ಅಡಮಾನವಿಲ್ಲದೆ 3 ಲಕ್ಷ ಕೋಟಿ ಸಾಲ: ಇದೆಲ್ಲ ಸರ್ಕಾರದ 'ಗಿಮಿಕ್' ಎಂದ MSME.!
ಮೇ 14: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇ 12 ರಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿ, ಕೋವಿಡ್-19 ವಿರುದ್ಧ ಹೋರಾಡಲು ಭಾರತೀಯರಿಗೆ 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ಅನ್ನು ಘೋಷಿಸಿದ್ದರು.
ಬರೋಬ್ಬರಿ 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ನಲ್ಲಿ ಯಾವ ಯಾವ ವರ್ಗದ ಜನರಿಗೆ ಏನೇನು ಲಾಭ ಸಿಗಬಹುದು ಎಂಬ ಅಪಾರ ನಿರೀಕ್ಷೆ ಹೊಂದಿದ್ದ ಜನರಿಗೆ 'ಆತ್ಮ ನಿರ್ಭರ್ ಭಾರತ್' ಅಭಿಯಾನದ ಅಡಿ ತೆಗೆದುಕೊಂಡ ಕ್ರಮಗಳ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ಸಂಜೆಯಷ್ಟೇ ವಿವರಣೆ ನೀಡಿದರು.
20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: ಯಾರಿಗೆ ಸಿಕ್ತು ಲಾಭದ ಪಾಲು.?
ತಮ್ಮ ಸುದ್ದಿಗೋಷ್ಠಿಯಲ್ಲಿ ಎಂ.ಎಸ್.ಎಂ.ಇ (ಅತಿ ಸಣ್ಣ, ಸಣ್ಣ, ಮಧ್ಯಮ ಪ್ರಮಾಣದ ಕೈಗಾರಿಕೆ) ಗಳಿಗೆ 6 'ಕೊಡುಗೆ'ಗಳನ್ನು ನೀಡಿದರು. ಎಂ.ಎಸ್.ಎಂ.ಇ ಗಳಿಗಾಗಿ ಯಾವುದೇ ಅಡಮಾನವಿಲ್ಲದೆ 3 ಲಕ್ಷ ಕೋಟಿ ಸಾಲ ನೀಡುವುದಾಗಿ ನಿರ್ಮಲಾ ಸೀತಾರಾಮನ್ ಅನೌನ್ಸ್ ಮಾಡಿದರು. ಆದರೆ, ಆದೆಲ್ಲವೂ ಸರ್ಕಾರದ 'ಗಿಮಿಕ್' ಎಂದು ಎಸ್.ಎಂ.ಇ ಚೇಂಬರ್ ಆಫ್ ಇಂಡಿಯಾ ಅಧ್ಯಕ್ಷ ಚಂದ್ರಕಾಂತ್ ಸಾಲುಂಕೆ ಟೀಕಿಸಿದ್ದಾರೆ.
20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ನಲ್ಲಿ ಎಂ.ಎಸ್.ಎಂ.ಇ ಗಳಿಗೆ ಸಿಕ್ಕಿದ್ದೇನು?
''ಎಂ.ಎಸ್.ಎಂ.ಇ ಗಳಿಗೆ ಯಾವುದೇ ಅಡಮಾನ ಇಲ್ಲದೆ 3 ಲಕ್ಷ ಕೋಟಿ ರೂಪಾಯಿ ಸಾಲ ನೀಡಲಾಗುವುದು. ಇದರಿಂದ 45 ಲಕ್ಷ ಎಂ.ಎಸ್.ಎಂ.ಇ ಗಳು ಅನುಕೂಲ ಪಡೆಯಲಿವೆ. ಸಂಬಳ ಪಾವತಿಗೆ ಅವಶ್ಯವಿದ್ದರೆ, ಸಣ್ಣ ಕೈಗಾರಿಕೆಗಳಿಗೆ ತಕ್ಷಣ ಸಾಲ ಮಂಜೂರು ಮಾಡಲಾಗುವುದು. ಸಾಲ ಮರುಪಾವತಿಗೆ 4 ವರ್ಷದವರೆಗೆ ಕಾಲಾವಕಾಶ ನೀಡಲಾಗಿದೆ. ಸಾಲಕ್ಕೆ ಕೇಂದ್ರ ಸರ್ಕಾರವೇ ಗ್ಯಾರೆಂಟಿ ನೀಡಲಿದೆ. ಸಾಲ ಪಡೆಯಲು ಯಾವುದೇ ಶುಲ್ಕ ಇಲ್ಲ. ಅಕ್ಟೋಬರ್ 31 ರವರೆಗೆ ಸಾಲ ಪಡೆಯಲು ಅವಕಾಶವಿದೆ. 200 ಕೋಟಿ ರೂಪಾಯಿ ವರೆಗಿನ ಗ್ಲೋಬಲ್ ಟೆಂಡರ್ ನಲ್ಲಿ ಸಣ್ಣ ಕೈಗಾರಿಕೆಗಳಿಗೆ ಆದ್ಯತೆ ನೀಡಲಾಗಿದೆ. ಸಂಕಷ್ಟದಲ್ಲಿ ಇರುವ ಸಣ್ಣ ಕೈಗಾರಿಕೆಗಳಿಗೆ 20 ಸಾವಿರ ಕೋಟಿ ಸಹಾಯಕ ಸಾಲ ನೀಡಲಾಗುವುದು. ಇದರಿಂದ 2 ಲಕ್ಷ ಎಂ.ಎಸ್.ಎಂ.ಇ ಗಳಿಗೆ ಅನುಕೂಲ ಆಗಲಿದೆ. ಎಂ.ಎಸ್.ಎಂ.ಇ ಗಳಿಗೆ 50 ಸಾವಿರ ಕೋಟಿ ರೂಪಾಯಿ ಈಕ್ವಿಟಿ ಇನ್ ಫ್ಯೂಶನ್ ಸಿಗಲಿದೆ'' ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು.
ಖುಷಿ ತರದ ಪ್ಯಾಕೇಜ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿದ ಘೋಷಣೆಗಳು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆ ವಲಯಕ್ಕೆ ಸಂತಸ ತಂದಿಲ್ಲ. ಮೋದಿ ಸರ್ಕಾರ ನೀಡಿರುವ ಕೊಡುಗೆಗಳಿಂದ ಎಂ.ಎಸ್.ಎಂ.ಇ ಗಳು ಅಸಮಾಧಾನ ಹೊರಹಾಕಿವೆ.
ದೇಶಿ ಉದ್ಯಮಕ್ಕೆ ಬೆಂಬಲ; ಸರ್ಕಾರಿ ಖರೀದಿಯಲ್ಲಿ ಜಾಗತಿಕ ಟೆಂಡರ್ ಇಲ್ಲ
ಪರಿಸ್ಥಿತಿ ಚಿಂತಾಜನಕವಾಗಿದೆ
''ಎಂ.ಎಸ್.ಎಂ.ಇ ಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ವೈದ್ಯಕೀಯ ಭಾಷೆಯಲ್ಲಿ ಹೇಳಬೇಕು ಅಂದರೆ, ನಮಗೆ ಸದ್ಯ ವೆಂಟಿಲೇಟರ್ ಮತ್ತು ಆಕ್ಸಿಜನ್ ಸಪೋರ್ಟ್ ಅತ್ಯವಶ್ಯಕ. ಆದರೆ, ಸರ್ಕಾರ ನಮಗೆ ಕೇವಲ ಔಷಧಿ ಮಾತ್ರ ನೀಡಿದೆ. ಇದರಿಂದ ನಾವು ಬದುಕಲು ಸಾಧ್ಯವಿಲ್ಲ. ನಮಗೆ ತಕ್ಷಣ ಸಪೋರ್ಟ್ ಸಿಗದಿದ್ದರೆ, 3-4 ತಿಂಗಳಲ್ಲಿ ಯಾವುದೇ ಬಿಸಿನೆಸ್ ಉಳಿಯುವುದಿಲ್ಲ'' ಎಂದು ಫೆಡರೇಶನ್ ಆಫ್ ಇಂಡಿಯನ್ ಮೈಕ್ರೋ ಅಂಡ್ ಸ್ಮಾಲ್ & ಮೀಡಿಯಂ ಎಂಟರ್ಪ್ರೈಸಸ್ (ಎಫ್.ಐ.ಎಸ್.ಎಂ.ಇ) ಅಧ್ಯಕ್ಷ ಅನಿಮೇಶ್ ಸಕ್ಸೇನಾ ಹೇಳಿದ್ದಾರೆ.
ನಿರಾಸೆ ತಂದ ಸರ್ಕಾರ
''ಸರ್ಕಾರ ಯಾವುದೇ ಹಣ ನೀಡುತ್ತಿಲ್ಲ. ಎಲ್ಲಾ ಪ್ರಕಟಣೆಗಳೂ 'ಪರೋಕ್ಷ ಸಹಾಯ'ದ ಮೇಲೆ ಅವಲಂಬಿತವಾಗಿದೆ. ಇದರಿಂದ ನಮಗೆ ಖಂಡಿತ ನಿರಾಸೆಯಾಗಿದೆ. ವ್ಯವಹಾರವಿಲ್ಲದೆ ಹೆಚ್ಚು ನಷ್ಟ ಉಂಟಾಗುತ್ತಿರುವ ಈ ಸಂಕಷ್ಟದ ಸಮಯದಲ್ಲಿ ಸರ್ಕಾರ ನಮಗೆ ನೇರವಾಗಿ ಸಹಾಯ ಮಾಡುತ್ತೆ ಎಂಬ ನಿರೀಕ್ಷೆ ಇತ್ತು'' ಎಂದಿದ್ದಾರೆ ಅನಿಮೇಶ್ ಸಕ್ಸೇನಾ.
ಯಾವ ಪ್ರಯೋಜನವೂ ಇಲ್ಲ
ಇನ್ನೂ ಇಪಿಎಫ್ ಕುರಿತಾದ ಘೋಷಣೆ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಿರುವ ಅನಿಮೇಶ್ ಸಕ್ಸೇನಾ, ''ಇದು ಹೆಚ್ಚಿನ ಎಂ.ಎಸ್.ಎಂ.ಇ ಗಳನ್ನು ಕವರ್ ಮಾಡಲ್ಲ. ಯಾಕಂದ್ರೆ, ಪಿ.ಎಫ್ ಪ್ರಯೋಜನ 100 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಮಾತ್ರ'' ಎಂದಿದ್ದಾರೆ.
ಎಲ್ಲವೂ ಗಿಮಿಕ್
''ಆರ್ಥಿಕವಾಗಿ ಪ್ರಬಲವಾಗಿರುವ ಎಂ.ಎಸ್.ಎಂ.ಇ ಗಳಿಗೆ ಮಾತ್ರ ಸರ್ಕಾರದ ಯೋಜನೆಗಳು ಉಪಯೋಗವಾಗಬಹುದು. ಆದ್ರೆ, ಸಂಕಷ್ಟಕ್ಕೆ ಸಿಲುಕಿರುವ ಕೈಗಾರಿಕೆಗಳಿಗೆ ಯಾವುದೇ ಪ್ರಯೋಜನ ಇಲ್ಲ. ನೌಕರರಿಗೆ ಕನಿಷ್ಟ ಎರಡು ತಿಂಗಳ ಸಂಬಳವನ್ನು ಸರ್ಕಾರ ನೀಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಘೋಷಣೆಗಳೆಲ್ಲಾ ಗಿಮಿಕ್'' ಎಂದು ಎಸ್.ಎಂ.ಇ ಚೇಂಬರ್ ಆಫ್ ಇಂಡಿಯಾ ಅಧ್ಯಕ್ಷ ಚಂದ್ರಕಾಂತ್ ಸಾಲುಂಕೆ ಹೇಳಿದ್ದಾರೆ.