ಚಿಣ್ಣರ ಅಚ್ಚುಮೆಚ್ಚಿನ ಮ್ಯಾಗಜೀನ್ ಚಂದಮಾಮ ಮಾರಿಬಿಡಿ : ಹೈಕೋರ್ಟ್
ಮುಂಬೈ, ಜನವರಿ 17:ಕನ್ನಡ, ಸಂಸ್ಕೃತ ಸೇರಿದಂತೆ ಒಟ್ಟು 13 ಭಾಷೆಗಳಲ್ಲಿ ಅಚ್ಚಾಗಿ ದೇಶದ ಜನತೆಯ ಬಾಲ್ಯದ ನೆಚ್ಚಿನ ಒಡನಾಡಿಯಾಗಿ ಬೆಳೆದ ದೇಶದ ಅಚ್ಚುಮೆಚ್ಚಿನ ನಿಯತಕಾಲಿಕ ಚಂದಮಾಮ ಈಗ ಮಾರಾಟಕ್ಕಿದೆ. ಚೆನ್ನೈ ಮೂಲದ ಚಂದಮಾಮಕ್ಕೆ ಸೇರಿದ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಹೊಂದಿದ್ದ ಜಿಯೋಡೆಸಿಕ್ ಲಿಮಿಟೆಡ್ ಸಂಸ್ಥೆಯ ಮಾಲೀಕರು ಸದ್ಯ ವಂಚನೆ ಪ್ರಕರಣವೊಂದರಲ್ಲಿ ಸಿಲುಕಿ ಜೈಲುಪಾಲಾಗಿದ್ದಾರೆ. ಹೀಗಾಗಿ, 2014ರಲ್ಲಿ ಜಿಯೋಡೆಸಿಕ್ ಸಂಸ್ಥೆ ದಿವಾಳಿಯಾಗಿ ಸ್ಥಗಿತಗೊಂಡಿದ್ದು, ಚಂದಮಾಮ ಮ್ಯಾಗಜೀನ್ ಮಾರಲು ಅಡ್ಡಿಯಿಲ್ಲ ಎಂದು ಬಾಂಬೆ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಭಾರತ ಸ್ವಾತಂತ್ರ್ಯ ಪಡೆಯುವುದಕ್ಕೂ ಮುನ್ನ ಜುಲೈ, 1947ರಲ್ಲಿ ಬಿ.ನಾಗಿ ರೆಡ್ಡಿ ಹಾಗೂ ಚಕ್ರಪಾಣಿ ಅವರಿಂದ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಚಂದಮಾಮ ಮಕ್ಕಳ ನಿಯತಕಾಲಿಕ ಪ್ರಕಟವಾಯಿತು. ನಂತರ ಉಳಿದ ಭಾಷೆಗಳಲ್ಲೂ ಜನಪ್ರಿಯತೆ ಗಳಿಸಿಕೊಂಡಿತು. 2004ರಲ್ಲಿ ಜಿಯೋಡೆಸಿಕ್ ಸಂಸ್ಥೆ ಆರ್ಥಿಕ ಮುಗ್ಗಟ್ಟು ಎದುರಿಸಿ ಸ್ಥಗಿತಗೊಂಡಿತು. 2010ರಲ್ಲಿ ಚಂದಮಾಮ ಪುನಃ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿತು. ಡಿಜಿಟಲ್ ಸಾಧ್ಯತೆಯನ್ನು ತನ್ನದಾಗಿಸಿಕೊಂಡು ಐಫೋನ್ ನಲ್ಲೂ ಕಾಣಿಸಿಕೊಂಡಿತು.
ಚಂದಮಾಮಾದ ಚೆಂದದ ಪೌರಾಣಿಕ ಕಥೆಗಳ ಯುಗಾಂತ್ಯ
ಜಿಯೊಸೆಕ್ನ ಮೂವರು ನಿರ್ದೇಶಕರಾದ ಕಿರಣ್ ಪ್ರಕಾಶ್ ಕುಲಕರ್ಣಿ, ಪ್ರಶಾಂತ್ ಮುಲೇಕರ್ ಹಾಗೂ ಪಂಕಜ್ ಶ್ರೀವಾಸ್ತವ ಹಾಗೂ ಕಂಪೆನಿಯ ಲೆಕ್ಕಪರಿಶೋಧಕ ದಿನೇಶ್ ಜಜೋಡಿಯಾ ಪ್ರಸ್ತುತ ಬಂಧನದಲ್ಲಿದ್ದಾರೆ.
ಮೂಲಗಳ ಪ್ರಕಾರ, ಚಂದಮಾಮ ನಿಯತಕಾಲಿಕ ಒಂದೇ 25 ಕೋ.ರೂ. ಬೆಲೆ ಬಾಳುತ್ತದೆ. ಚಂದಮಾಮವಲ್ಲದೆ ಜಾರಿನಿರ್ದೇಶನಾಲಯ ಪಿಎಂಎಲ್ಎ ಪ್ರಕಾರ ಜಿಯೊಡೆಸಿಕ್ ಲಿ. ನಿರ್ದೇಶಕರ 16 ಕೋ.ರೂ. ಆಸ್ತಿಯನ್ನು ಸೇರಿಸಿಕೊಂಡಿದೆ.
15ಕ್ಕೂ ಅಧಿಕ ವಿದೇಶಿ ಕರೆನ್ಸಿ ಪರಿವರ್ತಕ ಬಾಂಡ್ (FCCB) ಹೊಂದಿದವರಿಗೆ 162 ಮಿಲಿಯನ್ ಯುಎಸ್ ಡಾಲರ್ (ಸುಮಾರು 1000 ಕೋಟಿ ರು) ನೀಡಲು ವಿಫಲರಾಗಿದ್ದರಿಂದ ಜಿಯೋಸೆಡಿಕ್ ಆಸ್ತಿಯನ್ನು ಕೋರ್ಟ್ ತನ್ನ ವಶಕ್ಕೆ ತೆಗೆದುಕೊಂಡಿದೆ. ಈ ಕಂಪೆನಿ ಹಾಗೂ ಅಧಿಕಾರಿಗಳ ಮೇಲೆ ತೆರಿಗೆ ವಂಚಿಸಿದ ಆರೋಪಕ್ಕೆ ಸಂಬಂಧಿಸಿ ಇಡಿ, ಆರ್ಥಿಕ ಅಪರಾಧ ವಿಭಾಗ ಹಾಗೂ ಮುಂಬೈ ಪೊಲೀಸರು ನಿಗಾಹಿಸಿದ್ದಾರೆ.