ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
ನವದೆಹಲಿ, ಜನವರಿ 24: 2021ರ ಫೆಬ್ರವರಿ 1 ರಂದು ಆಯವ್ಯಯ ಪತ್ರವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದಾರೆ. ಪ್ರಸಕ್ತ ಸಾಲಿನ ಕೇಂದ್ರ ಆಯವ್ಯಯದ ಅಂತಿಮ ಹಂತದ ರೂಪುರೇಷೆ ಸಿಹಿ ಹಲ್ವಾ ಸಮಾರಂಭದೊಂದಿಗೆ ಪ್ರಾರಂಭವಾಯಿತು.
ನಾರ್ಥ್ ಬ್ಲಾಕ್ ನಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅಂತಿಮ ಹಂತದ ಸಮಾರಂಭಕ್ಕೆ ಚಾಲನೆ ನೀಡಿದರು. ಕೇಂದ್ರ ಬಜೆಟ್ ನ ಲಾಕ್ ಇನ್ ಪ್ರಕ್ರಿಯೆ ಪ್ರಾರಂಭವಾಗುವ ಮೊದಲು ಪ್ರತಿವರ್ಷ ಸಾಂಪ್ರದಾಯಿಕ ಸಿಹಿ ಸಮಾರಂಭವನ್ನು ನಡೆಸಲಾಗುತ್ತದೆ.
ಹಲ್ವಾ ಸಮಾರಂಭದಲ್ಲಿ ಕೇಂದ್ರ ಹಣಕಾಸು ಸಚಿವರ ಜತೆ ಹಣಕಾಸು ಮತ್ತು ಕಾರ್ಪೋರೆಟ್ ವ್ಯವಹಾರಗಳ ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್, ಹಣಕಾಸು ಕಾರ್ಯದರ್ಶಿ[ಕಂದಾಯ] ಡಾ. ಎ..ಬಿ. ಪಾಂಡೆ, ವೆಚ್ಚಗಳ ವಿಭಾಗದ ಕಾರ್ಯದರ್ಶಿ ಟಿ.ವಿ. ಸೋಮನಾಥನ್, ಹಣಕಾಸು ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ತರುಣ್ ಬಜಾಜ್, ಡಿ..ಐ.ಪಿ.ಎ.ಎಂ ನ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ, ಹಣಕಾಸು ಸೇವೆಗಳ ಕಾರ್ಯದರ್ಶಿ ದೇಬಶಿಶ್ ಪಾಂಡೆ, ಮುಖ್ಯ ಆರ್ಥಿಕ ಸಲಹೆಗಾರ ಡಾ. ಕೆ.ವಿ. ಸುಬ್ರಮಣ್ಯನ್, ಹೆಚ್ಚುವರಿ ಕಾರ್ಯದರ್ಶಿ [ಬಜೆಟ್] ರಜತ್ ಕುಮಾರ್ ಮಿಶ್ರಾ ಹಾಗೂ ಮತ್ತಿತತರ ಅಧಿಕಾರಿಗಳು ಉಪಸ್ಥಿತರಿದ್ದರು.
ಅಲ್ಲದೇ ಸಿಬಿಡಿಟಿ ಅಧ್ಯಕ್ಷ ಪಿ.ಸಿ. ಮೊಡಿ, ಸಿಬಿಐಸಿ ಅಧ್ಯಕ್ಷ ಎಂ. ಅಜಿತ್ ಕುಮಾರ್, ಇತರೆ ಅಧಿಕಾರಿಗಳು, ಬಜೆಟ್ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ಹಣಕಾಸು ಇಲಾಖೆಯ ಸಿಬ್ಬಂದಿ ಸಹ ಹಾಜರಿದ್ದರು.
ಕ್ರಮೇಣ ಕೇಂದ್ರ ಹಣಕಾಸು ಸಚಿವರು 2021-22 ನೇ ಸಾಲಿನ ಕೇಂದ್ರ ಬಜೆಟ್ ನ ಸಂಕಲನದ ಸ್ಥಿತಿಯನ್ನು ಪರಾಮರ್ಶಿಸಿದರು. ಸಂಬಂಧಪಟ್ಟ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಶುಭಾಶಯಗಳನ್ನು ತಿಳಿಸಿದರು.
ಬಜೆಟ್ 2021: ವಿಶೇಷ ಮೊಬೈಲ್ APP ಬಿಡುಗಡೆ ಮಾಡಿದ ಸಚಿವೆ ನಿರ್ಮಲಾ
ಬಜೆಟ್ ಪ್ರತಿಗಳನ್ನು ಪ್ರಿಂಟಿಗೆ ಕಳುಹಿಸುವ ಮೊದಲು ಮತ್ತು ಬಜೆಟ್ ಮಂಡನೆಗೆ ಕೆಲ ದಿನಗಳು ಇರುವಾಗಲೇ ಹಲ್ವಾ ಸಮಾರಂಭವನ್ನು ಆಚರಿಸಲಾಗುತ್ತದೆ. ಹಣಕಾಸು ಸಚಿವಾಲಯ ಕಟ್ಟಡದ ಕೆಳಮಹಡಿಯಲ್ಲಿ, ದೊಡ್ಡ ಕಡಾಯಿಯಲ್ಲಿ ಹಲ್ವಾ ತಯಾರಿಸಲಾಗುತ್ತದೆ ಮತ್ತು 100ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಹಲ್ವಾ ಹಂಚಲಾಗುತ್ತದೆ.
ಫೋನ್ ಮುಖಾಂತರವಾಗಲಿ ಮತ್ತಾವುದೇ ರೀತಿಯಲ್ಲಿಯಾಗಲಿ ಯಾರನ್ನೂ ಸಂಪರ್ಕಿಸುವಂತಿಲ್ಲ. ಅಷ್ಟರ ಮಟ್ಟಿಗೆ ಮಾಹಿತಿ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಈ ಕಾರಣದಿಂದಾಗಿಯೇ ಬಜೆಟ್ ಪ್ರತಿಗಳನ್ನು ಪ್ರಿಂಟಿಗೆ ಕಳುಹಿಸುವ ಮುನ್ನ ಹಲ್ವಾ ತಯಾರಿಸಿ ಸಿಬ್ಬಂದಿಗೆ ಹಂಚುವುದು ಸಂಪ್ರದಾಯ.