ಬಿಎಸ್ಎನ್ಎಲ್ ದಿವಾಳಿ?: ಲಕ್ಷಾಂತರ ಉದ್ಯೋಗಿಗಳಿಗೆ ಸಂಬಳ ಸಿಕ್ಕಿಲ್ಲ
ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ 'ಭಾರತ್ ಸಂಚಾರ ನಿಗಮ ಲಿಮಿಟೆಡ್' (ಬಿಎಸ್ಎನ್ಎಲ್) ನ ಆರ್ಥಿಕ ಪರಿಸ್ಥಿತಿ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹದಗೆಡುತ್ತಿದೆ. ಫೆಬ್ರವರಿ ತಿಂಗಳಿನಲ್ಲಿ 1.76 ಲಕ್ಷ ಉದ್ಯೋಗಿಗಳಿಗೆ ಸಂಬಳ ನೀಡಲು ಸಂಸ್ಥೆ ಬಳಿ ಹಣವಿಲ್ಲ ಎಂದು ತಿಳಿದು ಬಂದಿದ್ದು, ಈ ಕುರಿತಂತೆ ಫೈನಾನ್ಶಿಯಲ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಇದೇ ಮೊದಲ ಬಾರಿಗೆ ಬಿಎಸ್ಎನ್ಎಲ್ ಸಂಸ್ಥೆ ಇಂಥ ದುಃಸ್ಥಿತಿಗೆ ಬಂದಿದೆ. ಕಳೆದ ಐದು ವರ್ಷಗಳಿಂದ ನಷ್ಟದಲ್ಲಿರುವ ಟೆಲಿಕಾಂ ಸಂಸ್ಥೆಯ ಸಮಸ್ಯೆ ಬಗ್ಗೆ ಉದ್ಯೋಗಿಗಳ ಒಕ್ಕೂಟ(ಎಯುಎಬಿ)ವು ದೂರಸಂರ್ಪಕ ಸಚಿವ ಮನೋಜ್ ಸಿನ್ಹಾ ಅವರಿಗೆ ಈ ಬಗ್ಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ.
ಬಿಎಸ್ಎನ್ಎಲ್ ಸಿಬ್ಬಂದಿಗೆ ಸಿಹಿಸುದ್ದಿ ನೀಡಲಿದೆ ಮೋದಿ ಸರ್ಕಾರ್!
ಬಿಎಸ್ಎನ್ಎಲ್ನ ಒಟ್ಟು ಆದಾಯದ ಶೇ 55ರಷ್ಟು ಸಿಬ್ಬಂದಿ ವೇತನ ಪಾವತಿಗೆ ವಿನಿಯೋಗವಾಗುತ್ತಿದೆ. ವಾರ್ಷಿಕವಾಗಿ ಸಂಸ್ಥೆಯ ವೇತನಶುಲ್ಕ ಶೇ 8ರಷ್ಟು ಹೆಚ್ಚಳವಾಗುತ್ತಿದೆ. ಆದರೆ, ಆದಾಯ ಮಾತ್ರ ನಿಧಾನಗತಿಯಲ್ಲಿ ಸಾಗುತ್ತಿದೆ.
ಟೆಲಿಕಾಂ ಮಾರುಕಟ್ಟೆಯ ದರ ಸಮರದಲ್ಲಿ ಸಂಪೂರ್ಣವಾಗಿ ಹಿನ್ನಡೆ ಅನುಭವಿಸಿರುವ ಬಿಎಸ್ಎನ್ಎಲ್ಆದಾಯವಿಲ್ಲದೇ ದಿವಾಳಿತನ ಹಾದಿ ಹಿಡಿದಿದೆ ಎಂದು ಬಿಎಸ್ಎನ್ಎಲ್ ಉದ್ಯೋಗಿಗಳ ಒಕ್ಕೂಟ ಹೇಳಿದೆ.
ದೆಹಲಿ, ಕೇರಳ, ಜಮ್ಮು ಮತ್ತು ಕಾಶ್ಮೀರ, ಒಡಿಶಾ ಕಚೇರಿಯ ಸಿಬ್ಬಂದಿಗೆ ಫೆಬ್ರವರಿ ತಿಂಗಳ ವೇತನ ಪಾವತಿಸಲು ಆರಂಭಿಸಲಾಗಿದೆ. ಸರ್ಕಾರದ ಯಾವುದೇ ರೀತಿಯ ಹಣಕಾಸಿನ ಬೆಂಬಲ ನೀಡದ ಕಾರಣ ವೇತನ ಪಾವತಿ ವಿಳಂಬವಾಗುತ್ತಿದೆ ಎಂದು ಬಿಎಸ್ಎನ್ಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಎಸ್ಎನ್ಎಲ್ ನಿಂದ ಹೊಸ ಬ್ರಾಡ್ ಬ್ಯಾಂಡ್ ಯೋಜನೆ
ಬಿಎಸ್ಎನ್ಎಲ್ ನಷ್ಟದ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದೆ. ವರದಿ ಪ್ರಕಾರ, 2018ರಲ್ಲಿ ಸುಮಾರು 8 ಸಾವಿರ ಕೋಟಿ ರು ನಷ್ಟು ನಷ್ಟ ಎದುರಿಸಿದೆ. 2017ರ ಆರ್ಥಿಕ ವರ್ಷದಲ್ಲಿ 4,786 ಕೋಟಿ ರು, 2019ರಲ್ಲಿ 8 ಸಾವಿರ ಕೋಟಿ ರುಗೂ ಅಧಿಕ ನಷ್ಟ ನಿರೀಕ್ಷಿಸಲಾಗಿದೆ.