Fake: ಹೆಲಿಕಾಪ್ಟರ್ನಿಂದ ಮೋದಿ ಸರ್ಕಾರ ಹಣ ಉದುರಿಸಲ್ಲ!
ನವದೆಹಲಿ, ಏಪ್ರಿಲ್ 16: ಕೊರೊನಾವೈರಸ್ನಿಂದ ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅಗತ್ಯ ಆರ್ಥಿಕ ಪ್ಯಾಕೇಜ್ ಗಳನ್ನು ಘೋಷಿಸಿದೆ. ಆದರೆ, ಈ ನಡುವೆ ಕೇಂದ್ರ ಸರ್ಕಾರದಿಂದ ಹೆಲಿಕಾಪ್ಟರ್ ಮೂಲಕ ನಗದು ಹಣವನ್ನು ಕೆಳಗೆ ಉದುರಿಸಲಾಗುತ್ತದೆ ಎಂಬ ಪೋಸ್ಟ್ ವೈರಲಾಗುತ್ತಿದೆ. ಫೇಸ್ಬುಕ್, ವಾಟ್ಸಾಪ್ ನಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ. ಆದ್ರೆ, ಇದು ಸುಳ್ಳು ಸುದ್ದಿ ಎಂದು PIB ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇನ್ನೊಮ್ಮೆ ಆರ್ಥಿಕ ಪ್ಯಾಕೇಜ್ ಘೋಷಿಸುವ ಸಾಧ್ಯತೆಯಿದೆ. ಆದರೆ, ಹೆಲಿಕಾಪ್ಟರ್ ಮೂಲಕ ದುಡ್ಡು ಸುರಿಯುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ ಎಂದು ಸರ್ಕಾರ ಹೇಳಿದೆ. ಈ ಬಗ್ಗೆ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಿದ್ದ ಕನ್ನಡ ಸುದ್ದಿವಾಹಿನಿ ಪಬ್ಲಿಕ್ ಟಿವಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, ವಾರ್ತಾ ಮತ್ತು ಪ್ರಸಾರ ಕಾಯ್ದೆ ಉಲ್ಲಂಘಿಸಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಿ 10ದಿನಗಳ ಕಾಲ ಸಮಯ ನೀಡಲಾಗಿದೆ ಎಂದು ವಾರ್ತಾ ಪ್ರಸಾರ ಇಲಾಖೆಯ ಪ್ರಕಟಣೆಯಲ್ಲಿದೆ.
Fact Check: ಮಸೀದಿ ಪ್ರವೇಶಕ್ಕೆ ನಿರ್ಬಂಧ ವಿರೋಧಿಸಿ ವಿಡಿಯೋ
ಹಾಗಾದರೆ ಹೆಲಿಕಾಪ್ಟರ್ ಮನಿ ಅಂದರೇನು?: ಇದೊಂದು ಹಣಕಾಸು ನಿಯಮ, ತಂತ್ರ ಈ ಮೂಲಕ ಕುಸಿತ ಕಂಡ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಬಹುದಾಗಿದೆ. ದೊಡ್ಡ ಮೊತ್ತದ ಹಣವನ್ನು ಮುದ್ರಿಸಿ, ಅದನ್ನು ಜನರಿಗೆ ಹಂಚುವುದು ಸಹ ಈ ವಿಧಾನಗಳಲ್ಲಿ ಒಂದು, ಆದರೆ, ಹೆಲಿಕಾಪ್ಟರ್ ನಿಂದ ಹಣ ಎಸೆಯುವುದಿಲ್ಲ. ಅಮೆರಿಕದ ಆರ್ಥಿಕ ತಜ್ಞ ಮಿಲ್ಟನ್ ಫ್ರೀಡ್ ಮನ್ 'ಹೆಲಿಕಾಪ್ಟರ್ ಮನಿ' ಎಂಬ ಪದವನ್ನು ಮೊದಲ ಬಾರಿಗೆ ಬಳಸಿದರು. ಇದರ ಮೂಲ ಅರ್ಥ, ಆಗಸದಿಂದ ಹೆಲಿಕಾಪ್ಟರ್ ಮೂಲಕ ಹಣವನ್ನು ಕೆಳಗೆ ಹಾಕುವುದು ಎಂದಾಗುತ್ತದೆ.
ಫ್ರೀಡ್ ಮನ್ ಈ ಪದವನ್ನು ಹೇಗೆ ಬಳಸಿದ್ದು ಅಂದರೆ, ಬಹಳ ಕಷ್ಟದಲ್ಲಿ ಇರುವ ಆರ್ಥಿಕತೆಗೆ ದಿಢೀರನೇ ಹಣವನ್ನು ಪೂರೈಸಿ, ಆ ಸಂದಿಗ್ಧ ಸ್ಥಿತಿಯಿಂದ ಆಚೆಗೆ ತರುವುದು ಎಂಬ ಅರ್ಥದಲ್ಲಿ. ಯಾವುದೇ ದೇಶದ ಕೇಂದ್ರ ಬ್ಯಾಂಕ್ ವೊಂದು ಸರ್ಕಾರದ ಮೂಲಕ ನೇರವಾಗಿ ಹಣಕಾಸಿನ ಪೂರೈಕೆ ಹೆಚ್ಚಿಸುತ್ತದೆ ಮತ್ತು ಬೇಡಿಕೆ ಹಾಗೂ ಹಣದುಬ್ಬರಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಹೊಸ ನಗದನ್ನು ಜನರಿಗೆ ವಿತರಿಸುತ್ತದೆ.
ಕೊರೊನಾ ಹಬ್ಬಿರುವುದರಿಂದ ಆರ್ಥಿಕತೆಗೆ ದಿನದಿಂದ ದಿನಕ್ಕೆ ದೊಡ್ಡ ಮಟ್ಟದ ಪೆಟ್ಟು ಬೀಳುತ್ತಿದೆ. ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, ಇಂಥ ಸಂಕಷ್ಟದ ಸಮಯದಲ್ಲಿ ಹೆಲಿಕಾಪ್ಟರ್ ಮನಿಯಿಂದ ಸಹಾಯ ಆಗುತ್ತದೆ ಎಂದು ಹೇಳಿದ್ದರು, ಇದಾದ ಬಳಿಕ ಈ ಬಗ್ಗೆ ಚರ್ಚೆ ಹಲವು ಮಾಧ್ಯಮಗಳಲ್ಲಿ ಆಗಿದೆ. ಆದರೆ, ಕೆಲವೆಡೆ ತಪ್ಪು ಅರ್ಥ ಮೂಡಿ, ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಹೆಲಿಕಾಪ್ಟರ್ ಮನಿ ಎಂಬುದರ ಆರ್ಥಿಕ ವಿಶ್ಲೇಷಣೆ ಇಲ್ಲಿ ಓದಿ