ದಾಸ್ತಾನು ಎಲೆಕ್ಟ್ರಾನಿಕ್ ವಸ್ತುಗಳ ಮೇಲೂ ತೆರಿಗೆ ಭೂತ
ಬೆಂಗಳೂರು, ಸೆ. 16 : ಗ್ರಾಹಕ ಸ್ನೇಹಿ ಎಂದೇ ಗುರುತಿಸಿಕೊಳ್ಳುತ್ತಿದ್ದ ಆನ್ ಲೈನ್ ಶಾಪಿಂಗ್ ಮೇಲೆ ಮಬ್ಬು ಕವಿಯುವ ಲಕ್ಷಣಗಳು ಗೋಚರವಾಗುತ್ತಿವೆ.
ನೀವು ಮೂರನೇ ಹಂತದ (ಥರ್ಡ್ ಪಾರ್ಟಿ) ಮಾರಾಟಗಾರನಾಗಿದ್ದರೆ ಇದರ ಬಿಸಿ ಸದ್ಯವೇ ತಲುಪಲಿದೆ. ಮೂರನೇ ಹಂತದ ಕಂಪನಿಗಳು ದಾಸ್ತಾನು ಮಾಡಿ ಜನರಿಗೆ ನೀಡುವ ಎಲೆಕ್ಟ್ರಾನಿಕ್ ವಸ್ತುಗಳಿಗೆ ತೆರಿಗೆ ನೀಡಬೇಕು ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ಸೊಲ್ಲೆತ್ತಿದ್ದಾರೆ.(ಕೈಗಾರಿಕೆಗಳನ್ನು ಸೆಳೆಯಲು ತೆರಿಗೆ ವಿನಾಯಿತಿ)
ವಿವಿಧ ಕಂಪನಿಗಳ ವಸ್ತುಗಳನ್ನು ದಾಸ್ತಾನು ಮಾಡುವ ಅಮೆಜಾನ್ ಸಂಸ್ಥೆ ಮೇಲೆ ಇದು ವ್ಯಾಪಕ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ. ಅಮೆಜಾನ್ ಮತ್ತು ಇಂಥಹ ಸಂಸ್ಥೆಗಳ ಉಗ್ರಾಣದಲ್ಲಿ ನಿಮ್ಮ ವಸ್ತುಗಳನ್ನು ದಾಸ್ತಾನು ಮಾಡಿ ಮಾರಾಟಕ್ಕೆ ಅವಕಾಶ ನೀಡಬೇಡಿ ಎಂದು ನೂರಕ್ಕೂ ಹೆಚ್ಚು ಸಂಸ್ಥೆಗಳಿಗೆ ರಾಜ್ಯ ಸರ್ಕಾರ ನೊಟೀಸ್ ನೀಡಿದೆ.
ರಾಜ್ಯ ಸರ್ಕಾರದ ವಾದವೇನು?
ಅಮೆಜಾನ್, ಫ್ಲಿಪ್ ಕಾರ್ಟ್ ನಂಥಹ ಕಂಪನಿಗಳು ರಾಜ್ಯದ ಜಾಗ ಬಳಸಿಕೊಂಡು ವಿದೇಶಿ ಮೂಲದ ಎಲೆಕ್ಟ್ರಾನಿಕ್ ವಸ್ತುಗಳ ಸಂಗ್ರಹ ಮಾಡುತ್ತವೆ. ಆದರೆ ಇವಕ್ಕೆ ಯಾವುದೆ ರೀತಿಯ ತೆರಿಗೆ ನೀಡುವುದಿಲ್ಲ. ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳು ತಮ್ಮ ವಸ್ತುಗಳನ್ನು ಸುಲಭವಾಗಿ ಮಾರಾಟ ಮಾಡಲು ಇವನ್ನೇ ಆಧರಿಸಿವೆ. ಆದರೆ ರಾಜ್ಯ ಸರ್ಕಾರಕ್ಕೆ ಇದರಿಂದ ಯಾವ ತೆರಿಗೆ ಬರುತ್ತಿಲ್ಲ. ಅಮೇಜಾನ್ನಂಥಹ ಕಂಪನಿಗಳು ಅಪಾರ ಪ್ರಮಾಣದ ಕಮೀಷನ್ ಪಡೆಯುತ್ತಿದ್ದು ರಾಜ್ಯದ ನೆಲದಲ್ಲಿ ಸಾಮಗ್ರಿಗಳನ್ನು ಸಂಗ್ರಹಿಸಿಡುತ್ತವೆ. ಹಾಗಾಗಿ ನಿಗದಿತ ಪ್ರಮಾಣದ ತೆರಗಿ ನೀಡಬೇಕು ಎಂಬುದು ರಾಜ್ಯ ಸರ್ಕಾರದ ವಾದ.
ಅಮೆಜಾನ್ ಹೇಳುವುದೇನು?
ನಾವು ಜನರಿಗೆ ಕಡಿಮೆ ದರದಲ್ಲಿ ಉತ್ತಮ ವಸ್ತುಗಳನ್ನು ಪೂರೈಸುವ ವೇದಿಕೆಯಷ್ಟೇ. ವಿವಿಧ ಕಂಪನಿಗಳ ಪ್ರೊಡಕ್ಟ್ಗಳನ್ನು ನಮ್ಮಲ್ಲಿ ಶೇಖರಣೆ ಮಾಡುತ್ತೆವೆಯೇ ವಿನಃ ನಾವೇ ಉತ್ಪಾದನೆ ಮಾಡುವುದಿಲ್ಲ. ಈ ಬಗೆಯ ನೀತಿ ಅನುಸರಿಸಿದರೆ ಕರ್ನಾಟಕದಲ್ಲಿ ನಮ್ಮ ಉಗ್ರಾಣ ಬಂದ್ ಮಾಡಬೇಕಾಗುವುದು ಅನಿವಾರ್ಯ. ಆಧುನಿಕತೆಗೆ ಒಗ್ಗಿಕೊಂಡಿದ್ದ ಆನ್ ಲೈನ್ ಶಾಪಿಂಗ್ ಕರ್ನಾಟಕದಲ್ಲಿ ದುಬಾರಿಯಾಗುತ್ತದೆ. ಅತಿ ಹೆಚ್ಚು ಬಂಡವಾಳ ಹೂಡಿಕೆಗೆ ಕಾರಣವಾಗಿದ್ದ ವಿಭಾಗವನ್ನು ರಾಜ್ಯ ಸರ್ಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಅಮೆಜಾನ್ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಮಧ್ಯಮ ಗಾತ್ರದ ಉದ್ಯಮಿಗಳಿಗೆ ಗೊಂದಲ
ಇನ್ನು ಮುಂದೆ ಅಮೆಜಾನ್, ಫ್ಲಿಫ್ ಕಾರ್ಟ್, ಸ್ನಾಪ್ ಡೀಲ್ ಮತ್ತಿತರ ಇ ಕಾಮರ್ಸ್ ಸಂಸ್ಥೆಗಳ ಮೂಲಕ ವಸ್ತುಗಳನ್ನು ಮಾರಾಟ ಮಾಡದಂತೆ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಿಗಳಿಗೆ ರಾಜ್ಯ ಸರ್ಕಾರದ ತೆರಿಗೆ ಇಲಾಖೆ ಆದೇಶ ನೀಡಿದ್ದು ಹಲವು ಗೊಂದಲಗಳಿಗೆ ಎಡೆಮಾಡಿದೆ.
ಫ್ಲಿಫ್ ಕಾರ್ಟ್ ಗೆ ಕಾಡಲ್ಲ ಚಿಂತೆ
ಅಮೆಜಾನ್ ರಾಜ್ಯದಲ್ಲಿ ಸ್ವಂತ ಉಗ್ರಾಣ ಹೊಂದಿದ್ದು ತೀವ್ರ ಸಮಸ್ಯೆ ಎದುರಿಸಲಿದೆ. ಸ್ನಾಪ್ ಡೀಲ್ ರಾಜ್ಯದಲ್ಲಿ ಸ್ವಂತ ಉಗ್ರಾಣ ಹೊಂದಿಲ್ಲ. ಇನ್ನು ಫ್ಲಿಫ್ ಕಾರ್ಟ್ ಆನ್ ಲೈನ್ ವ್ಯಾಪಾರದಲ್ಲಿ ಪಾರುಪತ್ಯ ಸಾಧಿಸಿದ್ದು ಯಾವ ಸಮಸ್ಯೆ ಎದುರಾದರೂ ನಿಭಾಯಿಸಿಕೊಂಡು ಹೋಗಲಿದೆ ಎಂದೇ ಹೇಳಬಹುದು.
ಹೊಸ ವೇದಿಕೆ ಹುಡುಕಿಕೊಳ್ಳಬೇಕಾಗಿದೆ
ನಮ್ಮ ವಸ್ತುಗಳನ್ನು ಮಾರಲು ಇದೊಂದು ಉತ್ತಮ ವೇದಿಕೆಯಾಗಿತ್ತು. ಎಲೆಕ್ಟ್ರಾನಿಕ್ ವಸ್ತುಗಳು, ಆಟಿಕೆಗಳು. ಪುಸ್ತಕಗಳು ಮತ್ತಿತರ ವಸ್ತುಗಳನ್ನು ಸುಲಭವಾಗಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಮಾರಬಹುದಾಗಿತ್ತು. ರಾಜ್ಯ ಸರ್ಕಾರಕ್ಕೆ ನಾವು ಮೌಲ್ಯವರ್ಧಿತ ತೆರಿಗೆ(ವ್ಯಾಟ್) ಯನ್ನು ನೀಡುತ್ತಿದ್ದೇವು. ಆದರೆ ಈಗ ತೆಗೆದುಕೊಂಡಿರುವ ಕ್ರಮ ನಮ್ಮ ವ್ಯಾಪಾರವನ್ನು ಕುಗ್ಗಿಸಲಿದೆ ಎಂದು ಹೆಸರೇಳಲಿಚ್ಛಿಸದ ಮಧ್ಯಮ ಗಾತ್ರದ ಉದ್ಯಮಿಗಳು ಗೊಳು ತೋಡಿಕೊಳ್ಳುತ್ತಾರೆ.
ಜನರ ಮೇಲೆ ಯಾವ ಪರಿಣಾಮ?
ಆನ್ ಲೈನ್ ಶಾಪಿಂಗ್ ಪ್ರಿಯರು ಖರೀದಿ ಮಾಡುವ ವಸ್ತುಗಳಿಗೆ ಕೊಂಚ ಹೆಚ್ಚಿನ ಬೆಲೆ ತೆರಬೇಕಾದ ಪರಿಸ್ಥಿತಿ ಎದುರಾಗಬಹುದು. ಬೆಂಗಳೂರು ಸಮೀಪವೇ ಅಮೇಜಾನ್ ಉಗ್ರಾಣವಿದ್ದುದರಿಂದ ಕೈಗೆಟಕುವ ದರದಲ್ಲಿ ಮತ್ತು ಶೀಘ್ರವಾಗಿ ಆರ್ಡರ್ ಮಾಡಿದ ವಸ್ತುಗಳು ಲಭ್ಯವಾಗುತ್ತಿದ್ದವು. ಆದರೆ ಅಮೇಜಾನ್ ಉಗ್ರಾಣ ಬಾಗಿಲು ಹಾಕಿದರೆ ಹೆಚ್ಚು ಬೆಲೆ ತೆರಬೇಕಾಗುವುದು ಅನಿವಾರ್ಯವಾಗುತ್ತದೆ.