ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚಾರ್ ಗೆ ಕಡ್ಡಾಯ ರಜೆ
ನವದೆಹಲಿ, ಜೂನ್ 18: ಐಸಿಐಸಿಐ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಂದಾ ಕೊಚ್ಚಾರ್ ತನಿಖೆ ಪೂರ್ಣಗೊಳ್ಳುವವರೆಗೆ ರಜೆಯ ಮಳೆ ತೆರಳಬೇಕು ಎಂದು ಬ್ಯಾಂಕ್ ಹೇಳಿದೆ.
ಹಿತಾಸಕ್ತಿಯ ಸಂಘರ್ಷದ ಪ್ರಕರಣವೊಂದರಲ್ಲಿ ಆಂತರಿಕ ತನಿಖೆ ಜಾರಿಯಲ್ಲಿದ್ದು, ಈ ತನಿಖೆ ಪೂರ್ಣಗೊಳ್ಳುವವರೆಗೆ ತನ್ನ ಸಿಇಒ ಅವರನ್ನೇ ಬ್ಯಾಂಕ್ ರಜೆಯ ಮೇಲೆ ಕಳುಹಿಸಿದೆ.
ಬ್ಯಾಂಕ್ ನ ಲೈಫ್ ಇನ್ಸೂರೆನ್ಸ್ ವಿಭಾಗದ ಸಂದೀಪ್ ಭಕ್ಷಿಯವರನ್ನು ಬ್ಯಾಂಕ್ ನ ಮುಖ್ಯ ಕಾರ್ಯಕಾರಿ ಅಧಿಕಾರಿ (ಸಿಒಒ) ಯನ್ನಾಗಿ ನೇಮಿಸಲಾಗಿದೆ.
"ಆಡಳಿತ ಮತ್ತು ಅತ್ಯುನ್ನತ ಮಟ್ಟದ ಕಾರ್ಪೊರೇಟ್ ಮಾನದಂಡಗಳ ಪ್ರಕಾರ, ಚಂದಾ ಕೊಚ್ಚಾರ್ ಅವರು ಮೇ 30, 2018 ರಂದು ಘೋಷಿಸಿದ ವಿಚಾರಣೆಯು ಪೂರ್ಣಗೊಳ್ಳುವ ತನಕ ರಜೆ ಮೇಲೆ ತೆರಳಲು ನಿರ್ಧರಿಸಿದ್ದಾರೆ," ಎಂದು ಬ್ಯಾಂಕ್ ಹೇಳಿದೆ. ಮಂಡಳಿ ಇದಕ್ಕೆ ಒಪ್ಪಿಕೊಂಡಿದೆ ಮತ್ತು ಈ ಅವಧಿಯಲ್ಲಿ ಸಿಒಒ ಅವರು ಮಂಡಳಿಗೆ ರಿಪೋರ್ಟ್ ಮಾಡಿಕೊಳ್ಳಲಿದ್ದಾರೆ ಎಂದು ಬ್ಯಾಂಕ್ ತಿಳಿಸಿದೆ.
ಇದೇ ಅವಧಿಯಲ್ಲಿ ಭಕ್ಷಿ ಕೊಚ್ಚಾರ್ ಅವರಿಗೂ ರಿಪೋರ್ಟ್ ಮಾಡಿಕೊಳ್ಳಬೇಕು ಎಂದು ಮಂಡಳಿ ಹೇಳಿದೆ. ಅವರನ್ನು ಎಂಡಿ ಮತ್ತು ಸಿಇಒ ಹುದ್ದೆಯಲ್ಲೇ ಮುಂದುವರಿಸಲು ಕಂಪನಿ ನಿರ್ಧೆರಿಸಿದ್ದು ಕೇವಲ ರಜೆಯ ಮೇಲೆ ಮಾತ್ರ ಕಳುಹಿಸುತ್ತಿದೆ.
ಚಂದಾ ಕೊಚ್ಚಾರ್ ಪತಿ ದೀಪಕ್ ಕೊಚ್ಚಾರ್ ವಿಡಿಯೋಕಾನ್ ಮಾಲಿಕ ಧೂತ್ ಜೊತೆ ವ್ಯಾವಹಾರಿಕ ಸಂಬಂಧಗಳನ್ನು ಹೊಂದಿದ್ದಾರೆ. ಇದೇ ಅವಧಿಯಲ್ಲಿ ವಿಡಿಯೋಕಾನ್ ಸಾಲಕ್ಕಾಗಿ ಅರ್ಜಿ ಹಾಕಿದಾಗ ಹಿತಾಸಕ್ತಿಯ ಸಂಘರ್ಷ ನಡೆಯುತ್ತದೆ ಎಂದು ವಿಷಲ್ ಬ್ಲೋವರ್ ಒಬ್ಬರು ಆರೋಪಿಸಿದ್ದರು. ಇದರ ತನಿಖೆ ಜಾರಿಯಲ್ಲಿದೆ.