ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ದಲಾಲ್ ಸ್ಟ್ರೀಟ್ನ ಬಿಗ್ ಬುಲ್ ರಾಕೇಶ್ ಜುಂಜುನ್ ವಾಲ ನೀಡಿರುವ ಸಲಹೆಗಳಿವು
ಮುಂಬೈ, ಆಗಸ್ಟ್ 14: ರಾಕೇಶ್ ಜುಂಜುನ್ ವಾಲರನ್ನು ಸಾಮಾನ್ಯವಾಗಿ ಭಾರತದ ವಾರೆನ್ ಬಫೆಟ್ ಎಂದು ಕರೆಯಲಾಗುತ್ತದೆ. ಷೇರು ಮಾರುಕಟ್ಟೆ ಹೂಡಿಕೆಯಿಂದ ಆರಂಭಿಸಿ ಆಕಾಶ ಏರ್ ಎನ್ನುವ ವಿಮಾನಯಾನ ಸಂಸ್ಥೆ ಕಟ್ಟುವವರೆಗೆ ಅವರು ಸಾಧಿಸಿದ್ದು ಅಪಾರ.
ಷೇರು ಮಾರುಕಟ್ಟೆ ಬಗ್ಗೆ ಅರಿವು, ಮುಂದಾಲೋಚನೆ, ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಅವರಷ್ಟು ಯಶಸ್ವಿಯಾದವರು ಭಾರತದ ಷೇರುಮಾರುಕಟ್ಟೆಯಲ್ಲಿ ಇನ್ನೊಬ್ಬರಿಲ್ಲ. ಅವರು ಖರೀದಿ ಮಾಡಿದ ಎಲ್ಲಾ ಷೇರುಗಳು ಉತ್ತಮ ಲಾಭ ಕಂಡಿವೆ. ಆ ಮಟ್ಟಿಗೆ ಅವರು ಲೆಕ್ಕಾಚಾರ ಹಾಕಿ ಷೇರುಗಳ ಮೇಲೆ ಬಂಡವಾಳ ಹೂಡಿಕೆ ಮಾಡುತ್ತಿದ್ದರು.
ಉದ್ಯಮಿ ರಾಕೇಶ್ ಜುಂಜುನ್ ವಾಲ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ
ಅವರ ಚಾಣಾಕ್ಷತನವೇ ಅವರನ್ನು ಭಾರತದ ಅತಿ ಶ್ರೀಮಂತರ ಪಟ್ಟಿಯಲ್ಲಿ ಸೇರುವಂತೆ ಮಾಡಿತ್ತು. ರಾಕೇಶ್ ಜುಂಜುನ್ ವಾಲ ಅವರ ಸದ್ಯದ ಒಟ್ಟು ಆಸ್ತಿ ಮೌಲ್ಯ 5.8 ಬಿಲಿಯನ್ ಡಾಲರ್ ಅಂದರೆ 46 ಸಾವಿರ ಕೋಟಿ ರುಪಾಯಿಗಳಿಗಿಂತ ಅಧಿಕ.
ಜುಲೈ 5, 1960 ರಂದು ಹೈದರಾಬಾದ್ನಲ್ಲಿ ಜನಿಸಿದ ರಾಕೇಶ್ ಜುಂಜುನ್ ವಾಲ ಮುಂಬೈನಲ್ಲಿ ಬೆಳೆದರು. ಸಿಡೆನ್ಹ್ಯಾಮ್ ಕಾಲೇಜಿನಿಂದ ಪದವಿ ಪಡೆದ ನಂತರ, ಅವರು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾಕ್ಕೆ ಸೇರಿಕೊಂಡರು ಮತ್ತು ಸ್ಟಾಕ್ ಮಾರುಕಟ್ಟೆ ಹೂಡಿಕೆದಾರರಾದ ರೇಖಾ ಜುಂಜುನ್ವಾಲಾ ಅವರನ್ನು ವಿವಾಹವಾದರು.
ಬುಹುತೇಕ ಷೇರುಗಳು ಲಾಭ ಗಳಿಕೆ
ಭಾರತದ ಷೇರು ಮಾರುಕಟ್ಟೆಯ ಬಿಗ್ ಬುಲ್ ಎಂದೇ ಕರೆಸಿಕೊಂಡಿದ್ದ ರಾಕೇಶ್ ಜುಂಜುನ್ ವಾಲ ಅವರು ಖರೀದಿಸಿದ ಬಹುತೇಕ ಷೇರುಗಳು ದುಪ್ಪಟ್ಟು ಲಾಭ ಗಳಿಸುವಲ್ಲಿ ಯಶಸ್ವಿಯಾಗಿವೆ. ಜುಂಜುನ್ವಾಲಾ ಅವರು ರೇರ್ (RARE) ಎಂಟರ್ಪ್ರೈಸಸ್ ಎಂಬ ಖಾಸಗಿ ಒಡೆತನದ ಷೇರು ವ್ಯಾಪಾರ ಸಂಸ್ಥೆಯನ್ನು ನಡೆಸುತ್ತಿದ್ದರು.
ಹಲವು ಪ್ರಮುಖ ಕಂಪನಿಗಳಲ್ಲಿ ರಾಕೇಶ್ ಜುಂಜುನ್ ವಾಲ ಷೇರುಗಳನ್ನು ಹೊಂದಿದ್ದಾರೆ. ಅವರು ಹೂಡಿಕೆ ಮಾಡಿರುವ ಬಹುತೇಕ ಕಂಪನಿಗಳು ಲಾಭದಲ್ಲಿವೆ.
Breaking News: ಜನಪ್ರಿಯ ಉದ್ಯಮಿ, ಹೂಡಿಕೆದಾರ ರಾಕೇಶ್ ಇನ್ನಿಲ್ಲ
ಆಕಾಶ ಏರ್ ವಿಮಾನಯಾನ ಸಂಸ್ಥೆಗೆ ಬಂಡವಾಳ
ಮಾಜಿ ಜೆಟ್ ಏರ್ವೇಸ್ ಸಿಇಒ ದುಬೆ ಮತ್ತು ಇಂಡಿಗೋ ಮಾಜಿ ಮುಖ್ಯಸ್ಥ ಆದಿತ್ಯ ಘೋಷ್ ಜೊತೆಗೂಡಿ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿರುವ ಆಕಾಶ ಏರ್ಲೈನ್ಸ್ಗೆ ಬಂಡವಾಳ ಹೂಡಿರುವುದು ಇದೇ ರಾಕೇಶ್ ಜುಂಜುನ್ವಾಲ.
ಇದೇ ತಿಂಗಳಲ್ಲಿ ಆಕಾಶ ಏರ್ಲೈನ್ಸ್ ಆರ್ಥಿಕ ರಾಜಧಾನಿ ಮುಂಬೈನಿಂದ ಅಹಮದಾಬಾದ್ ನಗರಕ್ಕೆ ಮೊದಲ ವಿಮಾನದೊಂದಿಗೆ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ವಿಮಾನಯಾನ ಕ್ಷೇತ್ರ ಉತ್ತಮವಾಗಿ ಕಾರ್ಯನಿರ್ವಹಿಸದಿರುವಾಗ ಈ ಸಾಹಸವನ್ನು ಏಕೆ ಆರಂಭಿಸಿದಿರಿ ಎಂದು ಕೇಳಿದ್ದ ಪ್ರಶ್ನೆಗೆ, "ನಾನು ವೈಫಲ್ಯಕ್ಕೆ ಸಿದ್ಧನಾಗಿದ್ದೇನೆ ಎಂದು ಹೇಳುತ್ತೇನೆ" ಎಂದು ಅವರು ಉತ್ತರಿಸಿದರು.
ಹೂಡಿಕೆ ಬಗ್ಗೆ ಜುಂಜುನ್ ವಾಲ ಮಾತುಗಳು
ಷೇರು ಮಾರುಕಟ್ಟೆ ಬಗ್ಗೆ, ಷೇರುಗಳ ಮೇಲೆ ಹೂಡಿಕೆ ಬಗ್ಗೆ ರಾಕೇಶ್ ಜುಂಜುನ್ ವಾಲ ಅವರು ಹೇಳಿರುವ ಪ್ರಮುಖ ಹೇಳಿಕೆಗಳು ಹಲವು ಯುವ ಉದ್ಯಮಿಗಳಿಗೆ, ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಮಾರ್ಗದರ್ಶನ ನೀಡುತ್ತವೆ. ಅಂತಹ ಕೆಲವು ಹೇಳಿಕೆಗಳನ್ನು ನೋಡುವುದಾದರೆ,
"ಮಾರುಕಟ್ಟೆಯನ್ನು ಗೌರವಿಸಿ. ಮುಕ್ತ ಮನಸ್ಸನ್ನು ಹೊಂದಿರಿ. ಏನನ್ನು ಖರೀದಿ ಮಾಡಬೇಕೆಂದು ತಿಳಿಯಿರಿ. ಯಾವಾಗ ನಷ್ಟವನ್ನು ತೆಗೆದುಕೊಳ್ಳಬೇಕೆಂದು ತಿಳಿಯಿರಿ. ಮತ್ತು ಜವಾಬ್ದಾರರಾಗಿರಿ."
"ಆತುರದಿಂದ ತೆಗೆದುಕೊಂಡ ನಿರ್ಧಾರಗಳು ಯಾವಾಗಲೂ ಭಾರಿ ನಷ್ಟವನ್ನು ಉಂಟುಮಾಡುತ್ತವೆ. ಯಾವುದೇ ಸ್ಟಾಕ್ನಲ್ಲಿ ಹಣವನ್ನು ಹಾಕುವ ಮೊದಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಿ."
"ಪ್ರವೃತ್ತಿಯನ್ನು ನಿರೀಕ್ಷಿಸಿ ಮತ್ತು ಅದರಿಂದ ಲಾಭ ಪಡೆಯಿರಿ. ವ್ಯಾಪಾರಿಗಳು ಮಾನವ ಸ್ವಭಾವಕ್ಕೆ ವಿರುದ್ಧವಾಗಿ ಹೋಗಬೇಕು."
"ಅಸಮಂಜಸವಾದ ಮೌಲ್ಯಮಾಪನಗಳಲ್ಲಿ ಎಂದಿಗೂ ಹೂಡಿಕೆ ಮಾಡಬೇಡಿ. ಪ್ರಚಾರದಲ್ಲಿರುವ ಕಂಪನಿಗಳ ಹಿಂದೆ ಎಂದಿಗೂ ಓಡಬೇಡಿ."
"ವ್ಯಾಪಾರವು ನಿಮ್ಮನ್ನು ನಿಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡುತ್ತದೆ, ಅದು ನಿಮ್ಮನ್ನು ಎಚ್ಚರವಾಗಿರಿಸುತ್ತದೆ. ನಾನು ವ್ಯಾಪಾರ ಮಾಡಲು ಇಷ್ಟಪಡಲು ಇದು ಒಂದು ಕಾರಣವಾಗಿದೆ."
"ಭಾವನಾತ್ಮಕ ಹೂಡಿಕೆಯು ಷೇರು ಮಾರುಕಟ್ಟೆಗಳಲ್ಲಿ ನಷ್ಟವನ್ನುಂಟುಮಾಡುವ ಖಚಿತವಾದ ಮಾರ್ಗವಾಗಿದೆ."
"ನೀವು ನಷ್ಟವನ್ನು ಭರಿಸುವ ಸಾಮರ್ಥ್ಯವನ್ನು ಹೊಂದಿಲ್ಲದಿದ್ದರೆ ನೀವು ಷೇರು ಮಾರುಕಟ್ಟೆಯಲ್ಲಿ ಲಾಭ ಗಳಿಸಲು ಸಾಧ್ಯವಿಲ್ಲ."
"ಇತರರು ಮಾರಾಟ ಮಾಡಿದಾಗ ಖರೀದಿಸಿ ಮತ್ತು ಇತರರು ಖರೀದಿಸಿದಾಗ ಮಾರಾಟ ಮಾಡಿ. ಇದೇ ಷೇರು ಮಾರುಕಟ್ಟೆ ಮಂತ್ರ."
"ಬಲವಾದ ನಿರ್ವಹಣೆ ಮತ್ತು ಸ್ಪರ್ಧಾತ್ಮಕ ನಿರ್ವಹಣೆಯನ್ನು ಹೊಂದಿರುವ ಕಂಪನಿಗಳಲ್ಲಿ ಹೂಡಿಕೆ ಮಾಡಿ."
"ಅವಕಾಶಗಳು ಬಂದಾಗ, ಅವು ತಂತ್ರಜ್ಞಾನ, ಮಾರ್ಕೆಟಿಂಗ್, ಬ್ರ್ಯಾಂಡ್ಗಳು, ಮೌಲ್ಯ ರಕ್ಷಣೆಗಳು, ಬಂಡವಾಳ ಇತ್ಯಾದಿಗಳ ಮೂಲಕ ಬರಬಹುದು. ನೀವು ಅವುಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿರಬೇಕಾಗುತ್ತದೆ".
ಸಂತಾಪ ವ್ಯಕ್ತಪಡಿಸಿದ ಹಲವು ಗಣ್ಯರು
ದೇಶದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿರುವ ರಾಕೇಶ್ ಜುಂಜುನ್ ವಾಲ ನಿಧನದಿಂದ ಷೇರು ಮಾರುಕಟ್ಟೆ ಪ್ರಮುಖ ಹೂಡಿಕೆದಾರರೊಬ್ಬರನ್ನು ಕಳೆದುಕೊಂಡಿದೆ.
ರಾಕೇಶ್ ಜುಂಜುನ್ ವಾಲ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಕ್ರಿಕೆಟಿಗ ವೀರೆಂದ್ರ ಸೆಹ್ವಾಗ್ ಸೇರಿದಂತೆ ಹಲವು ಉದ್ಯಮಿಗಳು, ಗಣ್ಯರು, ಷೇರು ಮಾರುಕಟ್ಟೆ ಹೂಡಿಕೆದಾರರು ಸಂತಾಪ ಸೂಚಿಸಿದ್ದಾರೆ.