ಚಿತ್ರಗಳಲ್ಲಿ : ಜೇಟ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆ ಮುಖ್ಯಾಂಶಗಳು
ಬೆಂಗಳೂರು, ಜನವರಿ 29: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಫೆಬ್ರವರಿ 01ರಂದು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಅಧಿವೇಶನ ಸೋಮವಾರದಂದು ಆರಂಭಗೊಂಡಿದ್ದು, ಸಂಸತ್ತಿನಲ್ಲಿ ಇಂದು ಆರ್ಥಿಕ ಸಮೀಕ್ಷೆ ಮಂಡಿಸಿದ್ದಾರೆ.
ಆರ್ಥಿಕ ಸಮೀಕ್ಷೆಯಲ್ಲಿ ಕಳೆದ 12 ತಿಂಗಳಿನಲ್ಲಿ ಸರ್ಕಾರ ಕೈಗೊಂಡ ಯೋಜನೆಗಳು, ಆರ್ಥಿಕ ಸುಧಾರಣೆ ಹಾಗೂ ಪ್ರಗತಿಯ ಬಗ್ಗೆ ವರದಿ ಮಂಡಿಸಲಾಗುತ್ತದೆ.
ಜೇಟ್ಲಿ ಮಂಡಿಸಿದ ಸಮೀಕ್ಷೆಯಲ್ಲಿ ಕೃಷಿ ಕ್ಷೇತ್ರಕ್ಕೆ ಆಶಾದಾಯಕ ನಿರೀಕ್ಷೆಗಳಿಲ್ಲ. ಹವಾಮಾನ ಬದಲಾವಣೆಯ ವ್ಯತಿರಿಕ್ತ ಪರಿಣಾಮದಿಂದ ರೈತರ ಆದಾಯದಲ್ಲಿ ಇಳಿಕೆಯಾಗಬಹುದು ಎಂಬ ಎಚ್ಚರಿಕೆಯಿದೆ.
ಒಟ್ಟು ಕೃಷಿ ಭೂಮಿಯಲ್ಲಿ ಶೇ 45ರಷ್ಟು ನೀರಾವರಿ ಹೊಂದಿದೆ. ನೀರಾವರಿ ಇರದ ಕರ್ನಾಟಕ, ಮಹಾರಾಷ್ಟ್ರ, ಮಧ್ಯ ಪ್ರದೇಶ, ರಾಜಸ್ಥಾನ, ಚತ್ತೀಸ್ಗಢ ಹಾಗೂ ಜಾರ್ಖಂಡ್ನ ಕೆಲ ಭಾಗಗಳು ಬಹುಬೇಗ ಹವಾಮಾನ ಬದಲಾವಣೆಯ ಪರಿಣಾಮ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.
ಪ್ರಸಕ್ತ ವರ್ಷ ಜಿಡಿಪಿ ವೃದ್ಧಿಯಾಗಲಿದೆ
ಪ್ರಸಕ್ತ ವರ್ಷ ಜಿಡಿಪಿ 7ರಿಂದ 7.5ರವರೆಗೆ ವೃದ್ಧಿಯಾಗಲಿದೆ ಎಂದು ಸಮೀಕ್ಷೆ ತಿಳಿಸಿದ್ದು, ಫೆಬ್ರವರಿ 1ರಂದು ಮಂಡನೆಯಾಗಲಿರುವ ಬಜೆಟ್ಟಿನ ಬಗ್ಗೆ ಹಲವಾರು ಸೂಚನೆಗಳನ್ನು ಕೂಡ ನೀಡಿದೆ.
|
ತೆರಿಗೆ ಕಟ್ಟುವವರ ಸಂಖ್ಯೆ ಹೆಚ್ಚಳ
2016ರ ನವೆಂಬರ್ 8ರಂದು ಆದ ಅಪನಗದೀಕರಣದಿಂದ ಹಿಡಿದುಕೊಂಡು ಇಂದಿನವರೆಗೆ ಅಪನಗದೀಕರಣದ ಬಾಧ್ಯತೆಯ ಬಗ್ಗೆ ಟೀಕೆ ಟಿಪ್ಪಣೆಗಳು ಸಾಕಷ್ಟು ಹರಿದುಬಂದಿವೆ. ಕೇಂದ್ರ ಎಷ್ಟೇ ಸಮಜಾಯಿಷಿ ಕೊಟ್ಟರು ಒಪ್ಪಿಕೊಳ್ಳದಿರುವವರು ಇನ್ನೂ ಹಲವರಿದ್ದಾರೆ.
ಆದರೆ, ಸಾವಿರ ಮತ್ತು ಐನೂರು ರುಪಾಯಿ ಹಳೆಯ ನೋಟುಗಳನ್ನು ರದ್ದುಗೊಳಿಸಿ, ಆರ್ಥಿಕ ವ್ಯವಸ್ಥೆಯಲ್ಲಿ ಪಾರದರ್ಶಕತೆ ತಂದ ನಂತರ, ನಿಧಾನವಾಗಿಯಾದರೂ ದೇಶದಲ್ಲಿ ತೆರಿಗೆ ಕಟ್ಟುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.
ಜನ ಧನ್ ಖಾತೆ ಹಾಗೂ ಆಧಾರ್ ಲಿಂಕ್
ಜನ ಧನ್ ಖಾತೆದಾರರ ಸಂಖ್ಯೆ ಹೆಚ್ಚಳವಾಗಿದ್ದು, ಆಧಾರ್ ಜೋಡಣೆ ನಂತರ ಈ ಬದಲಾವಣೆ ಕಂಡು ಬಂದಿದೆ. ಡಿಸೆಂಬರ್ 2014ರಿಂದ ಇಲ್ಲಿ ತನಕದ ಅಂಕಿ ಅಂಶಗಳನ್ನು ತುಲನೆ ಮಾಡಲಾಗಿದೆ.
ವಸತಿ ನಿರ್ಮಾಣ
ಇಂದಿರಾ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಾಣವಾಗಬೇಕಿದ್ದ ಮನೆಗಳನ್ನು 2016ರಲ್ಲೇ ಪೂರ್ಣಗೊಳಿಸಲಾಗಿದೆ. 2017ರಲ್ಲಿ 16.3 ಲಕ್ಷ ಮನೆಗಳನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿದೆ. 2016ರ ನವೆಂಬರ್ ತಿಂಗಳಿನಿಂದ ನಿರಂತರವಾಗಿ ವಸತಿ ಭಾಗ್ಯವನ್ನು ಕಲ್ಪಿಸಲಾಗಿದೆ.
ಸಾಮಾಜಿಕ ನ್ಯಾಯ
ಅದಿವಾಸಿಗಳ ಸ್ವತಂತ್ರ ಸಂಗ್ರಾಮ ಸಂಗ್ರಹಾಲಯಗಳನ್ನು ನಿರ್ಮಿಸಿ, ಗೌರವಯುತವಾಗಿ ಬಾಳ್ವೆ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ಗುಜರಾತಿನ ನರ್ಮದಾ ನದಿ ತಟದಲ್ಲಿ ಇಂಥದ್ದೊಂದು ಕೇಂದ್ರ ನಿರ್ಮಿಸಲಾಗಿದೆ.
ದಿವ್ಯಾಂಗರಿಗೆ ಸೌಲಭ್ಯ ನೀಡಲು 6 ಸಾವಿರ ಕ್ಯಾಂಪ್ ನಡೆಸಿ 9 ಲಕ್ಷ ಜನರಿಗೆ ಪರಿಹಾರ ನೀಡಲಾಗಿದೆ.
ಈಶಾನ್ಯ ಭಾರತದ ಬುಡಕಟ್ಟು ಜನಾಂಗದವರಿಗೆ ಅನುಕೂಲ ಒದಗಿಸಲಾಗಿದೆ.
ಕೃಷಿ ವಲಯ
275 ಮಿಲಿಯನ್ ಟನ್ ಗಳಿಗೂ ಅಧಿಕ ಅಹಾರ ಧಾನ್ಯಗಳು ಹಾಗೂ 300 ಮಿಲಿಯನ್ ಟನ್ ಗಳಿಗೂ ಅಧಿಕ ತೋಟಗಾರಿಕಾ ಉತ್ಪನ್ನಗಳ ಉತ್ಪಾದನೆಯಾಗಿದೆ.
2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಲು ಸರ್ಕಾರ ಬದ್ಧವಾಗಿದೆ. ಕೃಷಿ ಮಾರುಕಟ್ಟೆಗಳನ್ನು ಆನ್ ಲೈನ್ ಮೂಲಕ ಬೆಸೆಯಲಾಗಿದ್ದು, ಇ ನ್ಯಾಮ್ ಪೋರ್ಟಲ್ ಮೂಲಕ 36 ಸಾವಿರ ಕೋಟಿ ವ್ಯವಹಾರ ಕಂಡು ಬಂದಿದೆ.
ಧಾನ್ಯಗಳ ಉತ್ಪಾದನೆ ಶೇ 38ರಷ್ಟು ಹೆಚ್ಚಳವಾಗಿದೆ. ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆಯಡಿಯಲ್ಲಿ 5 ಕೋಟಿ 71 ಲಕ್ಷ ರೈತರಿಗೆ 2017ರಲ್ಲಿ ಭದ್ರತೆ ಒದಗಿಸಲಾಗಿದೆ.
ಆರೋಗ್ಯ ಸುಧಾರಣೆ
ರಾಷ್ಟ್ರೀಯ ಆರೋಗ್ಯ ಸುಧಾರಣೆ ನೀತಿ, ಪ್ರಧಾನ್ ಮಂತ್ರಿ ಜನೌಷಧಿ ಕೇಂದ್ರ ಸ್ಥಾಪನೆ, ದೀನ್ ದಯಾಳ್ ಅಮೃತ್ ಯೋಜನೆ, ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ, ಆಯುಷ್ ಮಿಷನ್ ,ಯೋಗ ಹಾಗೂ ಆಯುರ್ವೇದಕ್ಕೆ ಒತ್ತು ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮಹಿಳಾ ಸಬಲೀಕರಣ
ಬೇಟಿ ಬಚಾವ್ ಬೇಟಿ ಪಡಾವೊ ಮೂಲಕ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮೂಲಕ ಬಡವರಿಗೆ ಅಡುಗೆ ಅನಿಲ ವಿತರಣೆಯಾಗಿದೆ. ಸುಮಾರು 30 ಲಕ್ಷ ಮಂದಿಗೆ ಈ ಪ್ರಯೋಜನ ಸಿಕ್ಕಿದೆ.
ಜನ್ ಧನ್ ಯೋಜನೆಯ ಪ್ರಯೋಜನದ ಲಾಭ ಹೆಚ್ಚಾಗಿ ಮಹಿಳಾ ವರ್ಗಕ್ಕೆ ಸಿಕ್ಕಿದೆ.