ಆಗಸ್ಟ್ 22ರಂದು ಬ್ಯಾಂಕ್ ಮುಷ್ಕರ, ಈ ಬ್ಯಾಂಕ್ ಓಪನ್ ಇರುತ್ತೆǃ
ಬೆಂಗಳೂರು, ಆಗಸ್ಟ್ 21: ಕೇಂದ್ರ ಸರಕಾರದ ಕೆಲವು ಕಾರ್ಮಿಕ ವಿರೋಧಿ ನಿಲುವು, ಬ್ಯಾಂಕಿಂಗ್ ಸುಧಾರಣೆ ಹೆಸರಿನಲ್ಲಿ ಹೊರ ತಂದಿರುವ ಹಲವು ಕ್ರಮಗಳನ್ನು ಖಂಡಿಸಿ ಬ್ಯಾಂಕ್ ನೌಕರರು ಆಗಸ್ಟ್ 22ರಂದು ದೇಶವ್ಯಾಪಿ ಮುಷ್ಕರ ನಡೆಸಲಿದ್ದಾರೆ.ಈ ಸಂದರ್ಭದಲ್ಲಿ ಗ್ರಾಹಕರಿಗೆ ಖಾಸಗಿ ಬ್ಯಾಂಕುಗಳು ಆಸರೆಯಾಗಲಿವೆ.
ಗಮನಿಸಿ ಆ. 22ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರ
ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ಯೂನಿಟ್ ನ ಪಶ್ಚಿಮ ಬಂಗಾಲದ ಸಂಚಾಲಕ ಸಿದ್ದಾರ್ಥ ಖಾನ್, ಬ್ಯಾಂಕಿಂಗ್ ವಲಯದ ಪ್ರಸ್ತಾವಿತ ಸುಧಾರಣೆಗಳ ವಿರುದ್ಧ ದೇಶದ ಪ್ರಮುಖ ಬ್ಯಾಂಕ್ ಸಂಘಟನೆಗಳಲ್ಲಿ ಒಂದಾದ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ಯೂನಿಟ್(UFBU) ಮುಷ್ಕರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಬೇಡಿಕೆಗಳೇನು?: ಸುಸ್ತಿಸಾಲಗಳ ವಸೂಲಾತಿಗಾಗಿ ಸಂಸತ್ತು ನೇಮಿಸಿರುವ ಸಮಿತಿಯ ಶಿಫಾರಸುಗಳನ್ನು ತಕ್ಷಣ ಜಾರಿಮಾಡಬೇಕು. ವಸೂಲಾಗದ ಸಾಲಗಳ ಮರುಪಾವತಿಗಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ಬ್ಯಾಂಕುಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಖಾಲಿ ಇರುವ ಹುದ್ದೆಗಳಿಗೆ ತಕ್ಷಣ ನೇಮಕಾತಿ ಮಾಡಬೇಕು. ಬ್ಯಾಂಕುಗಳ ವಿಲೀನ ಮತ್ತು ಖಾಸಗೀಕರಣ ಯೋಜನೆಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಯಾವ ಯಾವ ಸಂಘಟನೆಗಳು: ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಹಾಗೂ ಇದರ ಅಡಿಯಲ್ಲಿ ಬರುವ 9 ನೌಕರರ ಒಕ್ಕೂಟ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (AIBOC) ಹಾಗೂ (AIBEA) ಮತ್ತು ರಾಷ್ಟ್ರೀಯ ಬ್ಯಾಂಕ್ ಸಿಬ್ಬಂಧಿಗಳ ಸಂಘಟನೆ(NOBW).
ಎಷ್ಟು ಮಂದಿ : ಮೇಲ್ಕಂಡ ಎಲ್ಲಾ ಸಂಘಟನೆಗಳ ಎಲ್ಲಾ ಸದಸ್ಯರ ಸಂಖ್ಯೆ 10 ಲಕ್ಷಕ್ಕೂ ಅಧಿಕವಾಗಿದ್ದು, ದೇಶವ್ಯಾಪ್ತಿ ಬ್ಯಾಂಕುಗಳು ಬಂದ್ ಆಗಲಿವೆ.
ಖಾಸಗಿ ಬ್ಯಾಂಕುಗಳು: ಖಾಸಗಿ ವಲಯದ ಐಸಿಐಸಿಐ, ಎಚ್ ಡಿ ಎಫ್ ಸಿ, ಆಕ್ಸಿಸ್ ಹಾಗೂ ಕೋಟಕ್ ಮಹೀಂದ್ರ ಬ್ಯಾಂಕುಗಳು ಎಂದಿನಂತೆ ಕಾರ್ಯನಿರ್ವಹಿಸುವ ಸಾಧ್ಯತೆಗಳು ಹೆಚ್ಚಿವೆ. ಆಗಸ್ಟ್ 22ರ ಮುಷ್ಕರ ಬಗ್ಗೆ ಈ ಬ್ಯಾಂಕುಗಳಿಂದ ಯಾವುದೇ ಪ್ರಕಟಣೆ ಹೊರಡಿಸಲಾಗಿಲ್ಲ.