5G ತಂತ್ರಜ್ಞಾನ ತ್ವರಿತ ಗತಿಯಲ್ಲಿ ಅಳವಡಿಕೆ: ನಿರ್ಮಲಾ ಘೋಷಣೆ
ನವದೆಹಲಿ, ಫೆ.1: ಭಾರತದಲ್ಲಿ 5G ತಂತ್ರಜ್ಞಾನ ತ್ವರಿತ ಗತಿಯಲ್ಲಿ ಅಳವಡಿಕೆ ಮತ್ತು ಸುರಕ್ಷಿತ ನೆಟ್ವರ್ಕ್ ಒದಗಿಸಬಲ್ಲ ವಿಶ್ವಾಸಾರ್ಹ ಪಾಲುದಾರರನ್ನು ಸರ್ಕಾರ ಎದುರು ನೋಡುತ್ತಿದೆ. ಈ ಉನ್ನತ ತಂತ್ರಜ್ಞಾನದ ಕ್ಷೇತ್ರದಲ್ಲಿ ಹೂಡಿಕೆ ಅಗತ್ಯ ಹೆಚ್ಚಿದೆ. ತರಂಗಾಂತರ ಗುಚ್ಛ ಹಂಚಿಕೆ ಬಗ್ಗೆ ಶೀಘ್ರವೇ ಅಧಿಸೂಚನೆ ಹೊರಡಿಸಲಾಗುತ್ತದೆ. ತಂತ್ರಜ್ಞಾನದ ಇತಿಮಿತಿ ಹಾಗೂ ಆರೋಗ್ಯದ ಮೇಲಿನ ಪರಿಣಾಮದ ಬಗ್ಗೆ ಬಂದಿರುವ ವರದಿಗಳನ್ನು ಪರಿಗಣಿಸಲಾಗುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಕೇಂದ್ರ ಬಜೆಟ್ 2022-23 ಅನ್ನು ಮಂಡಿಸಿದ್ದಾರೆ. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ 10ನೇ ಬಜೆಟ್ ಮತ್ತು ಸೀತಾರಾಮನ್ ಮಂಡಿಸುತ್ತಿರುವ ನಾಲ್ಕನೇ ಬಜೆಟ್ ಆಗಿದೆ. ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾತನಾಡುವ ಮೂಲಕ ಸಂಸತ್ತಿನಲ್ಲಿ ಬಜೆಟ್ ಅಧಿವೇಶನವನ್ನು ಪ್ರಾರಂಭಿಸಿದರು. ಇದಾದ ಬಳಿಕ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡಿಸಿದರು.
ಬಜೆಟ್ ಅಧಿವೇಶನದ ಮೊದಲಾರ್ಧವು ಜನವರಿ 31 ರಿಂದ ಫೆಬ್ರವರಿ 11 ರವರೆಗೆ ನಡೆಯುತ್ತದೆ, ದ್ವಿತೀಯಾರ್ಧವು ಮಾರ್ಚ್ 14 ರಿಂದ ಏಪ್ರಿಲ್ 8 ರವರೆಗೆ ಇರುತ್ತದೆ. ರಾಜ್ಯಸಭೆಯಲ್ಲಿ ಬಜೆಟ್ ಮಂಡಿಸುವ ಮೊದಲು ಸಂಸತ್ತಿನ ಕೆಳಮನೆ ಎನಿಸಿರುವ ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ. ಈ ಸಲದ ಕೇಂದ್ರ ಬಜೆಟ್ 2022ರ ಮೇಲೆ ಉದ್ಯೋಗಿಗಳು, ಉದ್ಯಮಿಗಳು, ಕೃಷಿಕರು ಹಾಗೂ ಸಾಮಾನ್ಯ ಜನರು ಹೆಚ್ಚಿನ ನಿರೀಕ್ಷೆಗಳನ್ನಿಟ್ಟುಕೊಂಡಿದ್ದು, ಆರೋಗ್ಯ ವಲಯ ಹಾಗೂ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನದ ನೀಡುವ ಸಾಧ್ಯತೆಯಿದೆ.
ಕ್ವಾಲ್ಕಾಮ್ ಆಸಕ್ತಿ ತೋರಿದೆ
ಯುಎಸ್ ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರು ಅಲ್ಲಿನ ಪ್ರಮುಖ ಸಂಸ್ಥೆಗಳ ಸಿಇಒಗಳ ಜೊತೆ ನಡೆಸಿದ ಮಾತುಕತೆಯಲ್ಲಿ ಹೆಚ್ಚಿನ ಚರ್ಚೆ ಟೆಲಿಕಾಂ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ್ದು ಎಂಬುದು ಗಮನಾರ್ಹ. ಭಾರತದಲ್ಲಿ 5 ಜಿ ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡಲು ಪ್ರಮುಖ ಸಂಸ್ಥೆ ಕ್ವಾಲ್ಕಾಮ್ ಆಸಕ್ತಿ ತೋರಿದೆ. ಸ್ಯಾನ್ ಡಿಯಾಗೋ ಮೂಲದ ಈ ಕಂಪನಿಯು ವೈರ್ಲೆಸ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸೆಮಿಕಂಡಕ್ಟರ್ಗಳು, ಸಾಫ್ಟ್ವೇರ್ ಮತ್ತು ಸೇವೆಗಳನ್ನು ನೀಡುತ್ತಿದೆ ಮತ್ತು ಪ್ರವರ್ತಕ ಉತ್ಪನ್ನಗಳ ಶ್ರೇಣಿಯೊಂದಿಗೆ 5G ತಂತ್ರಜ್ಞಾನ ಒದಗಿಸಬಲ್ಲ ಸಾಮರ್ಥ್ಯ ಹೊಂದಿದೆ.
13 ನಗರಗಳಲ್ಲಿ 5ಜಿ ತಂತ್ರಜ್ಞಾನ
ಭಾರತದಲ್ಲಿ ಮುಂದಿನ ವರ್ಷ 5ಜಿ ಸೇವೆಯನ್ನು ಅಧಿಕೃತವಾಗಿ ಜಾರಿಗೆ ತರಲಾಗುತ್ತಿದೆ. ಮೊದಲ ಹಂತದಲ್ಲಿ ಪ್ರಮುಖ 13 ನಗರಗಳಲ್ಲಿ 5ಜಿ ತಂತ್ರಜ್ಞಾನ ಅಳವಡಿಸಲಾಗುತ್ತದೆ ಎಂದು ದೂರಸಂಪರ್ಕ ಇಲಾಖೆ ಮೂಲಗಳು ತಿಳಿಸಿವೆ. ಗುರುಗ್ರಾಮ, ಬೆಂಗಳೂರು, ಕೋಲ್ಕತಾ, ದೆಹಲಿ, ಅಹಮದಾಬಾದ್, ಹೈದರಾಬಾದ್, ಪುಣೆ, ಚೆನ್ನೈ, ಲಕ್ನೋ, ಚಂಡೀಗಢ, ಜಾಮ್ ನಗರ್ ಹಾಗೂ ಗಾಂಧಿನಗರದಲ್ಲಿ ಮೊದಲಿಗೆ ಈ ತಂತ್ರಜ್ಞಾನದ ಪ್ರಯೋಜನ ಗ್ರಾಹಕರಿಗೆ ಲಭ್ಯವಾಗಲಿದೆ. ಮಾರ್ಚ್ -ಏಪ್ರಿಲ್ 2022ರ ವೇಳೆಗೆ 5ಜಿ ಜಾರಿಗೆ ತರುವ ಮುನ್ನ ತರಂಗಗುಚ್ಛ ಹಂಚಿಕೆ ಹರಾಜು ಪ್ರಕ್ರಿಯೆಯನ್ನು ಸರ್ಕಾರ ನಡೆಸಲಿದೆ.
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಲವು ಕ್ರಮ
ಮೊಬೈಲ್ ಟವರ್ಗಳು ಹೊರಹಾಕುವ ಇಎಂಎಫ್ ಕಿರಣಗಳು ಆರೋಗ್ಯದ ಮೇಲೆ ಪರಿಣಾಮ ಬೀರಲಿವೆ ಎಂಬ ಕುರಿತು ಜನಸಾಮಾನ್ಯರಲ್ಲಿರುವ ಭಯವನ್ನು ಹೋಗಲಾಡಿಸಲು ದೂರಸಂಪರ್ಕ ಇಲಾಖೆ ಇಎಂಎಫ್ ವಿಕಿರಣ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ.
ರಾಷ್ಟ್ರವ್ಯಾಪಿ ಜಾಗೃತಿ ಕಾರ್ಯಕ್ರಮ, ಇಎಂಎಫ್ ಗೆ ಸಂಬಂಧಿಸಿದ ನಾನಾ ವಿಷಯಗಳ ಕುರಿತ ಕರಪತ್ರ/ಮಾಹಿತಿ ಕೈಪಿಡಿ ವಿತರಣೆ, ಡಿಒಟಿ ವೆಬ್ ಸೈಟ್ ನಲ್ಲಿ ಇಎಂಎಫ್ ಗೆ ಸಂಬಂಧಿಸಿದ ವಿಸ್ತೃತ ಮಾಹಿತಿ ಪ್ರಕಟಣೆ 'ತರಂಗ್ ಸಂಚಾರ್' ಪೋರ್ಟಲ್ ಆರಂಭ ಕುರಿತು ದಿನಪತ್ರಿಕೆಗಳಲ್ಲಿ ಜಾಹಿರಾತು ಮತ್ತಿತರ ಕ್ರಮಗಳು ಸೇರಿವೆ. ದೂರಸಂಪರ್ಕ ಇಲಾಖೆಯ ಕ್ಷೇತ್ರ ಘಟಕಗಳು, ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹೆಚ್ಚು ಹೆಚ್ಚು ಜನರಿಗೆ ಮೊಬೈಲ್ ಟವರ್ ಗಳು ಹೊರಹಾಕುವ ಇಎಂಎಫ್ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಕುರಿತ ವೈಜ್ಞಾನಿಕ ವಾಸ್ತವಾಂಶಗಳ ಬಗ್ಗೆ ಅರಿವು ಮೂಡಿಸುತ್ತಿದೆ.
Recommended Video
5ಜಿ ಪ್ರಯೋಗ:
ಪುಣೆ ನಗರದಲ್ಲಿ, ವಿ ತನ್ನ 5 ಜಿ ಪ್ರಯೋಗವನ್ನು ಕ್ಲೌಡ್ ಕೋರ್, ಹೊಸ ತಲೆಮಾರಿನ ಸಾರಿಗೆ ಮತ್ತು ರೇಡಿಯೋ ಪ್ರವೇಶ ಜಾಲದ ಎಂಡ್-ಟು-ಎಂಡ್ ಕ್ಯಾಪ್ಟಿವ್ ನೆಟ್ವರ್ಕ್ನ ಲ್ಯಾಬ್ ಸೆಟಪ್ನಲ್ಲಿ ನಡೆಸಿದೆ. ಈ ಪ್ರಯೋಗದಲ್ಲಿ, ಎಂಎಂ ವೇವ್ ಸ್ಪೆಕ್ಟ್ರಮ್ ಬ್ಯಾಂಡ್ನಲ್ಲಿ ಅತಿ ಕಡಿಮೆ ಸುಪ್ತತೆಯೊಂದಿಗೆ ವಿ 3.7 ಜಿಬಿಪಿಎಸ್ಗಿಂತ ಹೆಚ್ಚಿನ ವೇಗವನ್ನು ಸಾಧಿಸಿದೆ.
5ಜಿ ನೆಟ್ವರ್ಕ್ನ ಹೆಚ್ಚಿನ ವೇಗ ಮತ್ತು ಕಡಿಮೆ ಲೇಟೆನ್ಸಿ ಗುಣಲಕ್ಷಣಗಳು ಸುಧಾರಿತ ಕಣ್ಗಾವಲು ಮತ್ತು ವೀಡಿಯೋ ಸ್ಟ್ರೀಮಿಂಗ್/ಪ್ರಸಾರದಂತಹ ಅನೇಕ ಸಾಮರ್ಥ್ಯಗಳನ್ನು ಹೊಂದಿವೆ; ವರ್ಧಿತ ಆನ್ಲೈನ್ ಗೇಮಿಂಗ್ ಅನುಭವಕ್ಕಾಗಿ ಎಆರ್/ವಿಆರ್ ಸೌಲಭ್ಯವನ್ನು ಹೊಂದಿದೆ; ಮತ್ತು 5ಜಿ ಸ್ಮಾರ್ಟ್ ಕಾರ್ಖಾನೆಯ ವಿಕಾಸವನ್ನು ಇದು ಸಕ್ರಿಯಗೊಳಿಸುತ್ತದೆ. ಉದ್ಯಮ 4.0 ಮತ್ತು 5 ಜಿ ಸ್ಮಾರ್ಟ್ ಸಿಟಿ ಯೋಜನೆಗಳು 5ಜಿ ನಿಯೋಜನೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ಮತ್ತು ದೇಶದಲ್ಲಿ ತಂತ್ರಜ್ಞಾನದ ಪ್ರಗತಿಯ ಭರವಸೆಯ ಹೊಸ ಯುಗಕ್ಕೆ ನಾಂದಿ ಹಾಡಲಿವೆ. ಇನ್ನೊಂದೆಡೆ, ಕ್ವಾಲ್ಕಾಮ್ ಮತ್ತು ಜಿಯೋ ಭಾರತದಲ್ಲಿ 5 ಜಿ ಪ್ರಯೋಗಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದು, ಜಿಯೋ 5 ಜಿ ವಿಭಾಗದಲ್ಲಿ, 1 ಜಿಬಿಪಿಎಸ್ ಮೈಲಿಗಲ್ಲು ಸಾಧಿಸಿದೆ ಎಂದು ರಿಲಯನ್ಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ವಾರ್ಷಿಕ ವರದಿಯಲ್ಲಿ ತಿಳಿಸಿದ್ದಾರೆ.