ವಿವಾದಿತ ಉದ್ಯಮಿ ಮಲ್ಯ ಕುರಿತು ಬರಲಿದೆ ಸಿನಿಮಾ: ನಿರ್ಮಾಪಕರೂ ವಿವಾದಿತರೇ!
ಮುಂಬೈ, ಮೇ 29: ಬ್ಯಾಂಕುಗಳಿಗೆ ವಂಚಿಸಿ ಬ್ರಿಟನ್ಗೆ ಪರಾರಿಯಾದ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಕುರಿತು ಸಿನಿಮಾ ಮಾಡುವುದಾಗಿ ಕೇಂದ್ರ ಸಿನಿಮಾ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ) ಮಾಜಿ ಅಧ್ಯಕ್ಷ ಪಹ್ಲಜ್ ನಿಹಲಾನಿ ಹೇಳಿದ್ದಾರೆ.
ಸಿಬಿಎಫ್ಸಿ ಅಧ್ಯಕ್ಷರಾಗಿದ್ದಾಗ ಅಶ್ಲೀಲತೆಯ ನೆಪವೊಡ್ಡಿ ಸಿನಿಮಾಗಳ ದೃಶ್ಯಗಳಿಗೆ ಕತ್ತರಿ ಹಾಕುವ ತಮ್ಮ ವಿವಾದಾತ್ಮಕ ನಿರ್ಧಾರಗಳಿಂದ ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಪಹ್ಲಜ್ ನಿಹಲಾನಿ ಅವರು ಈ ಹೇಳಿಕೆಯಿಂದ ಎಲ್ಲ ಹುಬ್ಬೇರುವಂತೆ ಮಾಡಿದ್ದಾರೆ.
ಬೆಂಗಳೂರು ಸೇರಿ 6 ನಗರದಲ್ಲಿ ಏರ್ ಏಷಿಯಾ ಕಚೇರಿ ಮೇಲೆ ಸಿಬಿಐ ದಾಳಿ
ಸಿನಿಮಾ ನಿರ್ಮಾಪಕರಾಗಿ ಮೊದಲು ಗುರುತಿಸಿಕೊಂಡಿದ್ದ ನಿಹಲಾನಿ ಅವರು, ಮಲ್ಯ ಬದುಕಿನ ಕುರಿತ ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ. ಅದಕ್ಕೆ 'ರಂಗೀಲಾ ರಾಜಾ' ಎಂದು ಹೆಸರಿಡಲಾಗಿದೆ.
ವಿಜಯ್ ಮಲ್ಯ ಅವರ ಪಾತ್ರಕ್ಕೆ ನಟ ಗೋವಿಂದ ಅವರನ್ನು ಆಯ್ಕೆ ಮಾಡಲಾಗಿದೆ. ಸುಮಾರು 27 ವರ್ಷಗಳ ಬಳಿಕ ಗೋವಿಂದ-ನಿಹಲಾನಿ ಜೋಡಿ ಒಂದಾಗಿದೆ.
1991ರಲ್ಲಿ ನಿಹಲಾನಿ ನಿರ್ಮಾಣದ ಶೋಲಾ ಔರ್ ಶಬ್ನಮ್ ಚಿತ್ರದಲ್ಲಿ ಗೋವಿಂದ ನಟಿಸಿದ್ದರು. ನಂತರ ಆಂಖೇನ್ ಚಿತ್ರದಲ್ಲಿಯೂ ಗೋವಿಂದ ನಟಿಸಿದ್ದರು.
ಗೋವಿಂದ ಅವರ ಹೊಸ ಅವತಾರ ಕಂಡು ಅಭಿಮಾನಿಗಳು ಅಚ್ಚರಿ ಪಡಲಿದ್ದಾರೆ ಎಂದಿರುವ ನಿಹಲಾನಿ, ಸಿನಿಮಾ ಆಗಸ್ಟ್ನಲ್ಲಿ ಸೆಟ್ಟೇರಲಿದೆ ಎಂದು ಮಾಹಿತಿ ನೀಡಿದ್ದಾರೆ.