ಹೂಡಿಕೆ ಹಿಂತೆಗೆತ ಅಥವಾ ಮುಚ್ಚುವುದು: ಏರ್ ಇಂಡಿಯಾಕ್ಕೆ ಎರಡೇ ಆಯ್ಕೆ ಎಂದ ಸರ್ಕಾರ
ನವದೆಹಲಿ, ಮಾರ್ಚ್ 27: ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾವನ್ನು ಸಂಪೂರ್ಣವಾಗಿ ಖಾಸಗಿಗೆ ವಹಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ. ಏರ್ ಇಂಡಿಯಾದಿಂದ ಶೇ 100ರಷ್ಟು ಹೂಡಿಕೆ ಹಿಂತೆಗೆಯಲಾಗುವುದು ಮತ್ತು ಅದು ಹೊಸ ಆಸರೆಯನ್ನು ಹುಡುಕಿಕೊಳ್ಳುವುದು ಅನಿವಾರ್ಯ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಪುರಿ ತಿಳಿಸಿದ್ದಾರೆ. ಸಾಲದ ಸುಳಿಯಲ್ಲಿರುವ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಹೂಡಿಕೆ ಹಿಂತೆಗೆಯುವ ಪ್ರಕ್ರಿಯೆ ಆರಂಭವಾಗಿದ್ದು, ಬಿಡ್ಗಳನ್ನು ಸಲ್ಲಿಸಲು ಆಸಕ್ತ ಖರೀದಿದಾರರಿಗೆ 64 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
'ಏರ್ ಇಂಡಿಯಾವನ್ನು ಶೇ 100ರಷ್ಟು ಬಂಡವಾಳ ಹಿಂತೆಗೆತಕ್ಕೆ ನಾವು ನಿರ್ಧರಿಸಿದ್ದೇವೆ. ಬಂಡವಾಳ ಹಿಂತೆಗೆಯ ಅಥವಾ ಹೂಡಿಕೆ ವಾಪಸ್ ಪಡೆಯದಿರುವ ನಡುವೆ ನಾವು ಆಯ್ಕೆ ಮಾಡುತ್ತಿಲ್ಲ. ಅದು ಹೂಡಿಕೆ ಹಿಂತೆಗೆತ ಮತ್ತು ಸಂಪೂರ್ಣ ಸ್ಥಗಿತಗೊಳಿಸುವುದರ ನಡುವೆ ಇದೆ. ಏರ್ ಇಂಡಿಯಾವು ಅತ್ಯುತ್ತಮ ಗುಣಮಟ್ಟದ ಆಸ್ತಿ. ಆದರೆ ಅದಕ್ಕೆ 60,000 ಕೋಟಿ ರೂ ಸಾಲದ ಹೊರೆ ಇದೆ. ಅದನ್ನು ಸಾಲದಿಂದ ಮುಕ್ತಗೊಳಿಸಿ ಸ್ವಚ್ಛಗೊಳಿಸಬೇಕಿದೆ. ಅದು ಹೊಸ ಆಸರೆಯನ್ನು ಕಂಡುಕೊಳ್ಳಲೇಬೇಕು' ಎಂದು ತಿಳಿಸಿದ್ದಾರೆ.
ಹಿರಿಯ ನಾಗರಿಕರಿಗೆ ಶೇ.50ರಷ್ಟು ರಿಯಾಯಿತಿ ಘೋಷಿಸಿದ ಏರ್ ಇಂಡಿಯಾ
ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಖರೀದಿಯ ಬಿಡ್ಡಿಂಗ್ ನಡೆಸಲು ವಿವಿಧ ಸಂಸ್ಥೆಗಳು ಕಳೆದ ತಿಂಗಳು ಆಸಕ್ತಿ ತೋರಿಸಿದ್ದವು. 'ಸೋಮವಾರ ನಡೆದ ಕಳೆದ ಸಭೆಯಲ್ಲಿ ಹೂಡಿಕೆ ಹಿಂತೆಗೆತ ಪ್ರಕ್ರಿಯೆಯಲ್ಲಿನ ಬಿಡ್ಡರ್ಗಳ ಶಾರ್ಟ್ ಪಟ್ಟಿಗೆ 64 ದಿನಗಳ ಒಳಗೆ ಅವರ ಬಿಡ್ಗಳು ಬರುವಂತೆ ಸೂಚಿಸಲಾಗಿತ್ತು. ಈ ಬಾರಿ ಈ ವಿಚಾರದಲ್ಲಿ ಯಾವುದೇ ಹಿಂದೇಟು ಹಾಕದೆ ಇರಲು ಸರ್ಕಾರ ದೃಢನಿರ್ಧಾರ ತೆಗೆದುಕೊಂಡಿದೆ' ಎಂದು ಅವರು ಹೇಳಿದ್ದಾರೆ.
ಏರ್ ಇಂಡಿಯಾದ ಹಣಕಾಸು ಮರು ರಚನೆಯ ಭಾಗವಾಗಿ 2,268 ಕೋಟಿ ರೂ ಮೊತ್ತವನ್ನು ವಿಶೇಷ ಉದ್ದೇಶದ ವಾಹನ ಸ್ಥಾಪನೆಗೆ ಸರ್ಕಾರ ಬಜೆಟ್ನಲ್ಲಿ ಹಂಚಿಕೆ ಮಾಡಿತ್ತು. ಮುಂದಿನ ಹಣಕಾಸು ವರ್ಷದೊಳಗೆ ಏರ್ ಇಂಡಿಯಾ ಮತ್ತು ಪವನ್ ಹನ್ಸ್ಗಳನ್ನು ಮುಂದಿನ ಹಣಕಾಸು ವರ್ಷದೊಳಗೆ ಖಾಸಗಿಗಳಿಗೆ ಒಪ್ಪಿಸಿ ಹುಡಿಕೆ ವಾಪಸ್ ಪಡೆಯುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು.