ರಕ್ಷಾ ಬಂಧನ: ಸಿಹಿತಿಂಡಿ ಉದ್ಯಮಕ್ಕೆ 5,000 ಕೋಟಿ ರೂಪಾಯಿ ನಷ್ಟ ಸಾಧ್ಯತೆ
ನವದೆಹಲಿ, ಆಗಸ್ಟ್ 03: ದೇಶಾದ್ಯಂತ ಇಂದು ಸೋಮವಾರ ಜನರು ಅಣ್ಣ-ತಂಗಿಯರ ಪವಿತ್ರ ಹಬ್ಬವಾದ ರಕ್ಷಾ ಬಂಧನದ ಸಂಭ್ರಮದಲ್ಲಿದ್ದಾರೆ. ಆಗಸ್ಟ್ 3ರಂದು ದೇಶದಲ್ಲಿ ರಾಖಿ ಹಬ್ಬವನ್ನು ಆಚರಿಸುತ್ತಿದ್ದು, ಪ್ರಧಾನಿ ಸೇರಿದಂತೆ ಅನೇಕ ಗಣ್ಯರು ಶುಭಕೋರಿದ್ದಾರೆ. ಆದರೆ ಈ ಬಾರಿಯ ರಕ್ಷಾ ಬಂಧನದಲ್ಲಿ ಸಿಹಿ ಉದ್ಯಮಕ್ಕೆ ಖಾರವಾದ ಹೊಡೆತ ಬಿದ್ದಿದೆ.
ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಈ ಬಾರಿಯ ರಕ್ಷಾ ಬಂಧನ ಹಬ್ಬದಲ್ಲಿ ದೇಶದ ಸಿಹಿತಿಂಡಿ ಉದ್ಯಮವು 5,000 ಕೋಟಿ ರೂಪಾಯಿ ನಷ್ಟ ಅನುಭವಿಸಿರಬಹುದು ಎಂದು ಸಿಹಿ ತಯಾರಕರ ರಾಷ್ಟ್ರೀಯ ಒಕ್ಕೂಟ ತಿಳಿಸಿದೆ.
ಕೊರೊನಾ ಎಫೆಕ್ಟ್: ರೈಲ್ವೇಸ್ಗೆ 35,000 ಕೋಟಿ ರೂಪಾಯಿ ನಷ್ಟ ಸಾಧ್ಯತೆ
ದೇಶದಲ್ಲಿ ಅನೇಕ ರಾಜ್ಯಗಳು ಕೊರೊನಾದಿಂದಾಗಿ ಲಾಕ್ಡೌನ್ ಸೇರಿದಂತೆ ಅನೇಕ ಸುರಕ್ಷತಾ ಮಾರ್ಗಸೂಚಿಗಳನ್ನು ಹೊಂದಿವೆ. ಇದರಿಂದಾಗಿ ಸಿಹಿತಿಂಡಿಗಳ ಮಾರಾಟದ ಮೇಲೂ ಪ್ರಭಾವ ಬೀರಿದ್ದು ಸಿಹಿತಿಂಡಿ ಉದ್ಯಮಕ್ಕೆ 5,000 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ.
ಫೆಡರೇಶನ್ ಆಫ್ ಸ್ವೀಟ್ಸ್ ಮತ್ತು ನಮ್ಕೀನ್ ತಯಾರಕರ ನಿರ್ದೇಶಕ ಫಿರೋಜ್ ಹೆಚ್. ನಖ್ವಿ ಪಿಟಿಐಗೆ ತಿಳಿಸಿದ್ದು, "ಕಳೆದ ವರ್ಷ ರಕ್ಷಾ ಬಂಧನದಲ್ಲಿ ದೇಶಾದ್ಯಂತ ಸುಮಾರು 10,000 ಕೋಟಿ ರೂ. ಮೌಲ್ಯದ ಸಿಹಿತಿಂಡಿ ಮಾರಾಟವಾಗಿತ್ತು. ಆದರೆ ಈ ಬಾರಿ ಇದು 5,000 ಕೋಟಿ ರೂ. ಇಳಿಯುವ ಸಾಧ್ಯತೆ ಇದೆ'' ಎಂದಿದ್ದಾರೆ.
"ಕೋವಿಡ್ -19 ರಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಗ್ರಾಹಕರ ಖರೀದಿ ಸಾಮರ್ಥ್ಯವು ಈಗಾಗಲೇ ಪರಿಣಾಮ ಬೀರಿದೆ. ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಶನಿವಾರ ಸಿಹಿ ಅಂಗಡಿಗಳನ್ನು ತೆರೆಯುವ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ರಕ್ಷಾ ಬಂಧನ್ಗೆ (ಸೋಮವಾರ) ಸ್ವಲ್ಪ ಮುಂಚಿತವಾಗಿ ಭಾನುವಾರ ಬೀಳುತ್ತದೆ. ಇದರ ಪರಿಣಾಮವಾಗಿ, ಹಬ್ಬದ ಬೇಡಿಕೆಯನ್ನು ಪೂರೈಸಲು ಸಿಹಿತಿಂಡಿಗಳನ್ನು ತಯಾರಿಸಲು ಮತ್ತು ಸಮರ್ಪಕವಾಗಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ. " ಎಂದು ಫಿರೋಜ್ ಹೆಚ್. ನಖ್ವಿ ಹೇಳಿದ್ದಾರೆ.
ಒಂದು ಅಂದಾಜಿನ ಪ್ರಕಾರ, ರಕ್ಷಾ ಬಂಧನ್ನಿಂದ ಜನ್ಮಾಷ್ಟಮಿಯವರೆಗಿನ ಸಿಹಿತಿಂಡಿ ವ್ಯವಹಾರವು ವಾರ್ಷಿಕ ಒಟ್ಟು ಮಾರಾಟದಲ್ಲಿ ಶೇಕಡಾ 25 ರಷ್ಟಿದೆ ಎಂದು ನಖ್ವಿ ಹೇಳಿದರು.