಾಗಿ ಪರಿಗಣಿಸುತ್ತದೆ ಹಾಗೂ ಗೌರವಿಸುತ್ತದೆ. ವಾಟ್ಸಾಪ್ನ ಸಾಮಾನ್ಯ ಬಳಕೆದಾರರು ಹೊಸ ನಿಯಮಗಳ ಬಗ್ಗೆ ಭಯಪಡಬೇಕಾಗಿಲ್ಲ. ನಿಯಮಗಳಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ಅಪರಾಧಗಳಿಗೆ ಸಂಬಂಧಿಸಿದ ಸಂದೇಶವನ್ನು ಯಾರು ಮೊದಲು ಹಂಚಿಕೊಂಡಿದ್ದಾರೆ ಎಂಬುದನ್ನು ಕಂಡುಹಿಡಿಯುವುದು ಇದರ ಹಿಂದಿನ ಉದ್ದೇಶ'' ಎಂದು ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)