ಆರ್ಥಿಕತೆಗೆ ಆಹಾರ ಪದಾರ್ಥ ಬೆಲೆ ಏರಿಕೆ ಬಿಸಿ; 14 ತಿಂಗಳ ಗರಿಷ್ಠ ಮಟ್ಟ 3.9%
ನವದೆಹಲಿ, ಅಕ್ಟೋಬರ್ 14: ಕಳೆದ ಕೆಲವು ತಿಂಗಳಿಂದ ಗ್ರಾಹಕ ದರ ಹಣದುಬ್ಬರ (ಸಿಪಿಐ) ಚಿಂತೆ ಮಾಡುವಂತೆ ಇರಲಿಲ್ಲ. ಆದರೆ ಅಂತಿಮವಾಗಿ ಅದು ಕೂಡ ಬಿಸಿ ಏರತೊಡಗಿದೆ. ಸೆಪ್ಟೆಂಬರ್ ತಿಂಗಳ ದರವು ಹದಿನಾಲ್ಕು ತಿಂಗಳ ಗರಿಷ್ಠ ಮಟ್ಟವಾದ 3.9% ತಲುಪಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆ ಹಾಗೂ ಇತರ ಮೂಲ ಅಂಶಗಳ ನಕಾರಾತ್ಮಕ ಕಾರಣಗಳಿಗೆ ಈ ಪರಿಸ್ಥಿತಿ ನಿರ್ಮಾಣ ಆಗಿದೆ.
ಆಹಾರ ಬೆಲೆ ಸೂಚ್ಯಂಕವು ಅಪಾಯಕಾರಿ ಮಟ್ಟ ಎನಿಸುವ 5.11 ಪರ್ಸೆಂಟ್ ನಲ್ಲಿದೆ. ಆಗಸ್ಟ್ ನಲ್ಲಿ ಇದು 2.99 ಪರ್ಸೆಂಟ್ ಇತ್ತು. ಈ ಅನಿರೀಕ್ಷಿತವಾದ ಏರಿಕೆಯಲ್ಲಿ ತರಕಾರಿ ಬೆಲೆಯೇ ಪ್ರಮುಖ ಪಾತ್ರ ವಹಿಸಿದ್ದು, 15.4 ಪರ್ಸೆಂಟ್ ತರಕಾರಿಗಳ ಬೆಲೆ ಏರಿದೆ. ಈಗ 3.9 ಪರ್ಸೆಂಟ್ ತಲುಪಿರುವ ಹಣದುಬ್ಬರ ಪ್ರಮಾಣವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗುರಿ 4 ಪರ್ಸೆಂಟ್ ಗೆ ತೀರಾ ಸಮೀಪದಲ್ಲಿ ಇದೆ.
ಆರ್ಥಿಕ ಕುಸಿತ: ಕೇಂದ್ರದ ವಿರುದ್ಧ ಹರಿಹಾಯ್ದ ನಿರ್ಮಲಾ ಪತಿ
ಆ ಗುರಿಗಿಂತ ಕಡಿಮೆ ಎಂದು ಸತತ 14ನೇ ತಿಂಗಳು ದಾಖಲಾಗಿದೆ. ಆದರೆ ಹಣದುಬ್ಬರವು ಕಳೆದ ಆಗಸ್ಟ್ ನಲ್ಲಿ 3.28% ಇತ್ತು. ಇನ್ನು ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ 3.7 ಪರ್ಸೆಂಟ್ ಇತ್ತು. ಈ ಸೆಪ್ಟೆಂಬರ್ ತಿಂಗಳ ಬೆಲೆ ಏರಿಕೆ ಈಗಲೂ ಆರ್ ಬಿಐನ ಪರಿಷ್ಕೃತ ಹಣದುಬ್ಬರ ಲೆಕ್ಕಾಚಾರದ ಒಳಗೇ ಇದೆ. ಇನ್ನಷ್ಟು ದರ ಕಡಿತ ಮಾಡುವುದಕ್ಕೆ ಕಾರಣವೂ ಆಗಿದೆ.
ಕೃಷಿ ಉತ್ಪನ್ನಗಳ ಪೂರೈಕೆಯಲ್ಲಿ ಆಗಿರುವ ಸಮಸ್ಯೆಯೇ ಈಗಿನ ಸ್ಥಿತಿಗೆ ಕಾರಣ ಎನ್ನಲಾಗುತ್ತಿದೆ. ಮಳೆಯಿಂದ ಪೂರೈಕೆಯಲ್ಲಿ ವ್ಯತ್ಯಯ ಆಗಿ, ಕಳೆದ ತಿಂಗಳು ಈರುಳ್ಳಿಯ ಬೆಲೆಯಲ್ಲಿ ಐವತ್ನಾಲ್ಕು ಪರ್ಸೆಂಟ್ ಏರಿಕೆ ಆಗಿತ್ತು. ಆದರೆ ಟೊಮೆಟೊ ಬೆಲೆಯಲ್ಲಿ ಹತ್ತೊಂಬತ್ತು ಪರ್ಸೆಂಟ್ ಇಳಿಕೆಯಾಗಿ ಸರಿದೂಗಲು ಸಾಧ್ಯವಾಗಿತ್ತು.
ಆಹಾರ, ತೈಲ ಬೆಲೆ ಏರಿಕೆ ಪರಿಣಾಮವು ಸಿಪಿಐ ಏರಿಕೆಗೆ ಕಾರಣವಾಗಿದೆ. ವಿಪರೀತ ಮಳೆ ಹಾಗೂ ಸರಿಯಾದ ಸಮಯಕ್ಕೆ ಆಗದ ಮಳೆಯಿಂದಾಗಿ ಈರುಳ್ಳಿ ಮತ್ತು ಟೊಮೆಟೊ ಬೆಲೆ ಗಗನಕ್ಕೆ ಏರಿತು. ಆಹಾರ ಬೆಲೆ ಏರಿಕೆ ಆದರೂ ಆರ್ ಬಿಐನ ಮಧ್ಯಮಾವಧಿ ಗುರಿಗಿಂತ ಕೆಳಗಿನ ಮಟ್ಟದಲ್ಲೇ ಇದೆ.