ಈರುಳ್ಳಿ ಆಯ್ತು, ಈಗ ಅಡುಗೆ ಎಣ್ಣೆ ಬೆಲೆ ಹೆಚ್ಚಳದ ಸರದಿ
ನವದೆಹಲಿ, ಡಿಸೆಂಬರ್ 21: ಆಹಾರ ಪದಾರ್ಥಗಳ ಸತತ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರ ಮೇಲೆ ಅಡುಗೆ ಎಣ್ಣೆಯ ಬಿಸಿಯೂ ಬಿದ್ದಿದೆ! ಈರುಳ್ಳಿ ಮತ್ತು ಬೆಳ್ಳುಳ್ಳಿಯ ನಂತರ ಖಾದ್ಯ ತೈಲಗಳ ದರದಲ್ಲಿ ಹೆಚ್ಚಳವಾಗಿದೆ. ಆಮದು ವೆಚ್ಚದಲ್ಲಿನ ಏರಿಕೆಯು ಗ್ರಾಹಕರ ಮೇಲಿನ ಹೊರೆಯನ್ನು ಹೆಚ್ಚಿಸಿದೆ.
ದಿನ ಬಳಕೆಯ ಅಡುಗೆ ಎಣ್ಣೆಯ ಬೆಲೆಯಲ್ಲಿ ಕೊಂಚ ಏರಿಕೆಯಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ತಾಳೆ ಎಣ್ಣೆ ಬೆಲೆ ಕಳೆದ ಎರಡು ತಿಂಗಳಲ್ಲಿ ಲೀಟರ್ಗೆ 20 ರೂ.ದಷ್ಟು (ಶೇ 35ಕ್ಕಿಂತ ಹೆಚ್ಚ) ಭಾರಿ ಹೆಚ್ಚಳವಾಗಿದೆ. ತಾಳೆ ಎಣ್ಣೆ ದರದಲ್ಲಿ ಹೆಚ್ಚಳವು ಇತರೆ ಖಾದ್ಯ ತೈಲಗಳ ಬೆಲೆ ಹೆಚ್ಚಳಕ್ಕೂ ಕಾರಣವಾಗಿದೆ ಎಂದು ಐಎಎನ್ಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಈರುಳ್ಳಿ ಆಯ್ತು ಈಗ ಎಲ್ಲಾ ತರಕಾರಿ ಬೆಲೆ ದುಬಾರಿ
'ಕಳೆದ ಎರಡು ತಿಂಗಳಿನಲ್ಲಿ ತಾಳೆ ಎಣ್ಣೆ ಬೆಲೆ ಹೆಚ್ಚಳದ ಬಳಿಕ ಎಲ್ಲ ಖಾದ್ಯ ತೈಲಗಳ ದರದಲ್ಲಿಯೂ ಏರಿಕೆಯಾಗಿದೆ. ಮಲೇಷ್ಯಾ ಮತ್ತು ಇಂಡೋನೇಷ್ಯಾದಿಂದ ಆಮದು ಮಾಡಿಕೊಳ್ಳುವ ವೆಚ್ಚವು ತುಟ್ಟಿಯಾಗಿದೆ. ಖಾದ್ಯ ತೈಲಗಳ ಬೆಲೆ ಮತ್ತಷ್ಟು ಗಗನಮುಖಿಯಾಗುವ ಸಾಧ್ಯತೆ ಇದೆ' ಎಂದು ತೈಲ-ತೈಲ ಬೀಜ ಮಾರುಕಟ್ಟೆ ಪರಿಣತ ಸಲೀಲ್ ಜೈನ್ ತಿಳಿಸಿದ್ದಾರೆ.
ರೈತರಿಗೆ ಉತ್ತಮ ಬೆಳೆ ಸಿಗಬೇಕಿದೆ
ಇಡೀ ದೇಶಕ್ಕೆ ಸಾಕಷ್ಟು ಪ್ರಮಾಣದಲ್ಲಿ ಖಾದ್ಯ ತೈಲಗಳ ಉತ್ಪಾದನೆ ಮಾಡುವಷ್ಟು ಭಾರತ ಸ್ವಾವಲಂಬಿಯಾಗಬೇಕೆಂದರೆ ರೈತರಿಗೆ ತಮ್ಮ ಬೆಳೆಗಳಿಗೆ ಉತ್ತಮ ಬೆಲೆ ಪಡೆದುಕೊಳ್ಳಬೇಕಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಆಮದು ದುಬಾರಿಯಾಗುತ್ತಿರುವುದರಿಂದ ಖಾದ್ಯ ತೈಲಗಳ ಬೆಲೆ ಭಾರತದಲ್ಲಿ ಹೆಚ್ಚಾಗುತ್ತಿದೆ. ರೈತರಿಗೆ ಅಧಿಕ ಬೆಲೆಯ ಎಣ್ಣೆಬೀಜಗಳು ಸಿಗುತ್ತಿವೆ. ಇದು ಅವರಿಗೆ ಅವುಗಳನ್ನು ಬೆಲೆಯಲು ಉತ್ತೇಜನ ನೀಡಲಿವೆ ಎಂದು ಸೋಲ್ವೆಂಟ್ ಎಕ್ಸ್ಟ್ರಾಕ್ಟರ್ಸ್ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಬಿವಿ ಮೆಹ್ತಾ ಹೇಳಿದರು.
ಅತಿ ದೊಡ್ಡ ಖಾದ್ಯ ತೈಲ ಆಮದುದಾರ
ಭಾರತವು ಜಗತ್ತಿನ ಅತ್ಯಂತ ದೊಡ್ಡ ಅಡುಗೆ ಎಣ್ಣೆ ಆಮದುದಾರ ದೇಶವಾಗಿದೆ. ದೇಶಕ್ಕೆ ಅಗತ್ಯವಾಗಿರುವ ಹೆಚ್ಚಿನ ಪಾಲು ಅಡುಗೆ ಅನಿಲ ಆಮದು ಮೂಲಕವೇ ಸಿಗುತ್ತಿದೆ. ಈ ಬಾರಿ ಮುಂಗಾರು ಅಧಿಕ ಪ್ರಮಾಣದಲ್ಲಿ ಸುರಿದು ಸೋಯಾಬೀನ್ ಬೆಳೆ ಅಧಿಕ ಮಟ್ಟದಲ್ಲಿ ಹಾನಿಯಾಗಿರುವುದರಿಂದ ಮತ್ತು ಈ ವರ್ಷ ಬಿತ್ತನೆ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ಖಾದ್ಯ ತೈಲ ಆಮದಿನ ಮೇಲಿನ ಅವಲಂಬನೆ ಮತಷ್ಟು ಹೆಚ್ಚಲಿದೆ.
ಅಂತೂ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಈರುಳ್ಳಿ!
ಬಳಕೆ ಹೆಚ್ಚಳ ಸಾಧ್ಯತೆ
ಅರ್ಜೆಂಟೀನಾ ಸೋಯಾ ತೈಲದ ರಫ್ತು ಸುಂಕವನ್ನು ಹೆಚ್ಚಿಸಿರುವುದು ಭಾರತದಲ್ಲಿ ಸೋಯಾ ಎಣ್ಣೆ ದರ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಅರ್ಜೆಂಟೀನಾ ರಫ್ತು ಸುಂಕವನ್ನು ಶೇ 25ರಿಂದ ಶೇ 30ಕ್ಕೆ ಹೆಚ್ಚಿಸಿದೆ. ಇನ್ನೊಂದೆಡೆ ಮಲೇಷ್ಯಾದಲ್ಲಿ ಬಿ-20 ಜೈವಿಕ ಡೀಸೆಲ್ ಕಾರ್ಯಕ್ರಮ ಮತ್ತು ಇಂಡೋನೇಷ್ಯಾದಲ್ಲಿ ಬಿ-30 ಜೈವಿಕ ಡೀಸೆಲ್ ಕಾರ್ಯಕ್ರಮವನ್ನು ಮುಂದಿನ ವರ್ಷ ಜಾರಿಗೊಳಿಸುವುದರಿಂದ ಈ ದೇಶಗಳಲ್ಲಿ ತಾಳೆ ಎಣ್ಣೆ ಬಳಕೆ ಹೆಚ್ಚುವ ಸಾಧ್ಯತೆ ಇದೆ.
ಶೇ 18ರಷ್ಟು ಉತ್ಪಾದನೆ ಕುಸಿತ
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಕಳೆದ ವಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಪ್ರಸಕ್ತ ವರ್ಷ 68.24 ಲಕ್ಷ ಹೆಕ್ಟೇರ್ನಷ್ಟು ಖಾದ್ಯತೈಲ ಬೀಜ ಬಿತ್ತನೆ ನಡೆಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು 2.47 ಲಕ್ಷ ಹೆಕ್ಟೇರ್ನಷ್ಟು ಕಡಿಮೆಯಾಗಿದೆ. ಹಾಗೆಯೆ ಕಳೆದ ವರ್ಷಕ್ಕೆ ಹೋಲಿಸಿದರೆ ದೇಶದಲ್ಲಿ ಸೋಯಾಬೀನ್ ಉತ್ಪಾದನೆಯು ಶೇ 18ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.