ತುಮಕೂರು ಕೈಗಾರಿಕಾ ಕಾರಿಡಾರ್ಗೆ ಕೇಂದ್ರ ಸಂಪುಟದ ಅಸ್ತು
ನವದೆಹಲಿ, ಡಿ. 30: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಅಡಿಯಲ್ಲಿ ಮೂಲಸೌಕರ್ಯ ನಿರ್ಮಾಣಕ್ಕಾಗಿ ಕರ್ನಾಟಕದ ತುಮಕೂರು ಕೈಗಾರಿಕಾ ಕಾರಿಡಾರ್ಗೆ ಅನುಮೋದನೆ ನೀಡಿದೆ. 1,701.81 ಕೋಟಿ ರೂ. ಅಂದಾಜು ವೆಚ್ಚದ ಈ ಕೈಗಾರಿಕಾ ಕಾರಿಡಾರ್ ನಿಂದಾಗಿ 88,500 ಮಂದಿ ಉದ್ಯೋಗ ಪಡೆಯಲಿದ್ದಾರೆ.
ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಮೂಲಸೌಕರ್ಯ ನಿರ್ಮಾಣಕ್ಕಾಗಿ ಸಲ್ಲಿಸಿದ ಪ್ರಸ್ತಾವನೆಗಳನ್ನು ಸಂಪುಟ ಅನುಮೋದಿಸಿದೆ.
* 2,139.44 ಕೋಟಿ ರೂ. ಅಂದಾಜು ವೆಚ್ಚದ ಆಂಧ್ರಪ್ರದೇಶದ ಕೃಷ್ಣಪಟ್ಟಣಂ ಕೈಗಾರಿಕಾ ಪ್ರದೇಶ
* 1,701.81 ಕೋಟಿ ರೂ. ಅಂದಾಜು ವೆಚ್ಚದ ಕರ್ನಾಟಕದ ತುಮಕೂರು ಕೈಗಾರಿಕಾ ಪ್ರದೇಶ
* ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ 3,883.80 ಕೋಟಿ ರೂ. ವೆಚ್ಚದ ಮಲ್ಟಿ ಮೋಡಲ್ ಲಾಜಿಸ್ಟಿಕ್ಸ್ ಹಬ್ (ಎಂಎಂಎಲ್ಹೆಚ್) ಮತ್ತು ಮಲ್ಟಿ ಮೋಡಲ್ ಸಾರಿಗೆ ಹಬ್ (ಎಂಎಂಟಿಎಚ್)
ಪ್ರಮುಖ ಮತ್ತು ಸಾರಿಗೆ ಕಾರಿಡಾರ್ಗಳಾದ ಪೂರ್ವ ಮತ್ತು ಪಶ್ಚಿಮ ಸರಕು ಸಾಗಣೆ ಕಾರಿಡಾರ್ಗಳು, ಎಕ್ಸ್ಪ್ರೆಸ್ವೇಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳು, ಬಂದರುಗಳು, ವಿಮಾನ ನಿಲ್ದಾಣಗಳು ಇತ್ಯಾದಿಗಳ ಸಾಮೀಪ್ಯವನ್ನು ಕೈಗಾರಿಕಾ ಕಾರಿಡಾರ್ಗಳಿಗೆ ಕಲ್ಪಿಸಲಾಗಿದೆ.
ಕೈಗಾರಿಕಾ ಕಾರಿಡಾರ್ ಮೂಲಕ ಗ್ರೀನ್ಫೀಲ್ಡ್ ಕೈಗಾರಿಕಾ ನಗರಗಳನ್ನು 'ಪ್ಲಗ್ ಎನ್ ಪ್ಲೇ' ಕೈಗಾರಿಕೆಗಳಿಗೆ ಗುಣಮಟ್ಟದ, ವಿಶ್ವಾಸಾರ್ಹ, ಸುಸ್ಥಿರ ಮತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ದೇಶದ ಉತ್ಪಾದನಾ ಹೂಡಿಕೆಗೆ ಉತ್ತೇಜನ ನೀಡಲಾಗುತ್ತದೆ.
ಈ ನಗರಗಳಲ್ಲಿನ ಅಭಿವೃದ್ಧಿ ಪಡಿಸಿದ ಭೂವಿಯನ್ನು ಉತ್ಪಾದನೆಗೆ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಜಾಗತಿಕ ಮೌಲ್ಯ ಸರಪಳಿಯಲ್ಲಿ ಭಾರತವನ್ನು ಪ್ರಬಲ ಪಾಲುದಾರನನ್ನಾಗಿ ಮಾಡಲು ತಕ್ಷಣದ ಹಂಚಿಕೆಗೆ ಸಿದ್ಧಗೊಳಿಸಲಾಗುತ್ತದೆ.
''ಆತ್ಮನಿರ್ಭರ ಭಾರತ"ದ ಉದ್ದೇಶವನ್ನು ಸಾಧಿಸಲು
ಕೈಗಾರಿಕಾ ಕಾರಿಡಾರ್ ಗಳನ್ನು ಕೈಗಾರಿಕೆಗಳ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ದೇಶಾದ್ಯಂತ ಹೂಡಿಕೆಗಳಿಗೆ ಹೆಚ್ಚಿನ ಮಾರ್ಗಗಳನ್ನು ಸೃಷ್ಟಿಸಲು "ಆತ್ಮನಿರ್ಭರ ಭಾರತ"ದ ಉದ್ದೇಶವನ್ನು ಸಾಧಿಸಲು ಅಭಿವೃದ್ಧಿ ಪಡಿಸಲಾಗುತ್ತದೆ.
ಮಲ್ಟಿ ಮೋಡಲ್ ಸಂಪರ್ಕ ಮೂಲಸೌಕರ್ಯದ ಬೆನ್ನೆಲುಬಾಗಿ ಈ ಯೋಜನೆಗಳನ್ನು ಯೋಜಿಸಲಾಗಿದೆ. ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ (ಸಿಬಿಐಸಿ) ಅಡಿಯಲ್ಲಿ ಕರ್ನಾಟಕದ ತುಮಕೂರು ಕೈಗಾರಿಕಾ ಪ್ರದೇಶ ಮತ್ತು ಆಂಧ್ರಪ್ರದೇಶದ ಕೃಷ್ಣಪಟ್ಟಣ ಕೈಗಾರಿಕಾ ಪ್ರದೇಶದ ಕೈಗಾರಿಕಾ ಕಾರಿಡಾರ್ ಯೋಜನೆಗೆ ಯಲ್ಲಿ ಅನುಮೋದನೆ ನೀಡಲಾಗಿದೆ. ಈ ಗ್ರೀನ್ಫೀಲ್ಡ್ ಕೈಗಾರಿಕಾ ನಗರಗಳು ವಿಶ್ವಮಟ್ಟದ ಮೂಲಸೌಕರ್ಯ, ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಬಂದರುಗಳು ಮತ್ತು ಲಾಜಿಸ್ಟಿಕ್ ಹಬ್ಗಳಿಗೆ ಸರಕು ಸಾಗಣೆಗೆ ವಿಶ್ವಾಸಾರ್ಹ ಮತ್ತು ಗುಣಮಟ್ಟದ ಮೂಲಸೌಕರ್ಯಗಳನ್ನು ಹೊಂದಲಿವೆ.
ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ
ಈ ಯೋಜನೆಗಳು ಕೈಗಾರಿಕೀಕರಣದ ಮೂಲಕ ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ. ಕೃಷ್ಣಪಟ್ಟಣಂ ಕಾರಿಡಾರ್, ಮೊದಲ ಹಂತದ ಅಭಿವೃದ್ಧಿಯನ್ನು ಪೂರ್ಣಗೊಳಿಸಿದ ನಂತರ ಸುಮಾರು 98,000 ವ್ಯಕ್ತಿಗಳಿಗೆ ಉದ್ಯೋಗ ಸೃಷ್ಟಿಸುತ್ತದೆ. ಅದರಲ್ಲಿ ಸುಮಾರು 58,000 ಜನರು ಈ ಸ್ಥಳದಲ್ಲಿ ಉದ್ಯೋಗ ಪಡೆಯುವ ಸಾಧ್ಯತೆಯಿದೆ. ತುಮಕೂರು ಕಾರಿಡಾರ್, ಸುಮಾರು 88,500 ವ್ಯಕ್ತಿಗಳಿಗೆ ಉದ್ಯೋಗವನ್ನು ಸೃಷ್ಟಿಸುತ್ತದೆ. ಈ ಪೈಕಿ 17,700 ಜನರು ಆರಂಭಿಕ ಅಭಿವೃದ್ಧಿ ಹಂತದಲ್ಲಿ ಚಿಲ್ಲರೆ ವ್ಯಾಪಾರ, ಕಚೇರಿಗಳು ಮತ್ತು ಇತರ ವಾಣಿಜ್ಯ ಅವಕಾಶಗಳಂತಹ ಸೇವಾ ಉದ್ಯಮಗಳಿಂದ ಉದ್ಯೋಗ ಪಡೆಯಲಿದ್ದಾರೆ.
ನೋಯ್ಡಾ ಮಲ್ಟಿ ಮೋಡಲ್ ಲಾಜಿಸ್ಟಿಕ್ಸ್ ಹಬ್
ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಮಲ್ಟಿ ಮೋಡಲ್ ಲಾಜಿಸ್ಟಿಕ್ಸ್ ಹಬ್ (ಎಂಎಂಎಲ್ಹೆಚ್) ಮತ್ತು ಮಲ್ಟಿ ಮೋಡಲ್ ಸಾರಿಗೆ ಹಬ್ (ಎಂಎಂಟಿಎಚ್) ಯೋಜನೆಗಳು. ಪೂರ್ವ ಪೆರಿಫೆರಲ್ ಎಕ್ಸ್ಪ್ರೆಸ್ವೇ, ರಾಷ್ಟ್ರೀಯ ಹೆದ್ದಾರಿ 91, ನೋಯ್ಡಾ- ಗ್ರೇಟರ್ ನೋಯ್ಡಾ ಎಕ್ಸ್ಪ್ರೆಸ್ ವೇ, ಯಮುನಾ ಎಕ್ಸ್ಪ್ರೆಸ್ ವೇ, ಪೂರ್ವ ಮತ್ತು ಪಶ್ಚಿಮ ಸರಕು ಸಾಗಣೆ ಕಾರಿಡಾರ್ಗಳಿಗೆ ಹತ್ತಿರದಲ್ಲಿದೆ.
ಲಾಜಿಸ್ಟಿಕ್ಸ್ ಹಬ್ ಯೋಜನೆಯನ್ನು ವಿಶ್ವ ದರ್ಜೆಯ ಸೌಲಭ್ಯವಾಗಿ ಅಭಿವೃದ್ಧಿಪಡಿಸಲಾಗುವುದು, ಇದು ಮೀಸಲು ಸರಕು ಸಾಗಣೆ ಕಾರಿಡಾರ್ಗಳಿಗೆ (ಡಿಎಫ್ಸಿ) ಸರಕುಗಳನ್ನು ಸಮರ್ಥವಾಗಿ ಸಂಗ್ರಹಿಸಲು ಮತ್ತು ಸರಕು ಸಾಗಣೆ ಕಂಪನಿಗಳು ಮತ್ತು ಗ್ರಾಹಕರಿಗೆ ಒಂದು ನಿಲುಗಡೆಯ ತಾಣವನ್ನು ಒದಗಿಸುತ್ತದೆ. ಈ ಸೌಲಭ್ಯವು ಪ್ರಮಾಣಿತ ಕಂಟೇನರ್ ನಿರ್ವಹಣಾ ಚಟುವಟಿಕೆಗಳನ್ನು ಒದಗಿಸುವುದಲ್ಲದೆ, ಕಾರ್ಯಾಚರಣೆಗಳ ಸುಧಾರಿತ ದಕ್ಷತೆಯೊಂದಿಗೆ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು ವಿವಿಧ ಮೌಲ್ಯವರ್ಧಿತ ಸೇವೆಗಳನ್ನು ಸಹ ಒದಗಿಸುತ್ತದೆ.
ಮಲ್ಟಿ ಮೋಡಲ್ ಟ್ರಾನ್ಸ್ಪೋರ್ಟ್ ಹಬ್
ಈಗಾಗಲೇ ಅಸ್ತಿತ್ವದಲ್ಲಿರುವ ಬೊರಾಕಿ ರೈಲ್ವೆ ನಿಲ್ದಾಣದ ಬಳಿ ಇರುವ ಮಲ್ಟಿ ಮೋಡಲ್ ಟ್ರಾನ್ಸ್ಪೋರ್ಟ್ ಹಬ್ (ಎಂಎಂಟಿಎಚ್) ಯೋಜನೆಯು ಸಾರಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸಲಿದ್ದು, ಪ್ರಯಾಣಿಕರಿಗೆ ರೈಲ್ವೆ, ರಸ್ತೆ ಮತ್ತು ಎಂಆರ್ಟಿಎಸ್ ಸೇವೆಯನ್ನು ತಡೆರಹಿತವಾಗಿ ಒದಗಿಸುತ್ತದೆ. ಎಂಎಂಟಿಎಚ್ ಅಂತಾರಾಜ್ಯ ಬಸ್ ಟರ್ಮಿನಲ್ (ಐಎಸ್ಬಿಟಿ), ಸ್ಥಳೀಯ ಬಸ್ ಟರ್ಮಿನಲ್ (ಎಲ್ಬಿಟಿ), ಮೆಟ್ರೋ, ವಾಣಿಜ್ಯ, ಚಿಲ್ಲರೆ ಮತ್ತು ಹೋಟೆಲ್ ಗಳಿಗೆ ಸ್ಥಳಾವಕಾಶವನ್ನು ಹೊಂದಿರುತ್ತದೆ. ಈ ಯೋಜನೆಯು ಉತ್ತರ ಪ್ರದೇಶದಲ್ಲಿ ಮುಂಬರುವ ಬೆಳವಣಿಗೆಗಳಿಗೆ ಪೂರಕವಾಗಿ ಹೆಚ್ಚುತ್ತಿರುವ ಜನಸಂಖ್ಯೆಗೆ ವಿಶ್ವ ದರ್ಜೆಯ ಪ್ರಯಾಣಿಕರ ಸಂಚಾರ ಸೌಲಭ್ಯಗಳನ್ನು ಒದಗಿಸುತ್ತದೆ. ಇದರಿಂದ ಎನ್ಸಿಆರ್ನ ಉಪ-ಪ್ರದೇಶ ಮತ್ತು ದೆಹಲಿಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಈ ಎರಡೂ ಯೋಜನೆಗಳಿಂದ 2040 ರ ವೇಳೆಗೆ ಸುಮಾರು 1,00,000 ಜನರು ಉದ್ಯೋಗಾವಕಾಶವನ್ನು ಪಡೆಯಲಿದ್ದಾರೆ. ಇದು ಸುತ್ತಮುತ್ತಲಿನ ಪ್ರದೇಶಗಳ ಬೆಳವಣಿಗೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.