ಎಪ್ಡಿಐ ಹೂಡಿಕೆ ಮಹಾರಾಷ್ಟ್ರ ನಂತರ ಕರ್ನಾಟಕವೇ ಮುಂದು!
ಬೆಂಗಳೂರು, ಅಕ್ಟೋಬರ್ 23, 2018: ವಿಶ್ವದ ರಿಯಲ್ ಎಸ್ಟೇಟ್ ಕನ್ಸಲ್ಟಿಂಗ್ ಕಂಪನಿಯಾಗಿರುವ ಸಿಬಿಆರ್ಇ ಸೌತ್ ಏಷ್ಯಾ ಪ್ರೈವೇಟ್ ಲಿಮಿಟೆಡ್ ಕರ್ನಾಟಕದಲ್ಲಿ ವಸತಿ ಯೋಜನೆಗಳ ಕುರಿತಾದ ವರದಿಯನ್ನು ಇಂದು ಬಿಡುಗಡೆ ಮಾಡಿದೆ.
'ಪವರ್ ಹೌಸ್ ಕರ್ನಾಟಕ- ದಿ ಹರ್ಬಿಂಗರ್ ಆಫ್ ಇಂಡಿಯಾಸ್ ಎಕಾನಮಿಕ್ ರೆವಲೂಶನ್' ಎಂಬ ಹೆಸರಿನಲ್ಲಿ ಈ ವರದಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕದಲ್ಲಿ ವಸತಿ ಯೋಜನೆಗಳು ಯಾವ ರೀತಿ ಮುನ್ನುಗ್ಗಿ ಸಾಗುತ್ತಿವೆ ಎಂಬುದನ್ನು ವಿವರವಾಗಿ ಉಲ್ಲೇಖ ಮಾಡಲಾಗಿದೆ.
'ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಪಾಲಿಸಿ' ಆಧಾರದಲ್ಲಿ ಈ ವರದಿಯನ್ನು ಸಿದ್ಧಪಡಿಸಲಾಗಿದ್ದು, ಇದರ ಪ್ರಕಾರ 2017-18 ರಲ್ಲಿ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ನಲ್ಲಿ ಕರ್ನಾಟಕ ದೇಶದಲ್ಲಿ 8 ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಮೂಲಕ ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳನ್ನು ಹಿಂದಿಕ್ಕಿದೆ. ಕರ್ನಾಟಕ ವಸತಿ ಯೋಜನೆಗಳ ಕಾರ್ಯಾರಂಭಕ್ಕೆ ಅನುಮತಿ ನೀಡುವಲ್ಲಿ ಹಲವಾರು ಸುಧಾರಣೆ ಕ್ರಮಗಳನ್ನು ಜಾರಿಗೆ ತಂದಿದೆ ಎಂದು ವರದಿ ತಿಳಿಸಿದೆ.
ಇದಲ್ಲದೇ, ಮಾಹಿತಿ ಮತ್ತು ಪಾರದರ್ಶಕತೆ ವಿಚಾರದಲ್ಲಿ ಕರ್ನಾಟಕ ಇತರೆ ರಾಜ್ಯಗಳಿಗಿಂತ ಉತ್ತಮವಾಗಿದ್ದು, ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಈ ಡೂಯಿಂಗ್ ಬ್ಯುಸಿನೆಸ್ ಸ್ಕೋರ್ ಅನ್ನು ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಕೈಗಾರಿಕೆ ನೀತಿ ಮತ್ತು ಉತ್ತೇಜನ ವಿಭಾಗ ನೀಡಿದೆ. ಈ ವಿಭಾಗದ ವಿಶ್ವಬ್ಯಾಂಕ್ ಸಮೂಹದ ಸಹಯೋಗದಲ್ಲಿ ಕಾರ್ಯನಿರತವಾಗಿದೆ.
ಇದಲ್ಲದೇ, ಪ್ರಮುಖವಾಗಿ ಪ್ರಸ್ತುತ ಕರ್ನಾಟಕದ ಆರ್ಥಿಕ ಸ್ಥಿತಿಗತಿ ಮತ್ತು ಭವಿಷ್ಯದ ಸ್ಥಿತಿಗತಿಯನ್ನು ಅವಲೋಕಿಸಲಾಗಿದೆ. ಇದರ ಜತೆಗೆ 2016-17 ಮತ್ತು 2017-18 ರಲ್ಲಿ ರಾಜ್ಯಕ್ಕೆ ಹರಿದು ಬಂದಿರುವ ವಿದೇಶಿ ನೇರ ಬಂಡವಾಳವನ್ನೂ ಸಹ ಪರಿಗಣಿಸಿ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ.
ಬಂಡವಾಳ ಹೂಡಿಕೆದಾರರಿಗೆ ಅನುಕೂಲ ಮಾಡಿಕೊಡಲೆಂದೆ ಇಂಡಸ್ಟ್ರಿಯಲ್ ಫೆಸಿಲಿಟೇಷನ್ ಆ್ಯಕ್ಟ್ ಅನ್ನು ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಯೂ ಕರ್ನಾಟಕಕ್ಕಿದ್ದು, 2017-18 ನೇ ಸಾಲಿನಲ್ಲಿ ಭಾರತಕ್ಕೆ ಬಂದ ಒಟ್ಟು ವಿದೇಶಿ ನೇರ ಬಂಡವಾಳದ ಪೈಕಿ ಶೇ.19.2 ರಷ್ಟನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡಲಾಗಿದೆ. ಈ ವಿಭಾಗದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇದರ ಪರಿಣಾಮವಾಗಿ ಕರ್ನಾಟಕದ ಹೂಡಿಕೆ 2016-17 ನೇ ಸಾಲಿಗಿಂತ 2017-18 ನೇ ಸಾಲಿನಲ್ಲಿ ಬಹುತೇಕ ನಾಲ್ಕು ಪಟ್ಟು ಹೆಚ್ಚಳವಾಗಿದೆ.
ಸಿಬಿಆರ್ಇ ಇಂಡಿಯಾದ ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಅಭಿನವ್ ಜೋಷಿ ಅವರು ಮಾತನಾಡಿ, ಭಾರತದ ಆರ್ಥಿಕ ಪ್ರಗತಿಯಲ್ಲಿ ಕರ್ನಾಟಕ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ. ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮಗಳು ಪ್ರಮುಖ ಪಾತ್ರ ವಹಿಸುತ್ತಿವೆ. ರಾಜ್ಯದಲ್ಲಿನ ಉತ್ತೇಜನಾತ್ಮಕ ನೀತಿಗಳಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಸಾಕಷ್ಟು ಬಂಡವಾಳವನ್ನು ಆಕರ್ಷಣೆ ಮಾಡಿದೆ'' ಎಂದು ತಿಳಿಸಿದರು.
ಈ ವರದಿ ಪ್ರಕಾರ ಕರ್ನಾಟಕ ಮೇಕ್ ಇನ್ ಇಂಡಿಯಾ' ಅಭಿಯಾನದಡಿ ಕೈಗಾರಿಕೆ ಉತ್ಪಾದನೆಗೆ ಪೂರಕವಾದ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಜಾರಿಗೊಳಿಸಿದೆ. ಇದರಲ್ಲಿ ಪ್ರಮುಖವಾಗಿ ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್(ಸಿಬಿಐಸಿ) ಮತ್ತು ಬೆಂಗಳೂರು-ಮುಂಬೈ ಎಕಾನಾಮಿಕ್ ಕಾರಿಡಾರ್ (ಬಿಎಂಇಸಿ) ಮತ್ತು ಕೊಚ್ಚಿ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ (ಕೆಬಿಐಸಿ) ಯಂತಹ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಜಾರಿಗೊಳಿಸುತ್ತಿದೆ.
ದೇಶದ ಕೆಲವೇ ಕೆಲವು ರಾಜ್ಯಗಳ ಪೈಕಿ ವಿದ್ಯುತ್ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಖ್ಯಾತಿಯನ್ನು ಪಡೆದಿರುವ ಕರ್ನಾಟಕ, ವಿದ್ಯುತ್ ಉತ್ಪಾದನೆಗೆ ಅಗತ್ಯವಾದ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಇದರ ಪರಿಣಾಮ 7400 ಮೆಗಾವ್ಯಾಟ್ಗಿಂತ ಅಧಿಕ ವಿದ್ಯುತ್ ಉತ್ಪಾದನೆಗೆ ಒತ್ತು ಕೊಟ್ಟಿದ್ದು ಭಾರತದ ನವೀಕರಿಸಬಹುದಾದ ಇಂಧನ ಪೂರೈಕೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.