ಎಲೆಕ್ಟ್ರಾನಿಕ್ಸ್ ಕ್ಲಸ್ಟರ್ ಸ್ಥಾಪನೆ, 10 ಕಂಪನಿ ಹೂಡಿಕೆಗೆ ಒಲವು
ಬೆಂಗಳೂರು ಫೆಬ್ರವರಿ 19: ಜಾಗತಿಕ ಮಟ್ಟದ ಎಲೆಕ್ಟ್ರಾನಿಕ್ ಉತ್ಪಾದನಾ ಕಂಪನಿಗಳ ಜೊತೆಗೂಡಿ ರಾಜ್ಯದ 4 ಜಿಲ್ಲೆಗಳಲ್ಲಿ ಎಲೆಕ್ಟ್ರಾನಿಕ್ಸ್ ಕ್ಲಸ್ಟರ್ ನಿರ್ಮಿಸಲು ಸರಕಾರ ನಿರ್ಧರಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿಂದು ಕೈಗಾರಿಕಾ ಇಲಾಖೆ, ಇಂಡಿಯಾ ಸೆಲ್ಯೂಲರ್ & ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ಹಾಗೂ ಇಂಡಿಯಾ ಎಲೆಕ್ಟ್ರಾನಿಕ್ಸ್ & ಸೆಮಿಕಂಡಕ್ಟರ್ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಿದ್ದ "ಜಾಗತಿಕ ಮಟ್ಟದ ವಿದ್ಯುನ್ಮಾನ ವಿನ್ಯಾಸ ಮತ್ತು ಉತ್ಪಾದನಾ ಕ್ಲಸ್ಟರ್ಗಳ ಸ್ಥಾಪನೆಗೆ ಅವಶ್ಯವಿರುವ ಪ್ರಮುಖ ವ್ಯವಸ್ಥೆಗಳ ಕುರಿತ'' ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕದಲ್ಲಿ ರಕ್ಷಣಾ ಉತ್ಪಾದನಾ ಕ್ಲಸ್ಟರ್
ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಕೈಗಾರಿಕೆಯ ಅಭಿವೃದ್ದಿಗೆ ರಾಜ್ಯ ಸರಕಾರ ಬದ್ದವಾಗಿದೆ. ಈ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆ ಈ ನಗರಗಳಲ್ಲಿ ಬಂಡವಾಳ ಹೂಡಿಕೆಗೆ ಪೂರಕ ವಾತಾವರಣವನ್ನು ರೂಪಿಸುತ್ತಿದೆ. ಕ್ಲಸ್ಟರ್ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಲು ರಾಜ್ಯ ಸರಕಾರ ಯೋಜನೆಯನ್ನು ರೂಪಿಸಿದೆ.
ಉದ್ಯಮಿಗಳ ಸಮಸ್ಯೆ ನೀಗಿಸಲು "ಇಂಡಸ್ಟ್ರೀ ಅದಾಲತ್": ಶೆಟ್ಟರ್
ಈ ಯೋಜನೆಯ ಅಡಿಯಲ್ಲಿ ವಿದ್ಯುನ್ಮಾನ ವಿನ್ಯಾಸ ಮತ್ತು ಉತ್ಪಾದನಾ ಕ್ಷೇತ್ರದಲ್ಲಿರುವ ಕೈಗಾರಿಕೆಗಳನ್ನು ಸೆಳೆಯಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಇಂದು ಜಾಗತಿಕ ವಲಯದಲ್ಲಿ ಹೆಸರನ್ನು ಮೂಡಿಸಿರುವ ಎಲೆಕ್ಟ್ರಾನಿಕ್ ಉತ್ಪಾದನಾ ಕಂಪನಿಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸುತ್ತಿರುವುದು ಬಹಳ ಸಂತಸ ತಂದಿದೆ.
87 ಕ್ಕೂ ಹೆಚ್ಚು ಕಂಪನಿಗಳ ಜೊತೆ ಚರ್ಚೆ
ಈ ಚರ್ಚೆಯ ನಂತರ ಈ ಕ್ಷೇತ್ರದ ಕೈಗಾರಿಕೆಗಳಿಗೆ ಅವಶ್ಯಕತೆ ಇರುವ ಅನುಕೂಲಗಳು ಹಾಗೂ ತೊಂದರೆಗಳನ್ನು ನಿವಾರಿಸಲು ಕ್ರಮಗಳನ್ನ ಕೈಗೊಳ್ಳಲಾಗುವುದು. ಜಾಗತಿಕ ಮಟ್ಟದ 87 ಕ್ಕೂ ಹೆಚ್ಚು ಕಂಪನಿಗಳ ಜೊತೆ ಚರ್ಚೆ ನಡೆಸಿದ್ದು, 10 ಕ್ಕೂ ಹೆಚ್ಚು ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಈಗಾಗಲೇ ಮೈಸೂರು ಹಾಗೂ ಚಿಕ್ಕಬಳ್ಳಾಪುರದಲ್ಲಿ ಈಎಸ್ಡಿಎಂ ಕ್ಲಸ್ಟರ್ ಅಭಿವೃದ್ದಿ ಪಡಿಸಲಾಗುತ್ತಿದ್ದು, ಇದಕ್ಕೆ ಧಾರವಾಡ ಹಾಗೂ ಕೋಲಾರ ಜಿಲ್ಲೆಗಳನ್ನು ಸೇರಿಸಲಾಗುತ್ತಿದೆ. ಈ ಜಿಲ್ಲೆಗಳಲ್ಲಿ ಈಗಾಗಲೇ ಅಗತ್ಯವಿರುವ ಭೂಮಿಯನ್ನು ಗುರುತಿಸಲಾಗಿದೆ ಎಂದು ಹೇಳಿದರು.
ಇ.ಎಸ್.ಡಿ.ಎಂ ಕ್ಷೇತ್ರದಲ್ಲಿ ಹೂಡಿಕೆಗೆ ಇಡೀ ದೇಶದಲ್ಲಿ ಕರ್ನಾಟಕ ಸೂಕ್ತ ಸ್ಥಳವಾಗಿದ್ದು, ದಾವೋಸ್ ನ ವಿಶ್ವ ಆರ್ಥಿಕ ಒಕ್ಕೂಟ ಜಗತ್ತಿನ ಪ್ರಮುಖ ನಾಲ್ಕು ಹೂಡಿಕೆಗಳ ತಾಣಗಳ ಪೈಕಿ ಕರ್ನಾಟಕ ಸಹ ಬಂಡವಾಳ ತೊಡಗಿಸಲು ಪ್ರಶಸ್ತ ತಾಣ ಎಂದು ಹೇಳಿದೆ. ಇದಲ್ಲದೇ ಆಟೋಮೊಬೈಲ್ಸ್, ಏರೋಸ್ಪೇಸ್, ರಕ್ಷಣೆ, ಇಂಜಿನಿಯರಿಂಗ್, ಐಟಿ-ಬಿಟಿಯಲ್ಲೂ ಮಂಚೂಣಿಯಲ್ಲಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಮಾತನಾಡಿ
ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಮಾತನಾಡಿ, ಕರ್ನಾಟಕ ರಾಜ್ಯ ಚಿಪ್ ಡಿಸೈನ್ ಕ್ಷೇತ್ರದಲ್ಲಿ ದೇಶದಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ. ರಾಜ್ಯ ಸರಕಾರ ದೇಶದ ಎಲೆಕ್ಟ್ರಾನಿಕ್ ಡಿಸೈನ್ ನಲ್ಲಿ ಶೇಕಡಾ 40 ರಷ್ಟು ಹಾಗೂ ಎಲೆಕ್ಟ್ರಾನಿಕ್ ಮ್ಯಾನುಫ್ಯಾಕ್ಚರಿಂಗ್ ನಲ್ಲಿ ಶೇಕಡಾ 30 ರಷ್ಟು ಕೊಡಗೆಯನ್ನು ನೀಡುತ್ತಿದೆ.
ದೇಶದ ಶೇಕಡಾ 30 ರಷ್ಟು ಎಲೆಕ್ಟ್ರಾನಿಕ್ ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆಗಳು ರಾಜ್ಯದಲ್ಲಿವೆ. ಕರ್ನಾಟಕ ರಾಜ್ಯ ದೇಶದಲ್ಲಿ ಅಷ್ಟೇ ಅಲ್ಲದೆ ಜಾಗತಿಕವಾಗಿ ಎಲೆಕ್ಟ್ರಾನಿಕ್ ಮ್ಯಾನುಫ್ಯಾಕ್ಚರಿಂಗ್ ನಲ್ಲಿ ವಿಶಿಷ್ಟ ಸ್ಥಾನ ಹೊಂದುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಪರಿಸರ ಸ್ನೇಹಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರದಲ್ಲಿ ಮೈಸೂರು ಮಂಚೂಣಿಗೆ ಬಂದಿದ್ದು, ಧಾರವಾಡದಲ್ಲಿ ನವ ಅನ್ವೇಷನೆಗೆ ಒತ್ತು ನೀಡಲಾಗಿದೆ. ಈ ವಲಯದಲ್ಲಿ ಹೂಡಿಕೆ ಮಾಡಲು ಮುಂದಾಗುವ ಹೂಡಿಕೆದಾರರಿಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ ನೆರವು ಮತ್ತು ವಿಶ್ವದರ್ಜೆಯ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಕ್ರಮವಹಿಸಲಿದೆ ಎಂದರು.
ಒಂದು ಸಾವಿರ ಎಕರೆ ಭೂಮಿ ಗುರುತಿಸಲಾಗಿದೆ
ಇ.ಎಸ್.ಡಿ.ಎಂ ಕ್ಲಸ್ಟರ್ ಗಳ ಅಭಿವೃದ್ದಿಗಾಗಿ ವಿವಿಧ ಜಿಲ್ಲೆಗಳಲ್ಲಿ ಒಂದು ಸಾವಿರ ಎಕರೆ ಭೂಮಿ ಗುರುತಿಸಲಾಗಿದೆ. ಈ ವಲಯಕ್ಕೆ ಅಗತ್ಯವಾಗಿರುವ ಕೌಶಲ್ಯಯುಕ್ತ ಮಾನವ ಸಂಪನ್ಮೂಲ ಒದಗಿಸಲು ಐಟಿಐ ಮತ್ತಿತರ ವೃತ್ತಿ ಆಧರಿತ ಕೋರ್ಸ್ ಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಸರ್ಕಾರ ಮತ್ತು ಕೈಗಾರಿಕೋದ್ಯಮಿಗಳು ಒಟ್ಟಿಗೆ ಕಾರ್ಯನಿರ್ವಹಿಸಿದಾಗ ಮಾತ್ರ ಈ ಕ್ಷೇತ್ರದ ಅಭ್ಯುದಯ ಸಾಧ್ಯ ಎಂದು ಗೌರವ್ ಗುಪ್ತ ಪ್ರತಿಪಾದಿಸಿದರು.
ಕೈಗಾರಿಕಾ ಇಲಾಖೆ ಆಯುಕ್ತೆ ಗಂಜನ್ ಕೃಷ್ಣ ಮಾತನಾಡಿ, 4 ಜಿಲ್ಲೆಗಳಲ್ಲಿ ಎಲೆಕ್ಟ್ರಾನಿಕ್ಸ್ ಕೈಗಾರಿಕೆಗಳ ಸ್ಥಾಪನೆಗೆ ಇರುವ ಅವಕಾಶಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಸರ್ಕಾರ ಸಮಗ್ರವಾಗಿ ಇ.ಎಸ್.ಡಿ.ಎಂ. ಕ್ಲಸ್ಟರ್ ಗಳನ್ನು ಅಭಿವೃದ್ಧಿಪಡಿಸಲು ಯೋಜಿಸುತ್ತಿದ್ದು, ಇದರಿಂದ ಭವಿಷ್ಯದಲ್ಲಿ ಹೂಡಿಕೆದಾರರಿಗೆ ಭಾರೀ ಅನುಕೂಲವಾಗಲಿದೆ ಎಂದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಪ್ರಮುಖ ಕಂಪನಿಗಳು
ಆಪಲ್ ಇಂಡಿಯಾ, ಕ್ಸಿಯೋಮಿ ಇಂಡಿಯಾ ಪ್ರೈ ಲಿಮಿಟೆಡ್, ವಿಸ್ಟ್ರಾನ್ ಇನ್ಪೋಕಾಮ್ ಇಂಡಿಯಾ, ಕ್ವಾಲ್ಕಾಮ್ ಇಂಡಿಯಾ ಪ್ರೈ ಲಿ, ಹೆಚ್ಸಿಎಲ್ ಟೆಕ್ನಾಲಜಿಸ್ ಪ್ರೈ ಲಿಮಿಟೆಡ್, ಟೆಕ್ಸಾಸ್ ಇನ್ಟ್ರುಮೆಂಟ್ಸ್, 3 ಎಮ್ ಎಲೆಕ್ಟ್ರಾನಿಕ್ಸ್ & ಎನರ್ಜಿ, ಕೊವೆಸ್ಟ್ರೋ, ಎನ್ ಎಕ್ಸ್ ಪಿ ಇಂಡಿಯಾ, ಬಾಷ್ ಆಟೋಮೋಟಿವ್ ಎಲೆಕ್ಟ್ರಾನಿಕ್ಸ್,
ಉನ್ನತ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಿದ್ದ ಕಂಪನಿಗಳು:
ಕ್ಸಿಯೋಮಿ ಇಂಡಿಯಾ ಪ್ರೈ ಲಿಮಿಟೆಡ್, ಓಪ್ಪೋ ಇಂಡಿಯಾ, ವುರ್ತ್ ಎಲೆಕ್ಟ್ರಾನಿಕ್ಸ್, ಏವಲಾನ್ ನೆಟ್ ವರ್ಕ ಸಿಸ್ಟಮ್ಸ್ & ಲಾಜಿಕಲ್ ಲರ್ನಿಂಗ್ ಕಂಪನಿ
ಕಾರ್ಯಾಗಾರದಲ್ಲಿ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಅಂಡ್ ಮ್ಯಾನುಫೆಕ್ಚರಿಂಗ್ ಕ್ಷೇತ್ರದ ಉದ್ಯಮಿಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ರಾಜ್ಯದಲ್ಲಿ ಪರಿಸರ ಸ್ನೇಹಿ ಮತ್ತು ವಿಶ್ವ ದರ್ಜೆಯ ಇ.ಎಸ್.ಡಿ.ಎಂ ಕ್ಲಸ್ಟರ್ ಗಳನ್ನು ಅಭಿವೃದ್ಧಿಪಡಿಸುವ ಕ್ರಮಗಳ ಬಗ್ಗೆ ಉದ್ಯಮಿಗಳು ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿದರು. ಈ ಕ್ಷೇತ್ರದಲ್ಲಿ ನಾವಿನ್ಯತೆಯನ್ನು ಅಳವಡಿಸಿಕೊಳ್ಳುವ ಕುರಿತಂತೆ ಸಕಾರಾತ್ಮಕವಾಗಿ ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಇಂಡಿಯಾ ಸೆಲ್ಯುಲರ್ ಅಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ [ಐಸಿಇಎ] ಕಾರ್ಯಾಗಾರದ ಸಹ ಭಾಗಿಯಾದರ ಸಂಸ್ಥೆಯಾಗಿದ್ದು, ಇಂಡಿಯಾ ಎಲೆಕ್ಟ್ರಾನಿಕ್ಸ್ ಅಂಡ್ ಸೆಮಿಕಂಡಕ್ಟರ್ ಅಸೋಸಿಯೇಷನ್ ಸಹಭಾಗಿತ್ವ ವಹಿಸಿತ್ತು.