ದಾವೋಸ್ ನಲ್ಲಿ ಹೂಡಿಕೆದಾರರ ಅಕರ್ಷಿಸಲು ಯಡಿಯೂರಪ್ಪ ಸಜ್ಜು
Recommended Video
ಬೆಂಗಳೂರು, ಜನವರಿ 17: ಸಾರ್ವಜನಿಕ - ಖಾಸಗಿ ಸಹಭಾಗಿತ್ವದ ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್ ಎಕಾನಾಮಿಕ್ ಫೋರಂ) ಸ್ವಿಜರ್ ಲ್ಯಾಂಡ್ನ ದಾವೋಸ್ ನಲ್ಲಿ ಜನವರಿ 20 ರಿಂದ 24 ರವರೆಗೆ ಜಾಗತಿಕ ಮಟ್ಟದ ಅದ್ಧೂರಿ ಸಮಾವೇಶ ಆಯೋಜಿಸಿದ್ದು, ಈ ಸಮಾರಂಭಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಭಾಗವಹಿಸಲಿದ್ದೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಇಂದು ಉದ್ಯೋಗ ಮಿತ್ರ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ನಡೆಯಲಿರುವ ಈ ಸಮಾವೇಶದಲ್ಲಿ ಭಾಗವಹಿಸಲು ಆಹ್ವಾನ ಬಂದಿದೆ. ನಮ್ಮ ರಾಜ್ಯದಲ್ಲಿ ಕೈಗಾರಿಕಾ ಹೂಡಿಕೆಗೆ ಇರುವ ವಿಫುಲ ಅವಕಾಶಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ನಮಗೆ ಉತ್ತಮ ವೇದಿಕೆ ಸಿಕ್ಕಿದಂತಾಗಿದೆ. ಈ ಸಮಾವೇಶದಲ್ಲಿ ಉದ್ಯಮಿಗಳು, ವಾಣಿಜ್ಯೋದ್ಯಮಿಗಳು ಭಾಗವಹಿಸಲಿದ್ದಾರೆ.
ಈ ಹಿನ್ನಲೆಯಲ್ಲಿ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳಾದ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಐಟಿ & ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಮತ್ತು ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ತೆರಳಲಿದ್ದಾರೆ ಎಂದು ಹೇಳಿದರು.
ದಾವೋಸ್ ನಲ್ಲಿ ಕರ್ನಾಟಕ ಪೆವಿಲಿಯನ್
ಜನವರಿ 20 ರಂದು ದಾವೋಸ್ ನಲ್ಲಿ ಕರ್ನಾಟಕ ಪೆವಿಲಿಯನ್ ನ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಮಾವೇಶದಲ್ಲಿ 40 ಕ್ಕೂ ಹೆಚ್ಚು ಸಭೆಗಳು ನಡೆಯಲಿದ್ದು, ಮುಖ್ಯ ಸಮಾರಂಭದಲ್ಲಿ ಯಡಿಯೂರಪ್ಪ ಅವರು ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
40 ಕ್ಕೂ ಹೆಚ್ಚು ಜಾಗತಿಕ ಮಟ್ಟದ ಕಂಪನಿಗಳ ಜತೆಯಲ್ಲಿ ಯಡಿಯೂರಪ್ಪ ಅವರು ಪ್ರತ್ಯೇಕವಾಗಿ ಮಾತುಕತೆ ನಡೆಸಲು ಸಭೆ ನಿಗದಿಯಾಗಿದ್ದು,ಪ್ರಮುಖವಾಗಿ ಲಾಕ್ ಹೀಡ್ ಮಾರ್ಟಿನ್, ಲುಲು ಗ್ರೂಪ್, ಡಸಾಲ್ಟ್ ಸಿಸ್ಟಮ್ಸ್, ಎಚ್ ಪಿ, ಎಸ್ ಎಪಿ, ಮಿತ್ಸುಬಿಷಿ, ಜಿಇ, ನೋವಾ ನೊರ್ಡಿಸ್ಕ್, ಡೆನ್ಸೊ, ಅದಾನಿ, ಪಿ&ಜಿ, ಐಕೆಇಎ, ವೋಲ್ವೋ ಮತ್ತಿತರ ಕಂಪನಿಗಳೊಂದಿಗೆ ಸಭೆ ನಡೆಸಿ ಕರ್ನಾಟಕ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಲಾಗುವುದು ಎಂದರು.
ಜಿಮ್ ಕರ್ಟನ್ ರೈಸರ್
ವಿಶ್ವಾದ್ಯಂತ ಉದ್ದಿಮೆದಾರರು ಆಗಮಿಸುವ ಈ ಸಮಾವೇಶದಲ್ಲಿಯೇ ಜ.22 ರಂದು ಜಾಗತಿಕ ಹೂಡಿಕೆದಾರರ ಸಮಾವೇಶ (ಜಿಮ್) ಕರ್ಟನ್ ರೈಸರ್ ನೆರವೇರಿಸಲು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. 2020 ರ ನವೆಂಬರ್ 3 ರಿಂದ 5 ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ 2020 "ಜಾಗತಿಕ ಹೂಡಿಕೆದಾರರ ಸಮಾವೇಶ"ದ ಘೋಷಣೆ ಮಾಡಲಾಗುತ್ತದೆ. ಜೊತೆಗೆ, ಇನ್ವೆಸ್ಟ್ ಕರ್ನಾಟಕದಲ್ಲಿ ಭಾಗವಹಿಸುವಂತೆ ಪ್ರಮುಖ ನಾಯಕರು ಮತ್ತು ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸಲಾಗುವುದು. ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಆಹ್ವಾನಿಸಲು ಉತ್ತಮ ವೇದಿಕೆ ಇದಾಗಲಿದೆ ಎಂದರು.
ನವೆಂಬರ್ನಲ್ಲಿ ನಡೆಯುವ ಗ್ಲೋಬಲ್ ಇನ್ವೆಸ್ಟರ್ ಮೀಟ್ ಸಮಾರಂಭ ಉದ್ಘಾಟನೆಗೆ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುತ್ತಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.
ಟೂ ಟಯರ್ ಸಿಟಿಗೆ ಆದ್ಯತೆ;
ಬೆಂಗಳೂರು ಹೊರತು ಪಡಿಸಿ ಟೂ ಟಯರ್ ಸಿಟಿಗಳಲ್ಲಿ ಹೂಡಿಕೆಗೆ ವಿಫುಲ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಫೆಬ್ರವರಿ 14 ರಂದು ಹುಬ್ಬಳ್ಳಿಯಲ್ಲಿ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ ಆಯೋಜಿಸಲಾಗಿದೆ. ಇದರ ಭಾಗವಾಗಿ ಹೈದರಾಬಾದ್ನಲ್ಲಿ ಜನವರಿ 29 ರಂದು ರೋಡ್ ಶೋ ಹಮ್ಮಿಕೊಳ್ಳುವ ಮೂಲಕ ರಾಜ್ಯದ ಟೂ ಟಯರ್ ಸಿಟಿಗಳಲ್ಲಿ ಹೂಡಿಕೆಗೆ ಗೆ ಆಹ್ವಾನಿಸಲಾಗುತ್ತಿದೆ. ಇತ್ತೀಚೆಗೆ ಮುಂಬೈನಲ್ಲಿ ರೋಡ್ ಶೋ ನಡೆಸಿ ಕೆಲ ದೊಡ್ಡ ಉದ್ದಿಮೆದಾರರನ್ನು ಆಹ್ವಾನಿಸಿದ್ದೇವೆ. ಹುಬ್ಬಳ್ಳಿ ಸಮಾವೇಶಕ್ಕೆ ಆಗಮಿಸುವುದಾಗಿ ತಿಳಿಸಿದ್ದಾರೆ ಎಂದು ವಿವರಿಸಿದರು.
ನೂತನ ಕೈಗಾರಿಕಾ ನೀತಿ
ಇದರ ಜೊತೆಗೆ ನೂತನ ಕೈಗಾರಿಕಾ ನೀತಿ ಸಿದ್ಧವಾಗುತ್ತಿದೆ. ಇದೆ ಕರಡು ಪ್ರತಿ ಸಿದ್ಧವಾಗಿ ಇತರೆ ಇಲಾಖೆಗಳಿಂದ ಅಭಿಪ್ರಾಯ ಸಂಗ್ರಹದ ಬಳಿಕ ಕ್ಯಾಬಿನೆಟ್ನಲ್ಲಿ ಒಪ್ಪಿಗೆ ಪಡೆದುಕೊಳ್ಳಲಾಗುವುದು ಎಂದರು.
ಕೈಗಾರಿಕೆಗಳಿಗೆ ಪ್ರತ್ಯೇಕ ತೆರಿಗೆ ನೀತಿ ತರಲು ಚಿಂತಿಸಲಾಗಿದೆ. ಕೈಗಾರಿಕಗಳಿಗೆ ವಾಣಿಜ್ಯ ಅಥವಾ ರೆಸಿಡೆನ್ಸಿಯಲ್ ತೆರಿಗೆ ಈ ಎರಡರಲ್ಲಿ ಯಾವ ತೆರಿಗೆ ವಿಧಿಸಬೇಕು ಎಂಬ ಗೊಂದಲವಿದೆ. ಈ ಗೊಂದಲ ನಿವಾರಣೆಗೆ ಏಕ ರೂಪದ ತೆರಿಗೆ ನಿಗದಿ ಮಾಡಲು ಸಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.