ಸೀಮೆಎಣ್ಣೆ ಮತ್ತು ಎಲ್ ಪಿಜಿ ಮೇಲೆ ಗಣನೀಯ ಸಬ್ಸಿಡಿ
ನವದೆಹಲಿ, ಆಗಸ್ಟ್. 11 : ಇಂಧನ ಬೆಲೆ ಇಳಿಕೆಯಿಂದ ಖುಷಿಯಾಗಿದ್ದ ಜನರಿಗೆ ಕೇಂದ್ರ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಿದೆ. ಸೀಮೆಎಣ್ಣೆ ಮತ್ತು ಅಡುಗೆ ಅನಿಲದ ಮೇಲೆ ಗಣನೀಯ ಸಬ್ಸಿಡಿ ನೀಡಿದೆ. ಮೇಲ್ನೋಟಕ್ಕೆ ಇದು ತೈಲ ಕಂಪನಿಗಳ ನಷ್ಟ ಕಡಿಮೆ ಮಾಡುವಂತೆ ತೋರಿದರೂ ಜನರು ಸದ್ಯ ಬೆಲೆ ಏರಿಕೆ ಚಿಂತೆಯಿಂದ ದೂರವಾಗಿರಬಹುದು.
ಪ್ರತಿ ಲೀಟರ್ ಸೀಮೆಎಣ್ಣೆಗೆ 12 ರು. ಮತ್ತು ಅಡುಗೆ ಅನಿಲ ಸಿಲಿಂಡರ್ (ಎಲ್ಪಿಜಿ) ಕೆಜಿಗೆ 18 ರು ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.[ಆಧಾರ್ ಲಿಂಕ್ ಮಾಡದಿದ್ದರೆ ಎಲ್ ಪಿಜಿ ಸಬ್ಸಿಡಿ ಇಲ್ಲ]
ಸದ್ಯ ಸೀಮೆಎಣ್ಣೆ ನೈಜ ದರ ಲೀಟರಿಗೆ 29.91 ರು. ಇದೆ. ಆದರೆ ನಾಗರಿಕರಿಗೆ ವಿತರಣಾ ವ್ಯವಸ್ಥೆಯಡಿ ಲೀಟರಿಗೆ 14.96 ರು. ನಂತೆ ನೀಡಲಾಗುತ್ತಿದೆ. ಇದರಿಂದ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳಿಗೆ 14.95 ರು. ರಷ್ಟು ನಷ್ಟವಾಗುತ್ತಿದೆ. ಈ ನಷ್ಟವನ್ನು ಭರಿಸಿಕೊಡಲು ಸರ್ಕಾರ ನಿರ್ಧರಿಸಿದ್ದು ಲೀಟರಿಗೆ 12 ರು. ಸಬ್ಸಿಡಿ ನೀಡಲು ನಿರ್ಧರಿಸಿದೆ. ಉಳಿದ 2.95 ರು ವನ್ನು ತೈಲ ಕಂಪೆನಿಗಳೇ ಭರಿಸಬೇಕು ಎಂದು ಪ್ರಧಾನ್ ತಿಳಿಸಿದರು.[ಎಲ್ಪಿಜಿ ಜೊತೆ ಆಧಾರ್ ನಂಬರ್ ಸೇರಿಸುವುದು ಹೇಗೆ?]
ಸದ್ಯ ಸಬ್ಸಿಡಿ ಸಿಲಿಂಡರ್ ಗೆ 417.82 ರು. ಇದೆ. ಇಲ್ಲಿ ಪೆಟ್ರೋಲಿಯಂ ಕಂಪನಿಗಳಿಗೆ 167.18 ರು. ನಷ್ಟವಾಗುತ್ತಿದೆ. ಈ ನಷ್ಟ ಭರಿಸಲು ಸರ್ಕಾರ ಪ್ರತಿ ಸಿಲಿಂಡರ್ಗೆ 18 ರು. ನೀಡಲು ಮುಂದಾಗಿದ್ದು ಉಳಿದವನ್ನು ಕಂಪನಿಗಳೇ ಭರಿಸಿಕೊಳ್ಳಬೇಕು. 2015-16 ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಎಲ್ ಪಿಜಿ ಸಬ್ಸಿಡಿಗಾಗಿ 22 ಸಾವಿರ ಕೋಟಿ ಮತ್ತು ಸೀಮೆಎಣ್ಣೆ ಸಬ್ಸಿಡಿಗಾಗಿ 8 ಸಾವಿರ ಕೋಟಿ ರು. ಮೀಸಲಿಡಲಾಗಿತ್ತು.