ಬಿಎಸ್ಎನ್ಎಲ್ ಸ್ವಯಂನಿವೃತ್ತಿ, 1 ಲಕ್ಷ ಉದ್ಯೋಗಿಗಳಿಗೆ ಜಾರಿ
ಬೆಂಗಳೂರು, ನವೆಂಬರ್ 07: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ(ಬಿಎಸ್ಎನ್ಎಲ್) ತನ್ನ ಸಿಬ್ಬಂದಿಗಳಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್ ಎಸ್) ಪ್ಯಾಕೇಜ್ ಅನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿದೆ. ಸುಮಾರು 70 ರಿಂದ 80 ಸಾವಿರ ಸಿಬ್ಬಂದಿಗಳು ವಿಆರ್ ಎಸ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಈ ಯೋಜನೆ ನವೆಂಬರ್ 4ರಿಂದ ಡಿಸೆಂಬರ್ 3ರವರೆಗೆ ತೆರೆದಿರುತ್ತದೆ.
ಒಟ್ಟಾರೆಯಾಗಿ ಒಂದೂವರೆ ಲಕ್ಷ ಸಿಬ್ಬಂದಿ ಬಿಎಸ್ ಎನ್ ಎಲ್ ನಲ್ಲಿ ಇದ್ದಾರೆ. ಅದರಲ್ಲಿ ಒಂದು ಲಕ್ಷ ಮಂದಿ ವಿಆರ್ ಎಸ್ ಗೆ ಅರ್ಹರಿದ್ದಾರೆ.ಇದರಿಂದ ವೇತನದಲ್ಲಿ ಏಳು ಸಾವಿರ ಕೋಟಿ ರುಪಾಯಿಗೂ ಹೆಚ್ಚು ಉಳಿತಾಯ ಆಗಲಿದೆ. "ಇದು ಸರ್ಕಾರ ನೀಡುತ್ತಿರುವ ಅತ್ಯುತ್ತಮ ವಿಆರ್ ಎಸ್ ಯೋಜನೆ. ಬಿಎಸ್ ಎನ್ ಎಲ್ ಸಿಬ್ಬಂದಿ ಇದನ್ನು ಸಕಾರಾತ್ಮಕ ಮನಸ್ತತ್ವದಿಂದ ನೋಡಬೇಕು" ಎಂದು ಬಿಎಸ್ ಎನ್ ಎಲ್ ಅಧ್ಯಕ್ಷ- ಕಾರ್ಯನಿರ್ವಾಹಕ ನಿರ್ದೇಶಕ ಪಿ. ಕೆ. ಪುರ್ವಾರ್ ಹೇಳಿದ್ದಾರೆ.
ಇದು ಸರ್ಕಾರ ನೀಡಿರುವ ಅತ್ಯುತಮ ವಿ. ಆರ್.ಎಸ್. ಆಗಿದೆ. ಬಿಎಸ್ಎನ್ಎಲ್ ಉದ್ಯೋಗಿಗಳು ಇದನ್ನು ಸಕಾರಾತ್ಮಕ ದೃಷ್ಟಿಯಿಂದ ನೋಡಬೇಕು ಎಂದು ಪುರ್ವಾರ್ ಹೇಳಿದ್ದಾರೆ. ಬಿಎಸ್ಎನ್ಎಲ್ ನ ಸ್ವಯಂ ನಿವೃತ್ತಿ ಯೋಜನೆಯನ್ನು ಪೂರ್ಣ ಕಾಲಿಕ ಹಾಗೂ ಖಾಯಂ ಉದ್ಯೋಗಿಗಳೆಲರೂ ಬಳಸಿಕೊಳ್ಳಬಹುದಾಗಿದೆ. ಬಿಎಸ್ಎನ್ಎಲ್ನಿಂದ ಹೊರಗೆ ನಿಯೋಜನೆಗೊಂಡವರೂ ಯೋಜನೆಗೆ ಅರ್ಹರಾಗಿದ್ದಾರೆ. 50 ವರ್ಷಕ್ಕೂ ಹೆಚ್ಚಿನವರು ಯೋಜನೆ ವ್ಯಾಪ್ತಿಗೆ ಬರುತ್ತಾರೆ.
ಈ ಯೋಜನೆಯ ಅನ್ವಯ ಅವರು ಪೂರ್ಣಗೊಳಿಸಿದ ವರ್ಷಗಳಿಗೆ ಪ್ರತಿ ವರ್ಷಕ್ಕೆ 35 ದಿನಗಳ ವೇತನ ಹಾಗೂ ಸೇವಾ ಅವಧಿ ಬಾಕಿ ಉಳಿದಿರುವ ಅವಧಿಗೆ ವರ್ಷಕ್ಕೆ 25 ದಿನಗಳಂತೆ ವೇತನ ನೀಡಲಾಗುವುದು ಎಂದು ಬಿಎಸ್ಎನ್ಎಲ್ ಪ್ರಕಟಿಸಿದೆ.
ಸೇವಾವಧಿಯ ಪ್ರತಿ ವರ್ಷದ ಎಣಿಕೆಯಂತೆ ಅರ್ಹ ಉದ್ಯೋಗಿಗಳಿಗೆ 35 ದಿನಗಳ ಸಂಬಳ ಹಾಗೂ ವಿಲೀನ ಪ್ರಕ್ರಿಯೆ ಸಂಪೂರ್ಣಗೊಳ್ಳುವ ತನಕ 25 ದಿನಗಳ ಎಣಿಕೆಯಂತೆ ಸಂಬಳ ಸಿಗಲಿದೆ.
ಬಿಎಸ್ಎನ್ಎಲ್ ನಂತೆ ಎಂಟಿಎನ್ಎಲ್ ಕೂಡಾ ವಿಆರ್ ಎಸ್ ಯೋಜನೆ ಜಾರಿಗೊಳಿಸಿದೆ. ಗುಜರಾತ್ ಮಾದರಿಯ ಈ ಯೋಜನೆ ಡಿಸೆಂಬರ್ 03, 2019ರ ತನಕ ಜಾರಿಯಲ್ಲಿರುತ್ತದೆ.