ಪೆಟ್ರೋಲ್, ಡಾಲರ್, ಪರಿಸರ ಎಲ್ಲಕ್ಕೂ ಇಥೆನಾಲ್ ಪರಿಹಾರ: ಏನೀ ವಿಚಾರ?
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಏನು ಕಾರಣ ಎಂಬ ಬಗ್ಗೆ ಇತ್ತೀಚೆಗೆ ಒನ್ಇಂಡಿಯಾ ಕನ್ನಡದಲ್ಲಿ ನಾನು ಬರೆದ ಲೇಖನಕ್ಕೆ ಬಂದ ಪ್ರತಿಕ್ರಿಯೆ ನೋಡಿ ಗಾಬರಿಯಾಗಿಬಿಟ್ಟೆ. ಯಾರೋ ಕೆಲವರು ನೀವು ಬಿಜೆಪಿಪರ ಅಂತಾರೆ. ಮತ್ತೂ ಕೆಲವರು ಬಂದ್ ವಿರೋಧಿಸಿದ್ದೀರಿ. ನೀವು ಪ್ರಜಾಪ್ರಭುತ್ವದ ವಿರೋಧಿ ಅಂತಾರೆ. ನಾನೊಬ್ಬ ಸಾಮಾನ್ಯ ಮನುಷ್ಯ ಅನ್ನೋದನ್ನು ಒಪ್ಪುವುದಕ್ಕೆ ತಯಾರಿಲ್ಲವೇನೋ ಅನ್ನಿಸಿಬಿಟ್ಟಿತ್ತು.
ಆದರೆ, ಅದು ತಾತ್ಕಾಲಿಕ ಮಾತ್ರ. ಪ್ರತಿಕ್ರಿಯೆ ನೀಡುವವರು ಸಹ ಆ ಕ್ಷಣದ ಸನ್ನಿವೇಶಕ್ಕೆ ಹಾಗೆ ಸ್ಪಂದಿಸಿರುತ್ತಾರೆ ಅನ್ನಿಸಿ ಸುಮ್ಮನಾದೆ. ಇನ್ನು ನನಗೆ ಗೊತ್ತಿರುವ ಅಭಿವ್ಯಕ್ತಿ ಇದೊಂದೇ: ಬರವಣಿಗೆ. ಇನ್ನೊಂದಿಷ್ಟು ಶ್ರಮ ಪಟ್ಟು, ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವಂಥ ಕಾರ್ಯಕ್ರಮಗಳಿಗೆ ತೆರಳುತ್ತೇನೆ.
ಪೆಟ್ರೋಲ್ ದರ ನಿರ್ಧಾರ ಹೇಗೆ? ಯಾರಿಗೆಷ್ಟು ಪಾಲು? ಯಾವ ದೇಶದಲ್ಲೆಷ್ಟು?
ಆಗಲೂ ದುಡ್ಡು ಉಳಿಸಿಕೊಳ್ಳಲು ದಾರಿ ಯಾವುದು ಅಂತ ತಿಳಿಸುತ್ತೇನೆ ಹೊರತು ಮತ್ತ್ಯಾವ ವಿಚಾರದ ಪ್ರಸ್ತಾವವೂ ಇರಲ್ಲ. ಇತ್ತೀಚಿನ ನನ್ನ ಲೇಖನಗಳಿಗೆ ಇನ್ನಷ್ಟು ವಿಸ್ತೃತವಾದ ಹಾಗೂ ಗಹನವಾದ ಸಾಕ್ಷ್ಯ, ಆಧಾರವನ್ನು ಓದುಗರು ನಿರೀಕ್ಷೆ ಮಾಡುತ್ತಾರೆ ಹಾಗೂ ಪರಿಹಾರದ ಬಗ್ಗೆ ತಿಳಿಸಬೇಕು ಎಂಬುದು ಅವರ ಪ್ರತಿಕ್ರಿಯೆಯಿಂದ ಗೊತ್ತಾಯಿತು. ಆ ಕಾರಣಕ್ಕೆ ಈ ಲೇಖನ ಓದುತ್ತಾ ಇದ್ದೀರಿ.
ಅಮೆರಿಕವು ಅನುಕೂಲಕರ ವಾತಾವರಣ ನಿರ್ಮಿಸಿಕೊಳ್ಳುತ್ತಿದೆ
ಕಚ್ಚಾ ತೈಲ ಬೆಲೆ ಏರಿಕೆ ಕಂಡಿದೆ ಮತ್ತು ಡಾಲರ್ ಎದುರು ಆಯಾ ದೇಶಗಳ ಕರೆನ್ಸಿ ಮೌಲ್ಯ ಕುಸಿತದ ಹಾದಿಯಲ್ಲಿ ಸಾಗಿವೆ. ಅಭಿವೃದ್ಧಿಶೀಲ ದೇಶಗಳಲ್ಲಿ ಆರ್ಥಿಕ ಒತ್ತಡಕ್ಕೆ ಕಾರಣವಾಗಿರುವ ಇಂಥ ಸನ್ನಿವೇಶದಲ್ಲಿ ನಮ್ಮ ರುಪಾಯಿ ಮೌಲ್ಯವು ಸಹ ಡಾಲರ್ ವಿರುದ್ಧ ಬುಧವಾರದಂದು ರು. 72.91ರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದು, ಆ ನಂತರ ಅರವತ್ತು ಪೈಸೆಗಳಷ್ಟು ಕೆಲವೇ ನಿಮಿಷಗಳಲ್ಲಿ ಪುಟಿದೆದ್ದಿತು. ಅದಕ್ಕೆ ಕಾರಣಗಳು ವಿಭಿನ್ನ, ವಿಶ್ಲೇಷಣೆಗಳು ವೈವಿಧ್ಯಮಯವಾಗಿದ್ದರೂ ಫಲಿತಾಂಶ ಮಾತ್ರ ಸಕಾರಾತ್ಮಕವಾಗಿ ಅಲ್ಪಮಟ್ಟಿನ ಸಮಾಧಾನವನ್ನು ಉಂಟು ಮಾಡುವಂತಹುದಾಗಿದೆ. ಕಚ್ಚಾ ತೈಲಬೆಲೆಯ ಬಗ್ಗೆ ಮಾಧ್ಯಮಗಳಲ್ಲಿ ವಿಭಿನ್ನ ಲೇಖನಗಳು, ಅಭಿಪ್ರಾಯಗಳು ಪ್ರಕಟವಾಗುತ್ತಲೇ ಇವೆ. ಆದರೆ ಎಲ್ಲಕ್ಕೂ ಮುಖ್ಯವಾಗಿ ವ್ಯಾವಹಾರಿಕ ಕದನವೇ ಇಂದಿನ ಸನ್ನಿವೇಶಕ್ಕೆ ಮುಖ್ಯ ಕಾರಣವಾಗಿದೆ. ಅಮೆರಿಕಾ ದೇಶವು ತೈಲ ಉತ್ಪಾದನೆ ವಲಯದ ಸಾರ್ವಭೌಮತ್ವ ಸಾಧಿಸಿ ತನಗೆ ಬೇಕಾದ, ಅನುಕೂಲಕರವಾದ ವಾತಾವರಣವನ್ನು ನಿರ್ಮಿಸಿಕೊಳ್ಳುತ್ತಿದೆ. ಈ ರೀತಿಯ ಚಿಂತನೆ ಜಾಗತಿಕ ಮಟ್ಟದಲ್ಲಿ ಅಸಮತೋಲನ ಮೂಡಿಸುವುದಕ್ಕೆ ಕಾರಣವಾಗುತ್ತದೆ. ಅಭಿವೃದ್ಧಿಶೀಲ ದೇಶಗಳು ಅಭಿವೃದ್ಧಿಗೊಳ್ಳದಿದ್ದರೆ ಅವನ್ನೇ ಗ್ರಾಹಕ ದೇಶಗಳನ್ನಾಗಿಸಿಕೊಂಡಿರುವ ಹಿರಿಯಣ್ಣ ಅಭಿವೃದ್ಧಿ ಕಾಣುವುದು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪರ್ಯಾಯ ಕಂಡುಕೊಳ್ಳುವುದು ಅತ್ಯವಶ್ಯಕವಾಗಿದೆ.
ಇಥೆನಾಲ್ ಬಳಕೆಯಿಂದ ಅನುಕೂಲವಿದೆ
ಎಲ್ಲಿಯ ತನಕ ಪೆಟ್ರೋಲ್-ಡೀಸೆಲ್ ಮೇಲಿನ ಅವಲಂಬನೆ ಇರುತ್ತದೋ ಅಲ್ಲಿಯ ತನಕ ಸಮಸ್ಯೆ ಇದ್ದಿದ್ದೇ. ಈ ದಿಶೆಯಲ್ಲಿ ಸೌರ ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆ, ಬಳಕೆ, ಪ್ರೋತ್ಸಾಹದ ಅವಶ್ಯವಿದೆ. ಈಗಾಗಲೇ ದ್ವಿಚಕ್ರ ವಾಹನಗಳು ಪ್ರಾಯೋಗಿಕವಾಗಿ ಆರಂಭವಾಗಿದ್ದು, ಯಶಸ್ವಿಯಾಗಿ ನಗರದಲ್ಲಿ ಬಳಸಬಹುದಾಗಿದೆ. ಇದಕ್ಕೆ ಉತ್ತೇಜನ ನೀಡಲು ಸರಕಾರ ಹಲವು ಸೌಲಭ್ಯಗಳನ್ನು ನೀಡಿದೆ. ಸೌರ ವಿದ್ಯುತ್ ಚಾಲಿತ ವಾಹನಗಳಿಗೆ ರಿಜಿಸ್ಟ್ರೇಷನ್ ಅಗತ್ಯವಿಲ್ಲ. ಸವಾರರಿಗೆ ಡ್ರೈವಿಂಗ್ ಲೈಸೆನ್ಸ್ ಅಗತ್ಯವಿಲ್ಲ ಎಂಬುದು ಗಮನಾರ್ಹ. ಕೇಂದ್ರ ಸರಕಾರವು ಬುಧವಾರದಂದು ಇಥೆನಾಲ್ ಬೆಲೆಯನ್ನು ಲೀಟರ್ ಒಂದಕ್ಕೆ ಇರುವ ರು.47.50 ಯಿಂದ ರು.59.50 ಕ್ಕೆ ಏರಿಕೆ ಮಾಡುವ ನಿರ್ಧಾರವು ಸಕ್ಕರೆ ವಲಯದ ಕಂಪನಿಗಳಿಗೆ ಒಂದು ರೀತಿಯ ವರದಾನವಾಗಿದೆ.
ಪೆಟ್ರೋಲ್ ಬೆಲೆ ಹೆಚ್ಚಳದ ನಿಜವಾದ ಕಾರಣ, ಭಾರತ ಬಂದ್ ಯಾಕೆ ಹೇಳ್ರಣ್ಣ
ನಿತಿನ್ ಗಡ್ಕರಿ ಮಾಡಿದ ಘೋಷಣೆ
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಇತ್ತೀಚೆಗಷ್ಟೇ ಕೇಂದ್ರ ಸಚಿವ ಗಡ್ಕರಿಯವರು ಪೆಟ್ರೋಲ್ ಬಳಕೆ ಮಿತಗೊಳಿಸಿ, ಇಥೆನಾಲ್ ಬಳಸಿದರೆ ಪೆಟ್ರೋಲ್ ಹೊರೆ ಕಡಿಮೆಯಾಗುವುದು ಎಂಬ ಕರೆ ಕೊಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಹೆಚ್ಚು ಮಹತ್ವ ಪಡೆದುಕೊಂಡಿದೆ. ಸರಕಾರದ ಈ ಕ್ರಮದಿಂದ ಆದ ಪ್ರಮುಖ ಅನುಕೂಲಗಳೆಂದರೆ:
* ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ನಿಯಂತ್ರಿಸಿ, ಕಚ್ಚಾ ತೈಲಬೆಲೆ ಏರಿಕೆಯ ಪ್ರಭಾವ ಮೊಟಕುಗೊಳಿಸುವುದು.
* ಸಂಕಷ್ಟದಲ್ಲಿರುವ ಸಕ್ಕರೆ ವಲಯಕ್ಕೆ ಜೀವ ತುಂಬುವುದು.
* ಡಾಲರ್ ವಿರುದ್ಧ ಕುಸಿಯುತ್ತಿರುವ ರುಪಾಯಿಯ ಬೆಲೆಯಲ್ಲಿ ಚೇತರಿಕೆ ಮೂಡಿಸುವುದು.
* ಕಾರ್ಬನ್ ಕ್ರೆಡಿಟ್ ಮೂಲಕ ಆರ್ಥಿಕ ಲಾಭ ಗಳಿಕೆ.
2030ರ ವೇಳೆಗೆ ಇಥೆನಾಲ್ ಮಿಶ್ರಣ ಶೇ.30ಕ್ಕೆ ತಲುಪುವ ಗುರಿ
ಇಂದಿನ ಆರ್ಥಿಕ ವ್ಯವಸ್ಥೆಗೆ ಕಚ್ಚಾ ತೈಲ ಬೆಲೆಯ ಹೊಡೆತವನ್ನು ನಿಯಂತ್ರಿಸುವಲ್ಲಿ ಈ ನಿರ್ಧಾರ ಸಹಕಾರಿಯಾಗಿದೆ. ಅಲ್ಲದೆ, ಇಥೆನಾಲ್ ಬಳಕೆಯನ್ನು ಪ್ರೋತ್ಸಾಹಿಸುವುದರಿಂದ ಅಷ್ಟರ ಮಟ್ಟಿಗೆ ತೈಲ ಬಳಕೆ ನಿಯಂತ್ರಿತವಾಗುತ್ತದೆ. ಅಲ್ಲದೆ ಈಗಾಗಲೇ ಸಂಕಷ್ಟಕ್ಕೊಳಗಾಗಿರುವ ಸಕ್ಕರೆ ಕಂಪೆನಿಗಳಿಗೆ ಜೀವ ತುಂಬಿದಂತಾಗುತ್ತದೆ. ಶೇಕಡಾ ಹತ್ತರಷ್ಟು ಇಥೆನಾಲ್ ಅನ್ನು ಪೆಟ್ರೋಲ್ ನಲ್ಲಿ ಮಿಶ್ರಣ ಮಾಡಲು ಅನುಮತಿಯಿದೆ. ಇಥೆನಾಲ್ ಮಿಶ್ರಣವನ್ನು 2030ರ ವೇಳೆಗೆ ಶೇ.30ಕ್ಕೆ ತಲುಪುವ ಗುರಿಯನ್ನು ಸರಕಾರ ಹೊಂದಿದೆ. ಇದರಿಂದ ಕಾರ್ಬನ್ ಮೊನಾಕ್ಸೈಡ್, ಹೈಡ್ರೋ ಕಾರ್ಬನ್ ಗಳ ಉತ್ಪಾದನೆಯನ್ನು ಮೊಟಕುಗೊಳಿಸಿ, ವಾಹನಗಳು ಹೊರಸೂಸುವ ಹೊಗೆಯಿಂದಾಗುವ ವಾತಾವರಣದ ಹಾನಿಯನ್ನು ತಡೆಗಟ್ಟುವ ಗುಣವನ್ನು ಇಥೆನಾಲ್ ಹೊಂದಿದೆ.
ರೈತರಿಗೆ 13 ಸಾವಿರ ಕೋಟಿ ಕಬ್ಬಿನ ಬಾಕಿ ಉಳಿಕೆ
ದೇಶದಲ್ಲಿ ಅಗತ್ಯಕ್ಕಿಂತ ಅಂದರೆ ಸುಮಾರು 2.6 ಕೋಟಿ ಟನ್ ಸಕ್ಕರೆಯ ಬೇಡಿಕೆ ಇದ್ದು, ಉತ್ಪಾದನೆಯು ಈ ವರ್ಷಾಂತ್ಯದಲ್ಲಿ ಸುಮಾರು 3.5 ಕೋಟಿ ಟನ್ ಸಕ್ಕರೆ ಉತ್ಪಾದನೆಯ ನಿರೀಕ್ಷೆಯಿದೆ. ಸಕ್ಕರೆ ಕಂಪನಿಗಳು ರೈತರಿಗೆ ಸುಮಾರು 13 ಸಾವಿರ ಕೋಟಿ ರುಪಾಯಿಗಳ ಕಬ್ಬಿನ ಬಾಕಿಯನ್ನು ಉಳಿಸಿಕೊಂಡಿವೆ. ಈ ವರ್ಷ ಮತ್ತೊಮ್ಮೆ ಬಂಪರ್ ಬೆಳೆ ನಿರೀಕ್ಷೆ ಇರುವುದರಿಂದ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವುದನ್ನು ಈ ಇಥೆನಾಲ್ ಬೆಲೆಯನ್ನು ಹೆಚ್ಚಿಸಿ, ಪರ್ಯಾಯವಾಗಿ ಆದಾಯ ಹೆಚ್ಚಿಸಿಕೊಳ್ಳಲು ಅನುಕೂಲವಾಗುವುದು. ಈ ಬೆಲೆ ಹೆಚ್ಚಳದ ಕ್ರಮವನ್ನು ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಷನ್ ಸ್ವಾಗತಿಸಿದೆ.
ಕಾರ್ಬನ್ ಕ್ರೆಡಿಟ್ ನಿಂದಲೂ ಲಾಭ ಪಡೆಯುತ್ತವೆ
ಸಕ್ಕರೆ ಉತ್ಪಾದನಾ ವಲಯವು ತ್ಯಾಜ್ಯರಹಿತ ವಲಯವಾಗಿದೆ. ಇಲ್ಲಿ ಎಲ್ಲಾ ಉಪ ಉತ್ಪನ್ನಗಳಿಗೂ ಬೇಡಿಕೆಯಿದೆ. ಈ ವಲಯದ ತ್ಯಾಜ್ಯಗಳು ಮೌಲ್ಯವರ್ಧನೆಯ ಮೂಲವಾಗಿದೆ. ಸಕ್ಕರೆ ಉತ್ಪಾದನೆಯಲ್ಲಿ ದೊರೆಯುವ ಮೊಲಾಸಿಸ್ ಹಲವು ಕೈಗಾರಿಕಗಳಿಗೆ ಉಪಯುಕ್ತವಾಗಿದೆ. ಕಬ್ಬಿನ ಸಿಪ್ಪೆಯಿಂದ ಕಂಪನಿಗಳು ತಮ್ಮ ಒಳಬಳಕೆಯ ವಿದ್ಯುತ್ ಅನ್ನು ಉತ್ಪಾದಿಸಿಕೊಳ್ಳುತ್ತವೆ. ಈ ರೀತಿ ಒಳಬಳಕೆಯ ವಿದ್ಯುತ್ ಕಾರಣ ಅವು ವಾತಾವರಣದಲ್ಲಿ ಇಂಗಾಲದ ಪ್ರಮಾಣವನ್ನು ಕಡಿತಗೊಳಿಸುತ್ತವೆ. ಅದಕ್ಕೆ ಆ ಕಂಪನಿಗಳಿಗೆ ಕಾರ್ಬನ್ ಕ್ರೆಡಿಟ್ ಗಳು ಲಭಿಸುತ್ತವೆ. ಇವನ್ನು ಸಹ ಮಾರಾಟ ಮಾಡಿ ಲಾಭ ಪಡೆದುಕೊಳ್ಳುತ್ತವೆ. ಒಂದು ಕಾರ್ಬನ್ ಕ್ರೆಡಿಟ್ ಅಂದರೆ ಒಂದು ಟನ್ ಕಾರ್ಬನ್ ಡೈ ಆಕ್ಸಿಡ್. ಕೈಗಾರಿಕಾ ಆಲ್ಕೋಹಾಲ್, ಇಥನಾಲ್, ಜೈವಿಕ ಗೊಬ್ಬರ ಮುಂತಾದವುಗಳು ಸಹ ಈ ಕೈಗಾರಿಕೆಯ ಉಪ ಉತ್ಪನ್ನಗಳಾಗಿವೆ.
ಕುಮಾರಸ್ವಾಮಿ ಅವರು ಪೆಟ್ರೋಲ್ ಬೆಲೆ ಎಷ್ಟು ಇಳಿಸ್ಬಹುದು?
ಕಾರ್ಬನ್ ಕ್ರೆಡಿಟ್ ಆದಾಯದ ಮೇಲಿನ ತೆರಿಗೆಯೂ ಇಳಿಕೆ
ಕಾರ್ಬನ್ ಕ್ರೆಡಿಟ್ ಗಳ ಬೆಳವಣಿಗೆ ಹೆಚ್ಚಿಸಲು ಕೇಂದ್ರ ಸರಕಾರ ಕಾರ್ಬನ್ ಕ್ರೆಡಿಟ್ ಆದಾಯದ ಮೇಲೆ ವಿಧಿಸಲಾಗುತ್ತಿದ್ದ ಆದಾಯ ತೆರಿಗೆಯ ಪ್ರಮಾಣವನ್ನು ಈ ವರ್ಷ ಶೇ. 30 ರಿಂದ ಶೇ 10ಕ್ಕೆ ಇಳಿಸಿದೆ. ಒಂದು ಸಂಶೋಧನೆ ಪ್ರಕಾರ: ಒಂದು ಹೆಕ್ಟೇರ್ ಗೋಧಿ ಬೆಳೆಯಲು 90 ಘನ ಅಡಿ ನೀರು ಬೇಕಾದರೆ, ಕಬ್ಬಿನ ಬೆಳೆಗೆ 240 ಘನ ಅಡಿ ನೀರು ಬೇಕಾಗುವುದು. ಗೋಧಿಯಂತೆ ಬೆಳೆ ಕೆಲವೇ ತಿಂಗಳಲ್ಲಿ ಇಳುವರಿ ಬಂದರೆ ಕಬ್ಬಿನ ಬೆಳೆಗೆ ದೀರ್ಘಾವಧಿ ಕಾಯಬೇಕಾಗಿದೆ. ಹಾಗಾಗಿ ಕಬ್ಬಿನ ಬೆಳೆಗೆ ಹೆಚ್ಚು ಪ್ರೋತ್ಸಾಹ ದೊರೆತರೆ ಇತರೆ ಆಹಾರ ಧಾನ್ಯಗಳ ಫಸಲಿಗೆ ತೊಂದರೆ ಆಗಬಹುದೆಂಬ ಭಾವನೆಯೂ ಇದೆ.