ದೇಶದ ಸಾಲ ವ್ಯವಸ್ಥೆಯ ದುಸ್ಥಿತಿಗೆ ಬಲಿಪಶುವಾದರೇ ಸಿದ್ಧಾರ್ಥ?
ಬೆಂಗಳೂರು, ಜುಲೈ 30: ಭಾರತದಲ್ಲಿ, ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಉದ್ಯಮದಂತಹ ಸಾಹಸಕ್ಕೆ ಕೈಹಾಕುವ ವ್ಯಕ್ತಿಗಳ ಸಂಖ್ಯೆ ತೀರಾ ಕಡಿಮೆ. ಇಲ್ಲಿ ಸಿರಿವಂತರಿದ್ದರೂ, ಸಾಹಸೋದ್ಯಮದ ವಿಚಾರದಲ್ಲಿ ಯಾವಾಗಲೂ ಒಂದು ಹೆಜ್ಜೆ ಹಿಂದೆಯೇ ಇರುತ್ತಾರೆ ಎಂಬ ಅಭಿಪ್ರಾಯವಿದೆ. ಹಾಗೆಂದು ಇಲ್ಲಿ ಉದ್ಯಮಿಗಳಿಲ್ಲವೆಂದೇನೂ ಇಲ್ಲ. ಆದರೆ, ಉತ್ತರ ಭಾರತೀಯರಿಗೆ ಹೋಲಿಸಿದರೆ ಸಾವಿರಾರು ಕೋಟಿ ಸಾಲ ಪಡೆದು ಹೂಡಿಕೆ ಮಾಡಿ ಉದ್ಯಮ ನಡೆಸಲು ಧೈರ್ಯ ತೋರುವ ಸಾಹಸಿಗಳ ಸಂಖ್ಯೆ ಕಡಿಮೆಯೇ.
ಒಂದು ಉದ್ಯಮ ಸಾವಿರಾರು ಮಂದಿಯ ನಿರುದ್ಯೋಗಿಗಳ ಪಾಲಿಗೆ ಆಶಾಕಿರಣವಾಗುತ್ತದೆ. ಎಸ್ ಎಂ ಕೃಷ್ಣ ಅವರ ಅಳಿಯ ವಿಜಿ ಸಿದ್ಧಾರ್ಥ ಅವರ ಕಾಫಿ ಡೇ ಸೇರಿದಂತೆ ವಿವಿಧ ಸಂಸ್ಥೆಗಳು ನಮ್ಮ ರಾಜ್ಯದ ಲಕ್ಷಾಂತರ ಮಂದಿಯ ಬದುಕಿಗೆ ಆಸರೆಯಾಗಿದೆ. ಈಗ ಅವರ ನಿಗೂಢ ಕಣ್ಮರೆಯ ಘಟನೆ ದೇಶದ ಉದ್ಯಮಿಗಳ ಸ್ಥಿತಿಗತಿಯ ಇನ್ನೊಂದು ಮಗ್ಗುಲನ್ನು ಪರಿಚಯಿಸುತ್ತದೆ.
ಬ್ಯಾಂಕ್ಗಳಿಂದ ಸಾಲ ಪಡೆದು, ರಾಜಾರೋಷವಾಗಿ ದೇಶದಿಂದ ಪರಾರಿಯಾಗಿ ಇಲ್ಲಿನ ವ್ಯವಸ್ಥೆಗೆ ಚಳ್ಳೆಹಣ್ಣು ತಿನಿಸುವ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಮುಂತಾದ ಉದ್ಯಮಿಗಳ ಪ್ರಕರಣಗಳ ಮೂಲಕ ಉಳಿದ ಮಹತ್ವಾಕಾಂಕ್ಷಿ ಉದ್ಯಮಿಗಳನ್ನು ಅನುಮಾನದಿಂದ ನೋಡಲು ಆರಂಭಿಸುತ್ತೇವೆ.
LIVE: ಸಿದ್ಧಾರ್ಥ ನಾಪತ್ತೆ: ಎಸ್.ಎಂ.ಕೃಷ್ಣ ಮನೆಗೆ ಗಣ್ಯರ ದಂಡು
ಸಾವಿರಾರು ಕೋಟಿ ಹೂಡಿಕೆ ಮಾಡಿ ವಹಿವಾಟು ನಡೆಸುವ ಉದ್ಯಮಿಗಳೆಲ್ಲರೂ ಲಾಭದಲ್ಲಿಯೇ ಇರುತ್ತಾರೆಯೇ? ಬಹುತೇಕ ಉದ್ಯಮಿಗಳು ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ ಸೇರಿದಂತೆ ಒಂದಲ್ಲ ಒಂದು ವ್ಯವಹಾರ ಸಂಬಂಧಿ ಸವಾಲುಗಳನ್ನು ಎದುರಿಸುತ್ತಲೇ ಇರುತ್ತಾರೆ. ಭಾರತದ ಆರ್ಥಿಕ ವ್ಯವಸ್ಥೆಯೊಳಗೆ, ಇಲ್ಲಿನ ನೀತಿ ನಿಯಮಗಳಲ್ಲಿ ಉದ್ಯಮ ನಡೆಸುವುದು ಸುಲಭವಲ್ಲ. ಸಿದ್ಧಾರ್ಥ್ ಅವರಂತಹ ಲೆಕ್ಕವಿಲ್ಲದಷ್ಟು ಉದ್ಯಮಿಗಳು, ಉದ್ಯಮ ಸ್ಥಾಪಿಸುವ ಆಕಾಂಕ್ಷೆಯುಳ್ಳವರು ಸಾಲದ ಸುಳಿಯಲ್ಲಿ ಸಿಲುಕುತ್ತಾರೆ. ರಾಷ್ಟ್ರವ್ಯಾಪಿ ಸಾಲದ ಸುಳಿಯ ಬಲಿಪಶುಗಳಲ್ಲಿ ಒಬ್ಬರು ಕೆಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ಧಾರ್ಥ್.
ಷೇರು ಮಾರಾಟದ ಹಣ ಸಾಲ ಮರುಪಾವತಿಗೆ
ಭಾರತದ ಬಹುದೊಡ್ಡ ಬ್ಯಾಂಕಿಂಗ್ ಸಂಸ್ಥೆ ಐಎಲ್ ಆಂಡ್ ಎಫ್ಎಸ್ ಆರ್ಥಿಕ ಮುಗ್ಗಟ್ಟಿನಿಂದ ಕುಸಿದ ಬೆನ್ನಲ್ಲೇ ದೇಶವ್ಯಾಪಿ ಉದ್ಭವವಾದ ಸಾಲದ ಸಂಕಷ್ಟದಲ್ಲಿ ವಿಜಿ ಸಿದ್ಧಾರ್ಥ ಬಲಿಪಶುವಾದರೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಐಎಲ್ ಆಂಡ್ ಎಫ್ಎಸ್ನ ಪ್ರಮಾದಗಳಿಂದಾಗಿ ಸಿದ್ಧಾರ್ಥ ಅವರು ಭಾರಿ ಯಶ ಕಂಡಿದ್ದ ಮೈಂಡ್ ಟ್ರೀ ಡಿಜಿಟಲ್ ತಂತ್ರಜ್ಞಾನ ಸಂಸ್ಥೆಯಲ್ಲಿನ ತಮ್ಮ ಷೇರುಗಳನ್ನು ಮಾರುವ ಸ್ಥಿತಿಗೆ ಬಂದಿದ್ದರು.
ಸಿದ್ಧಾರ್ಥ ಅವರು ಅದಾಯ ತೆರಿಗೆಯ ಕಿರುಕುಳಕ್ಕೆ ಒಳಗಾಗಿದ್ದು ಮತ್ತು ಷೇರುಗಳನ್ನು ಹಿಂದಕ್ಕೆ ಪಡೆದುಕೊಳ್ಳುವ ಒತ್ತಡಕ್ಕೆ ಒಳಗಾಗಿದ್ದರ ಬಗ್ಗೆ ಸಿದ್ಧಾರ್ಥ ಅವರು ಪತ್ರದಲ್ಲಿ ತಿಳಿಸಿದ್ದಾರೆ. ಇದು ಭಾರತದಲ್ಲಿ ಸುಗಮ ಉದ್ದಿಮೆ ನಡೆಸುವ ಅವಕಾಶದ ಬಗ್ಗೆ ಪ್ರಶ್ನೆಗಳನ್ನು ಹುಟ್ಟಿಸುತ್ತದೆ ಎಂದು ಉದ್ಯಮಿ ಲಾಯ್ಡ್ ಮಥಾಯಸ್ ಟ್ವೀಟ್ ಮಾಡಿದ್ದಾರೆ.
ಷೇರು ಮಾರಾಟದಿಂದ 3269 ಕೋಟಿ ರೂ. ಪಡೆದರೂ ಅವರ ಸಾಲದ ಹೊರೆಯ ಸಮಸ್ಯೆ ಇನ್ನೂ ಕರಗಿದಂತೆ ಇರಲಿಲ್ಲ. ಅವರು ತಮ್ಮ ಮೈಂಡ್ ಟ್ರೀ ಷೇರುಗಳನ್ನು 3,000 ಕೋಟಿಗೆ ಮಾರಾಟ ಮಾಡಿದ್ದರು. ಅವರು ಷೇರು ಮಾರಾಟಕ್ಕೆ ಎಲ್ಆಂಡ್ ಟಿಯಿಂದ ಪಡೆದಿದ್ದ ಬಹುಪಾಲು ಹಣವನ್ನು ಸಾಲ ಮರುಪಾವತಿಗಾಗಿಯೇ ಬಳಸಿದ್ದರು.
ಸಿದ್ದಾರ್ಥ ಬಗ್ಗೆ ಕೇಳಿದಾಗ 'ನೀರು ಕಾಣಿಸುತ್ತಿದೆ' ಎಂದಿದ್ದ ವಿನಯ್
ಮೈಂಡ್ ಟ್ರೀ ಸ್ಥಾಪನೆ, ಹೂಡಿಕೆ
1999ರಲ್ಲಿ ಐಟಿ ದಿಗ್ಗಜ ಅಶೋಕ್ ಸೂಟಾ ಅವರು, ಸಿದ್ಧಾರ್ಥ, ಸುಬ್ರತಾ ಬಾಗ್ಚಿ, ರೊಸ್ತೋವ್ ರಾವಣನ್ ಮತ್ತು ಕೆಕೆ ನಟರಾಜನ್ ಅವರೊಂದಿಗೆ ಸೇರಿ ಮೈಂಡ್ ಟ್ರೀ ಸ್ಥಾಪಿಸಿದಾಗ ಸಿದ್ಧಾರ್ಥ ಅವರು ಸಹ ಸಂಸ್ಥಾಪಕರಾದರು. ಅದರ ಸ್ಥಾಪನೆಯ ಆರಂಭದಲ್ಲಿ ಮೈಂಡ್ ಟ್ರೀಯ ಶೇ 6.6ರಷ್ಟು ಷೇರುಗಳನ್ನು ಖರೀದಿಸಲು ಸಿದ್ಧಾರ್ಥ ಅವರು 44 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. 2011ರಲ್ಲಿ ಅವರು 85 ಕೋಟಿ ರೂ (ಶೇ 5.57) ಮತ್ತು 40 ಕೋಟಿ ರೂ (ಶೇ 2.05) ಮೊತ್ತದ ಷೇರುಗಳನ್ನು ಪುನಃ ಖರೀದಿಸಿದ್ದರು ಎಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
2012ರಲ್ಲಿ ಮೈಂಡ್ ಟ್ರೀಯಲ್ಲಿ ಹೆಚ್ಚುವರಿ ಶೇ 6.48ರಷ್ಟು ಷೇರು ಖರೀದಿಸಲು ಮತ್ತೆ 171 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ಇದು ಹೆಚ್ಚೆಂದರೆ ವಾರ್ಷಿಕ ಶೇ 20.43ರಷ್ಟು ಆದಾಯ ಹಿಂದಕ್ಕೆ ನೀಡುತ್ತಿತ್ತು. ಕೊನೆಗೆ ಅವರು ಎಲ್ ಆಂಡ್ ಟಿಗೆ ಷೇರುಗಳನ್ನು ಮಾರಾಟ ಮಾಡಿದರು. ಇಷ್ಟಾದರೂ ಅದು ಅವರ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ನೀಡಲಿಲ್ಲ. ಸಿದ್ಧಾರ್ಥ ಅವರ ವೈಯಕ್ತಿಕ ಸಾಲದ ಹೊರೆ ಎಷ್ಟಿತ್ತು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಕಾಫಿ ಡೇ ಸಿದ್ದಾರ್ಥಗೆ ಐಟಿ ಇಲಾಖೆ ಕಿರುಕುಳ ಎಷ್ಟು ನಿಜ?
ಸಾಲಕ್ಕಿಂತ ಆಸ್ತಿ ಮೌಲ್ಯ ಹೆಚ್ಚೇ ಇತ್ತು
ಆರಂಭದಲ್ಲಿ ಉತ್ತಮವಾಗಿಯೇ ನಡೆದಿದ್ದ ಸಿಸಿಡಿ, ಕಳೆದ ಕೆಲವು ವರ್ಷಗಳಿಂದ ಕ್ರಮೇಣ ಅವರ ಪಾಲಿಗೆ ಬಿಳಿಯಾನೆಯಾಗತೊಡಗಿತು. ಸಂಸ್ಥೆಯು ಹೊಂದಿರುವ ಆಸ್ತಿಯ ಮೌಲ್ಯಕ್ಕಿಂತಲೂ ಸಾಲದ ಮೊತ್ತ ಕಡಿಮೆಯೇ ಇತ್ತು. ಹೀಗಾಗಿ ಸಿದ್ಧಾರ್ಥ ಅವರು ಈ ಬಗ್ಗೆ ತೀರಾ ಆತಂಕಪಟ್ಟುಕೊಳ್ಳುವ ಅಗತ್ಯವಿರಲಿಲ್ಲ. ಆದರೆ, ಬ್ಯಾಂಕರ್ಗಳು ಹೇಳುವ ಪ್ರಕಾರ ಕೋಟ್ಯಧಿಪತಿ ಸಿದ್ಧಾರ್ಥ ಅವರ ವೈಯಕ್ತಿಕ ಸಾಲಗಳು ಇನ್ನೂ ದೊಡ್ಡ ಪ್ರಮಾಣದಲ್ಲಿದ್ದವು. ಇದೇ ಅವರ ಮನಸ್ಸನ್ನು ಹದಗೆಡಿಸಿತ್ತು.
ಷೇರುಗಳನ್ನು ಖರೀದಿಸುವಂತೆ ಖಾಸಗಿ ಈಕ್ವಿಟಿ ಪಾಲುದಾರರಿಂದ ಅತೀವವಾದ ಒತ್ತಡವಿತ್ತು ಎಂದು ಸಿದ್ಧಾರ್ಥ ಅವರು ತಮ್ಮ ಮಂಡಳಿ ಸದಸ್ಯರಿಗೆ ಬರೆದಿರುವ ಪತ್ರ ಹೇಳುತ್ತದೆ. ತಮ್ಮ ಮೈಂಡ್ ಟ್ರೀ ಒಪ್ಪಂದದ ಕುರಿತು ಆದಾಯ ತೆರಿಗೆ ಇಲಾಖೆಯ ಹಿಂದಿನ ಮಹಾ ನಿರ್ದೇಶಕರು ಕಿರುಕುಳ ನೀಡಿದ್ದರ ಕುರಿತೂ ಅವರು ಪ್ರಸ್ತಾಪಿಸಿದ್ದಾರೆ.
ವಿವಿಧ ಉದ್ಯಮಗಳಲ್ಲಿ ಹೂಡಿಕೆ
ಇದರ ನಡುವೆ ಶಿವನ್ ಸೆಕ್ಯುರಿಟಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದು ಅವರ ಸಾಲದ ಪ್ರಮಾಣವನ್ನು ಹೆಚ್ಚಿಸಲು ಕಾರಣವಾಗಿತ್ತು. ಇದರಿಂದ ಅವರು ವಿಪರೀತ ಒತ್ತಡಕ್ಕೆ ಸಿಲುಕಿದ್ದರು. ಇದರೊಟ್ಟಿಗೆ, ಚೇತನ್ ವುಡ್ ಪ್ರೊಸೆಸಿಂಗ್ ಪ್ರೈ.ಲಿ, ಕಾಫಿ ಡೇ ಬೇರ್ ಫೂಟ್ ರೆಸಾರ್ಟ್ಸ್ ಎಂಬ ಅತಿಥಿ ಸತ್ಕಾರದ ಉದ್ಯಮ ಹಾಗೂ ಡಾರ್ಕ್ ಫಾರೆಸ್ಟ್ ಫರ್ನೀಚರ್ ಕೋ. ಎಂಬ ಟಿಂಬರ್ ವ್ಯಾಪಾರದ ಉದ್ಯಮಗಳಿಗೂ ಕೈ ಹಾಕಿದ್ದರು.
ತಮ್ಮ ರಿಯಲ್ ಎಸ್ಟೇಟ್ ಉದ್ದಿಮೆ ಟ್ಯಾಂಗ್ಲಿನ್ ಡೆವಲಪ್ಮೆಂಟ್ಸ್ಅನ್ನು ನ್ಯೂಯಾರ್ಕ್ ಮೂಲಕ ಖಾಸಗಿ ಸಂಸ್ಥೆ ಬ್ಲ್ಯಾಕ್ಸ್ಟೋನ್ ಗ್ರೂಪ್ಗೆ 2,700-2,800 ಕೋಟಿ ರೂಪಾಯಿಗೆ ಮಾರಾಟ ಮಾಡಲು ಚಿಂತನೆ ನಡೆಸಿದ್ದರು ಎನ್ನಲಾಗಿದೆ. ಜತೆಗೆ ಕೋಕಾಕೋಲ ಕಂಪೆನಿಯೊಂದಿಗೆ ಸಿಸಿಡಿಯ ವ್ಯವಹಾರದ ಕುರಿತು ಮಾತುಕತೆ ನಡೆಸಿದ್ದರು. ಈ ಮಾತುಕತೆ ಆರಂಭದ ಹಂತದಲ್ಲಿತ್ತು.
ಸಿದ್ಧಾರ್ಥ ಸಹಿಯಲ್ಲಿ ವ್ಯತ್ಯಾಸ? ಹೊಸ ಅನುಮಾನ
ಲಾಭದಲ್ಲಿಯೇ ಇರುವ ಸಿಸಿಡಿ
ಹಣಕಾಸು ವರದಿಗಳನ್ನು ನೋಡಿದಾಗ ಸಿಸಿಡಿ ಬೆಳವಣಿಗೆಯ ಹಾದಿಯಲ್ಲಿತ್ತು. 2019ರ ಮಾರ್ಚ್ ವೇಳೆಗೆ ದೇಶದಾದ್ಯಂತ 1,752 ಕೆಫೆ ಕಾಫಿ ಡೇಗಳನ್ನು ಸ್ಥಾಪಿಸಿದ್ದರು. 2018ರ ಹಣಕಾಸು ವರ್ಷದಲ್ಲಿ 1,777 ಕೋಟಿ ರೂ ಮತ್ತು 2019ರ ಹಣಕಾಸು ವರ್ಷದಲ್ಲಿ 1,814 ಕೋಟಿ ರೂ. ಆದಾಯ ಗಳಿಸಿತ್ತು. 2020ರ ಮಾರ್ಚ್ ವೇಳೆಗೆ 2,250 ಕೋಟಿ ಆದಾಯದ ಗುರಿ ಹೊಂದಲಾಗಿತ್ತು. ಈ ಉದ್ಯಮ ಲಾಭದಾಯಕವಾಗಿದ್ದರೂ, ಕಂಪೆನಿಯ ಒಟ್ಟು ಸಾಲವೂ ಮಾರ್ಚ್ 2018ರ ವೇಳೆಗೆ 3,323.8 ಕೋಟಿ ರೂಪಾಯಿಗೆ ಮುಟ್ಟಿತ್ತು.
ಕೇಂದ್ರ ಸರ್ಕಾರದ ಆರ್ಥಿಕ ನೀತಿ ಕಾರಣ
ಸಿಸಿಡಿ ಲಾಭದಾಯಕವಾಗಿಯೇ ನಡೆಯುತ್ತಿತ್ತು. ಆದರೆ, ಸಾಲದ ಮೇಲಿನ ಒತ್ತಡಗಳು ಸಿದ್ಧಾರ್ಥ ಅವರನ್ನು ಹೈರಾಣಾಗಿಸಿದ್ದವು. ಹೀಗಾಗಿ ಒಂದೊಂದೇ ಕಂಪೆನಿಗಳ ಷೇರುಗಳನ್ನು ಮಾರುವ ಸ್ಥಿತಿಗೆ ತಲುಪಿದ್ದರು. ಇದಕ್ಕೆ ದೇಶದ ಆರ್ಥಿಕ ವ್ಯವಸ್ಥೆ, ಉದ್ಯಮಿಗಳ ಮೇಲೆ ಒತ್ತಡ ಹೇರುವಂತಹ ಸಂಸ್ಥೆಗಳ ನಡವಳಿಕೆಗಳೇ ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.
ನವೋದ್ಯಮಕ್ಕೆ ಉತ್ತೇಜನ ನೀಡುವುದಾಗಿ ಹೇಳುತ್ತಿರುವ ಕೇಂದ್ರ ಸರ್ಕಾರ ಕೆಲವೇ ಸ್ವ ಹಿತಾಸಕ್ತ ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದೆ. ಇನ್ನೊಂದೆಡೆ ವಿಭಿನ್ನ ಪರಿಕಲ್ಪನೆಯ ಹಾಗೂ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸುವ ಸಿಸಿಡಿಯಂತಹ ಉದ್ಯಮಗಳಿಗೆ ಯಾವುದೇ ಬೆಂಬಲ ನೀಡುತ್ತಿಲ್ಲ ಎಂಬ ಆರೋಪಗಳಿವೆ. ಐಟಿ ಇಲಾಖೆಯಂತಹ ಸಂಸ್ಥೆಗಳ ದುರ್ಬಳಕೆ, ಬದಲಾದ ಸಾಲ ನೀತಿಗಳು ಮತ್ತು ದುರ್ಬಲಗೊಂಡ ಆರ್ಥಿಕ ವ್ಯವಸ್ಥೆಯ ಕುರಿತು ಚರ್ಚೆ ನಡೆಯುತ್ತಿದೆ.