ಬಜೆಟ್ 2021: ಸುಂಕ ಇಳಿಕೆ, ಚಿನ್ನದ ಬೇಡಿಕೆ ಹೆಚ್ಚಳ ಸಾಧ್ಯತೆ
ನವದೆಹಲಿ, ಫೆಬ್ರವರಿ 02: ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕವನ್ನು ಕಡಿಮೆ ಮಾಡುವುದಾಗಿ ಕೇಂದ್ರ ಸರ್ಕಾರವು ಬಜೆಟ್ನಲ್ಲಿ ಘೋಷಿಸಿದೆ. ಕೇಂದ್ರ ಬಜೆಟ್ 2021 ಅನ್ನು ಮಂಡಿಸುವಾಗ ಚಿನ್ನದ ಆಮದು ಸುಂಕವನ್ನು ಕಡಿತಗೊಳಿಸುವಂತೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸೋಮವಾರ ಪ್ರಸ್ತಾಪಿಸಿದ್ದಾರೆ. ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ 12.5 ರಿಂದ ಶೇ 7.5 ಕ್ಕೆ ಇಳಿಸುವುದಾಗಿ ಹೇಳಿದರು.
ಸೋಮವಾರ ಕೇಂ್ರ ಬಜೆಟ್ ಮಂಡಿಸಿದ ನಂತರ, ಚಿನ್ನದ ಬೆಲೆಯಲ್ಲಿ ಸುಮಾರು ಒಂದು ಸಾವಿರ ರೂಪಾಯಿಗಳ ವ್ಯತ್ಯಾಸ ಕಂಡುಬಂದಿದೆ. 2019 ರ ಜುಲೈನಲ್ಲಿ ಚಿನ್ನದ ಆಮದು ಸುಂಕವನ್ನು ಶೇಕಡಾ 10 ರಿಂದ 12.5 ಕ್ಕೆ ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು. ಈ ಕಾರಣದಿಂದಾಗಿ, ದೇಶದಲ್ಲಿ ಚಿನ್ನದ ಬೆಲೆಯಲ್ಲಿ ದೊಡ್ಡ ಏರಿಕೆ ಕಂಡುಬಂದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಹಿಂದಿನ ದರಕ್ಕೆ ತಗ್ಗಿಸಲು ಸರ್ಕಾರ ನಿರ್ಧರಿಸಿತು.
ಆಮದು ಸುಂಕವನ್ನು ಕಡಿತಗೊಳಿಸುವುದರಿಂದ ಚಿನ್ನ ಮತ್ತು ಬೆಳ್ಳಿ ಖರೀದಿ ಅಗ್ಗವಾಗಲಿದೆ. ವಹಿವಾಟಿನಲ್ಲಿ ಹೂಡಿಕೆದಾರರ ಭಾಗವಹಿಸುವಿಕೆ ಹೆಚ್ಚಾಗುತ್ತಿರುವುದು ಗೋಚರಿಸುತ್ತಿದೆ. ಇದರೊಂದಿಗೆ ಸಂಘಟಿತ ವ್ಯವಹಾರಕ್ಕೆ ಉತ್ತೇಜನ ಸಿಗಲಿದೆ. ಅದೇ ಸಮಯದಲ್ಲಿ, ಚಿನ್ನ ಮತ್ತು ಬೆಳ್ಳಿಯ ಕಳ್ಳಸಾಗಣೆ ಸಹ ತಗ್ಗಿಸಲು ಸಾಧ್ಯವಾಗುವುದರ ಜೊತೆಗೆ ಹೂಡಿಕೆದಾರರ ಪರವಾಗಿ ಇದು ಉತ್ತಮ ನಿರ್ಧಾರ ಎಂದು ಸಾಬೀತುಪಡಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ವಿಶ್ವದಲ್ಲೇ ಅತಿ ಹೆಚ್ಚು ಚಿನ್ನ ಆಮದುದಾರನಾಗಿರುವ ಭಾರತದಲ್ಲಿ, ವಿದೇಶಿ ಮತ್ತು ಸ್ವದೇಶಿ ಬೆಲೆಗಳಲ್ಲಿನ ವ್ಯತ್ಯಾಸದಿಂದಾಗಿ ಚಿನ್ನವನ್ನು ಸಹ ದೇಶಕ್ಕೆ ಕಳ್ಳಸಾಗಣೆ ಮಾಡಲಾಗುತ್ತದೆ. ಸುಂಕ ತಗ್ಗಿಸಿರುವುದರಿಂದ ಕಳ್ಳಸಾಗಣೆ ಕಡಿಮೆ ಮಾಡಬಹುದು ಎಂದು ನಂಬಲಾಗಿದೆ.
ಲೋಕಸಭೆಯಲ್ಲಿ ಬಜೆಟ್ ಮಂಡಿಸುವಾಗ ಸೀತಾರಾಮನ್, ವಾಹನ ಭಾಗಗಳು, ಸೌರಶಕ್ತಿ ಉಪಕರಣಗಳು, ಹತ್ತಿ ಮತ್ತು ಕಚ್ಚಾ ರೇಷ್ಮೆಗಳ ಮೇಲೆ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು. ಇವುಗಳಲ್ಲದೆ, ನಾಫ್ತಾ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 2.5 ಕ್ಕೆ ಇಳಿಸಲಾಗಿದೆ. ಕೆಲವು ಉತ್ಪನ್ನಗಳಿಗೆ ಮೂಲಸೌಕರ್ಯ ಅಭಿವೃದ್ಧಿ ಸೆಸ್ ವಿಧಿಸುವ ಬಗ್ಗೆಯೂ ಹಣಕಾಸು ಸಚಿವರು ಪ್ರಸ್ತಾಪಿಸಿದರು.