ಫೆ.17ರಂದು ವಿದ್ಯುತ್ ಚಾಲಿತ ವಾಹನಗಳಿಗೆ ಗ್ರೀನ್ ಸಿಗ್ನಲ್
ಬೆಂಗಳೂರು, ಫೆಬ್ರವರಿ 16 : ಸದಾ ವಾಹನಗಳಿಂದ ಗಿಜಿಗಿಡುವ ನಗರಗಳಲ್ಲಿ ಬೇಡವೆಂದರೂ ಶಬ್ದಮಾಲಿನ್ಯ, ವಾಯಮಾಲಿನ್ಯ ಇವೆಲ್ಲ ಕಟ್ಟಿಟ್ಟ ಬುತ್ತಿ. ಮಾಲಿನ್ಯ ಎಂದಮೇಲೆ ಅನಾರೋಗ್ಯವೂ ಅದರ ಹಿಂದೆಯೇ ಬರುವ ಬಳುವಳಿಯೇ ಬಿಡಿ. ಬೆಂಗಳೂರಿನಿಂದ ಬೋಸ್ಟನ್ವರೆಗೆ ಜಗತ್ತಿನ ಯಾವ ದೊಡ್ಡ ನಗರಗಳಿಗೆ ಹೋದರೂ ಇದು ಸರ್ವೇಸಾಮಾನ್ಯ.
ಆದರೆ, ಇವೆಲ್ಲಕ್ಕೂ ಇನ್ನು ಕೆಲವೇ ವರ್ಷಗಳಲ್ಲಿ ಶಾಶ್ವತವಾಗಿ ಮುಕ್ತಿ ಸಿಗಲಿದೆ ಎಂದರೆ ನೀವು ನಂಬಲೇಬೇಕು. ಇದಕ್ಕೆ ಮುನ್ನುಡಿಯಾಗಿ ಫೆಬ್ರವರಿ 17ರ ಶನಿವಾರ ಬೆಳಿಗ್ಗೆ 10 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿರು ನಿಶಾನೆ ತೋರಲಿದ್ದಾರೆ.
ವಿದ್ಯುತ್ ಚಾಲಿತ ವಾಹನ ಕ್ಷೇತ್ರಕ್ಕೆ ಭಾರೀ ಬಂಡವಾಳ
ಇದರೊಂದಿಗೆ, ಕರ್ನಾಟಕ ರಾಜ್ಯವು ಸದ್ದಿಲ್ಲದೆ ಒಂದು ಹೊಸ ಮನ್ವಂತರಕ್ಕೆ ಕಾಲಿಡುತ್ತಿದೆ. ಈ ವಿನೂತನ ಕಾರ್ಯಕ್ರಮದ ಅಂಗವಾಗಿ ಅವರು, ವಿದ್ಯುತ್ಚಾಲಿತ 50 ಕಾರುಗಳಿಗೆ ನಗರ ಪ್ರದಕ್ಷಿಣೆಗೆ ಚಾಲನೆ ನೀಡಲಿದ್ದಾರೆ. ಇನ್ನು ಮುಂಬರುವ ಕೆಲವೇ ದಿನಗಳಲ್ಲಿ ನಗರದಲ್ಲಿರುವ ಕಾರ್ಪೊರೇಟ್ ಕಂಪನಿಗಳ ಸಿಬ್ಬಂದಿಗೆ ಇಂಥ 1,000 ವಿದ್ಯುತ್ ಚಾಲಿತ ಕಾರುಗಳು ಸೇವೆ ಒದಗಿಸಲಿವೆ.
ವಾಹನಗಳು ಜನರಿಗೆ ಅನುಕೂಲ ಒದಗಿಸಿವೆ ಎನ್ನುವುದು ನಿಜ. ಆದರೆ, ಅವು ಪೆಟ್ರೋಲ್, ಡೀಸೆಲ್ನಂಥ ಸಾಂಪ್ರದಾಯಿಕ ಇಂಧನಗಳ ಬಲದ ಮೇಲೆ ಓಡುತ್ತಿರುವುದೇ ದೊಡ್ಡ ಸಮಸ್ಯೆಯಾಗಿದೆ ಎನ್ನುವುದೂ ಅಷ್ಟೇ ಸತ್ಯ! ಹೀಗಾಗಿ, ಇಡೀ ದೇಶದಲ್ಲಿ 2030ರ ಹೊತ್ತಿಗೆ ವಿದ್ಯುತ್ ಚಾಲಿತ ವಾಹನಗಳು ವ್ಯಾಪಕವಾಗಿ ಬಳಕೆಗೆ ಬರಬೇಕೆಂದು ಸರಕಾರಗಳು ಯೋಜಿಸುತ್ತಿವೆ.
ಈ ನಿಟ್ಟಿನಲ್ಲಿ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಆರ್.ವಿ.ದೇಶಪಾಂಡೆ ಅವರು ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿಟ್ಟಿದ್ದು, ವಿದ್ಯುತ್ ಚಾಲಿತ ವಾಹನಗಳು ಮತ್ತು ಇಂಧನ ಸಂರಕ್ಷಣೆ ನೀತಿ-2017ನ್ನು ಈಗಾಗಲೇ ರೂಪಿಸಿ, ಜಾರಿಗೆ ತಂದಿದ್ದಾರೆ. ಈ ಮೂಲಕ ಐಟಿ-ಬಿಟಿ ಸಿಟಿ ಎನ್ನುವ ಖ್ಯಾತಿಯ ಬೆಂಗಳೂರು ಇನ್ನುಮುಂದೆ ವಿದ್ಯುತ್ ಚಾಲಿತ ವಾಹನಗಳ ರಾಜಧಾನಿಯೂ ಆಗಿ ಹೊರಹೊಮ್ಮುವುದು ನಿಶ್ಚಿತವಾಗಿದೆ.
ಈ ಬಗ್ಗೆ ಮಾತನಾಡಿರುವ ಆರ್.ವಿ.ದೇಶಪಾಂಡೆಯವರು "ದೇಶದಲ್ಲಿ ಎಲ್ಲರಿಗಿಂತ ಮೊದಲು ವಿದ್ಯುತ್ ಚಾಲಿತ ವಾಹನ ನೀತಿಯನ್ನು ಜಾರಿಗೆ ತಂದ ಹೆಗ್ಗಳಿಕೆ ರಾಜ್ಯದ್ದಾಗಿದೆ. ಈ ವಲಯಕ್ಕೆ ಮುಂಬರುವ ದಿನಗಳಲ್ಲಿ 35 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಿಸುವುದು ನಮ್ಮ ಗುರಿಯಾಗಿದ್ದು, ಈ ವಲಯವು 50 ಸಾವಿರಕ್ಕಿಂತಲೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ಒದಗಿಸಲಿದೆ. ಇಲ್ಲಿ ಹೂಡಿಕೆ ಮಾಡುವವರಿಗೆ ಆಕರ್ಷಕ ಸೌಲಭ್ಯಗಳು ಮತ್ತು ರಿಯಾಯಿತಿಗಳು ಹಾಗೂ ಉತ್ತೇಜನಾ ಕ್ರಮಗಳು ಇರಲಿವೆ" ಎಂದಿದ್ದಾರೆ.
ತುಮಕೂರು ಮಶೀನ್ ಟೂಲ್ ಪಾರ್ಕ್ಗೆ ಫೆ.10ರಂದು ಶಂಕುಸ್ಥಾಪನೆ
ಶನಿವಾರದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ವಿದ್ಯುತ್ ಚಾಲಿತ ವಾಹನಗಳಲ್ಲಿ 3-4 ಕಿಲೋ ಮೀಟರ್ ದೂರದ ಉಚಿತ ಸವಾರಿಗೆ ಕೂಡ ಅವಕಾಶ ನೀಡಲಾಗುತ್ತಿದೆ. ವಿದ್ಯುತ್ ಚಾಲಿತ ವಾಹನಗಳಿಂದ ಮಾಲಿನ್ಯ ನಿವಾರಣೆಯ ಜೊತೆಗೆ ಮಿತವ್ಯಯವೂ ಸಾಧ್ಯವಾಗಲಿದೆ. ಜೊತೆಗೆ, ದೇಶದ ಬೊಕ್ಕಸಕ್ಕೆ ಹೊರೆಯಾಗಿ ಪರಿಣಮಿಸಿರುವ ತೈಲ ಆಮದಿನ ವೆಚ್ಚವೂ ತಗ್ಗಲಿದೆ, ಎಂದು ಆರ್.ವಿ. ದೇಶಪಾಂಡೆ ಒತ್ತಿ ಹೇಳಿದರು.
ಶನಿವಾರದ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಿ.ವಿ. ಪ್ರಸಾದ್, ರಾಜ್ಯ ಕೈಗಾರಿಕಾ ಅಭಿವೃದ್ಧಿ ಮತ್ತು ವಾಣಿಜ್ಯ ನಿರ್ದೇಶನಾಲಯದ ಆಯುಕ್ತ ದರ್ಪಣ್ ಜೈನ್, ಮಹೀಂದ್ರ ಅಂಡ್ ಮಹೀಂದ್ರ ಕಂಪನಿಯ ಅರವಿಂದ್ ಮ್ಯಾಥ್ಯೂ, ಮಹೀಂದ್ರ ಎಲೆಕ್ಟ್ರಿಕ್ಸ್ನ ಸಿಇಒ ಮಹೇಶ್ ಬಾಬು, ಭಾಗೀರಥಿ ಗ್ರೂಪ್ನ ಸಂಸ್ಥಾಪಕ ಅಧ್ಯಕ್ಷ ಮಹೇಶ್ ಹರಿಹರನ್ ಮುಂತಾದವರು ಉಪಸ್ಥಿತರಿರಲಿದ್ದಾರೆ.