1000 ರೂ. ಒಳಗಿನ ಲಾಡ್ಜ್ ಕೊಠಡಿಗಳಿಗೂ ಜಿಎಸ್ಟಿ ಪ್ರಸ್ತಾಪ: ಹೋಟೆಲ್ ಮಾಲೀಕರ ವಿರೋಧ
ಬೆಂಗಳೂರು ಜೂ.29: ಕೇಂದ್ರ ಸರ್ಕಾರದ ಮುಖ್ಯಸ್ಥರು ಮತ್ತು ಅಧಿಕಾರಿಗಳು ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಕೈಗೊಳ್ಳುತ್ತಿರುವ ನಿರ್ಧಾರಗಳಿಂದ ಬೃಹತ್ ಬೆಂಗಳೂರು ಹೋಟೆಲ್ಗಳ ಸಂಘ (ಬಿಬಿಎಎಚ್) ಮತ್ತು ರಾಜ್ಯದ ಸಣ್ಣ, ಮಧ್ಯಮ ಹೋಟಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಜೂ.28 ಮತ್ತು 29ರಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಚಂಡಿಗಢದಲ್ಲಿ ಜಿಎಸ್ಟಿ ಕೌನ್ಸಿಲ್ ಸಭೆ ನಡೆಯುತ್ತಿದೆ. ಇಲ್ಲಿ ಜಿಎಸ್ಟಿ ತೆರಿಗೆ ವಿಧಿಸುವ ನೀತಿ, ನಿಯಮ, ಹೊಸ ಹೇರಿಕೆ, ತೆರಿಗೆ ವಿನಾಯಿತಿ ಸೇರಿದಂತೆ ವಿವಿಧ ವಿಷಯಗಳ ಮೇಲೆ ಚರ್ಚೆಗಳಾಗುತ್ತಿವೆ.
ಜೀವ ಮತ್ತು ಆರೋಗ್ಯ ವಿಮೆ ಮೇಲಿನ ತೆರಿಗೆಗೆ ವಿನಾಯಿತಿ ಇಲ್ಲ: ಜಿಎಸ್ಟಿ ಕೌನ್ಸಿಲ್
ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಪೈಕಿ ಒಂದಾದ, ಬಾಡಿಗೆ ವಸತಿಗೃಹ ಗಳಲ್ಲಿ ಕೊಠಡಿಯನ್ನು ಬಾಡಿಗೆ ಪಡೆಯುವವರ ಮೇಲೆ ಶೇ.12ರಷ್ಟು ಜಿಎಸ್ಟಿ ವಿಧಿಸಲು ತೀರ್ಮಾನಿಸಲಾಗಿದೆ. ಅಧಿಕಾರಿಗಳ ನಿರ್ಧಾರಕ್ಕೆ ಒಮ್ಮತ ಸೂಚಿಸಿ ಕೇಂದ್ರ ಸರ್ಕಾರ ಬುಧವಾರ ಸಂಜೆ ಹೊತ್ತಿಗೆ ಅನುಮೋದನೆ ನೀಡುವ ಸಾಧ್ಯತೆ ಇದೆ ಎಂದು ಬೃಹತ್ ಬೆಂಗಳೂರು ಹೋಟೆಲ್ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.
ಈ ಮೊದಲು ವಸತಿ ಗೃಹಗಳಲ್ಲಿ ಪ್ರವಾಸೋದ್ಯಮಿಗಳು, ಪ್ರಯಾಣಿಕರು ಸೇರಿದಂತೆ ಸಾರ್ವಜನಿಕರು 1000ರು.ವರೆಗಿನ ಕೊಠಡಿಗಳನ್ನು ಬಾಡಿಗೆಗೆ ಪಡೆದರೆ ಅವರು ಜಿಎಸ್ಟಿ ವ್ಯಾಪ್ತಿಗೆ ಬರುತ್ತಿರಲಿಲ್ಲ. 1000ರು.ಗಿಂತಲೂ ಅಧಿಕ ವೆಚ್ಚದ ಕೊಠಡಿಯನ್ನು ಬಾಡಿಗೆ ಮಾಡಿದರೆ ಮಾತ್ರ ಹೆಚ್ಚುವರಿಯಾಗಿ ನೂರಕ್ಕೆ ಶೇ.12ರಂತೆ ಜಿಎಸ್ ಟಿ ತೆರಿಗೆ ಕಟ್ಟಬೇಕಿತ್ತು. ಇದೀಗ ಈ ನಿಯಮವನ್ನು 1000ರು.ಒಳಗಿನ ಕೊಠಡಿ ಬಾಡಿಗೆಗಳಿಗೂ ಅನ್ವಯಿಸುವಂತೆ ಶೇ.12ರಷ್ಟು ಜಿಎಸ್ಟಿ ವಿಧಿಸಲು ಕೇಂದ್ರ ಚಿಂತಿಸಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಜನಸಾಮಾನ್ಯರಿಗೆ ಮತ್ತಷ್ಟು ಹೊರೆ:
ರಾಜ್ಯದಲ್ಲಿ ಬೆಂಗಳೂರಿನಂತೆ ದೊಡ್ಡ ಪಟ್ಟಣಗಳು ಸಾಕಷ್ಟಿವೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಡಿಕೇರಿ, ಹೊರನಾಡು ಸೇರಿದಂತೆ ಅನೇಕ ಧಾರ್ಮಿಕ ಕ್ಷೇತ್ರಗಳು ಪ್ರವಾಸಿ ಸ್ಥಳಗಳ ಇವೆ. ಅಲ್ಲಿನ ಸಣ್ಣ ಸಣ್ಣ ಹೋಟೆಲ್, ಲಾಡ್ಜ್ಗಳಲ್ಲಿ ದಿನದ 24ತಾಸು ಕೊಠಡಿಯೊಂದರ ಬಾಡಿಗೆಗೆ 150ರಿಂದ 600 ಇಲ್ಲವೇ 1000 ರೂ. ಬಾಡಿಗೆ ಇರುತ್ತದೆ. ಇಷ್ಟು ಹಣ ನೀಡಿ ಉಳಿದುಕೊಳ್ಳುವವರು ಜನಸಾಮಾನ್ಯರು, ಮಧ್ಯಮ ವರ್ಗದವರು. ಹೊಸ ಜಿಎಸ್ಟಿ ನೀತಿಯಿಂದಾಗಿ ಅವರೆಲ್ಲರು ನೂರಕ್ಕೆ ಶೇ.12ರಷ್ಟು ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಇದು ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಲಿದೆ ಎಂದು ರಾವ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಂಡೀಗಢ ಪ್ರವಾಸ
ಹೋಟೆಲ್, ಪ್ರವಾಸಿತಾಣಗಳ ಮೇಲೂ ಹೊಡೆತ?
ಪಟ್ಟಣಗಳು ಸೇರಿದಂತೆ ಯಾತ್ರೆ, ಪ್ರವಾಸಿ ಸ್ಥಳಗಳಲ್ಲಿನ ಸಣ್ಣ ಸಣ್ಣ ಹೋಟೆಲ್, ವಸತಿ ಗೃಹಗಳ ಮೇಲೆ ಅವಲಂಬಿಸಿ ಬದುಕು ಸಾಗಿಸುವವರು ಹೆಚ್ಚಿದ್ದಾರೆ. ಕೇಂದ್ರದ ಜಿಎಸ್ ಟಿ ನಿಯಮದಿಂದಾಗಿ ಜನ ಪ್ರವಾಸಿತಾಣಗಳಿಗೆ ಬರುವವರ ಸಂಖ್ಯೆ ಕಡಿಮೆ ಆಗಬಹುದು. ಬಂದರೂ ಖಾಸಗಿ ಇಲ್ಲವೇ ದೇವಸ್ಥಾನಗಳ ಟ್ರಸ್ಟ್, ಸರ್ಕಾರಿ ವ್ಯಾಪ್ತಿಯ ವಸತಿ ಗೃಹಗಳಲ್ಲಿ ಉಳಿದುಕೊಳ್ಳಲು ಹಿಂದೇಟು ಹಾಕುವ ಸಾಧ್ಯತೆ ಇದೆ. ಇದರಿಂದ ವಸತಿ ಗೃಹಗಳ ಬಾಡಿಗೆ ನಂಬಿಕೊಂಡೇ ಜೀವನ ನಡೆಸುವವರು ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ.
ಪದೇ ಪದೆ ಬದಲಾವಣೆ ಬೇಡ:
ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಪದೇ ಪದೆ ಜಿಎಸ್ಟಿ ನೀತಿ, ನಿಯಮಗಳು, ತೆರಿಗೆ ವಿಧಿಸುವ ವಿಚಾರಗಳಲ್ಲಿ ಬದಲಾವಣೆಗಳು ಆಗುತ್ತಲೇ ಇವೆ. ಕಳೆದ ಐದು ವರ್ಷದಲ್ಲಿ ಪ್ರತಿ ಸಭೆಯಲ್ಲು ಜಿಎಸ್ ಟಿ ತೆರಿಗೆ ಹೇರಿಕೆ ಮೇಲೆ ಬದಲಾವಣೆ ಆಗಿವೆ. ಇದನ್ನು ನೋಡಿದರೆ ತೆರಿಗೆ ಪದ್ಧತಿಯಲ್ಲಿ ಸ್ಥಿರತೆ ಇಲ್ಲ ಎಂದು ಗೊತ್ತಾಗುತ್ತದೆ. ಕೊರೋನಾ ನಂತರವು ಅಧಿಕ ಪ್ರಮಾಣದ ಜಿಎಸ್ಟಿ ಸಂಗ್ರಹವಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಹೀಗಿದ್ದರು ಆರ್ಥಿಕ ಸಂಕಷ್ಟದಲ್ಲಿರುವ ಜನಸಾಮಾನ್ಯರ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವುದು ಅಗತ್ಯವಿತ್ತೆ? ಎಂದು ರಾವ್ ಪ್ರಶ್ನಿಸಿದ್ದಾರೆ.
ಶೀಘ್ರವೇ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ:
ಬೃಹತ್ ಸರಕು, ಸಾಗಾಣೆ, ವಸ್ತುಗಳ ಜತೆಗೆ ಪ್ಯಾಕ್ ಮಾಡಿ ಲೇಬಲ್ ಅಂಟಿಸಿದ ಧವಸ ಧಾನ್ಯ, ಮೀನು, ಮಾಂಸ, ತರಕಾರಿ, ಗೋಧಿ ಬೆಲ್ಲ, ಚುರುಮರಿಗಳಿಗೆ ಗ್ರಾಹಕರು ಇನ್ನು ಮುಂದೆ ಜಿಎಸ್ಟಿ ಪಾವತಿಸಬೇಕಾದ ಪರಿಸ್ಥಿತಿ ಎದುರಾಗಲಿದೆ.
ಜನಸಾಮಾನ್ಯರಿಗೆ, ಸಣ್ಣ ಹೋಟೆಲ್ ಉದ್ಯಮದ ಮಾಲೀಕರಿಗೆ ತೊಂದರೆ ಆಗುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 1000ರೂ.ಗಿಂತ ಕಡಿಮೆ ಬಾಡಿಗೆ ಕಟ್ಟುವ ವಸತಿ ಗೃಹಗಳನ್ನು ಜಿಎಸ್ ಟಿ ವ್ಯಾಪ್ತಿಗೆ ತರಬಾರದು. ಈ ನಿರ್ಧಾರದಿಂದ ಹಿಂದೆ ಸರಿಯಬೇಕು. ಈ ಕುರಿತು ಜಿಎಸ್ ಟಿ ಸಭೆ ನಂತರ ಕೇಂದ್ರ ಸರ್ಕಾರ ನಡೆ ನೋಡಿಕೊಂಡು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ಪಿ.ಸಿ.ರಾವ್ ತಿಳಿಸಿದ್ದಾರೆ.