ಕೆನರಾ ಬ್ಯಾಂಕ್ ವಂಚನೆ ಕೇಸ್: ಯೂನಿಟೆಕ್ ಎಂಡಿ ವಿರುದ್ಧ ಸಿಬಿಐ ಕೇಸ್
ಬೆಂಗಳೂರು, ಡಿ. 7: ಕೆನರಾಬ್ಯಾಂಕಿಗೆ ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂನಿಟೆಕ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.
ಯೂನಿಟೆಕ್ ಎಂಡಿ ಸಂಜಯ್ ಚಂದ್ರ, ಅವರ ತಂದೆ ರಂಏಶ್ ಚಂದ್ರ ಹಾಗೂ ಸೋದರ ಅಜಯ್ ಅವರ ವಿರುದ್ಧ ಕೆನರಾ ಬ್ಯಾಂಕಿಗೆ 198 ಕೋಟಿ ರು ವಂಚನೆ ಮಾಡಿದ ಆರೋಪದ ಮೇಲೆ ಸಿಬಿಐ ಪ್ರಕರಣಾ ದಾಖಲಿಸಿಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಸೇರಿದ ಹಲವು ಕಚೇರಿ, ಮನೆ ಮೇಲೆ ಸಿಬಿಐ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.
ಶುಕ್ರವಾರದಂದು ಸಂಜಯ್ ಚಂದ್ರ ಅವರು 43 ತಿಂಗಳುಗಳ ಬಳಿಕ ಮಧ್ಯಂತರ ಜಾಮೀನು ಪಡೆದು ತಿಹಾರ್ ಜೈಲಿನಿಂದ ಹೊರ ಬಂದಿದ್ದಾರೆ. ಈಗ ಸಿಬಿಐ ಹೊಸದಾಗಿ ಪ್ರಕರಣ ದಾಖಲಿಸಿ ಆಘಾತ ನೀಡಿದೆ. ಯೂನಿಟೆಕ್ ವಿರುದ್ಧ ದೆಹಲಿ ಪೊಲೀಸ್, ಸಿಬಿಐ ಅಲ್ಲದೆ ಜಾರಿ ನಿರ್ದೇಶನಾಲಯ ಕೂಡಾ ತನಿಖೆ ನಡೆಸುತ್ತಿವೆ. 2ಜಿ ತರಂಗಗುಚ್ಛ ಹಂಚಿಕೆ ಪ್ರಕರಣದಲ್ಲೂ ಚಂದ್ರ ಅವರ ಹೆಸರು ಕಾಣಿಸಿಕೊಂಡಿತ್ತು. ಆದರೆ, ನ್ಯಾಯಾಲಯದಿಂದ ಕ್ಲೀನ್ ಚಿಟ್ ಪಡೆದುಕೊಂಡಿದ್ದಾರೆ.
ಚಂದ್ರ ಅವರ ವೈಯಕ್ತಿಕ ಗ್ಯಾರಂಟಿ ಆಧಾರದ ಮೇಲೆ ಕ್ರೆಡಿಟ್ ಸೌಲಭ್ಯಗಳನ್ನು ಕೆನರಾ ಬ್ಯಾಂಕಿನಿಂದ ಪಡೆದುಕೊಂಡು ವಂಚಿಸಲಾಗಿದೆ ಎಂಬ ಆರೋಪವಿದೆ. ಬೇಡಿಕೆ ತಗ್ಗಿದ ಸಂದರ್ಭದಲ್ಲಿ ಪೇಮೆಂಟ್ ಮಾಡದೆ ವಂಚಿಸಲಾಗಿದೆ ಎಂಬುದು ಆಡಿಟ್ ಸಂದರ್ಭದಲ್ಲಿ ತಿಳಿದು ಬಂದಿದೆ.
''29,800 ಗೃಹ ಖರೀದಿದಾರರಿಂದ 1,4270 ಕೋಟಿ ರು ಸಂಗ್ರಹವಾಗಿತ್ತು ಆದರೆ, 5063.05 ಕೋಟಿ ರು ಬಳಕೆಯಾಗಿಲ್ಲ, 74 ಯೋಜನೆಗಳಿಗೆ ಇದನ್ನು ಬಳಸಬೇಕಾಗಿತ್ತು'' ಎಂದು ಬ್ಯಾಂಕ್ ದೂರಿದೆ. ಒಟ್ಟಾರೆ, 198 ಕೋಟಿ ರುಗೂ ಅಧಿಕ ಸಾರ್ವಜನಿಕರ ಹಣವನ್ನು ಯೂನಿಟೆಕ್ ಸಂಸ್ಥ ದುರುಪಯೋಗ ಮಾಡಿಕೊಂಡು ವಂಚಿಸಿದೆ ಎಂದು ಆರೋಪಿಸಲಾಗಿದೆ.