ಅಮಾನತ್ ಬ್ಯಾಂಕ್ ವಿಲೀನಕ್ಕೆ ಕೆನರಾ ಬ್ಯಾಂಕ್ ಸಮ್ಮತಿ
ಭಾರತೀಯ ರಿಸರ್ವ್ ಬ್ಯಾಂಕ್ ಪೌರೋಹಿತ್ಯದಲ್ಲಿ ಅಮಾನತ್ ಸಹಕಾರಿ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್ ಜತೆಗೆ ವಿಲೀನ ಗೊಳಿಸುವ ಪ್ರಕ್ರಿಯೆ ಕಳೆದ ವಾರ ನಿರ್ಣಾಯಕ ಹಂತಕ್ಕೆ ಬಂದಿದ್ದೆ. ವಿಲೀನ ಸಂಬಂಧ ಅಮಾನತ್ ಬ್ಯಾಂಕ್ ಆಡಳಿತ ಮಂಡಳಿಯ ಮನವಿಯನ್ನು ಪುರಸ್ಕರಿಸಿರುವ ಕೆನರಾ ಬ್ಯಾಂಕ್ ಸೆ. 27ರಂದು ತನ್ನ ಸಮ್ಮತಿ ಪತ್ರವನ್ನು ಕಳುಹಿಸಿದೆ.
ವಿಲೀನದ ದಿನಾಂಕವನ್ನು ಕೆನರಾ ಬ್ಯಾಂಕ್ ಅಧಿಕೃತವಾಗಿ ಸದ್ಯದಲ್ಲೇ ಪ್ರಕಟಿಸಲಿದೆ. ಗ್ರಾಹಕರು ಹಾಗೂ ಹೂಡಿಕೆದಾರರ ಬೇಡಿಕೆ ಹಿನ್ನೆಲೆಯಲ್ಲಿ ಅಮಾನತ್ ಸಹಕಾರಿ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್ ನೊಂದಿಗೆ ವಿಲೀನ ಗೊಳಿಸಲಾಗುತ್ತಿದೆ. ಬ್ಯಾಂಕಿನ ಪದಾಧಿಕಾರಿಗಳ ವಿಶೇಷ ಸಭೆ ಕರೆಯಲು ಸಹಕಾರಿ ಸಂಘಗಳ ರಿಜಿಸ್ಟ್ರಾರ್ ಅನುಮತಿಯನ್ನು ಕೋರಲಾಗಿದೆ ಎಂದು ಅಮಾನತ್ ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ನಸೀರ್ ಅಹ್ಮದ್ ತಿಳಿಸಿದ್ದಾರೆ.
ಅಮಾನತ್ ಬ್ಯಾಂಕಿನಲ್ಲಿ ಭಾರಿ ಪ್ರಮಾಣದ ಅವ್ಯವಹಾರ/ಅಕ್ರಮಗಳು ನಡೆದಿವೆಯೆಂದು ಕೇಂದ್ರ ಮಾಜಿ ಸಚಿವ ಜಾಫರ್ ಷರೀಫ್ ಅವರು ಬ್ಯಾಂಕಿನ ಸಂಸ್ಥಾಪಕ ಕೆ ರೆಹಮಾನ್ ಖಾನ್ ಅವರ ವಿರುದ್ಧ ಆರೋಪಿಸಿದ್ದರು. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಕೋರಿ ಕಳೆದ ರಂಜಾನ್ ಸಂದರ್ಭದಲ್ಲಿ ಅವರು ಉಪವಾಸ ಸತ್ಯಾಗ್ರಹವನ್ನೂ ನಡೆಸಿದ್ದರು. ಆದರೆ ಮಧ್ಯ ಪ್ರವೇಶಿಸಿದ ಆರ್ ಬಿಐ, ಅಮಾನತ್ ಬ್ಯಾಂಕ್ ಅನ್ನು ಅನಾಮತ್ತಾಗಿ ತನ್ನ ಸುಪರ್ದಿಗೆ ತೆಗೆದುಕೊಳ್ಳುವಂತೆ ಕೆನರಾ ಬ್ಯಾಂಕಿಗೆ ಸೂಚಿಸಿತ್ತು.