ಲಾಕ್ಡೌನ್ ನಿಂದ ಲಾಭ: ಚಿನ್ನದ ಕಳ್ಳಸಾಗಣೆ ಗಮನಾರ್ಹ ಇಳಿಕೆ
ನವದೆಹಲಿ, ಸೆ. 22: ಕೊರೊನಾವೈರಸ್ ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟಲು ರಾಷ್ಟ್ರವ್ಯಾಪಿ ಲಾಕ್ಡೌನ್ ಹೇರಿದ್ದರಿಂದ ದೇಶದ ಆರ್ಥಿಕ ಚಟುವಟಿಕೆಯ ಮೇಲೆ ಪರಿಣಾಮ ಬೀರಿತ್ತು. ವಾಣಿಜ್ಯ ಉದ್ದೇಶಿತ ಸರಕು ಸಾಗಣೆಗೆ ಭಾರಿ ವ್ಯತ್ಯಯ ಉಂಟಾಗಿತ್ತು. ಆದರೆ, ಲಾಕ್ಡೌನ್ ನಿಂದ ಆಗಿರುವ ಲಾಭವೆಂದರೆ ಚಿನ್ನದ ಕಳ್ಳಸಾಗಣೆ ಗಮನಾರ್ಹ ಇಳಿಕೆ ಎಂಬ ಅಂಶ ಬೆಳಕಿಗೆ ಬಂದಿದೆ.
ಬಹುಶ ಕೇರಳದ ಚಿನ್ನದ ಸ್ಮಗಲಿಂಗ್ ಪ್ರಕರಣದಲ್ಲಿ ಹತ್ತಾರು ಕೆಜಿಯಷ್ಟು ಮಾತ್ರ ಚಿನ್ನದ ಸ್ಮಗಲಿಂಗ್ ಸಾಧ್ಯವಾಗಿದ್ದು, ಹಾಗೂ ಕಳ್ಳ ಸಾಗಣೆ ವಿಳಂಬವಾಗಲು ಲಾಕ್ಡೌನ್ ಪ್ರಮುಖ ಕಾರಣ ಎನ್ನಬಹುದು. ಹೀಗಾಗಿ, ಲಾಕ್ಡೌನ್ ನಿಯಮ ಸಡಿಲಗೊಂಡ ಬಳಿಕ ರಾಜತಾಂತ್ರಿಕ ರಕ್ಷಣೆಯೊಂದಿಗೆ ಸ್ಮಗಲಿಂಗ್ ನಡೆಸಲು ಹೋಗಿ ಸಿಕ್ಕಿಬಿದ್ದರು.
ಲಾಕ್ಡೌನ್ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು. ಹಲವು ದೇಶಗಳಲ್ಲೂ ವಿಮಾನಯಾನ ನಿರ್ಬಂಧ ಮುಂದುವರೆದಿತ್ತು. ಇದು ಚಿನ್ನದ ಕಳ್ಳಸಾಗಣೆಯಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಯಿತು. ಕಳೆದ ವರ್ಷ 120 ಟನ್ ಗಳಷ್ಟು ಚಿನ್ನವನ್ನು ದೇಶಕ್ಕೆ ಕಳ್ಳಸಾಗಣೆ ಮಾಡಲಾಗಿತ್ತು. ಆದರೆ ಈ ವರ್ಷ ಈ ಪ್ರಮಾಣಾ ತಿಂಗಳಿಗೆ 2 ಟನ್ ದರದಂತೆ ಕುಸಿದು 25 ಟನ್ಗಳಿಗೆ ಸೀಮಿತಗೊಂಡಿದೆ ಎಂದು ಅಖಿಲ ಭಾರತ ರತ್ನಗಳು ಮತ್ತು ಆಭರಣ ರಾಷ್ಟ್ರೀಯ ಮಂಡಳಿಯ ಅಧ್ಯಕ್ಷ ಎನ್ ಅನಂತ ಪದ್ಮನಾಭನ್ ಹೇಳಿದ್ದಾರೆ.
ನಾಲ್ಕು ತಿಂಗಳು ಕಳ್ಳ ಸಾಗಣೆಗೆ ಹೊಡೆತ
ಮಾರ್ಚ್ ಕೊನೆಯ ವಾರದಿಂದ ಜೂನ್ ವರೆಗೆ ಅಂತಾರಾಷ್ಟ್ರೀಯ ವಿಮಾನಗಳು ಸ್ಥಗಿತಗೊಂಡಿತ್ತು. ವಂದೇ ಭಾರತ್ ವಿಶೇಷ ವಿಮಾನ ಬಿಟ್ಟರೆ ಖಾಸಗಿ ವಿಮಾನಯಾನ ಸಾಧ್ಯವಿರಲಿಲ್ಲ. ಈ ಹಿನ್ನೆಲೆಯಲ್ಲಿ ಚಿನ್ನದ ಕಳ್ಳಸಾಗಾಣಿಕೆದಾರರಿಗೆ ಭಾರಿ ಕಾರ್ಗೋ ವಿಮಾನ ಬಳಕೆ ಸಾಧ್ಯವಿರಲಿಲ್ಲ. ದೇಶದ ಬಹುತೇಕ ನಗರಗಳಲ್ಲಿ ಆಭರಣ ಮಳಿಗೆಗಳು ಆರೋಗ್ಯ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಮುಚ್ಚಬೇಕಾಗಿತ್ತು.
ಚಿನ್ನದ ಬೇಡಿಕೆ ಕುಸಿತವಾಗಿತ್ತು
ಭಾರತದಲ್ಲಿ ಚಿನ್ನದ ಬೇಡಿಕೆ ಕುಸಿತವಾಗಿತ್ತು. ಇನ್ನು ನೇಪಾಳ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಿಂದ ರಸ್ತೆ ಹಾಗೂ ಜಲ ಮಾರ್ಗದ ಮೂಲಕ ಚಿನ್ನವನ್ನು ಸಣ್ಣ ಪ್ರಮಾಣದಲ್ಲಿ ಕಳ್ಳಸಾಗಣೆ ಮಾಡಿದರೂ ಭಾರಿ ಪ್ರಮಾಣ ಸ್ಮಗಲಿಂಗ್ ಸಾಧ್ಯವಾಗಿಲ್ಲ. ಶ್ರೀಲಂಕಾ ಇತ್ತೀಚೆಗೆ ಚಿನ್ನದ ಮೇಲಿನ ಆಮದು ಸುಂಕವನ್ನು ರದ್ದುಗೊಳಿಸಿತು. ಅಲ್ಲಿಂದ ಕಳ್ಳಸಾಗಣೆ ಮಾರ್ಗ ಮೊದಲುಗೊಂಡಿತು.
120 ಟನ್ ಕಳ್ಳಸಾಗಣೆ
ಕಳೆದ ವರ್ಷ ಕಳ್ಳಸಾಗಣೆ ಮಾಡಿದ ಚಿನ್ನದ ಪ್ರಮಾಣ 120 ಟನ್ ಎಂದು ಅಂದಾಜಿಸಲಾಗಿದೆ. ಇದು ದೇಶೀಯ ವಾರ್ಷಿಕ ನಗದು ಬೇಡಿಕೆಯ ಶೇಕಡಾ 17 ಆಗಿದೆ. ವಿಶ್ವದ ಅತಿದೊಡ್ಡ ಲಾಕ್ ಡೌನ್ ಅನ್ನು ಕಳೆದ ನಾಲ್ಕು ತಿಂಗಳಲ್ಲಿ ಭಾರತದಲ್ಲಿ ಕಾಣಲಾಗಿದೆ. ಇದು ಕಳ್ಳಸಾಗಣೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಆಭರಣ ರಾಷ್ಟ್ರೀಯ ಮಂಡಳಿಯ ಅಧ್ಯಕ್ಷ ಅನಂತ ಪದ್ಮನಾಭನ್ ಅವರು ಹೇಳುವಂತೆ, ಕಳೆದ ಆರು ತಿಂಗಳಲ್ಲಿ ಯಾವುದೇ ವಿಮಾನ ಸಂಚಾರ ಇರಲಿಲ್ಲ, ಆದ್ದರಿಂದ ಚಿನ್ನದ ಕಳ್ಳಸಾಗಣೆ ಕಡಿಮೆಯಾಗಿದೆ. ಪ್ರಸ್ತುತ ಇದು ವಿಮಾನ ನಿಲ್ದಾಣಗಳಿಂದ ಬರುತ್ತಿಲ್ಲ ಆದರೆ ಭಾರತದ ಸುತ್ತಮುತ್ತಲಿನ ದೇಶಗಳಿಂದ ಕಡಿಮೆ ಪ್ರಮಾಣದಲ್ಲಿ ಹಂತ ಹಂತವಾಗಿ ಸಾಗಣೆಯಾಗುತ್ತಿದೆ.
Recommended Video
ಹಣಕಾಸು ಸಚಿವಾಲಯದ ಅಂಕಿ ಅಂಶ
ಏಪ್ರಿಲ್ ಆರಂಭದ ಹಣಕಾಸು ವರ್ಷದಲ್ಲಿ ಭಾರತೀಯ ವಿಮಾನ ನಿಲ್ದಾಣಗಳಲ್ಲಿ ವಶಪಡಿಸಿಕೊಂಡ ಚಿನ್ನದ ಕಳ್ಳಸಾಗಣೆ ಆರು ವರ್ಷಗಳ ಕನಿಷ್ಠ 20.6 ಕೆ.ಜಿ. ಎಂದು ಹಣಕಾಸು ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಶೇಕಡಾ 12.5 ರಷ್ಟು ಆಮದು ತೆರಿಗೆ, ಸ್ಥಳೀಯ ತೆರಿಗೆ ಮತ್ತು ಹೆಚ್ಚಿನ ಬೆಲೆಗಳು ಅಕ್ರಮ ಖರೀದಿದಾರರ ಪರವಾಗಿ ತಿರುಗಿದೆ ಎನ್ನಬಹುದು. ಆಮದುಗಳನ್ನು ಕಾನೂನುಬದ್ಧಗೊಳಿಸಲು ಮತ್ತು ಅಕ್ರಮ ಚಿನ್ನವನ್ನು ನಿಗ್ರಹಿಸಲು ಆಮದು ಸುಂಕವನ್ನು ಕನಿಷ್ಠ 50 ಪ್ರತಿಶತದಷ್ಟು ಕಡಿಮೆ ಮಾಡಬೇಕು ಚಿನ್ನದ ವ್ಯಾಪಾರಿಗಳು ಮನವಿ ಮಾಡಿಕೊಂಡಿದ್ದಾರೆ. ಇತ್ತ ಭಾರತದಲ್ಲಿ ಕೂಡಿಟ್ಟ ಚಿನ್ನವನ್ನು ಕರಗಿಸಿ, ಹೂಡಿಕೆ ಮಾಡಿ ಎಂದು ಕೇಂದ್ರ ಸರ್ಕಾರ ಸಾರ್ವಜನಿಕರನ್ನು ಪ್ರೇರೇಪಿಸುತ್ತಿದೆ.