ತೆರಿಗೆ ಕಿರುಕುಳದಿಂದ ಮುಕ್ತಿ: ನಿರ್ಮಲಾ ಸೀತಾರಾಮನ್ ಭರವಸೆ
ನವದೆಹಲಿ, ಆಗಸ್ಟ್ 24: ವಾಣಿಜ್ಯ ಉದ್ಯಮವು ಇನ್ನು ಮುಂದೆ ತೆರಿಗೆ ಅಧಿಕಾರಿಗಳಿಂದ ಯಾವುದೇ ರೀತಿಯ ಕಿರುಕುಳಗಳನ್ನು ಎದುರಿಸುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.
ತೆರಿಗೆದಾರರೊಂದಿಗೆ ಸಂವಹನ ನಡೆಸಲು ತೆರಿಗೆ ಅಧಿಕಾರಿಗಳಿಗೆ ಅನುಕೂಲವಾಗುವಂತೆ ನೂತನ ವ್ಯವಸ್ಥೆಯೊಂದನ್ನು ಜಾರಿಗೆ ತರುವುದಾಗಿ ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ವ್ಯಕ್ತಪಡಿಸಿದ್ದ ಆಶಯದಂತೆ ಸಂಪತ್ತು ಸೃಷ್ಟಿಸುವ ವ್ಯಕ್ತಿಗಳಿಗೆ ಸರ್ಕಾರ ಗೌರವ ನೀಡುವ ವ್ಯವಸ್ಥೆಯನ್ನು ಅಳವಡಿಸುವುದಾಗಿ ತಿಳಿಸಿದ್ದಾರೆ.
ಕುಸಿದ ವಾಹನ ಉದ್ಯಮ ಚೇತರಿಕೆಗೆ ನಿರ್ಮಲಾ ಸೀತಾರಾಮನ್ ಮದ್ದು
ಉದ್ಯಮಗಳನ್ನು ನಡೆಸುವವರಿಗೆ ತೆರಿಗೆ ಅಧಿಕಾರಿಗಳು ವಿಪರೀತ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪಗಳು ಪದೇ ಪದೇ ಕೇಳಿಬರುತ್ತಿವೆ. ಮುಖ್ಯವಾಗಿ ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್ ಶಾ ಅವರಂತಹ ಉದ್ಯಮಿಗಳು ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಅವರ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ನೇರವಾಗಿ ತೆರಿಗೆ ಕಿರುಕುಳದ ಬಗ್ಗೆ ಧ್ವನಿ ಎತ್ತಿದ್ದರು.
ತೆರಿಗೆ ಇಲಾಖೆ ಕಾರ್ಯದ ಮೇಲೆ ನಿಗಾ
ನಿರ್ಮಲಾ ಅವರು ನೀಡಿರುವ ಭರವಸೆಯು, ಕಪ್ಪುಹಣ ಮತ್ತು ತೆರಿಗೆ ವಂಚನೆಯ ವಿರುದ್ಧ ಬೃಹತ್ ಸಮರ ಸಾರಿರುವ ನೇರ ತೆರಿಗೆ ಆಡಳಿತವು ನಡೆಸುವ ತನಿಖೆಗಳು ಮತ್ತು ಮೌಲ್ಯಮಾಪನಗಳ ಮೇಲೆ ರಾಜಕೀಯ ನಾಯಕತ್ವವು ಸೂಕ್ಷ್ಮ ನಿಗಾ ವಹಿಸಲಿದೆ ಎಂಬುದನ್ನು ಸೂಚಿಸಿದೆ.
'ಇನ್ನು ಮುಂದೆ ತೆರಿಗೆ ಅಧಿಕಾರಿಗಳು ತೆರಿಗೆ ವಂಚನೆ ಅನುಮಾನದಡಿ ದಾಳಿ ಮತ್ತು ತನಿಖೆಗಳನ್ನು ನಡೆಸುವುದಿಲ್ಲ' ಎಂದು ಅವರು ಹೇಳಿದ್ದಾರೆ.
ಶುಭಸುದ್ದಿ: ಗೃಹ, ವಾಹನ, ಚಿಲ್ಲರೆ ಸಾಲಗಳು ಅಗ್ಗ
ತೆರಿಗೆ ಇಲಾಖೆಗೆ ಡಿಐಎನ್ ಅಳವಡಿಕೆ
ಆದಾಯ ತೆರಿಗೆ ಆದೇಶಗಳನ್ನು, ನೋಟಿಸ್ಗಳನ್ನು ಮತ್ತು ಸಮನ್ಸ್ಗಳನ್ನು ಹೊರಡಿಸಲು ಕೇಂದ್ರೀಕೃತ ಕಂಪ್ಯೂಟರ್ ವ್ಯವಸ್ಥೆಯನ್ನು ಅಳವಡಿಸಲಾಗುವುದು. ಇದು ವಿಶಿಷ್ಟ ದಾಖಲೆಯ ಗುರುತಿನ ಸಂಖ್ಯೆ ಅಥವಾ ಡಿಐಎನ್ಅನ್ನು ಹೊಂದಿರುತ್ತದೆ. ಇದು ಅಕ್ಟೋಬರ್ 1ರಿಂದ ಜಾರಿಯಾಗಲಿದೆ ಎಂದು ತಿಳಿಸಿದರು.
ಡಿಐಎನ್ ಇಲ್ಲದಿದ್ದರೆ ಮಾನ್ಯವಿಲ್ಲ
'ಇದು ತೆರಿಗೆದಾರರು ತಾವು ಎದುರಿಸುವ ಅಧಿಕಾರಗಳ ಕಿರುಕುಳವನ್ನು ಎದುರಿಸುವ ಒಂದು ಮಾರ್ಗ. ಯಾವುದೇ ನೋಟಿಸ್ ಅಥವಾ ದಾಖಲೆಯು ಡಿಐಎನ್ಅನ್ನು ಒಳಗೊಳ್ಳದೆ ಇದ್ದರೆ, ಅದನ್ನು ತೆರಿಗೆದಾರರೇ ಗಂಭೀರವಾಗಿ ಸ್ವೀಕರಿಸುವ ಅಗತ್ಯವೇ ಇರುವುದಿಲ್ಲ' ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಉದ್ಯಮಗಳಿಗೆ ತಕ್ಷಣ ಸ್ಪಂದನೆ
ಸಣ್ಣಪುಟ್ಟ ಅಪರಾಧಗಳಿಗೆ ಕಂಪೆನಿಗಳ ಕಾಯ್ದೆ ಅಡಿ ವಿಚಾರಣೆ ನಡೆಸಿ ಆರ್ಥಿಕ ದಂಡ ವಿಧಿಸುವುದರಿಂದ ದೂರವೇ ಉಳಯುವ ಮತ್ತು ಉದ್ಯಮಗಳಿಗೆ ಅನುಕೂಲವಾಗುವಂತೆ ತ್ವರಿತ ಅನುಮೋದನೆಗಳನ್ನು ನೀಡುವ ತನ್ನ ಪದ್ಧತಿಯನ್ನು ಸರ್ಕಾರ ಮುಂದುವರಿಸಲಿದೆ. 'ನಾವು ಹೆಚ್ಚು ವೇಗವಾಗಿ ಸ್ಪಂದಿಸುತ್ತೇವೆ ಮತ್ತು ಸುಧಾರಣಾ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಭರವಸೆ ನೀಡುತ್ತೇವೆ. ವಿಚಾರಣೆಗಳನ್ನು ಮಾಡುತ್ತಾ ವಿಳಂಬ ಮಾಡುವ ಯಾವುದೇ ಉದ್ದೇಶವಿಲ್ಲ' ಎಂದು ಹೇಳಿದರು.