ಹೊಂದಾಣಿಕೆ ಕೊರತೆ: ಆರ್ ಬಿಐಗೂ ಮೋದಿ ಸರ್ಕಾರಕ್ಕೂ ಶುರುವಾಗಿದೆಯೇ ತಿಕ್ಕಾಟ?
ನವದೆಹಲಿ, ಅಕ್ಟೋಬರ್ 29: ಅತ್ತ ರೂಪಾಯಿ-ಡಾಲರ್ ಮೌಲ್ಯದ ನಡುವಿನ ಅಂತರ ಜನರಲ್ಲಿ ಕಳವಳ ಮೂಡಿಸುತ್ತಿದ್ದರೆ, ಇತ್ತ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಡುವೆ ಸಂಬಂಧ ಹಳಸಿದೆ ಎನ್ನಲಾಗಿದೆ.
ಅದರಲ್ಲಿಯೂ ಮುಖ್ಯವಾಗಿ ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಮತ್ತು ಸರ್ಕಾರದ ನಡುವೆ ಒಡಕು ಮೂಡಿದೆ ಎಂಬ ಮಾತುಗಳು ಕೇಳಿಬಂದಿವೆ.
ಕುಸಿದ ಗ್ರಾಹಕರ ವಿಶ್ವಾಸ, ಆರ್ಥಿಕತೆ ಬಗ್ಗೆ ಏನೆಂದುಕೊಳ್ತಾರೆ ಗೊತ್ತಾ?
ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಚರ್ಚಿಸಲು ಇಬ್ಬರೂ ಮುಖಾಮುಖಿಯಾಗುತ್ತಿಲ್ಲ. ಮಾತ್ರವಲ್ಲ, ಸರ್ಕಾರ ಮತ್ತು ಆರ್ ಬಿಐ ನಡುವೆ ಹೆಚ್ಚೂ ಕಡಿಮೆ ಸಂಹವನವೇ ಸಂಪೂರ್ಣ ಸ್ಥಗಿತಗೊಂಡಿದೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.
ಸರ್ಕಾರ-ಆರ್ ಬಿಐ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯ ಊರ್ಜಿತ್ ಪಟೇಲ್ ಅವರ ಹಣೆಬರಹವನ್ನು ಬದಲಿಸುವ ಸಾಧ್ಯತೆ ಬಗ್ಗೆ ಅನುಮಾನ ಮೂಡಿಸಿದೆ. ಅವರ ಮೂರು ವರ್ಷದ ಅವಧಿ ಮುಂದಿನ ಸೆಪ್ಟೆಂಬರ್ನಲ್ಲಿ ಮುಗಿಯಲಿದ್ದು, ಮತ್ತೆ ಅವರನ್ನು ಮುಂದುವರಿಸುವ ಸಾಧ್ಯತೆ ತೀರಾ ಕಡಿಮೆ.
ಎನ್ಡಿಎ ಸರ್ಕಾರದ ಅನೇಕರು ಪಟೇಲ್ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 'ಹಿಂದಿನ ಗವರ್ನರ್ ರಘುರಾಂ ರಾಜನ್ ಅವರೇ ಇದಕ್ಕಿಂತ ವಾಸಿ' ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಬದಲಾಗದ ರೆಪೋ, ರಿವರ್ಸ್ ರೆಪೋ ದರ; ಡಾಲರ್ ವಿರುದ್ಧ ರುಪಾಯಿ 74ಕ್ಕೆ
2018ರಲ್ಲಿಯೇ ಅರ್ಧಕ್ಕಿಂತಲೂ ಹೆಚ್ಚು ಆರ್ಥಿಕ ನೀತಿ ನಿರ್ಧಾರಗಳನ್ನು ಎರಡೂ ಕಡೆ ಪರಸ್ಪರ ವಿರುದ್ಧವಾಗಿ ತೆಗೆದುಕೊಳ್ಳಲಾಗಿದೆ. ಹಣದುಬ್ಬರದ ಸಂದರ್ಭದಲ್ಲಿ ಬಡ್ಡಿದರವನ್ನು ಕಡಿಮೆ ಮಾಡದ ಆರ್ ಬಿಐ ವಿರುದ್ಧ ಸರ್ಕಾರ ಅಸಮಾಧಾನಗೊಂಡಿತ್ತು. ಅದನ್ನು ಹೆಚ್ಚಿಸುವ ವಿಚಾರದಲ್ಲಿಯೂ ಸರ್ಕಾರಕ್ಕೆ ಆರ್ ಬಿಐ ನಡೆ ಕೋಪ ತರಿಸಿದೆ.
ನೀರವ್ ಮೋದಿ ಅವರ ವಂಚನೆ ಪ್ರಕರಣ ಬಯಲಿಗೆ ಬಂದಾಗ ಆರ್ ಬಿಐ ತೆಗೆದುಕೊಂಡ ನಿರ್ಧಾರದ ಬಗ್ಗೆ ಸರ್ಕಾರ ಆಕ್ರೋಶ ವ್ಯಕ್ತಪಡಿಸಿತ್ತು. ಆದರೆ, ಸಾರ್ವಜನಿಕ ವಲಯದ ಬ್ಯಾಂಕುಗಳ ಮೇಲೆ ನಿಯಂತ್ರಣ ಸಾಧಿಸಲು ಇನ್ನೂ ಹೆಚ್ಚಿನ ಅಧಿಕಾರ ನೀಡುವಂತೆ ಪಟೇಲ್ ಕೇಳಿದ್ದರು.
ಬಂಧನ್ ಬ್ಯಾಂಕ್ ನಿಂದ ಹೊಸ ಶಾಖೆ ಆರಂಭಿಸುವಂತಿಲ್ಲ ಎಂದ ಆರ್ ಬಿಐ
ಐಎಲ್ & ಎಫ್ಎಸ್ ಸಾಲ ಮರುಪಾವತಿಸಲಾಗದೆ ಬಿಕ್ಕಟ್ಟಿನಲ್ಲಿ ಸಿಲುಕಿದಾಗ ಬ್ಯಾಂಕೇತರ ಹಣಕಾಸು ಕಂಪೆನಿಗಳಿಗೆ ಕೆಲ ನಿರ್ಬಂಧಗಳನ್ನು ಸಡಿಲಿಸುವಂತೆ ಕೇಂದ್ರ ಸರ್ಕಾರ ಆರ್ ಬಿಐ ಗೆ ಸೂಚಿಸಿತ್ತು. ಆದರೆ, ಅದಕ್ಕೆ ಆರ್ ಬಿಐ ಒಪ್ಪಿರಲಿಲ್ಲ.
ಇದೇ ಕಾರಣದಿಂದ ಆರ್ ಬಿಐ ಮಂಡಳಿಯಲ್ಲಿ ಬದಲಾವಣೆ ತರಲಾಗಿತ್ತು. ಅವಧಿ ಮುಗಿಯುವ ಎರಡು ವರ್ಷ ಮೊದಲೇ ನಚಿಕೇತ್ ಮೋರ್ ಅವರನ್ನು ಸಾಂಪ್ರದಾಯಿಕ ಮಾಹಿತಿಯನ್ನೂ ನೀಡದೆ ತೆಗೆದು ಹಾಕಲಾಗಿತ್ತು.
ಕೇಂದ್ರ ಬ್ಯಾಂಕಿನ ಸ್ವಾತಂತ್ರ್ಯವನ್ನು ಸರ್ಕಾರ ಗೌರವಿಸುತ್ತಿಲ್ಲ. ಇದರಿಂದ ಹಣಕಾಸು ಮಾರುಕಟ್ಟೆ, ಆರ್ಥಿಕ ಚಟುವಟಿಕೆಗಳು ಸಂಕಷ್ಟಕ್ಕೆ ಸಿಲುಕಲಿದ್ದು, ಈ ನಿಯಂತ್ರಕ ಸಂಸ್ಥೆಯ ಮಹತ್ವಕ್ಕೆ ಧಕ್ಕೆ ತರಲಿದೆ ಎಂದು ಆರ್ ಬಿಐ ಡೆಪ್ಯುಟಿ ಗವರ್ನರ್ ವಿರಾಲ್ ಆಚಾರ್ಯ ಹೇಳಿದ್ದರು.