ಖಾತೆಗೆ ಬಂತು ಕೋಟಿ ಕೋಟಿ ಹಣ, ಹೆಚ್ಡಿಎಫ್ಸಿ ಬ್ಯಾಂಕ್ ಗ್ರಾಹಕರಿಗೆ ಶಾಕ್!
ಚೆನ್ನೈ, ಮೇ 30: ಡಿಜಿಟಲ್ ಇಂಡಿಯಾ ಹೆಸರಲ್ಲಿ ಎಲ್ಲವೂ ಯಾಂತ್ರೀಕೃತವಾಗುತ್ತಿದೆ. ಮೊಬೈಲ್ ಅದಕ್ಕೆ ಇಂಟರ್ನೆಟ್ ಒಂದಿದ್ದರೆ ಸಾಕು ಪ್ರಪಂಚದ ಯಾವುದೋ ಮೂಲೆಯಲ್ಲಿ ಕುಳಿತು ಇನ್ಯಾವುದೋ ಊರಿನ ಬ್ಯಾಂಕ್ನ ವ್ಯವಹಾರ ನಡೆಸಬಹುದು. ಹಣ ವರ್ಗಾವಣೆ ಮಾಡಬಹುದು, ಆಯ್ಕೆಗಳಿಗೇನು ಕೊರತೆಯೇ ಇಲ್ಲ. ಆದರೆ ಇದೇ ಕೆಲವೊಮ್ಮೆ ಸಮಸ್ಯೆಗಳನ್ನು ಸೃಷ್ಟಿ ಮಾಡಿ, ಗೊಂದಲಕ್ಕೆ ಕಾರಣವಾಗುತ್ತದೆ. ಅಂತಹದ್ದೇ ಒಂದು ಘಟನೆ ಚೆನ್ನೈನಲ್ಲಿ ನಡೆದಿದೆ.
ಅಪಾರ ಪ್ರಮಾಣದ ಹಣ ತಮ್ಮ ಖಾತೆಗೆ ಜಮಾ ಆಗಿರುವ ಸಂದೇಶ ಸ್ವೀಕರಿಸಿದ ಗ್ರಾಹಕರು ತಬ್ಬಿಬ್ಬಾಗಿದ್ದಾರೆ, ಕೂಡಲೇ ಅಪರಾಧ ವಿಭಾಗದ ಪೊಲೀಸರು ಮತ್ತು ಬ್ಯಾಂಕ್ ವಂಚನೆ ಘಟಕಕ್ಕೆ ಮಾಹಿತಿ ನೀಡಿದ್ದಾರೆ. ದೂರು ಬರುತ್ತಿದ್ದಂತೆ ಕೂಡಲೇ ಎಚ್ಚೆತ್ತ ಅಧಿಕಾರಿಗಳು ಗ್ರಾಹಕರ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.
ಉಡುಪಿಯಲ್ಲಿ ಕೆಲಸ ಖಾಲಿ ಇದೆ; ಜೂನ್ 21ರೊಳಗೆ ಅರ್ಜಿ ಹಾಕಿ
ಗ್ರಾಹಕರೊಬ್ಬರ ಪ್ರಕಾರ, ಮೇ 29 ರಂದು ಬೆಳಗಿನ ಸಮಯದಲ್ಲಿ ಬ್ಯಾಂಕ್ ನಿರ್ವಹಣೆಯ ಭಾಗವಾಗಿ ಸಾಫ್ಟ್ವೇರ್ ಪ್ಯಾಚ್ ಪರಿಚಯಿಸಿದ್ದರಿಂದ ಸಮಸ್ಯೆ ಉಂಟಾಗಿದೆ ಎಂದಿದ್ದಾರೆ. ಇದಲ್ಲದೆ, ಖಾತೆಗಳಲ್ಲಿ ಠೇವಣಿ ಮಾಡಿದ ಹೆಚ್ಚುವರಿ ಹಣವನ್ನು ಹಿಂಪಡೆಯಲಾಗಿದೆಯೇ? ಎಂದು ಬ್ಯಾಂಕ್ ತನಿಖೆ ನಡೆಸುತ್ತಿದೆ.
Fact Check: 10,100 ರೂ. ಜಮೆ ಮಾಡಿದರೆ ನಿಮ್ಮ ಖಾತೆಗೆ ಬರುತ್ತಾ 30 ಲಕ್ಷ!?
100 ಮಂದಿ ಖಾತೆಗೆ ತಲಾ 13 ಕೋಟಿ ಜಮಾ
ಚೆನ್ನೈನ ಟಿ.ನಗರದ ಹೆಚ್ಡಿಎಫ್ಸಿ ಬ್ಯಾಂಕ್ ತನ್ನ 100 ಗ್ರಾಹಕರ ಖಾತೆಗೆ ತಪ್ಪಾಗಿ 13 ಕೋಟಿ ಜಮಾ ಮಾಡಿದೆ. ಮೇ 29ರ ಭಾನುವಾರ ನಡೆದ ಈ ಅಚ್ಚರಿಯ ಬೆಳವಣಿಗೆಯಲ್ಲಿ ಕೆಲ ಗಂಟೆಗಳ ಮಟ್ಟಿಗೆ 100 ಗ್ರಾಹಕರು ಕೋಟ್ಯಧಿಪತಿಗಳಾಗಿದ್ದಾರೆ. ಆದರೆ ಈ ಖುಷಿ ತುಂಬಾ ಹೊತ್ತು ಉಳಿಯಲಿಲ್ಲ. ಇದು ತಾಂತ್ರಿಕ ದೋಷದಿಂದ ಉಂಟಾದ ಪ್ರಮಾದ ಎನ್ನಲಾಗಿದ್ದು, ಸಂಜೆ ವೇಳೆಗೆ ಸಮಸ್ಯೆಯನ್ನು ಸರಿಪಡಿಸಲಾಗಿದೆ.
ತಮಗೇ ಗೊತ್ತಿಲ್ಲದ್ದಂತೆ ತಮ್ಮ ಖಾತೆಯಲ್ಲಿ ಕೋಟ್ಯಾಂತರ ಹಣ ಜಮಾ ಆಗಿ ಕೆಲವು ಗಂಟೆಗಳ ಕಾಲ ಕೋಟ್ಯಾಧಿಪತಿಗಳಾದ ಈ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ. ಮಾತ್ರವಲ್ಲದೆ ಬ್ಯಾಂಕ್ಗಳಲ್ಲಿನ ತಾಂತ್ರಿಕ ದೋಷಗಳ ಬಗ್ಗೆ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.
ಬ್ಯಾಂಕ್ನಿಂದ ಖಾತೆ ಸ್ಥಗಿತ
ಎಚ್ಡಿಎಫ್ಸಿ ಬ್ಯಾಂಕ್ನ ಬೆಸೆಂಟ್ ನಗರ ಶಾಖೆಯಲ್ಲಿ ಖಾತೆ ಹೊಂದಿರುವ ಚೆನ್ನೈನ ವೆಲ್ಲೂರ್ ಇಂಟರ್ನ್ಯಾಶನಲ್ ಸ್ಕೂಲ್ನ ನಿರ್ದೇಶಕ ವಿ. ಸಂಜೀವಿ, ನೆಟ್ ಬ್ಯಾಂಕಿಂಗ್ ಮೂಲಕ ವ್ಯವಹಾರ ನಡೆಸಿದ ನಂತರ ಅವರ ಖಾತೆಯಲ್ಲಿ 3.1 ಕೋಟಿ ಠೇವಣಿ ಇರಿಸಿದ್ದರು.
"ಭಾನುವಾರ ಮಧ್ಯಾಹ್ನ ವಹಿವಾಟು ಮಾಡಿದ ಕೆಲವೇ ನಿಮಿಷಗಳಲ್ಲಿ, ನಾನು ಬ್ಯಾಲೆನ್ಸ್ ಪರಿಶೀಲಿಸಿದಾಗ ಖಾತೆಯಲ್ಲಿ ಹೆಚ್ಚುವರಿ ಮೊತ್ತ ಇರುವುದು ಗೊತ್ತಾಯಿತು. ಇದು ತಾಂತ್ರಿಕ ದೋಷದ ಕಾರಣದಿಂದಾಗಿರಬಹುದು ಎಂದು ನನಗೆ ಅರ್ಥವಾಯಿತು" ಎಂದು ಹೇಳಿದ್ದಾರೆ.
10 ನಿಮಿಷಗಳ ನಂತರ ಮತ್ತೆ ಲಾಗ್ ಇನ್ ಮಾಡಿದಾಗ, ಖಾತೆಯನ್ನು ಸ್ಥಗಿತಗೊಳಿಸಲಾಗಿತ್ತು. ಯಾವುದೇ ವಹಿವಾಟು ಮಾಡಲು ಸಾಧ್ಯವಾಗಲಿಲ್ಲ, ಸಂಜೆ ವೇಳೆಗೆ ಸಮಸ್ಯೆಯನ್ನು ಸರಿಪಡಿಸಲಾಯಿತು ಎಂದು ಹೇಳಿದ್ದಾರೆ.
ತಾಂತ್ರಿಕ ದೋಷಕ್ಕೆ ಅಸಮಾಧಾನ
ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ತಾಂತ್ರಿಕ ದೋಷಗಳ ಬಗ್ಗೆ ಹಲವಾರು ಮಂದಿ ಕಮೆಂಟ್ ಮಾಡಿದ್ದಾರೆ. ತಮ್ಮ ಅಕೌಂಟ್ಗೆ ಕೋಟಿಗಟ್ಟಲೆ ಹಣ ಬಂದ ಬಗ್ಗೆ ಜನ ಆದಾಯ ತೆರಿಗೆ ಇಲಾಖೆಗೆ ಏನೆಂದು ಉತ್ತರಿಸಬೇಕು? ಎಂದು ಟ್ವಿಟರ್ ಬಳಕೆದಾರರೊಬ್ಬರು ಪ್ರಶ್ನೆ ಮಾಡಿದ್ದಾರೆ.
"ಕೆಲವು ಚೆನ್ನೈ ಎಚ್ಡಿಎಫ್ಸಿ ಬ್ಯಾಂಕ್ ಗ್ರಾಹಕರು ಇದ್ದಕ್ಕಿದ್ದಂತೆ ಕೋಟ್ಯಾಧಿಪತಿಗಳಾಗಿ ಬದಲಾಗುತ್ತಾರೆ. ಅದು ತುಂಬಾ ಸುಲಭವಾಗಿದ್ದರೆ. ಎಚ್ಡಿಎಫ್ಸಿ ಬ್ಯಾಂಕ್ನ ಸಮಸ್ಯೆ ಮುಂದುವರೆದಿದ್ದು, ಖಾತೆಗಳಿಗೆ ಕೋಟಿಗಟ್ಟಲೆ ಜಮಾ ಆಗುತ್ತಿದೆ. ಈ ವ್ಯಕ್ತಿಗಳು ಐಟಿ ಅಧಿಕಾರಿಗಳಿಗೆ ಏನು ಉತ್ತರ ನೀಡುತ್ತಾರೆ?" ಎಂದಿದ್ದಾರೆ.
ಸಾಫ್ಟ್ವೇರ್ ಅಸಮರ್ಪಕ ಕಾರ್ಯನಿರ್ವಹಣೆ
ವರದಿಯ ಪ್ರಕಾರ, ಈ ಸಮಸ್ಯೆಯು ಚೆನ್ನೈನಲ್ಲಿರುವ ಬ್ಯಾಂಕ್ ಶಾಖೆಗಳಿಗೆ ಲಿಂಕ್ ಮಾಡಲಾದ ಕೆಲವು ಖಾತೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಎಚ್ಡಿಎಫ್ಸಿ ಹೇಳಿದೆ. ಭಾನುವಾರದ ಆರಂಭದಲ್ಲಿ ಪರಿಚಯಿಸಲಾದ ಸಾಫ್ಟ್ವೇರ್ ಪ್ಯಾಚ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಿಕೆ ನೀಡಿದೆ.
ಬ್ಯಾಂಕ್ ಸರ್ವರ್ ಹ್ಯಾಕ್ ಮಾಡಿ ಹಣ ವರ್ಗಾವಣೆ ಮಾಡಲಾಗಿದೆಯೇ ಎಂಬ ರೀತಿಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಭಾನುವಾರ ಸಂಜೆ ವೇಳೆಗೆ ಸಮಸ್ಯೆ ಬಗೆಹರಿದಿದ್ದು, ಸ್ಥಗಿತಗೊಳಿಸಿದ್ದ ಖಾತೆಗಳನ್ನು ಚಾಲನೆ ಮಾಡಲಾಗಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.