ಕ್ಯಾಶ್ ಬ್ಯಾಕ್ ವಂಚನೆ: ಪೇಟಿಯಂ ಸ್ಥಾಪಕ ವಿಜಯ್ ಶರ್ಮ ವಿರುದ್ಧ ಕೇಸ್
ಗಾಜಿಯಾಬಾದ್(ಉತ್ತರಪ್ರದೇಶ), ಫೆಬ್ರವರಿ 09: ಆನ್ ಲೈನ್ ಹಣ ಪಾವತಿ ಅಪ್ಲಿಕೇಷನ್, ಜನಪ್ರಿಯ ಇ ವ್ಯಾಲೆಟ್ ಪೇಟಿಯಂ ಈಗ ಕ್ಯಾಶ್ ಬ್ಯಾಕ್ ಸಮಸ್ಯೆಯಲ್ಲಿ ಸಿಲುಕಿದೆ. ಪೇಟಿಯಂ ಸ್ಥಾಪಕ, ಸಿಇಒ ವಿಜಯ್ ಶೇಖರ್ ಶರ್ಮ ಸೇರಿದಂತೆ ಪ್ರಮುಖರ ವಿರುದ್ಧ ವಂಚನೆ ದೂರು ದಾಖಲಿಸಲಾಗಿದೆ.
ಉತ್ತರಪ್ರದೇಶದ ಗಾಜಿಯಾಬಾದ್ ನ ಕವಿನಗರ್ ನಲ್ಲಿ ಪ್ರಕರಣಾ ದಾಖಲಾಗಿದ್ದು, ಪೇಟಿಯಂ ಸಿಇಒ ವಿಜಯ್ ಶೇಖಾರ್ ಅಲ್ಲದೆ, ಉಪಾಧ್ಯಕ್ಷ ಅಜಯ್ ಶೇಖರ್ ಶರ್ಮ, ಅಜಯ್ ಶೇಖರ್, ಪೇಟಿಯಂ ಬ್ಯಾಂಕಿನ ಅಜಯ್ ಶರ್ಮ, ರಜತ್ ಜೈನ್, ಕಳಾನಿಧಿ ನೈಥನಿ ವಿರುದ್ಧ ದೂರು ನೀಡಲಾಗಿದೆ.
ಘಟನೆ ವಿವರ: ಉದ್ಯಮಿ ರಾಜ್ ಕುಮಾರ್ ಸಿಂಗ್ ಎಂಬುವವರಿಗೆ ಡಿಸೆಂಬರ್ 28, 2019ರಂದು ಫೋನ್ ಕರೆ ಬಂದಿದೆ. ಪೇಟಿಯಂ ಉಪಾಧ್ಯಕ್ಷ ಅಜಯ್ ಶೇಖರ್ ಶರ್ಮ ಎಂದು ಹೇಳಿ ಕರೆ ಮಾಡಿದ ವ್ಯಕ್ತಿ, ಕ್ಯಾಶ್ ಬ್ಯಾಕ್ ಸಿಕ್ಕಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತಾನೆ. ಏನಿದು ಕ್ಯಾಶ್ ಬ್ಯಾಕ್ ಹೇಗೆ ಪಡೆಯುವುದು ಎಂದು ರಾಜ್ ಕುಮಾರ್ ಪ್ರಶ್ನಿಸಿದಾಗ, ಹೈಪರ್ ಲಿಂಕ್ ಕ್ಲಿಕ್ ಮಾಡುವಂತೆ ಆ ವ್ಯಕ್ತಿ ಸೂಚಿಸಿತ್ತಾನೆ. ಆದರೆ, ರಾಜ್ ಕುಮಾರ್ ನಿರಾಕರಿಸುತ್ತಾರೆ.
ಎಸ್ಎಂಎಸ್ ಸಂದೇಶ ಕಳಿಸಿ ಮತ್ತೊಮ್ಮೆ ಹೈಪರ್ ಲಿಂಕ್ ಕ್ಲಿಕ್ ಮಾಡಲು ಪ್ರಚೋದಿಸಲಾಗುತ್ತದೆ. ಆದರೆ ರಾಜ್ ಕುಮಾರ್ ಇದಕ್ಕೆ ಒಪ್ಪುವುದಿಲ್ಲ. ಆದರೆ, ರಾಜ್ ಕುಮಾರ್ ಖಾತೆ ಹಾಗೂ ಇಲ್ಲಿ ತನಕ ನಡೆಸಿರುವ ಆನ್ ಲೈನ್ ವ್ಯವಹಾರದ ಪೂರ್ಣ ವಿವರವನ್ನು ಆ ವ್ಯಕ್ತಿ ನೀಡಿದಾಗ ಪೇಟಿಯಂ ಸಂಸ್ಥೆ ಸಿಬ್ಬಂದಿ ಮೇಲಿನ ನಂಬಿಕೆಯಿಂದ ಮೇಸೇಜ್ ನಲ್ಲಿದ್ದ ಲಿಂಕ್ ಕ್ಲಿಕ್ ಮಾಡುತ್ತರೆ. ಹಣ ಕಡಿತಗೊಳ್ಳತೊಡಗುತ್ತದೆ. ಪೇಟಿಯಂ ಜೊತೆಗೆ ರಾಜ್ ಕುಮಾರ್ ತಮ್ಮ ಐಸಿಐಸಿಐ ಖಾತೆಯನ್ನು ಜೋಡಿಸಿರುತ್ತಾರೆ. ಒಟ್ಟಾರೆ 1 ಲಕ್ಷ 46 ಸಾವಿರದ 694 ರುಪಾಯಿ ವಿಥ್ ಡ್ರಾ ಆಗಿರುತ್ತದೆ.
ಈ ನಡುವೆ ಪೇಟಿಯಂ ಖಾತೆಗೆ 1400 ರುಪಾಯಿ ಕ್ಯಾಶ್ ಬ್ಯಾಕ್ ಬಂದಿರುತ್ತದೆ. ಆನ್ ಲಿನ್ ನಲ್ಲಿ ಪೇಟಿಯಂ ಸಂಸ್ಥೆಗೆ ಈ ಬಗ್ಗೆ ದೂರು ಸಲ್ಲಿಸಿದ ರಾಜ್ ಕುಮಾರ್ ಗೆ ಯಾವುದೇ ರೀತಿ ಉತ್ತಮ ಪತ್ರಿಕಿಯೆ ಸಿಗುವುದಿಲ್ಲ.
ಸಿಹಾನಿ ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಹಲವು ಬಾರಿ ಠಾಣೆಗೆ ಭೇಟಿ ಕೊಟ್ಟರೂ ಫಲ ಸಿಗುವುದಿಲ್ಲ. ಎಸ್ ಪಿ ಯನ್ನು ಫೆಬ್ರವರಿ 05ರಂದು ಭೇಟಿ ಮಾಡಿ ತನಗಾದ ವಂಚನೆ, ಪೊಲೀಸರ ತನಿಖಾ ವೈಖರಿ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಪಿ ಅಜಯ್ ಶೇಖರ್, "ಪೇಟಿಯಂ ಕೆವೈಸಿಗಾಗಿ ಕೂಡಾ ನಾವು ಗ್ರಾಹಕರಿಗೆ ಕರೆ ಮಾಡುವುದಿಲ್ಲ. ಗ್ರಾಹಕರ ಖಾತೆ ವಿವರ ಹೇಗೆ ಸೋರಿಕೆಯಾಗಿದೆ ಎಂಬುದರ ತನಿಖೆ ಆಗಬೇಕಿದೆ. ಸಂಸ್ಥೆ ಮೇಲಿನ ಆರೋಪಗಳು ಸುಳ್ಳು, ಪೊಲೀಸ್ ತನಿಖೆಯಿಂದ ಸತ್ಯ ಹೊರಬರಲಿದೆ" ಎಂದಿದ್ದಾರೆ.