ಸೈರಸ್ ಮಿಸ್ತ್ರಿ ವಿರುದ್ಧ 500 ಕೋಟಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ
ಮುಂಬೈ, ಜುಲೈ 4: ಟಾಟಾ ಗ್ರೂಪ್ ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಹಾಗೂ ಅವರ ಸೋದರ ಶಾಪೂರ್ ಮಿಸ್ತ್ರಿ ವಿರುದ್ಧ ಟಾಟಾ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ವೆಂಕಟರಮಣನ್ ರಾಮಚಂದ್ರನ್ ರ ಐನೂರು ಕೋಟಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ಅರ್ಜಿಯನ್ನು ಮುಂಬೈ ಕೋರ್ಟ್ ಮಂಗಳವಾರ ಸ್ವೀಕರಿಸಿದೆ.
ಟಾಟಾ ಸನ್ಸ್ ನಿರ್ದೇಶಕ ಸ್ಥಾನದಿಂದಲೂ ಸೈರಸ್ ಮಿಸ್ತ್ರಿ ಔಟ್!
ನಷ್ಟ ಪರಿಹಾರವಾಗಿ ಐನೂರು ಕೋಟಿ ಮತ್ತು ಬೇಷರತ್ ಕ್ಷಮೆ ಯಾಚಿಸಬೇಕು ಎಂದು ದಾವೆ ಹೂಡಿದ್ದಾರೆ. ಮಿಸ್ತ್ರಿ ಮತ್ತು ಇತರರು ನನ್ನ ವಿರುದ್ಧ ತಪ್ಪಾದ ಹೇಳಿಕೆಗಳನ್ನು ಕೊಟ್ಟಿದ್ದಾರೆ. ವರ್ಚಸ್ಸಿಗೆ ಧಕ್ಕೆಯಾಗುವಂತೆ ಮಾಡಿದ್ದಾರೆ ಎಂದು ವೆಂಕಟರಮಣನ್ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಆರೋಪಿ ಸ್ಥಾನದಲ್ಲಿರುವ ಸೈರಸ್ ಮಿಸ್ತ್ರಿ ಮತ್ತಿತರರಿಗೆ ನೋಟಿಸ್ ಹೊರಡಿಸುವಂತೆ ನ್ಯಾ. ಕೃಷ್ಣ ಪಲ್ದೇವಾರ್ ಆದೇಶ ಮಾಡಿದ್ದಾರೆ. ಕೋರ್ಟ್ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ.
ಕಳೆದ ವರ್ಷದ ಅಕ್ಟೋಬರ್ ನಲ್ಲಿ ಸೈರಸ್ ಮಿಸ್ತ್ರಿ ಅವರು ಟಾಟಾ ಸನ್ಸ್ ನ ನಿರ್ದೇಶಕರು, ಟಾಟಾ ಟ್ರಸ್ಟ್ ನ ಟ್ರಸ್ಟಿಗಳಿಗೆ ಕಳುಹಿಸಿದ್ದ ಇ ಮೇಲ್ ನಲ್ಲಿ ವೆಂಕಟರಮಣನ್ ವಿರುದ್ಧ ವಂಚನೆಯ ಆರೋಪ ಮಾಡಿದ್ದರು.
ಮಿಸ್ತ್ರಿ ಮತ್ತು ಸಹೋದರರು ಟಾಟಾ ಸನ್ಸ್ ನಲ್ಲಿ ಶೇ ಹದಿನೆಂಟರಷ್ಟು ಪಾಲುದಾರಿಕೆ ಹೊಂದಿದ್ದಾರೆ. ಈ ಪ್ರಕರಣದ ವಿರುದ್ಧ ಹೈ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಗಳಿವೆ.