ಐದು ರಾಜ್ಯಗಳ ಎಕ್ಸಿಟ್ ಪೋಲ್ ಪರಿಣಾಮ: ಸೆನ್ಸೆಕ್ಸ್ ಸೂಚ್ಯಂಕ ಕುಸಿತ
ಮುಂಬೈ, ಡಿಸೆಂಬರ್ 10: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಭಾರತೀಯ ವಾಣಿಜ್ಯ ಮಾರುಕಟ್ಟೆ ಮೇಲೆ ಭಾರಿ ಪರಿಣಾಮ ಬೀರುವ ಸೂಚನೆ ಕಂಡುಬಂದಿದೆ.
ಮಧ್ಯಪ್ರದೇಶ ಮತ್ತು ಛತ್ತೀಸ್ ಗಢಗಳಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನಿಕಟ ಪೈಪೋಟಿ ನಡೆಯಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ಅಭಿಪ್ರಾಯಪಟ್ಟಿರುವುದು ಈಗಾಗಲೇ ಷೇರು ಮಾರುಕಟ್ಟೆಯಲ್ಲಿ ಕುಸಿತಕ್ಕೆ ಕಾರಣವಾಗಿದೆ.
ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಮಂಗಳವಾರ (ಡಿ. 11) ಹೊರ ಬೀಳಲಿದೆ. ಅದಕ್ಕೆ ಮುನ್ನವೇ ಷೇರುಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ.
ಮಾರುಕಟ್ಟೆ ತಲ್ಲಣ: ಸೆನ್ಸೆಕ್ಸ್ 572 ಅಂಶ, ನಿಫ್ಟಿ 181 ಅಂಶ ಕುಸಿತ
ದುರ್ಬಲ ಜಾಗತಿಕ ಮಾರುಕಟ್ಟೆ ಮತ್ತು ವಿಧಾನಸಭೆ ಚುನಾವಣಾ ಫಲಿತಾಂಶದೆಡೆಗಿನ ಅನಿಶ್ಚಿತತೆ ಭಾರತೀಯ ಮಾರುಕಟ್ಟೆಯ ಕುಸಿತಕ್ಕೆ ಕಾರಣವಾಗಿದೆ.
ಸೋಮವಾರ ಬೆಳಿಗ್ಗೆ ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ 650 ಅಂಶಗಳಷ್ಟು ಕುಸಿತಕಂಡು 35,016ಕ್ಕೆ ತಲುಪಿತು. ನಿಫ್ಟಿ 1.7%ರ ಇಳಿಕೆಯೊಂದಿಗೆ 10,500 ಅಂಶಗಳಿಗೆ ಕುಸಿಯಿತು.
ರೂಪಾಯಿ ಮೌಲ್ಯದಲ್ಲಿಯೂ ವ್ಯತ್ಯಾಸವಾಗಿದ್ದು, ಶುಕ್ರವಾರ ಡಾಲರ್ಗೆ 70.82ರಷ್ಟಿದ್ದ ರೂಪಾಯಿ ಮೌಲ್ಯ, ಸೋಮವಾರ ದಿನದ ಆರಂಭದಲ್ಲಿ 71.23ಕ್ಕೆ ಕುಸಿತವಾಗಿದೆ.
ಕಡಿಮೆ ದರಕ್ಕೆ ಮಾರಾಟ
30 ಸೆನ್ಸೆಕ್ಸ್ ಸ್ಟಾಕ್ಗಳ ಪೈಕಿ 28 ಸ್ಟಾಕ್ಗಳು ಶುಕ್ರವಾರಕ್ಕಿಂತ ಕಡಿಮೆ ದರದಲ್ಲಿ ಮಾರಾಟವಾಗಿವೆ. ಟಿಸಿಎಸ್ ಮತ್ತು ವಿಪ್ರೋ ಮಾತ್ರ ತುಸು ಹೆಚ್ಚಿನ ಮೌಲ್ಯ ಪಡೆದುಕೊಂಡಿವೆ. ಯೆಸ್ ಬ್ಯಾಂಕ್, ಎಂ&ಎಂ, ಭಾರ್ತಿ ಏರ್ಟೆಲ್, ರಿಲಯನ್ಸ್ ಇಂಡಿಯಾ ಲಿಮಿಟೆಡ್ ಮತ್ತು ಅದಾನಿ ಪೋರ್ಟ್ಸ್ ಶೇ 2-3.5ರ ವರೆಗೆ ಕುಸಿತ ಕಂಡಿವೆ.
ಬಿಎಸ್ಇ ಮಧ್ಯಮಿತಿ ಮತ್ತು ಅಲ್ಪಮಿತಿ ಸೂಚ್ಯಂಕಗಳು ಕೂಡ ತಲಾ ಶೇ 1.5ರಷ್ಟು ಇಳಿಕೆಯಾಗಿರುವುದರಿಂದ ವಿಶಾಲ ಮಾರುಕಟ್ಟೆಯೂ ಮಾರಾಟದ ಒತ್ತಡಕ್ಕೆ ಸಿಲುಕಿವೆ.
ಪೆಟ್ರೋಲ್, ಡೀಸೆಲ್ ಬೆಲೆ ಸತತವಾಗಿ ಇಳಿಕೆ, ನಿಮ್ಮ ನಗರದಲ್ಲಿ ಎಷ್ಟಿದೆ?
ಅಲ್ಪ ಕಾಲದ ಪರಿಣಾಮ
ರಾಜ್ಯ ವಿಧಾನಸಭೆ ಚುನಾವಣೆಗಳ ಫಲಿತಾಂಶವನ್ನು ಅವಲಂಬಿಸಿರುವ ಮಾರುಕಟ್ಟೆಯಲ್ಲಿ ಇನ್ನಷ್ಟು ವ್ಯತ್ಯಾಸಗಳು ಆಗಬಹುದು ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಫಲಿತಾಂಶವು ಮಾರುಕಟ್ಟೆ ಮೇಲೆ ದೀರ್ಘಾವಧಿ ಪರಿಣಾಮ ಬೀರದೆ ಇದ್ದರೂ, ಆ ಕ್ಷಣಕ್ಕೆ ವ್ಯತ್ಯಾಸಕ್ಕೆ ಕಾರಣವಾಗುವುದು ಖಚಿತ ಎಂದು ಹೇಳಿದ್ದಾರೆ.
ರಿಸರ್ವ್ ಬ್ಯಾಂಕ್ ರೆಪೋ ದರ 6.5% ಯಥಾ ಸ್ಥಿತಿ ಮುಂದುವರಿಕೆ
ತೈಲ ಬೆಲೆಯಲ್ಲಿಯೂ ಏರಿಕೆ
ಭಾರತೀಯ ಮಾರುಕಟ್ಟೆಗೆ ಇನ್ನಷ್ಟು ಕಳವಳ ಮೂಡಿಸುವಂತೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿಯೂ ಬೆಲೆ ಏರಿಕೆ ಉಂಟಾಗಿದೆ. ಶುಕ್ರವಾರ ಒಪೆಕ್ ಮತ್ತು ಇತರೆ ತೈಲ ಉತ್ಪಾದಕರು ಜನವರಿಯಿಂದ ನಿತ್ಯ 1.2 ಮಿಲಿಯನ್ ಬ್ಯಾರಲ್ ತೈಲ ಪೂರೈಕೆಗೆ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಬೆಲೆ ಹೆಚ್ಚಳ ಉಂಟಾಗಿತ್ತು. ಕಚ್ಚಾ ತೈಲದ ಬೆಲೆ 0.2%ರಷ್ಟು ಏರಿಕೆಯಾಗಿ ಬ್ಯಾರೆಲ್ಗೆ $61.79 ಮುಟ್ಟಿದೆ.
ಹೂಡಿಕೆದಾರರಲ್ಲಿ ಎಚ್ಚರ ಅಗತ್ಯ
ಅಕ್ಟೋಬರ್ನ ಕೈಗಾರಿಕಾ ಉತ್ಪನ್ನದ ಮಾಹಿತಿ ಮತ್ತು ನವೆಂಬರ್ನ ಚಿಲ್ಲರೆ ಹಣದುಬ್ಬರ ಮಾಹಿತಿ ಬುಧವಾರ ಹೊರಬೀಳಲಿದೆ. ಹೂಡಿಕೆದಾರರು ರಾಜ್ಯ ವಿಧಾನಸಭೆ ಚುನಾವಣೆಗಳ ಫಲಿತಾಂಶದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹಿರಿಯ ಸಂಶೋಧನಾ ವಿಶ್ಲೇಷಕ ರಾಹುಲ್ ಶರ್ಮಾ ಸಲಹೆ ನೀಡಿದ್ದಾರೆ.