25 ದಶಲಕ್ಷ ಉದ್ಯೋಗಿಗಳಿಗೆ ನೆರವಾಗುವಂತೆ ಸಿಎಂಗೆ ಮನವಿ
ಬೆಂಗಳೂರು, ಏಪ್ರಿಲ್ 24: ಕೊವಿಡ್-19 ನಿಂದಾಗಿ ಲಾಕ್ ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರೀಟೇಲ್ ಉದ್ಯಮದ ಪುನಶ್ಚೇತನಕ್ಕೆ ನೆರವಾಗಬೇಕೆಂದು ಭಾರತೀಯ ರೀಟೇಲರ್ಸ್ ಸಂಘವು ಯಡಿಯೂರಪ್ಪ ಅವರ ಸರ್ಕಾರವನ್ನು ಒತ್ತಾಯಿಸಿದೆ.
ಈ ಸಂಬಂಧ ಮನವಿಯನ್ನು ಸಲ್ಲಿಸಿರುವ ಸಂಘವು, ರೀಟೇಲ್ ಉದ್ಯಮವನ್ನು ಪುನಶ್ಚೇತನಗೊಳಿಸಲು ಆರ್ಥಿಕ ನೆರವು ನೀಡಬೇಕು, ದುಡಿಯುವ ಬಂಡವಾಳಕ್ಕೆ ಪಡೆದುಕೊಂಡಿರುವ ಸಾಲದ ಮೇಲಿನ ಅಸಲು ಮತ್ತು ಬಡ್ಡಿ ಪಾವತಿಯನ್ನು ಮುಂದೂಡಬೇಕೆಂಬುದು ಸೇರಿದಂತೆ ಹಲವು ಮನವಿಗಳನ್ನು ಮಾಡಿಕೊಂಡಿದೆ.
ಕೊವಿಡ್19 ವಿರುದ್ಧ ಹೋರಾಡಲು ದೇಣಿಗೆ ನೀಡಿ: ಸಿಎಂ ಬಿಎಸ್ವೈ
ಭಾರತೀಯ ರೀಟೇಲರ್ಸ್ ಸಂಘದ ಅಧ್ಯಕ್ಷ ಮತ್ತು ಟ್ರಸ್ಟ್ ಫಾರ್ ರೀಟೇಲರ್ಸ್ & ರೀಟೆಲ್ ಅಸೋಸಿಯೇಟ್ಸ್ ಆಫ್ ಇಂಡಿಯಾದ ಸಂಸ್ಥಾಪಕರಾಗಿರುವ ಬಿ.ಎಸ್.ನಾಗೇಶ್ ಅವರು ಈ ಬಗ್ಗೆ ಮಾತನಾಡಿ, ''ದೇಶದಲ್ಲಿ ರೀಟೇಲ್ ಉದ್ಯಮದಲ್ಲಿ 46 ದಶಲಕ್ಷಕ್ಕೂ ಅಧಿಕ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ, ಈ ಉದ್ಯಮ 250 ದಶಲಕ್ಷ ಭಾರತೀಯರಿಗೆ ಆಸರೆಯಾಗಿದೆ. ಶೇ.50 ರಷ್ಟು ಆಹಾರ ಮತ್ತು ಇತರೆ ಅಗತ್ಯ ವಸ್ತುಗಳನ್ನು ಈ ರೀಟೇಲ್ ಉದ್ಯಮ ಪೂರೈಕೆ ಮಾಡುತ್ತಿದೆ'' ಎಂದಿದ್ದಾರೆ.
25 ದಶಲಕ್ಷ ಉದ್ಯೋಗಿಗಳ ಮೇಲೆ ಪರಿಣಾಮ
ಅಗತ್ಯವೆನಿಸದ ಉತ್ಪನ್ನಗಳ ಮಾರಾಟ ಸ್ಥಗಿತಗೊಂಡಿರುವುದರಿಂದ 20-25 ದಶಲಕ್ಷ ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತಿದೆ ಮತ್ತು ಈ ನಾನ್-ಎಸೆನ್ಷಿಯಲ್ ರೀಟೇಲ್ ಚೇನ್ ನಲ್ಲಿ ಕೆಲಸ ಮಾಡುತ್ತಿರುವ 125 ದಶಲಕ್ಷಕ್ಕೂ ಅಧಿಕ ಭಾರತೀಯರ ಮೇಲೆ ಪರಿಣಾಮ ಬೀರುತ್ತಿದೆ. ಇದರಲ್ಲಿ ಪ್ರಮುಖವಾಗಿ ಉತ್ಪಾದನೆಯಿಂದ ಲಾಜಿಸ್ಟಿಕ್, ಸಗಟು & ಚಿಲ್ಲರೆ ವ್ಯಾಪಾರ ಪ್ರಮುಖವಾಗಿವೆ. ಒಂದು ವೇಳೆ ರೀಟೇಲ್ ಅನ್ನು ಆರಂಭಿಸದಿದ್ದರೆ ಪರಿಣಾಮ ಗಂಭೀರ ಪರಿಸ್ಥಿತಿಗೆ ತಲುಪುತ್ತದೆ. ಇದರ ಪರಿಣಾಮ ಉತ್ಪಾದನೆ, ಮನರಂಜನೆ ಮತ್ತು ಗುಡಿ ಕೈಗಾರಿಕೆಗಳ ಮೇಲೆ ಬೀರುತ್ತದೆ. ಇದರಿಂದ ರೀಟೇಲ್ ಉದ್ಯಮವು ಲಕ್ಷಾಂತರ ಉದ್ಯೋಗಿಗಳನ್ನು ಕಳೆದುಕೊಳ್ಳುವಂತಾಗುತ್ತದೆ. ಅಂದರೆ ಸುಮಾರು 5 ರಿಂದ 6 ದಶಲಕ್ಷ ಜನರು ಉದ್ಯೋಗ ಕಳೆದುಕೊಳ್ಳುವಂತಾಗುತ್ತದೆ'' ಎಂದು ಆತಂಕ ವ್ಯಕ್ತಪಡಿಸಿದರು.
ಅರವಿಂದ್ ಲಿಮಿಟೆಡ್ ನ ಕುಲಿನ್ ಲಾಲ್
ಅರವಿಂದ್ ಲಿಮಿಟೆಡ್ ನ ಕಾರ್ಯಕಾರಿ ನಿರ್ದೇಶಕ ಕುಲಿನ್ ಲಾಲ್ ಭಾಯ್ ಅವರು ಮಾತನಾಡಿ, ''ಆರ್ಥಿಕತೆಯನ್ನು ಪುನರ್ ರೂಪಿಸಬೇಕಾದರೆ ಪ್ರಮುಖವಾಗಿ ನಗದು ವ್ಯವಹಾರ ಆರಂಭವಾಗಬೇಕಿದೆ. ರಫ್ತು ಪ್ರಮಾಣ ಹೆಚ್ಚು ಸಹಕಾರಿಯಾಗುವುದಿಲ್ಲ. ಬದಲಿಗೆ ದೇಶೀಯ ಬಳಕೆಯು ಪ್ರಮುಖ ಪಾತ್ರ ವಹಿಸುತ್ತದೆ. ದೊಡ್ಡ ಮಟ್ಟದಲ್ಲಿ ನಾನ್ ಎಸೆನ್ಷಿಯಲ್ ಉತ್ಪನ್ನಗಳ ಮಾರಾಟ ಪುನಾರಂಭಿಸುವ ಬಗ್ಗೆ ಗಮನ ನೀಡಬೇಕಿದೆ. ಈ ಬಿಕ್ಕಟ್ಟಿನಿಂದ ಹೊರಬರಬೇಕಾದರೆ ರೀಟೇಲ್ ಉದ್ಯಮಕ್ಕೆ 6 ರಿಂದ 9 ತಿಂಗಳ ಆರ್ಥಿಕ ಬೆಂಬಲ ಬೇಕಾಗುತ್ತದೆ'' ಎಂದು ತಿಳಿಸಿದರು.
ಬಾಟಾ ಇಂಡಿಯಾ ಲಿಮಿಟೆಡ್ ನ ಸಿಇಒ ಸಂದೀಪ್
ಬಾಟಾ ಇಂಡಿಯಾ ಲಿಮಿಟೆಡ್ ನ ಸಿಇಒ ಸಂದೀಪ್ ಕಟಾರಿಯಾ ಅವರು ಮಾತನಾಡಿ, ''ರೀಟೇಲ್ ಸೇರಿದಂತೆ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬೆಂಬಲ ನೀಡುತ್ತೇವೆ. ಆದರೆ, ಮಾಲ್ ಗಳು ಸೇರಿದಂತೆ ಇತರೆ ಬಳಕೆದಾರ ಚಾನೆಲ್ ಗಳನ್ನು ಆರಂಭಿಸುವುದು ಪ್ರಮುಖವಾಗಿದೆ. ಬಳಕೆ ಪ್ರಕ್ರಿಯೆ ಆರಂಭವಾದರೆ ಉತ್ಪಾದನೆ ವೇಗ ಹೆಚ್ಚಾಗಲಿದೆ. ಇದರಿಂದಾಗಿ ಪಾದರಕ್ಷೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ 4.5 ದಶಲಕ್ಷ ನೌಕರರು ಕೆಲಸಕ್ಕೆ ಮರಳಲಿದ್ದಾರೆ'' ಎಂದರು.
ಭಾರತೀಯ ರೀಟೇಲರ್ಸ್ ಸಂಘದ ಸಿಇಒ ಕುಮಾರ್
ಇದೇ ವೇಳೆ ಮಾತನಾಡಿದ ಭಾರತೀಯ ರೀಟೇಲರ್ಸ್ ಸಂಘದ ಸಿಇಒ ಕುಮಾರ್ ರಾಜಗೋಪಾಲನ್ ಅವರು, ''ಕಳೆದ ಕೆಲವು ದಿನಗಳಿಂದ ನಾವು ಸರ್ಕಾರಕ್ಕೆ ಹಲವಾರು ಮನವಿಗಳನ್ನು ನೀಡಿದ್ದೇವೆ. ಸರ್ಕಾರ ಸಕಾರಾತ್ಮಕವಾಗಿದೆ. ಲಕ್ಷಾಂತರ ಉದ್ಯೋಗಿಗಳನ್ನು ಹೊಂದಿರುವ ರೀಟೇಲ್ ಉದ್ಯಮವನ್ನು ಸಂಕಷ್ಟದಿಂದ ಪಾರು ಮಾಡುವ ನಿಟ್ಟಿನಲ್ಲಿ ಸೂಕ್ತ ಆರ್ಥಿಕ ಪ್ಯಾಕೇಜ್ ಅನ್ನು ಪ್ರಕಟಿಸಬೇಕೆಂದು ನಾವು ಸರ್ಕಾರಕ್ಕೆ ಮನವಿ ಮಾಡಿದ್ದೇವೆ'' ಎಂದು ತಿಳಿಸಿದರು.